ಬರದ ನಾಡು ಶಿರಾದಲ್ಲಿ ಪಾಯ ತೋಡಿದರೂ ನೀರು!

ಎನ್​ಎಸ್​ಆರ್​

ಬರದ ನಾಡು ಶಿರಾದಲ್ಲಿ ಪಾಯ ತೋಡಿದರೂ ನೀರು!

Sunday March 06, 2016,

3 min Read

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ, ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು, ಕೆಚ್ಚೆದೆಯಿರಬೇಕೆಂದೆಂದು, ಎಂಬ ಬಂಗಾರ ಮನುಷ್ಯದ ಹಾಡಿನಂತೇಯೆ ಒಂದು ಸಾಹಸ ಶಿರಾ ತಾಲೂಕಿನಲ್ಲಿ ನಡೆದಿದೆ. ಈ ಕರ್ನಾಟಕ ರಾಜ್ಯದ ಅತ್ಯಂತ ಬರಪೀಡಿತ ತಾಲೂಕು ಕೇಂದ್ರ ಶಿರಾ. ಇಲ್ಲಿ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ರೈತರು ಸದಾ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡು ಬೆಳೆ ಬೆಳೆದ್ರು ಕೈ ಸುಟ್ಟುಕೊಳ್ಳುತ್ತಿದ್ರು. ಆದರೆ ಈ ಸಲ ಸರ್ಕಾರವೇ ಜನರ ಕಷ್ಟಕ್ಕೆ ಪರಿಹಾರವೊದಗಿಸುವಲ್ಲಿ ಮುಂದಾಗಿದೆ. ಸರ್ಕಾರಿ ಇಲಾಖೆಗಳು ಮಾಡುವ ಕೆಲಸವನ್ನು ಸಮರ್ಪಕವಾಗಿ ಮಾಡಿದ್ರೆ, ಲಕ್ಷಾಂತರ ಜನರ ಬದುಕು ಬಂಗಾರವಾಗುತ್ತೇ ಎನ್ನುವುದಕ್ಕೆ ಶಿರಾ ತಾಲೂಕಿನ ಅಭಿವೃದ್ಧಿಯೇ ಸಾಕ್ಷಿ..

ಇದನ್ನು ಓದಿ: ಒಂದು ‘ಚಿಪ್ಸ್'ನ ಕಥೆ.. ಹಳ್ಳಿಯಿಂದ ಮೆಟ್ರೋವರೆಗೆ ಹಬ್ಬಿದ ಸ್ವಾದ.. !

ತುಮಕೂರು ಜಿಲ್ಲೆಯ ಅ್ಯಂತ ಬರಪೀಡಿತ ತಾಲೂಕು ಶಿರಾ. ಶತಮಾನಗಳಿಂದಲೂ ರೈತರು ನೀರಿಗಾಗಿ ಪರದಾಡುವುದನ್ನು ನಾವು ಇಲ್ಲಿ ಸಾಮಾನ್ಯವಾಗಿ ಕಾಣಬಹುದು. ಆದರೆ ಈಗ ಶಿರಾ ತಾಲೂಕಿನ ಚಿತ್ರಣ ಸಂಪೂರ್ಣ ಬದಲಾಗಿದೆ. ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಸಂಪೂರ್ಣ ತಾಲೂಕೂ ಹಸಿರಿನಿಂದ ತುಂಬಿ ತುಳುಕಾಡುತ್ತಿದೆ. ಸರ್ಕಾರದ ಈ ಸಹಾಯಕ್ಕೆ ಹಲವು ಗ್ರಾಮಸ್ಥರು ಕೈ ಜೋಡಿಸಿದ್ದು. ಸಣ್ಣ ನೀರಾವರಿ ಇಲಾಖೆಯ ಪ್ರತಿಯೊಂದು ಕೆಲಸದಲ್ಲೂ ಕೈ ಜೋಡಿಸಿದ್ದು, ಇಂದು ಬಂಗಾರ ಬೆಳೆಯುವ ನಾಡಾಗಿ ಶಿರಾವನ್ನು ಪರಿವರ್ತಿಸಿದ್ದಾರೆ..

image


ನೀರಿನ ವಿಷಯದಲ್ಲಿ ಸಂಪೂರ್ಣ ಸ್ವಾವಲಂಬಿಯಾಗಿ ಜಲಕ್ರಾಂತಿ ನಡೆಸಿರುವ ಶಿರಾ ತಾಲೂಕಿನ ಕಥೆಯಿದು. ನೈಸರ್ಗಿಕವಾಗಿ ಹಳ್ಳದಲ್ಲಿ ನಿರುಪಯುಕ್ತವಾಗಿ ಹರಿದು ಬೇರೆ ಜಿಲ್ಲೆಗಳ ಮೂಲಕ ಸಮುದ್ರದ ಪಾಲಾಗುತ್ತಿದ್ದ ಮಳೆ ನೀರನ್ನು ಭೂಮಿಗೆ ಇಂಗಿಸಿ ಸಂಪೂರ್ಣವಾಗಿ ಜಲಕ್ರಾಂತಿ ಮಾಡಲಾಗಿದೆ. ಹೌದು 2015ರ ಅಂತ್ಯದಲ್ಲಿ ಶಿರಾ ತಾಲೂಕಿಗೆ ಭರ್ಜರಿ ಮಳೆಯಾಯ್ತು. ಪ್ರತಿ ಸಲ ಇಲ್ಲಿ ಮಳೆಯಾಗುತ್ತದೆ. ಆದರೆ ನೀರನ್ನು ತಡೆದುಹಿಡುವಂತಹ ಯಾವುದೇ ಅಣೆಕಟ್ಟು ಚೆಕ್ಡ್ಯಾಂ ಇರಲಿಲ್ಲ. ಸುರಿದ ನೀರು ಹಾಗೇ ಪೋಲಾಗುತ್ತಿತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ.

ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ಒಣಗಿದ ಬೆಳೆಗಳು, ಬಿರುಕು ಬಿಟ್ಟ ಭೂಮಿಯಷ್ಟೆ ಕಾಣುತ್ತಿದ್ದ ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಈಗ ಪಾಯ ತೋಡಿದರೆ ನೀರು ಉಕ್ಕುವಷ್ಟು ತೇವಾಂಶ ಹೆಚ್ಚಾಗಿದೆ. ನೀರಾವರಿಗೆ ಇರಲಿ, ಜನ,ಜಾನುವಾರುಗಳಿಗೂ ಕುಡಿಯಲು ನೀರು ಇಲ್ಲದಷ್ಟು ಭೀಕರ ಬರಗಾಲ ಎದುರಿಸುತ್ತಿದ್ದ ಶಿರಾ ತಾಲೂಕು ಈಗ ಅನುಪಯುಕ್ತವಾಗಿ ಹರಿಯುತ್ತಿದ್ದ 4 ಟಿಎಂಸಿ ನೀರನ್ನು ಸಂಗ್ರಹಿಸುವಂತಾಗಿದೆ. ಎಲ್ಲೇಡೆ ನೀರಿಲ್ಲದಂತಾಗಿದ್ದ ಬೋರ್ವೆಲ್ಗಳಲ್ಲಿ ರಭಸವಾಗಿ ನೀರು ಬರುತ್ತಿದೆ. ಸಣ್ಣ ನೀರಾವರಿ ಇಲಾಖೆ ಕೈಗೊಂಡ ಕ್ರಮದಿಂದಾಗಿ ಈಗ ರೈತರ ಮೊಗದಲ್ಲಿ ಮಂದಹಾಸ ಎದ್ದು ಕಾಣುತ್ತಿದೆ. ಎಲ್ಲೇಲಿ ನೀರು ನೀರುಪಯುಕ್ತವಾಗಿ ಹರಿಯುತ್ತಿತ್ತು. ಆಯಾ ಭಾಗದ ನೀರನ್ನು ಅಲ್ಲೇ ಸಂಗ್ರಹಿಸಲಾಗಿದೆ. ಇದರಿಂದಾಗಿ ಅಂತರ್ಜಲಮಟ್ಟ ಸ್ಥಿತಿ ಕೂಡ ಸುಧಾರಿಸಿದ್ದು. ಶಿರಾದಲ್ಲಿ ಜಲಕ್ರಾಂತಿಯಾಗಿದೆ

image


ಶಿರಾ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದೂರದೃಷ್ಟಿ ಫಲವಾಗಿ ನೀರಿನ ವಿಷಯದಲ್ಲಿ ಇಡೀ ತಾಲೂಕು ಸ್ವಾವಲಂಬಿಯಾಗಿದೆ. ಸುಮಾರು ₹50ಕೋಟಿ ವೆಚ್ಚದಲ್ಲಿ ಶಿರಾ ತಾಲೂಕಿನ 18 ಕಡೆ ನೈಸರ್ಗಿಕ ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸುವ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ನವೆಂಬರ್ ಡಿಸೆಂಬರ್ನಲ್ಲಿ ಬಿಟ್ಟು ಬೀಡಲಾರದೇ ಸುರಿದ ಮಳೆಯ ಒಂದು ಹನಿಯೂ ಪೋಲಾಗದಂತೆ ತಡೆಹಿಡಿಯುವ ಮೂಲಕ, ನೀರನ್ನು ಸಂಗ್ರಹಿಸಿದ್ದಾರೆ. "ಈ ಭಾಗದ ಜನರಿಗೆ ಸಾಕಷ್ಟೂ ಜಮೀನಿದೆ. ಆದರೆ ನಾವು ವಾಣಿಜ್ಯ ಬೆಳೆ ಬೆಳೆಯಲು ನೀರಿನ ಕೊರತೆಯಿತ್ತು. ಬೋರ್ವೆಲ್ ಇದೆಯೆಂದು ಧೈರ್ಯಮಾಡಿ ಏನಾದ್ರು. ಕೈ ಹಾಕಿದ್ರೆ, ಅರ್ಧದಲ್ಲೇ ಬೋರ್ನಲ್ಲಿ ನೀರಿನ ಬದಲಿಗೆ ಗಾಳಿ ಬರಲು ಆರಂಭಿಸುತ್ತಿತ್ತು. ಅಥವಾ ಅನೇಕರ ಬೋರ್ಗಳಲ್ಲಿ ಹನಿಹನಿಯಾಗಿ ನೀರು ಬರುತ್ತಿತ್ತು ಆದರೆ ಇಂದು ಸಣ್ಣ ನೀರಾವರಿ ಇಲಾಖೆಯ ಶ್ರಮದಿಂದಾಗಿ ಬತ್ತಿದ ಬೋರ್ಗಳಲ್ಲು ನೀರು ಬಂದಿದೆ. ಕೆರೆ ಬಾವಿಗಳಲ್ಲೂ ನೀರಿದೆ ಹಾಗಾಗಿ ನಾವು ಧೈರ್ಯವಾಗಿ ವಾಣಿಜ್ಯ ಬೆಳೆ ಹಾಕಿದ್ದೇವೆ ಎಂತಾರೆ, ದೇವರಹಳ್ಳಿಯ ರಾಜಣ್ಣ".

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ದೂರದೃಷ್ಟಿಯ ಪರಿಣಾಮವಾಗಿ ಇಂದು ಭೂಮಿಯಲ್ಲಿ ತೇವಾಂಶ ಹೆಚ್ಚಾಗುವುದರ ಜೊತೆಗೆ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆ ಕಂಡಿದೆ. ತಾಲೂಕಿನ ಬಹುತೇಕ ರೈತರು ವಿವಿಧ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದು ಈ ಸಲ ಭಾರಿ ಲಾಭದ ನೀರಿಕ್ಷೆಯಲ್ಲಿದ್ದಾರೆ. ಬೆಳೆ ಸಾಲ ಮಾಡಿ ತಿರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ, ಶಿರಾ ತಾಲೂಕು ಮಾದರಿಯಾಗಿದೆ. ರೈತರಿಗೆ ಕೈತುಂಬಾ ಕೆಲಸ ನೀಡುವ ಮೂಲಕ ಸಣ್ಣ ನೀರಾವರಿ ಇಲಾಖೆ, ರೈತರ ಬದುಕು ಬಂಗಾರವಾಗಿಸಿದೆ.

ಶಿರಾ ತಾಲೂಕಿನ ಭೂಪಸಂದ್ರ, ಚಿಕ್ಕಗುಳ, ದೊಡ್ಡಗುಳ, ಹುಂಜಿನಾಳ, ಯಲಿಯೂರು, ಬೋಜಗುಂಟೆ, ಲಕ್ಕನಹಳ್ಳಿ, ವೀರಾಪುರ, ಕಸಬಾ, ದೇವರಹಳ್ಳಿ, ಮೆಳೆಕೋಟೆ, ಹೇರೂರು, ಆರಜ್ಜನಹಳ್ಳಿ ಸೇರಿ 18 ಕಡೆ ನೈಸರ್ಗಿಕ ಹಳ್ಳ ಇದೆ. ಇದರ ಮೂಲಕ ನೀರು ಅನುಪಯುಕ್ತವಾಗಿ ಬೇರೆ ಜಿಲ್ಲೆಗಳಿಗೆ ಹರಿದು ಸಮುದ್ರ ಪಾಲಾಗುತ್ತಿತ್ತು. ಮತ್ತೆ ಕೆಲವು ಕಡೆ ನೀರು ಆವಿಯಾಗಿ ಅನಗತ್ಯವಾಗಿ ಪೋಲಾಗುತ್ತಿತ್ತು. ಅಧಿಕಾರಿಗಳ ಕ್ರಮದಿಂದಾಗಿ ಇದೀಗ ನೀರು ಸಿಗುತ್ತಿದೆ. 

ಇದನ್ನು ಓದಿ

1. ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!

2. ರಿಂಗ್ ರೋಡ್ ಸುಗಮ ಸಂಚಾರಕ್ಕೆ 25 ಸ್ಟೈವಾಕರ್​

3. ಮತ್ತಷ್ಟು ವಿಸ್ತರಿಸಿದ ಚಾರ್ಕೋಲ್ ಬಿರಿಯಾನಿ ಘಮ - 150,000 ಡಾಲರ್ ಬಂಡವಾಳ ತೆಕ್ಕೆಗೆ