"ಸಾಂಸ್ಕೃತಿಕ ನಗರಿಯಿಂದ ಸಾಗರದ ಸಂಗಮದವೆರೆಗೆ"

ಟೀಮ್​ ವೈ.ಎಸ್​. ಕನ್ನಡ

"ಸಾಂಸ್ಕೃತಿಕ ನಗರಿಯಿಂದ ಸಾಗರದ ಸಂಗಮದವೆರೆಗೆ"

Thursday January 05, 2017,

3 min Read

image


ನೃತ್ಯ! ಅದೊಂದು ದಿವ್ಯಾನುಭವ, ಪ್ರಚಂಡ ಶಕ್ತಿ. ಈ ನಿಟ್ಟಿನಲ್ಲಿ ದೇಶ ವಿದೇಶಗಳು ಅದರದೇ ಆದ ನೃತ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ. ಆದರೆ ಭಾರತದ ನೃತ್ಯ ಎಂದ ಕೋಡಲೇ ವಿದೇಶಗಳೆಲ್ಲವೂ ಒಮ್ಮೆ ಹಿಂದಿರುಗಿ ನೋಡುತ್ತವೆಂದರೇ ಅದು ಅತಿಶಯೋಕ್ತಿಯಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಕಲೆಯನ್ನು ವಿದೇಶದಲ್ಲಿ ಪಸರಿಸುತ್ತಾ, ವಿದೇಶಿಗರಿಗೂ ಕಲಿಸುತ್ತಾ ಸಮುದ್ರದಾಚೆಗೆ ಭಾರತದ ಭರತನಾಟ್ಯವನ್ನು ಒಯ್ದ ಕೀರ್ತಿ ಮತ್ತು ಹೆಮ್ಮೆ ನಮ್ಮ ಮೈಸೂರಿನ ಅಪರ್ಣ ಸಿಂಧೂರ್‍ರವರಿಗೆ ಸಲ್ಲುತ್ತದೆ.

image


ಮೈಸೂರಿನ ಕುವೆಂಪುನಗರದ ಗಂಗಾ ರಸ್ತೆಯಲ್ಲಿ ಆಡಿ ಬೆಳೆದವರು ಅಪರ್ಣ ಸಿಂಧುರ್, ಡಾ. ಕೆ ವೆಂಕಟ ಲಕ್ಷಮ್ಮನವರ ಬಳಿ ನೃತ್ಯಭ್ಯಾಸ ಆರಂಭಿಸಿದ ಅಪರ್ಣ ಅವರು ರೂಢಿಗತ ನೃತ್ಯ ಪ್ರಯೋಗಕ್ಕಿಂತ ಭಿನ್ನವಾದ ಅಪರೂಪವಾದ ಅಂಶಗಳನ್ನೊಳಗೊಂಡ ಪ್ರದರ್ಶನಕ್ಕೆ ಹೆಸರುವಾಸಿಯಾದವರು. ಮದುವೆಯ ಬಳಿಕ ಅಮೇರಿಕಾದಲ್ಲಿ ನೆಲೆಸಬೇಕಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೃತ್ಯಭ್ಯಾಸಕ್ಕೆ ತೊಂದರೆಯಾಗಬಾರದೆಂದು ಭಾವಿ ಪತಿ ಎಸ್ ಎಂ ರಾಜುರವರ ಬಳಿ ಗುರುಗಳ ಸಮ್ಮುಖದಲ್ಲಿ ಪ್ರಮಾಣ ತೆಗೆದುಕೊಂಡಿದ್ದರು. ಆರಂಭದಲ್ಲಿ ಸಾಕಷ್ಟು ಹಣಕಾಸಿನ ಮುಗ್ಗಟ್ಟನ್ನು ಎದುರಿಸಿದ ಅಪರ್ಣರವರು ವಿದೇಶಿಗರಿಗೆ ನೃತ್ಯ ಕಲಿಸುವ ಮೂಲಕ ಹಣವನ್ನು ಕೂಡಿಡುತ್ತಿದ್ದರು. ಅಂತಿಮವಾಗಿ ಅಮೇರಿಕಾದಲ್ಲಿ ನವರಸ ನೃತ್ಯಶಾಲೆಯನ್ನು ಆರಂಭಿಸಿಯೇಬಿಟ್ಟರು. ಆರಂಭದಲ್ಲಿ ವಿದೇಶಿಗರು ಭಾರತದ ಕಲೆಯನ್ನು ಬಹಳ ಆಶ್ಚರ್ಯದಿಂದ ನೋಡುತ್ತಿದ್ದರು, ಅವರ ಭಾವ-ಭಂಗಿಗಳು ನಗೆಯನ್ನು ಉಕ್ಕಿಸುತ್ತಿದ್ದವು. ಆದರೆ ಕಲಿಯಬೇಕು ಅನ್ನುವ ಹಠ ಮತ್ತು ಅಪರ್ಣ ಅವರ ಶ್ರಮದ ಫಲವಾಗಿ ಅತ್ಯುತ್ತಮ ವಿದೇಶಿ ನೃತ್ಯ ಪಟುಗಳು ನವರಸ ನೃತ್ಯಶಾಲೆಯಿಂದ ಹೊರ ಹೊಮ್ಮಿದರು. ಅಲ್ಲಯೇ ನೃತ್ಯದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದರು. ಇದು ಮೈಸೂರಿನ ಮಗಳ ಹೆಮ್ಮೆಯ ಸಾಧನೆ.

image


ಕಲಿಸುವಿಕೆಯ ನಂತರ ಅಪರ್ಣ ತಮ್ಮದೇ ನೃತ್ಯ ಪ್ರಕಾರಗಳನ್ನು ಪ್ರಯೋಗ ಮಾಡಲು ಆರಂಭಿಸಿದರು. ಇದಕ್ಕೆ ಅವರ ತಂದೆಯೇ ಸ್ಪೂರ್ತಿ. ವೇದ ಕಾಲದಿಂದ 21 ನೇ ಶತಮಾನದ ವರೆಗಿನ ಕೆಲವು ಕವಿಗಳು, ದಾರ್ಶನಿಕರು ಭಾರತೀಯ ಸ್ತ್ರೀಯನ್ನು ಕಂಡ ರೀತಿಯನ್ನು, ಆಯಾ ಕಾಲದ ಒಟ್ಟು ದೃಷ್ಟಿಕೋನವನ್ನು ಅಪರ್ಣ ಅದ್ಭುತವಾಗಿ ಗ್ರಹಿಸಿ ಪ್ರಸ್ತುತಪಡಿಸಿದ್ದರು. "ಎ ಸ್ಟೋರಿ ಅಂಡ್ ಎ ಸಾಂಗ್", "ಹೂಮರದ ಹುಡುಗಿ", ಹಾಗೂ ಕತೆ ಮತ್ತು ಹಾಡು, ಕನ್ನಡದ ಜಾನಪದ ಕಥೆಗಳಿಗೆ ಅಮೇರಿಕದ ಕಥೆಯನ್ನು ಮಿಶ್ರ ಮಾಡಿ "ಫಸ್ಟ್ ಮದರ್" ಎನ್ನುವ ಶೀರ್ಷಿಕೆ ಮೇಲೆ ನೃತ್ಯ ಮಾಡಿದ್ದರು, ಇನ್ನು ಪ್ರಸ್ತುತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ "ಒಂದು ಘಟನೆ ಮತ್ತು ಅನಂತರ", ವಿವಾಹಿತೆ ಮೇಲಿನ ಅತ್ಯಾಚಾರದ ಚಿತ್ರಣ, ಅಮೇರಿಕಾದ ಇರಾನ್ ಯುದ್ಧದದಲ್ಲಿ ಹೆಂಗಳೆಯರ ರೋಧನೆಯನ್ನು ನೃತ್ಯದ ಮೂಲಕ ಕನ್ನಡಿ ಹಿಡಿದಿದ್ದಾರೆ. ಇನ್ನು ನರ್ಮದಾ ಬಚಾವ್ ಆಂದೋಲನದ ಸಮಯದಲ್ಲಿ ಮೇಧಾ ಪಾಟ್ಕರ್ ಅಪರ್ಣರನ್ನು ಬರಮಾಡಿಕೊಂಡು ನರ್ಮದಾ ಘಾಟ್ ಬಳಿ ಇರುವ ಬುಡಕಟ್ಟಿನ ಜನರಿಗೆ ಹತ್ತು ದಿನ ನೃತ್ಯ ಕಲಿಸುವ ಅವಕಾಶ ಮಾಡಿಕೊಟ್ಟಿದ್ದಾರೆ.

image


ಅಮೇರಿಕಾದಲ್ಲಿ 6 ತಿಂಗಳು, ಭಾರದತದಲ್ಲಿ ಆರು ತಿಂಗಳು ನೃತ್ಯ ಪ್ರದರ್ಶನ ನೀಡುವ ಅಪರ್ಣರವರ ಮತ್ತೊಂದು ಹೆಮ್ಮೆ ಮಹಾಶ್ವೇತಾದೇವಿ ಅವರ "ಶಿಕಾರ್" ಕಥೆ. ಭಾರತೀಯ ಆದಿವಾಸಿಯೊಬ್ಬಳು ಅರಣ್ಯ ಹನನದ ವಿರುದ್ಧ ಹೋರಾಟ ನಡೆಸುವ ಹಾಗೂ ವ್ಯಕ್ತಿಯೊಬ್ಬನ ಮೇಲೆ ಪ್ರತೀಕಾರ ತೆಗೆದುಕೊಳ್ಳುವ ಕಥಾಹಂದರವನ್ನು ಒಳಗೊಂಡಿದ್ದು, ಅಮೇರಿಕಾ ಜರ್ಮನ್, ಕೆನಡಾ ಮತ್ತು ಕ್ಯೂಬಾದಲ್ಲಿ "ಹಂಟರ್" ಆಗಿ ಪ್ರದರ್ಶನಗೊಂಡಿತು. ಮೈಸೂರಿನ ರಂಗಾಯಣದಲ್ಲಿ "ಬೇಟೆ" ಯಾಗಿ ಮನಮುಟ್ಟಿತ್ತು. ಈ ನೃತ್ಯರೂಪಕದಲ್ಲಿ ಭರತನಾಟ್ಯಂ, ಜಾನಪದ ನೃತ್ಯ, ಯೋಗ ಮತ್ತು ಹೈಟಿಯ ನೃತ್ಯವನ್ನು ಬಳಸಿಕೊಳ್ಳಲಾಗಿದೆ. ಮಹಾಶ್ವೇತದ ದ್ರೌಪದಿಯಾಗಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ದ್ರೌಪದಿಯಿಂದ ಆರಂಭವಾಗವ ಕಥೆ ಆದಿವಾಸಿ ಮಹಿಳೆ ದೋಪ್ಡಿ ತನ್ನದೇ ನಿರ್ಧಾರದ ವಿರುದ್ಧ ನಡೆಸುವ ಹೋರಾಟದಲ್ಲಿ ಅಂತ್ಯಗೊಳ್ಳುತ್ತದೆ. ಪ್ರಸ್ತುತ ಅಮೇರಿಕಾದ ಸಂತ ಮೋನಿಕಾ ಕಾಲೇಜ್‍ನಲ್ಲಿ ನೃತ್ಯ ಶಿಕ್ಷಕಿಯಾಗಿದ್ದಾರೆ, ಸ್ಯಾನ್ ಫ್ರ್ಯಾನ್ಸಿಸ್‍ಕೋ, ಕ್ಯಾಲಿಫೋರ್ನಿಯಾದಲ್ಲೂ ಡ್ಯಾನ್ಸ್ ಟ್ರೈನಿಂಗ್ ನೀಡಿದ್ದಾರೆ.

image


ನ್ಯಾಷನಲ್ ಪರ್ಫಾಮೆನ್ಸ್ ನೆಟ್ವರ್ಕ್ ಕ್ರಿಯೆಷನ್ ಅವಾರ್ಡ್, ಎಲ್ ಎ ಸ್ಟೇಜ್ ಅಲೈಯನ್ಸ್ ಓವೇಷನ್ ಅವಾರ್ಡ್ ನಾಮನಿರ್ದೆಶನ, ಬಾಸ್ಟನ್ ಡ್ಯಾನ್ಸ್ ಅಲೈಯನ್ಸ್, ಕೇಂಬ್ರಿಡ್ಜ್ ಆರ್ಟ್ ಕೌನ್ಸಿಲ್, ನ್ಯೂ ಇಂಗ್ಲೆಂಡ್ ಫೌಂಡೇಷನ್ ಅವಾರ್ಡ್, ಫೋರ್ಡ್ ಫೌಂಡೇಷನ್ ಅವಾರ್ಡ್, 2008ರಲ್ಲಿ ವರ್ಷದ ಮಹಿಳೆ ಪ್ರಶಸ್ತಿ ಸೇರಿದಂತೆ ಹಲವಾರು ಗ್ರ್ಯಾಂಟ್‍ಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಪ್ರದರ್ಶನದ ಸಲುವಾಗಿ 2 ತಿಂಗಳೀನಿಂದ ಭಾರತದಲ್ಲೇ ನೆಲೆಸಿದ್ದಾರೆ. ಈ ಎಲ್ಲಾ ಕಲಾ ಪ್ರಕಾರಗಳು ಥಿಯೇಟರ್ ಮತ್ತು ಡ್ಯಾನ್ಸ್ ಫಾರ್ಮ್‍ನಲ್ಲಿ ಹೊರಹೊಮ್ಮಿದೆ. ಸದ್ಯ ನೃತ್ಯಪ್ರದರ್ಶನವೊಂದರ ಸಿದ್ದತೆ ನಡೆದಿದ್ದು ಅಕ್ಟೋಬರ್‍ನಲ್ಲಿ ಅದರ ಪ್ರದರ್ಶನವಿದೆ.

image


ನಿರ್ದೇಶನ, ಹಾಡುಗಾರಿಕೆ, ಥಿಯೇಟರ, ಎಲ್ಲದರಲ್ಲೂ ಸಕ್ರಿಯರಾಗಿರುವ ಅಪರ್ಣ ನಮ್ಮ ಮೈಸೂರಿನ ಹೆಮ್ಮೆಯ ಪ್ರತಿಭೆ. ಅವರ ಈ ಜೀವನದ ಯಾನ ಪ್ರತಿಯೊಬ್ಬರಿಗೂ ಅನುಕರಣಿಯ, ನಿರಂತರ ಸಾಧನೆ, ಸಹನೆ, ತಾಳ್ಮೆ ಎಲ್ಲವನ್ನು ಎದುರಿಸಿ ನಿಲ್ಲುವ ಗುಣವಿದ್ದರೇ ಗೆಲುವು ನಮ್ಮದೆ ಎನ್ನುತ್ತಾರೆ ಅಪರ್ಣ. ನಮ್ಮೆಲ್ಲರ ಶುಭ ಹಾರೈಕೆ ಅವರೊಂದಿಗಿರಲಿ.

ಇದನ್ನು ಓದಿ:

1. "ಕಾಮಿಡಿ ಕಿಲಾಡಿ" ಶಿವರಾಜ್ ಕೆ.ಆರ್.ಪೇಟೆ

2. ರೀಲ್​ನಲ್ಲೂ ಹೀರೋ... ರಿಯಲ್​ ಆಗಿಯೂ ಹೀರೋ..!

3. ಬದುಕಿಗೆ ಹೊಸ "ದಿಕ್ಕು" ತೋರುವ ಜೀವಸೆಲೆ "ನರ್ಮದಾ"