70 ಕೊಠಡಿ, 11 ಸಿಬ್ಬಂದಿ, ಇರುವವನೊಬ್ಬನೇ ಭಿಕ್ಷುಕ : ಪುನರ್ವಸತಿ ಹೆಸರಲ್ಲಿ ಹಣ ಪೋಲು

ಟೀಮ್ ವೈ.ಎಸ್.ಕನ್ನಡ 

70 ಕೊಠಡಿ, 11 ಸಿಬ್ಬಂದಿ, ಇರುವವನೊಬ್ಬನೇ ಭಿಕ್ಷುಕ : ಪುನರ್ವಸತಿ ಹೆಸರಲ್ಲಿ ಹಣ ಪೋಲು

Wednesday July 20, 2016,

2 min Read

ಸರ್ಕಾರದ ಬಹುತೇಕ ಯೋಜನೆಗಳು ಜನರನ್ನು ತಲುಪುವುದೇ ಇಲ್ಲ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ದೆಹಲಿ ಸರ್ಕಾರ ಭಿಕ್ಷುಕರ ಪುನರ್ವಸತಿಗಾಗಿ ಪ್ರತಿ ವರ್ಷ 5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ದೆಹಲಿ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶ ನರೇಲಾದಲ್ಲಿ ಭಿಕ್ಷುಕರಿಗೆಂದೇ ವಸತಿ ವ್ಯವಸ್ಥೆ ಮಾಡಿದೆ. ಈ ಕಟ್ಟಡದಲ್ಲಿ 70 ಕೋಣೆಗಳಿವೆ. 11 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಸರ್ಕಾರದ ಹಣವೆಲ್ಲ ಸಿಬ್ಬಂದಿ ವೇತನ ಹಾಗೂ ಅಡುಗೆ ವೆಚ್ಚಗಳಿಗಾಗಿ ಖರ್ಚಾಗುತ್ತಿದೆ. ಇಲ್ಲಿ 11 ನೌಕರರಿದ್ದಾರೆ ನಿಜ ಆದ್ರೆ ಒಬ್ಬನೇ ಒಬ್ಬ ಭಿಕ್ಷುಕ ಕೂಡ ಇಲ್ಲ. 2016ರಲ್ಲಿ ಒಬ್ಬ ಭಿಕ್ಷುಕನನ್ನೂ ಇಲ್ಲಿಗೆ ಕಳುಹಿಸದೇ ಇರುವುದು ದಾಖಲೆಗಳಲ್ಲಿ ಬಹಿರಂಗವಾಗಿದೆ. ಶೀಲಾ ದೀಕ್ಷಿತ್ ಸಿಎಂ ಆಗಿದ್ದಾಗ ಇಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ರು. ಬಳಿಕ ಕಾಮನ್ವೆಲ್ತ್ ಗೇಮ್ಸ್ ಸಮಯದಲ್ಲಿ ಈ ಕಟ್ಟಡ ಬಳಕೆಯಾಗಿದ್ದು ಬಿಟ್ರೆ, ಉಳಿದೆಲ್ಲ ಸಮಯ ಖಾಲಿ ಬಿದ್ದಿದೆ.

image


1959ರ ಬಾಂಬೆ ಭಿಕ್ಷಾಟನೆ ತಡೆಗಟ್ಟುವಿಕೆ ಕಾಯ್ದೆ ಪ್ರಕಾರ ದೆಹಲಿಯಲ್ಲಿ ಭಿಕ್ಷೆ ಬೇಡುವುದು ಅಪರಾಧ. ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದಲ್ಲಿ ಪೊಲೀಸರು ಹಾಗೂ ಸಾಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅವರನ್ನು ಕರೆದೊಯ್ಯುತ್ತಾರೆ. ಕಿಂಗ್ಸ್ವೇ ಕ್ಯಾಂಪ್ನ ಮ್ಯಾಜಿಸ್ಟ್ರೇಟ್ ಎದುರು ಅವರನ್ನು ಹಾಜರುಪಡಿಸಲಾಗುತ್ತದೆ. ``ಸರಿಯಾದ ಪುನರ್ವಸತಿ ಯೋಜನೆಗಳಿಲ್ಲ ಜೊತೆಗೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟುಬಿಡಲಾಗ್ತಿದೆ. ಅವರನ್ನು ಜೈಲಿನಲ್ಲಿಟ್ಟರೆ ಜೀವನಾಧಾರಕ್ಕೆ ಹೊಡೆತ ಬೀಳುತ್ತದೆ'' ಅನ್ನೋದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

ಸದ್ಯ ಭಿಕ್ಷುಕರ ವಸತಿಯಲ್ಲಿರುವ ಏಕೈಕ ವ್ಯಕ್ತಿ ಅಂದ್ರೆ ಅರವಿಂದ್ ಸಿಂಗ್, ಅಡುಗೆ ಮಾಡುವುದು ಇವನ ಕಾಯಕ. ದೆಹಲಿ ಸರ್ಕಾರ ಕಟ್ಟಿಸಿದ ಈ ಭಿಕ್ಷುಕರ ವಸತಿ ನಿಲಯದಲ್ಲಿ 60 ವರ್ಷದ ಅರವಿಂದ್ ಸಿಂಗ್ ಕಳೆದ 3 ತಿಂಗಳಿನಿಂದ ವಾಸಿಸುತ್ತಿದ್ದಾನೆ. ಈತನಿಗೆ ಅಲ್ಲಿ ರಾಜಮರ್ಯಾದೆ. ಮೂರು ಜನ ಕೇರ್ ಟೇಕರ್ಗಳಿದ್ದಾರೆ, ಅವರೆಲ್ಲ ಆತನಿಗೆ ಸ್ನೇಹಿತರಿದ್ದಂತೆ. ವಸತಿ, ಉಚಿತ ಊಟ ಉಪಹಾರ, ವೈದ್ಯಕೀಯ ಚಿಕಿತ್ಸೆ, ಬಟ್ಟೆ ಎಲ್ಲವೂ ಇಲ್ಲಿ ಸಿಗುತ್ತಿದೆ. ಇನ್ನು ಅವನ ಕೋಣೆಯಲ್ಲಂತೂ ಐಷಾರಾಮಿ ವಸ್ತುಗಳಿಗೇನೂ ಕೊರತೆಯಿಲ್ಲ. ಕೂಲರ್, ಟಿವಿ, ಬೆಡ್ ಎಲ್ಲವೂ ಇದೆ. ಪ್ರತಿ ದಿನ ಒಂದು ಕೆಜಿ ಹಾಲು ಮತ್ತು ತಿಂಡಿ ತಿನಿಸುಗಳನ್ನು ಕೊಡಲಾಗ್ತಿದೆ. ಇವನನ್ನೂ ರಿಲೀಸ್ ಮಾಡುವಂತೆ ಮ್ಯಾಜಿಸ್ಟ್ರೇಟ್ ಆದೇಶಿಸಿದ್ರು. ಆದ್ರೆ ತನ್ನನ್ನು ಭಿಕ್ಷುಕರ ವಸತಿ ನಿಲಯದಲ್ಲಿಡುವಂತೆ ಅರವಿಂದ್ ಸಿಂಗ್ ಮನವಿ ಮಾಡಿಕೊಂಡಿದ್ದ. 2014ರಲ್ಲಿ ಮೊದಲ ಬಾರಿ ಇವನನ್ನು ಇಲ್ಲಿಗೆ ಕರೆತರಲಾಗಿತ್ತು. ಇಲ್ಲಿಂದ ರಿಲೀಸ್ ಆಗಿ 6 ತಿಂಗಳ ನಂತರ ಮತ್ತೆ ಸಿಕ್ಕಿಬಿದ್ದಿದ್ದ. ತನ್ನ ಇಡೀ ಬದುಕನ್ನೇ ಇಲ್ಲಿ ಕಳೆಯಬೇಕೆಂದು ಯೋಜನೆ ಹಾಕಿಕೊಂಡಿದ್ದೇನೆ ಎನ್ನುತ್ತಾನೆ ಅರವಿಂದ್ ಸಿಂಗ್.

ಭಿಕ್ಷುಕರ ವಸತಿ ನಿಲಯವನ್ನು 22 ಎಕರೆ ಜಾಗದಲ್ಲಿ ವಿಶಾಲವಾಗಿ ನಿರ್ಮಿಸಲಾಗಿದೆ. ಆದ್ರೆ ದುರದೃಷ್ಟವಶಾತ್ ಇಡೀ ಕಟ್ಟಡಕ್ಕೆ ಇರುವವನು ಒಬ್ಬನೇ ಭಿಕ್ಷುಕ. ಪಕ್ಕದಲ್ಲೇ ವಿದೇಶೀಯರ ತಡೆ ಕೇಂದ್ರ ಕೂಡ ಇದೆ. ಅಲ್ಲಿ ಸುಮಾರು 40 ಮಂದಿ ವಿದೇಶೀಯರಿದ್ದಾರೆ, ಬಹುತೇಕ ಎಲ್ಲರೂ ಆಫ್ರಿಕಾ ಹಾಗೂ ಪಾಕಿಸ್ತಾನದವರು. ಅದೇನೇ ಆದ್ರೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡ ಹಾಳು ಬಿದ್ದಿರುವುದು ವಿಪರ್ಯಾಸ. ಭಿಕ್ಷುಕರ ಪುನರ್ವಸತಿ ಹೆಸರಲ್ಲಿ ದೆಹಲಿ ಸರ್ಕಾರದ ಹಣ ಪೋಲಾಗುತ್ತಿದೆ. 

ಇದನ್ನೂ ಓದಿ...

ಕರ್ನಾಟಕದಲ್ಲಿ ಸಿದ್ದವಾಯ್ತು ಸುಲ್ತಾನ್ ಗೇಮ್

ಮಾರಕವಾಗುತ್ತಿದೆ ಬೆಂಗಳೂರು ಟ್ರಾಫಿಕ್ - ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ನರದೌರ್ಬಲ್ಯ ಸಮಸ್ಯೆ