ಆರು ವರ್ಷದ ಬಾಲಕನ ಯಕೃತ್ತಿನ ಕಸಿ ಚಿಕಿತ್ಸೆಗೆ ಸಹಾಯ ಮಾಡಿದ ನಟ ಸೋನು ಸೂದ್

ಹರ್ಷವರ್ಧನ ಎಂಬ ಆರು ವರ್ಷದ ಬಾಲಕನು ಯಕೃತ್ತಿನ ಸಿರೋಸಿಸ್‌ ರೋಗಕ್ಕೆ ಒಳಗಾಗಿರುವ ಕಾರಣದಿಂದ ಅವನನ್ನು ರಕ್ಷಿಸಲು ನಟ ಸೋನು ಸೂದ್ ಮುಂದೆ ಬಂದಿದ್ದಾರೆ.

ಆರು ವರ್ಷದ ಬಾಲಕನ ಯಕೃತ್ತಿನ ಕಸಿ ಚಿಕಿತ್ಸೆಗೆ ಸಹಾಯ ಮಾಡಿದ ನಟ ಸೋನು ಸೂದ್

Friday November 20, 2020,

2 min Read

ತಮ್ಮ ಮಾನವೀಯ ಕಾರ್ಯಗಳಿಂದ ಈಗಾಗಲೇ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿರುವ ನಟ ಸೋನು ಸೂದ್ ಈಗ ಮತ್ತೊಮ್ಮೆ ತಮ್ಮ ಕೆಲಸದಿಂದ ಸುದ್ದಿಯಲ್ಲಿದ್ದಾರೆ. ಅನೇಕ ವಲಸಿಗರಿಗೆ ಮತ್ತು ಬಡವರಿಗೆ ಸಹಾಯ ಮಾಡಿದ ನಟ ಸೋನು ಸೂದ್ ಈಗ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಪಿತ್ತಜನಕಾಂಗದ ಕಸಿಗೆ ಒಳಗಾಗಬೇಕಾಗಿರುವ ಆರು ವರ್ಷದ ಹರ್ಷವರ್ಧ‌ನ್‌ನ ರಕ್ಷಣೆಗೆ ಧಾವಿಸಿದ್ದಾರೆ.


ಆರು ತಿಂಗಳ ಮಗುವಿದ್ದಾಗಿನಿಂದಲೇ ಈ ಬಾಲಕನು ಅನಾರೋಗ್ಯದಿಂದ ಬಳಲುತ್ತಿದ್ದ. ಕುಟುಂಬವು ಮುಖ್ಯಮಂತ್ರಿಗಳ ನಿಧಿ ಮತ್ತು ಆರೋಗ್ಯಶ್ರೀ ಯೋಜನೆಯಿಂದ ಸಹಾಯವನ್ನು ಕೋರಿತ್ತು, ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಗುವಿನ ತಾಯಿ ಹೇಳುತ್ತಾರೆ.


"ಒಂದು ತಿಂಗಳ ಹಿಂದೆಯೆಷ್ಟೇ ನನ್ನ ಮಗನ ಪಿತ್ತಜನಕಾಂಗಕ್ಕೆ ಸಂಪೂರ್ಣವಾಗಿ ಹಾನಿಯಾಗಿದೆ ಮತ್ತು ಅವನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು, ಅದಕ್ಕೆ 20 ಲಕ್ಷ ರೂ. ವೆಚ್ಚವಾಗುತ್ತದೆ ಮತ್ತು ಚಿಕಿತ್ಸೆ ಮಾಡಿಸದಿದ್ದರೆ ಅವನ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ,” ಎಂದು ಹರ್ಷವರ್ಧನ್ ತಾಯಿ ಎಎನ್‌ಐಗೆ ತಿಳಿಸಿದರು.


"ಸೋನು ಸರ್ ತಮ್ಮ ಚಿತ್ರೀಕರಣದಲ್ಲಿ ನಿರತರಾಗಿದ್ದರೂ ಕೂಡ ಚಿಕಿತ್ಸೆಗೆ ಸಂಪೂರ್ಣ ಧನಸಹಾಯ ನೀಡುವ ಭರವಸೆ ನೀಡಿ, ನಮ್ಮನ್ನು ಭೇಟಿಯಾದರು. ಅವರು ಶಸ್ತ್ರಚಿಕಿತ್ಸೆಯ ಎಲ್ಲಾ ವೆಚ್ಚಗಳನ್ನು ಭರಿಸುತ್ತಿದ್ದಾರೆ. ಅವರ ಈ ಸಹಾಯವನ್ನು ನಾವು ನಮ್ಮ ಕೊನೆಯ ಉಸಿರುವವರೆಗೂ ಮರೆಯುವುದಿಲ್ಲ. ಭವಿಷ್ಯದಲ್ಲಿ ಅವರು ನಮ್ಮಂತಹ ಅನೇಕ ಜನರಿಗೆ ಸಹಾಯ ಮಾಡುತ್ತಾರೆಂದು ಭಾವಿಸುತ್ತೇವೆ," ಎಂದು ಅವರು ಹೇಳಿದರು.

ನಟ ಸೋನು ಸೂದ್


ಹರ್ಷವರ್ಧನಿಗೆ ಚಿಕಿತ್ಸೆ ನೀಡುತ್ತಿರುವ ಅಪೊಲೊ ಆಸ್ಪತ್ರೆಯ ಡಾ. ಮನೀಶ್ ವರ್ಮಾ, ಬಾಲಕ ಯಕೃತ್ತಿನ ಸಿರೋಸಿಸ್ ರೋಗದಿಂದ ಬಳಲುತ್ತಿದ್ದು, ಅದಕ್ಕಾಗಿ ಕಸಿ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ.


"ಮಗುವಿನ ಆಪರೇಷನ್ ಮಾಡುವುದು ನಿರ್ಣಾಯಕವಾಗಿತ್ತು. ನಮಗೆ ಸಂಪನ್ಮೂಲಗಳ ಅಗತ್ಯವಿತ್ತು. ಸೋನು ಸೂದ್‌ರವರ ಭರವಸೆಯ ಮೇರೆಗೆ ಯಾವುದೇ ರಾಜಿಯಿಲ್ಲದೆ, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಅಪೊಲೊ ಆಸ್ಪತ್ರೆಯ ನಮ್ಮ ತಂಡ ಆ ಬಾಲಕನು ಆರೋಗ್ಯಕರ ಜೀವನವನ್ನು ನಡೆಸುವಂತೆ ನಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದೇವೆ" ಎಂದು ಡಾ.ವರ್ಮಾ‌ ಹೇಳುತ್ತಾರೆ, ವರದಿ ದಿ ಹ್ಯಾನ್ಸ್ ಇಂಡಿಯಾ.


ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್‌ಫೋನ್‌ನ್ನು ಖರೀದಿಸುವುದರಿಂದ ಹಿಡಿದು ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಸಾರಿಗೆಯನ್ನು ಒದಗಿಸಿ ಪುನರ್ವಸತಿ ಕಲ್ಪಿಸುವವರೆಗೆ ಸಹಾಯ ಮಾಡಿದ ಸೋನು ಸೂದ್ ಅವರನ್ನು ಅನೇಕರು ಹೀರೋ ಎಂದು ಪ್ರಶಂಸಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವಲಸಿಗರಿಗೆ ಕೆಲಸ ಹುಡುಕಲು ಸಹಾಯ ಮಾಡುವುದಕ್ಕಾಗಿ ಅವರು 'ಪ್ರವಾಸಿ ರೋಜ್ಗಾರ್' ಎಂಬ ವೇದಿಕೆಯನ್ನು ಪ್ರಾರಂಭಿಸಿದ್ದಾರೆ.