ಎಟಿಎಂ ಬಳಕೆದಾರರೇ ಎಚ್ಚರ..!ಬೆಂಗಳೂರಿನಲ್ಲಿ ವಂಚಕರ ಜಾಲವಿದೆ..!

ಟೀಮ್​ ವೈ.ಎಸ್​. ಕನ್ನಡ

ಎಟಿಎಂ ಬಳಕೆದಾರರೇ ಎಚ್ಚರ..!ಬೆಂಗಳೂರಿನಲ್ಲಿ ವಂಚಕರ ಜಾಲವಿದೆ..!

Friday July 07, 2017,

2 min Read

ಡಿಜಿಟಲ್ ಇಂಡಿಯಾದ ಕನಸು ದೊಡ್ಡದಾಗಿ ಬೆಳೆಯುತ್ತಿದೆ. ಕೇಂದ್ರ ಸರಕಾರ ಭಾರತವನ್ನು ಕ್ಯಾಷ್​ಲೆಸ್ ದೇಶವನ್ನಾಗಿ ಮಾಡಲು ಶ್ರಮಪಡುತ್ತಿದೆ. ಎಟಿಎಂಗಳ ಬಳಕೆ, ಸ್ವೈಪಿಂಗ್ ಮಷಿನ್​ಗಳ ಟಚ್, ಇತರೆ ಡಿಜಿಟಲ್ ಪಾವತಿ ವ್ಯವಸ್ಥೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ ಡಿಜಿಟಲ್ ಓಟದಲ್ಲಿ ಗ್ರಾಹಕರ ಹಾಗೂ ವರ್ತಕರ ಸುರಕ್ಷಾ ಕ್ರಮಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಬ್ಯಾಂಕ್ ಅಕೌಂಟ್ ಸೇರಿದಂತೆ, ಕ್ರೆಡಿಟ್, ಡೆಬಿಟ್ ಕಾರ್ಡ್ ಗಳು ಸುರಕ್ಷಿತವಾಗಿವೆ ಎಂದು ಹೇಳುವಹಾಗಿಲ್ಲ. ಇದಕ್ಕೊಂದು ಉದಾಹರಣೆ ಬೆಂಗಳೂರಿನಲ್ಲೇ ಸಿಕ್ಕಿದೆ. ಇತ್ತೀಚೆಗೆ ಬೆಂಗಳೂರಿನ ಕೆಲ ಎಟಿಎಂಗಳಲ್ಲಿ ವಂಚಕರು ಸ್ಕಿಮ್ಮರ್​​ಗಳನ್ನು ಬಳಸಿಕೊಂಡು, ಹಣ ಲಪಾಟಯಿಸಿದ್ದಾರೆ. ಸ್ಕಿಮ್ಮರ್​ಗಳ ಮೂಲಕ ಕಾರ್ಡ್​ನ ಮ್ಯಾಗ್ನಟಿಕ್ ಸ್ಟ್ರಿಪ್ ನಲ್ಲಿರುವ ಡೇಟಾಗಳನ್ನು ಬಳಸಿಕೊಂಡು, ಆ ಮೂಲಕ ವಂಚನೆ ಮಾಡಿದ್ದಾರೆ. ಒಂದು ವರದಿ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 200ಕ್ಕೂ ಅಧಿಕ ಜನರು ಈ ವಂಚನೆಗೆ ಒಳಗಾಗಿದ್ದಾರೆ. ಕಳೆದ ಒಂದುವಾರದಲ್ಲಿ 10 ಲಕ್ಷಕ್ಕೂ ಅಧಿಕ ಹಣವನ್ನು ವಂಚಕರು ಲಪಟಾಯಿಸಿದ್ದಾರೆ. ಈ ರೀತಿ ವಂಚನೆ ಮಾಡಲು ಖದೀಮರು ತಿಂಗಳ ಆರಂಭದ ದಿನಗಳನ್ನು ಬಳಸಿಕೊಂಡಿದ್ದು, ಆ ವೇಳೆಯಲ್ಲಿ ಸಾಮಾನ್ಯವಾಗಿ ಅತೀ ಹೆಚ್ಚು ಟ್ರಾನ್ಸ್​ಆ್ಯಕ್ಷನ್​ಗಳು ನಡೆಯುತ್ತವೆ.

image


ಅತ್ಯಾಧುನಿಕ ಸ್ಕಿಮ್ಮರ್ ಗಳನ್ನು ಬಳಸಿಕೊಂಡ ಖದೀಮರು, ಎಟಿಎಂ ಕಾರ್ಡ್ ನ ಹಿಂಭಾಗದ ಮ್ಯಾಗ್ನಟಿಕ್ ಸ್ಟ್ರಿಪ್ ಗಳಲ್ಲಿರುವ ಡೇಟಾಗಳನ್ನು ಕ್ಯಾಪ್ಚರ್ ಮಾಡಿ ಆ ಮೂಲಕ ವಂಚನೆ ನಡೆಸುತ್ತಿದ್ದರು. ಅಷ್ಟೇ ಅಲ್ಲ ಎಟಿಎಂ ಕಾರ್ಡ್ ಗಳ 4 ಅಂಕಿಗಳ ಸೆಕ್ಯುಟಿರಿ ಪಿನ್​​ಗಳನ್ನು ಕ್ಯಾಪ್ಚರ್ ಮಾಡಲು ಪಿನ್ ಹೋಲ್ ಕ್ಯಾಮೆರಾಗಳನ್ನು ಬಳಸಿಕೊಳ್ಳುತ್ತಿದ್ದರು ಅನ್ನುವ ಮಾಹಿತಿ ಸಿಕ್ಕಿದೆ.

ಇದನ್ನು ಓದಿ: ಶೇಫ್ ಆಫ್ ಯೂ; ಪಡ್ಡೆಗಳನ್ನು ಹುಚ್ಚೆಬ್ಬಿಸುತ್ತಿರುವ ಮ್ಯೂಸಿಕ್

ಮ್ಯಾಗ್ನೆಟಿಕ್ ಸ್ಟ್ರಿಪ್ ಗಳ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ, ಹೊಸ ಕಾರ್ಡ್ ತಯಾರಿಸಿ, ಆ ಮೂಲಕ ಹಣವನ್ನು ಎಟಿಎಂಗಳಿಂದ ವಿತ್ ಡ್ರಾ ಮಾಡಿ, ವಂಚಿಸಿದ್ದಾರೆ. ಸಾವಿರಾರು ರೂಪಾಯಿಗಳಿಂದ ಹಿಡಿದು, ಒಂದು ಲಕ್ಷದ ತನಕ ಹಣ ಡ್ರಾ ಮಾಡಿದ ಉದಾಹರಣೆಗಳಿವೆ. ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರು ಈ ಬಗ್ಗೆ 35ಕ್ಕಿಂತಲೂ ಹೆಚ್ಚು ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ದಾಖಲಾದ ದೂರುಗಳ ಪೈಕಿ ವ್ಯಕ್ತಿಯೊಬ್ಬರು ಸುಮಾರು 1.17 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

“ಎಟಿಎಂಗಳಿಂದ ಅಕ್ರಮವಾಗಿ ಹಣ ವಿತ್ ಡ್ರಾ ಮಾಡಿದ ದೂರುಗಳು ದಾಖಲಾಗಿವೆ. ಬೆಂಗಳೂರಿನ ಬಿಟಿಎಂ ಲೇ ಔಟ್, ಹೆಣ್ಣೂರು, ಗೆದ್ದಲಹಳ್ಳಿ, ಇಂದಿರಾನಗರ ಮತ್ತು ಕೆಲ ಕಾರ್ಡ್ ಗಳಿಂದ ಮುಬೈ ಮತ್ತು ಥಾಣೆಗಳಲ್ಲಿ ಹಣ ಪಡೆಯಲಾಗಿದೆ. ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ”

ಅಂದಹಾಗೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವಂಚನೆಗಳು ನಡೆಯುತ್ತಿಲ್ಲ. ಈ ಹಿಂದೆ ಫೆಬ್ರವರಿಯಲ್ಲಿ ಕಮ್ಮನಹಳ್ಳಿಯ ಎಟಿಎಂ ಒಂದರಲ್ಲಿ ಸ್ಕಿಮ್ಮರ್​​ಗಳನ್ನು ಬಳಸಿಕೊಂಡು ಮೋಸ ಮಾಡಲಾಗಿತ್ತು. ಅಲ್ಲಿ ವಂಚನೆ ಮಾಡುತ್ತಿದ್ದ 7 ಕ್ರಿಮಿನಲ್ ಗಳನ್ನು ಪೊಲೀಸರು ಬಂಧಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಟಿಎಂ ಬಳಕೆದಾರರಿಗೆ ಹಲವು ಟಿಪ್ಸ್ ಗಳನ್ನು ಕುಡ ನೀಡಲಾಗಿದೆ. ಎಟಿಎಂ ಕಾರ್ಡ್ ಬಳಕೆ ಮಾಡುವ ಮುನ್ನ ಮಷಿನ್ ನಲ್ಲಿರುವ ಸ್ಲಾಟ್ ಗಳನ್ನು ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಎಟಿಎಂಗಳಲ್ಲಿ ಸಂದೇಹಗಳು ಬಂದರೆ ಎಟಿಎಂ ಕಾರ್ಡ್ ಬಳಸಬೇಡಿ ಮತ್ತು ಪೊಲೀಸ್ ಠಾಣೆಗಳಿಗೆ ದೂರು ನೀಡಲು ತಿಳಿಸಲಾಗಿದೆ. ಒಟ್ಟಿನಲ್ಲಿ ವಂಚೆನ ಮಾಡುವವರು ದಿನಕ್ಕೊಂದು ವ್ಯವಸ್ಥೆಗಳನ್ನು ಹುಡುಕಿಕೊಳ್ಳುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

ಇದನ್ನು ಓದಿ:

1. ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟ ರಾಜಕೀಯ ನಾಯಕರು ಇವರು..!

2. "ಗ್ರೀನ್ ಕಾರ್ಪೆಟ್" ಹಾಸಿತು ಆಧುನಿಕ ಪಾಟ್ ಬ್ಯುಸಿನೆಸ್

3. ಮಹಿಳಾ ಕ್ರಿಕೆಟ್​ನ ಸಚಿನ್ ತೆಂಡುಲ್ಕರ್- ವಿಶ್ವಕಪ್ ಎತ್ತುವ ಕನಸು ಕಾಣ್ತಿದ್ದಾರೆ ಮಿಥಾಲಿ ರಾಜ್