ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ

ಟೀಮ್ ವೈ.ಎಸ್.ಕನ್ನಡ 

ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ

Wednesday December 14, 2016,

2 min Read

ಭಾರತದಲ್ಲಿ ವಾಯುಮಾಲಿನ್ಯ ದಿನೇ ದಿನೇ ಮಿತಿಮೀರುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಂತೂ ಅತ್ಯಂತ ಕಲುಷಿತ ನಗರ ಅನ್ನೋ ಕುಖ್ಯಾತಿ ಪಡೆದಿದೆ. ಹಾಗಾಗಿ ಪರಿಸರ ಉಳಿಸಿದ್ರೆ ಮಾತ್ರ ನಮ್ಮ ಭವಿಷ್ಯ ಸುರಕ್ಷಿತ ಅನ್ನೋದಂತೂ ಖಚಿತ. ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಯುವತಿಯರು ನಿಸರ್ಗವನ್ನು ಕಾಪಾಡಿಕೊಳ್ಳಲು ವಿಶಿಷ್ಟ ರೀತಿಯ ಹೋರಾಟ ಮಾಡುತ್ತಿದ್ದಾರೆ. ಕಲೆಯನ್ನೇ ಅಸ್ತ್ರವಾಗಿಸಿಕೊಂಡು ವಾಯುಮಾಲಿನ್ಯದ ವಿರುದ್ಧ ಹೋರಾಟ ಆರಂಭಿಸಿದ್ದಾರೆ.

image


ಹಚ್ಚಹಸಿರಿನಿಂದ ಕಂಗೊಳಿಸುವ ಅತ್ಯಂತ ಸುಂದರ ಪ್ರದೇಶ ಇದು. ಬಿಹಾರದ ಉತ್ತರ ಭಾಗದಲ್ಲಿದೆ. ಇಲ್ಲಿನ ಸಾಂಪ್ರದಾಯಿಕ ಮಧುಬನಿ ಪೇಂಟಿಂಗ್ಸ್​ ಅತ್ಯಂತ ಜನಪ್ರಿಯವಾಗಿವೆ. ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿವೆ. ಆದ್ರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಪ್ರಕೃತಿಗೆ ಮಾನವನೇ ಕೊಡಲಿ ಏಟು ನೀಡುತ್ತಿದ್ದಾನೆ. ನಿರಂತರವಾಗಿ ಮರಗಳನ್ನು ಕಡಿಯುತ್ತಿರುವುದರಿಂದ ಕಾಡು ಮಾಯವಾಗುತ್ತಿದೆ. ಹಚ್ಚಹಸಿರಿನ ವನ ಮರಗಳೇ ಇಲ್ಲದೆ ಬಣಗುಡುವ ದಿನಗಳು ಕೂಡ ದೂರವಿಲ್ಲ. ಹಾಗಾಗಿ ಅರಣ್ಯವನ್ನು ರಕ್ಷಿಸಲು ಇಲ್ಲಿನ ಮಹಿಳೆಯರು ಹಾಗೂ ಯುವತಿಯರು ಟೊಂಕಕಟ್ಟಿ ನಿಂತಿದ್ದಾರೆ. ಮಧುಬನಿ ಕಲೆಯ ಮೂಲಕ ಸಾವಿರಾರು ಮರಗಳನ್ನು ಕತ್ತರಿಸದಂತೆ ರಕ್ಷಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಆರಂಭವಾದ ಹೋರಾಟ ಇದು. ಮಧುಬನಿಯ ಮಹಿಳೆಯರೆಲ್ಲ ಮರಗಳ ಮೇಲೆ ಚಿತ್ರ ಬಿಡಿಸಲು ಆರಂಭಿಸಿದ್ದರು. ಈ ಪ್ರದೇಶದಲ್ಲಿರುವ ಮರಗಳ ಮೇಲೆಲ್ಲ ಸುಂದರ ಕಲಾಕೃತಿಗಳನ್ನು ಅರಳಿಸಿದ್ದರು. ಈಗ 5 ಕಿಲೋ ಮೀಟರ್ ವಿಸ್ತಾರದವರೆಗೂ ಮರಗಳ ಮೇಲೆಲ್ಲ ಅದ್ಭುತವಾದ ಕಲಾಕೃತಿಗಳು ನಿಮ್ಮ ಕಣ್ಮನ ಸೆಳೆಯುತ್ತವೆ. 5 ಕಿಲೋ ಮೀಟರ್ ಉದ್ದಕ್ಕೂ ಮರಗಳ ಮೇಲೆಲ್ಲ ಚಿತ್ರ ಬಿಡಿಸಲಾಗಿದೆ. ಅಷ್ಟೇ ಅಲ್ಲ ಅವು ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ಬಹುಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ.

ರಸ್ತೆ ಬದಿಯಲ್ಲಿರುವ ಮರಗಳ ಮೇಲೆಲ್ಲ ದೇವಾನುದೇವತೆಗಳ ಚಿತ್ರವನ್ನು ಮಧುಬನಿ ಮಹಿಳೆಯರು ಬಿಡಿಸಿದ್ದಾರೆ. ರಾಮ್​ಪತ್ತಿ ಮತ್ತು ರಾಜ್​ನಗರದ ಮಧ್ಯದ ಸಂಪೂರ್ಣ ಪ್ರದೇಶದಲ್ಲಿ ಯಾವ ಮರಗಳನ್ನೂ ಖಾಲಿ ಬಿಟ್ಟಿಲ್ಲ. ಎಲ್ಲಾ ವೃಕ್ಷಗಳ ಮೇಲೂ ಭಗವಂತನ ಚಿತ್ರಗಳು ಅರಳಿವೆ. ಈ ಭಾಗದಲ್ಲಿ ಒಂದೇ ಒಂದು ಮರಕ್ಕೂ ಕೊಡಲಿ ಏಟು ಬೀಳಬಾರದು ಅನ್ನೋದು ಈ ಕಲಾವಿದ ಮಹಿಳೆಯರ ಉದ್ದೇಶ.

ಮೊದಲು ಈ ಮರಗಳಿಗೆಲ್ಲ ಸುಣ್ಣ ಬಳಿಯಲಾಗುತ್ತದೆ, ಕಾರಣ ಸುಣ್ಣ ಬಳಿದ್ರೆ ಮರಗಳಿಗೆ ಕೀಟ ಬಾಧೆ ಇರುವುದಿಲ್ಲ. ಬಿಳಿಯ ಸುಣ್ಣದ ಬಣ್ಣದ ಹಿನ್ನೆಲೆಯಲ್ಲಿ ರಾಮ, ಸೀತೆ, ಕೃಷ್ಣ, ಬುದ್ಧ, ಮಹಾವೀರ ಹೀಗೆ ಇತರ ದೇವಾನುದೇವತೆಗಳ ಚಿತ್ರವನ್ನು ಬಿಡಿಸಲಾಗಿದೆ. ಪ್ರತಿ ಮರವನ್ನೂ ದೇವಾಲಯವನ್ನಾಗಿ, ಭಗವಂತನ ನೆಲೆಯಾಗಿ ಬದಲಾಯಿಸಿರುವುದು ವಿಶೇಷ. 

ಇದನ್ನೂ ಓದಿ..

ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

KSRTC ಬಸ್​ಗಳಿಗೆ ಬಯೋ ಟಾಯ್ಲೆಟ್ ಭಾಗ್ಯ..!-ದೇಶದ ನಂಬರ್​ ವನ್​ ಸಾರಿಗೆ ಸಂಸ್ಥೆಯಿಂದ ಹೊಸ ಪ್ರಯೋಗ