ಪ್ರಾಚೀನ ಅಡುಗೆ ಪದ್ಧತಿಗೆ ಮರುಜೀವ ಕೊಟ್ಟಿದ್ದಾಳೆ ಈ ಮಣ್ಣಿನ ಮಗಳು
ಟೀಮ್ ವೈ.ಎಸ್.ಕನ್ನಡ
Monday June 19, 2017,
2 min Read
ಮಣ್ಣಿನಿಂದ ಮಾಡಿದ ಮಡಿಕೆಗಳು ನಮಗೆ ಚಿರಪರಿಚಿತ. ಮಣ್ಣಿನಿಂದ್ಲೇ ತಯಾರಿಸಲ್ಪಟ್ಟ ಹಂಡೆಗಳು ಕೂಡ ಹೊಸದೇನಲ್ಲ. ಆದ್ರೀಗ ಮಣ್ಣಿನಲ್ಲೇ ಅನ್ನ ಮಾಡುವ ಕುಕ್ಕರ್ ಅನ್ನು ಕೂಡ ತಯಾರಿಸಲಾಗಿದೆ. ಮಣ್ಣಿನ ಫ್ರಿಡ್ಜ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇವೆಲ್ಲವೂ ಪರಿಸರ ಸ್ನೇಹಿ ಉಪಕರಣಗಳು ಅನ್ನೋದು ವಿಶೇಷ.
ದೆಹಲಿಯಲ್ಲಿ ಮಣ್ಣಿನ ಕುಕ್ಕರ್, ಫ್ರಿಡ್ಜ್ ಸಿಗುತ್ತೆ ಅನ್ನೋದು ಎಲ್ಲರಿಗೂ ತಿಳಿದಿದೆ. ಆದ್ರೆ ಬೆಂಗಳೂರಲ್ಲೂ ಈ ಮಣ್ಣಿನ ಪರಿಕರಗಳು ಸಿಗುವುದಕ್ಕೆ ಸಾಧ್ಯವೇ ಅಂತಾ ಹುಬ್ಬೇರಿಸಬೇಡಿ. ಯಾಕಂದ್ರೆ ಕೇವಲ ಬೆಂಗಳೂರಿಗೆ ಮಾತ್ರವಲ್ಲ ಅವನ್ನೆಲ್ಲ ಇಡೀ ಕರ್ನಾಟಕಕ್ಕೆ ತಲುಪಿಸುವ ಹೊಣೆಯನ್ನು ಶ್ರೀಮತಿ ಸುಧಾರಾಣಿ ಮತ್ತು ಅವರ ಪತಿ ವಹಿಸಿಕೊಂಡಿದ್ದಾರೆ.
ಬದುಕು ಬದಲಿಸಿದ ಘಟನೆ
ಸುಧಾರಾಣಿ ಮತ್ತು ಅವರ ಪತಿ ಇಬ್ಬರೂ ಮೂಲತಃ ಐಟಿ ಉದ್ಯೋಗಿಗಳು. ಆಕಸ್ಮಿಕ ಘಟನೆಯೊಂದು ಅವರ ಬದುಕನ್ನೇ ಬದಲಿಸಿದೆ. ಒಮ್ಮೆ ಇದ್ದಕ್ಕಿದ್ದಂತೆ ಸುಧಾರಾಣಿಯವರ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ರು. ಸಾಕಷ್ಟು ಪರೀಕ್ಷೆಗಳ ನಂತರ ಆಕೆಗೆ ಕ್ಯಾನ್ಸರ್ ಇದೆ ಅನ್ನೋ ವಿಷಯ ಗೊತ್ತಾಗಿತ್ತು. ಅಮ್ಮನಿಗೆ ಮಹಾಮಾರಿ ಆವರಿಸಿದೆ ಅನ್ನೋದು ಗೊತ್ತಾಗ್ತಿದ್ದಂತೆ ಸುಧಾರಾಣಿ ಕುಸಿದು ಹೋಗಿದ್ರು, ಆಘಾತಕ್ಕೆ ಒಳಗಾಗಿದ್ರು. ಯಾಕಂದ್ರೆ ಸುಧಾರಾಣಿ ತಾಯಿ ಎಂದೂ ಹಾಸಿಗೆ ಹಿಡಿದವರಲ್ಲ, ಫಿಟ್ & ಫೈನ್ ಆಗಿದ್ರು.
ಹುಡುಕಾಟದಿಂದ ಗೆಲುವಿನ ತನಕ
ಸದಾ ಚೈತನ್ಯದ ಚಿಲುಮೆಯಾಗಿರುತ್ತಿದ್ದ ಆಕೆ, ನಿಯಮಿತ ವ್ಯಾಯಾಮ ಮತ್ತು ಓಟದಿಂದ ಆರೋಗ್ಯವನ್ನು ಕಾಯ್ದುಕೊಂಡು ಬಂದಿದ್ದರು. ಹೀಗಿದ್ದಾಗ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗೆ ತುತ್ತಾದದ್ದು ಸುಧಾರಾಣಿಯವರನ್ನು ಚಿಂತೆಗೀಡು ಮಾಡಿತು. ಇದನ್ನು ಬಹಳ ಗಂಭೀರವಾಗಿಯೇ ತೆಗೆದುಕೊಂಡ ಸುಧಾರಾಣಿ, ಈ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡಲು ಆರಂಭಿಸಿದ್ರು. ಅದರಿಂದ ತಿಳಿದು ಬಂದ ಅಂಶ ಇವರ ಬದುಕಿನ ಗತಿಯನ್ನೇ ಬದಲಿಸಿತು.
ಅಲ್ಯೂಮಿನಿಂ ಪಾತ್ರೆಗಳ ನಿರಂತರ ಬಳಕೆಯೇ ಕ್ಯಾನ್ಸರ್ಗೆ ಕಾರಣವಾಗಿತ್ತು. ನಿಧಾನವಾಗಿ ಅಲ್ಯೂಮಿನಿಯಂ ಅಂಶ ಸುಧಾರಾಣಿಯವರ ತಾಯಿಯ ದೇಹವನ್ನು ಸೇರಿ ಕ್ಯಾನ್ಸರ್ ಬಂದಿತ್ತು. ಇದನ್ನು ಮನಗಂಡ ಸುಧಾರಾಣಿ, ಒಂದು ನಿರ್ಧಾರಕ್ಕೆ ಬರುತ್ತಾರೆ. ಹಿಂದಿನ ಕಾಲದವರು ಆರೋಗ್ಯದ ಗುಟ್ಟನ್ನು ಅರಿಯುತ್ತಾರೆ. ನಮ್ಮ ಪೂರ್ವಿಕರು ಬಳಸುತ್ತಿದ್ದ ಮಣ್ಣಿನ ಪರಿಕರಗಳ ಪ್ರಯೋಜನಗಳು ಇವರ ಗಮನಕ್ಕೆ ಬಂದಿವೆ.
ದೆಹಲಿ ಟು ಬೆಂಗಳೂರು
ಅಂದಿನಿಂದ ಮಣ್ಣಿನ ಪರಿಕರಗಳ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡು, ಅದನ್ನು ಬಳಸಲು ಆರಂಭಿಸಿದ್ರು ಸುಧಾರಾಣಿ. ನಂತರ ಎಲ್ಲರಿಗೂ ಇದನ್ನು ತಲುಪಿಸಬೇಕೆಂದು ಪದ್ಮಾವತಿ ಕಲೆಕ್ಷನ್ಸ್ ಎನ್ನುವ ಮಳಿಗೆ ತೆರೆದ್ರು. ದೆಹಲಿಯಿಂದ ಇದಕ್ಕಾಗಿ ಮಡಿಕೆಗೆ ಬೇಕಾದ ಸಾಮಗ್ರಿಗಳನ್ನು ತರಿಸಿಕೊಳ್ಳಲು ಆರಂಭಿಸಿದ್ರು. ನಂತರ ಕೆಲವೊಂದು ವಸ್ತುಗಳನ್ನು ತಾವೇ ಉತ್ಪಾದಿಸಲು ಶುರು ಮಾಡಿದ್ರು.
ಆರೋಗ್ಯಕರ ಬದುಕು
ಆರಂಭದಲ್ಲಿ ಇದನ್ನು ಜನರಿಗೆ ತಲುಪಿಸುವುದು ಬಹಳ ಕಷ್ಟವೆನಿಸುತ್ತಿತ್ತು. ಆದ್ರೆ ನಿಧಾನವಾಗಿ ಜನರನ್ನು ಕನ್ವಿನ್ಸ್ ಮಾಡಲು ಆರಂಭಿಸಿ ಯಶಸ್ವಿಯೂ ಆದರು. ಇವರ ಅಂಗಡಿಯಲ್ಲಿ ಮಣ್ಣಿನಿಂದ ಮಾಡಿರುವ ಫ್ರಿಡ್ಜ್, ಕುಕ್ಕರ್, ಮಣ್ಣಿನ ವಾಟರ್ ಫಿಲ್ಟರ್, ಮಣ್ಣಿನ ತವಾ, ಹಂಡೆ, ಡಿನ್ನರ್ ಸೆಟ್, ವಾಟರ್ ಬಾಟಲ್ ಸೇರಿದಂತೆ ದಿನನಿತ್ಯದ ಬಳಕೆಗೆ ಬೇಕಾದ ಎಲ್ಲಾ ರೀತಿಯ ಪಾತ್ರೆಗಳೂ ದೊರೆಯುತ್ತವೆ.
ಕರ್ನಾಟಕದ ನಾನಾ ಮೂಲೆಗಳಿಂದ ಬಂದು ಜನರು ಇಲ್ಲಿಂದ ಮಣ್ಣಿನ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿದ್ದಾರೆ. ಸಮಾಜ ಸೇವೆಯ ಜೊತೆಗೆ ತಮ್ಮದೇ ಆದ ಸ್ಟಾರ್ಟ್ ಅಪ್ ಮೂಲಕ ಸುಧಾರಾಣಿ ಸಾಧನೆಯನ್ನೇ ಮಾಡಿದ್ದಾರೆ. ನಮ್ಮ ಪ್ರಾಚೀನ ಅಡುಗೆ ಮನೆ ಪದ್ಧತಿಯನ್ನು ಜೀವಂತವಾಗಿಡುವ ಜೊತೆಗೆ ಆರೋಗ್ಯಕರ ಸಮಾಜದ ನಿರ್ಮಾಣಕ್ಕೂ ಕೊಡುಗೆ ನೀಡುತ್ತಿದ್ದಾರೆ.
ಇದನ್ನೂ ಓದಿ...
ಆಗಲ್ಲ ಅನ್ನುವ ಮಾತೇ ಇಲ್ಲ- ಕುಗ್ರಾಮದ ಕಥೆ ಬದಲಿಸಿದ ಪಂಚಾಯತ್ ಅಧ್ಯಕ್ಷೆ..!
ಮತ್ತೊಂದು ಹೊಸ ದಾಖಲೆ ಬರೆದ ಕೇರಳ- ತೃತೀಯ ಲಿಂಗಿಗಳಿಗೆ ಮೊತ್ತ ಮೊದಲ ಸೌಂದರ್ಯ ಸ್ಪರ್ಧೆ ಆಯೋಜಿಸಿದ ಸರಕಾರ