ರೈತರು, ಮನರೇಗಾ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿರುವ ತಮಿಳುನಾಡಿನ ಇಂಜಿನೀಯರ್ಗಳು
ಹಳ್ಳಿಯ ಬಯಲು ಪ್ರದೇಶವನ್ನೆ ತರಗತಿ ಮಾಡಿಕೊಂಡಿರುವ ಈ ನಾಲ್ಕು ಇಂಜಿನೀಯರ್ಗಳು ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಪಾಠ ಮಾಡುತ್ತಾರೆ.
Friday September 25, 2020,
2 min Read
ತಮಿಳುನಾಡಿನ ಅರವಿಂದ್, ವಿಘ್ನೇಶ್, ಭವಾನಿಶಂಕರ ಮತ್ತು ಸರಥಾಸ್ ಎಂಬ 4 ಜನ ಇಂಜನೀಯರಗಳು ಸಾಂಕ್ರಾಮಿಕದ ನಡುವೆ ಶಿಕ್ಷಕರಾಗಿ, ರೈತರ ಮಕ್ಕಳಿಗೆ ಲಾಕ್ಡೌನ್ ಸಮಯದಲ್ಲಿ ಪಾಠ ಮಾಡುತ್ತಿದ್ದಾರೆ.
1,500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ತಮಿಳುನಾಡಿನ ಪುಡುಕೋಟೈನಲ್ಲಿರುವ ಥೊಂಡೈಮಾನ್ ಹಳ್ಳಿಯಲ್ಲಿ ಡಿಜಿಟಲ್ ಸಮಸ್ಯೆಯನ್ನು ನಿವಾರಿಸಲು ಈ ನಾಲ್ಕು ಎಂಜಿನಿಯರ್ಗಳು ಶ್ರಮಿಸುತ್ತಿದ್ದಾರೆ. ಈ ಊರಿನಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರು ಅಥವಾ ಮನರೇಗಾ ಕಾರ್ಮಿಕರಾಗಿದ್ದಾರೆ, ಇವರ ಬಳಿ ಸ್ಮಾರ್ಟ್ಫೋನ್ಗಳಿಲ್ಲ. ಇಲ್ಲಿ ಆನ್ಲೈನ್ ಶಿಕ್ಷಣ ಸುಲಭವಲ್ಲ.
ಈ ಕಾರಣದಿಂದ ನಾಗರಿಕ ಸೇವೆಗಳ ಮಹಾತ್ವಾಕಾಂಕ್ಷಿಗಳಾದ ಇಂಜಿನೀಯರಗಳು ಒಂದು ವೇಳಾಪಟ್ಟಿ ತಯಾರಿಸಿ ಮನೆಯ ಮುಂದಿನ ಬಯಲು ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶುರುಮಾಡಿದರು. ಬೆಳಿಗ್ಗೆ 10 ರಿಂದ 2 ರ ವರೆಗೆ 10 ನೇ ತರಗತಿ ಓದುತ್ತಿರುವ 12 ವಿದ್ಯಾರ್ಥಿಗಳಿಗೆ ಪಾಠವಾದರೆ, ಮಧ್ಯಾಹ್ನ 2 ರಿಂದ 6 ರವರೆಗೆ 6 ರಿಂದ 9 ನೇ ತರಗತಿ ಓದುತ್ತಿರುವ 28 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ.
ಶಾಲೆಗಳು ಪುಸ್ತಕ ವಿತರಿಸಿದ ಮೇಲೆ ಜುಲೈನಲ್ಲಿ ಇವರು ಪಾಠ ಹೇಳಲು ಶುರು ಮಾಡಿದ್ದಾರೆ.
ಹಳ್ಳಿಯ ಬಯಲು ಪ್ರದೇಶವನ್ನೆ ಕಪ್ಪು ಹಲಗೆ ಇಟ್ಟು ತರಗತಿ ಮಾಡಿಕೊಂಡಿದ್ದಾರೆ. ಇವರು ಮುಖ್ಯವಾಗಿ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದು, ವಾರಕ್ಕೊಮ್ಮೆ ಭಾನುವಾರ ಈ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳುತ್ತಾರೆ.
“ಟಿಎನ್ಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ನಮಗೆ ಸೀನಿಯರ್ಗಳು ಸಹಾಯ ಮಾಡಿದ್ದರು. ಇದು ನಮ್ಮ ಹಳ್ಳಿಯ ಮಕ್ಕಳಿಗೆ ಪಾಠ ಹೇಳುವಂತೆ ಮಾಡಿತು,” ಎಂದು ಅರವಿಂದ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಹೇಳಿದರು.
“ಸಮಾಜಕ್ಕೆ ಏನಾದರೂ ಸಹಾಯ ಮಾಡಿದಂತೆ ಇದು. 6 ರಿಂದ 10 ನೇ ತರಗತಿಯ ವರೆಗಿನ ಪಠ್ಯಕ್ರಮ ಟಿಎನ್ಪಿಎಸ್ಸಿ ಗ್ರೂಪ್-1 ಪರೀಕ್ಷೆಗೆ ತುಂಬಾ ಮುಖ್ಯ,” ಎನ್ನುತ್ತಾರೆ ಮೆಕ್ಯಾನಿಕಲ್ ಇಂಜಿನೀಯರ್ ವಿಘ್ನೇಶ್.
ಹಳ್ಳಿಗರು ಇವರ ಈ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.
“ನನ್ನ ಇಬ್ಬರು ಹೆಣ್ಣುಮಕ್ಕಳು ಪ್ರತಿದಿನ ತರಗತಿಗೆ ಹೋಗುತ್ತಾರೆ. ಮೊದಮೊದಲು ಅವರಿಗೆ ಆನ್ಲೈನ್ ತರಗತಿಯ ಸೌಲಭ್ಯವಿರಲಿಲ್ಲವೆಂದು ನನಗೆ ಭಯವಾಗಿತ್ತು. ಈ ಯುವಕರು ದೇವರಂತೆ ಬಂದಿದ್ದಾರೆ,” ಎಂದು ಹಳ್ಳಿಯ ನಿವಾಸಿಯಾದ ಸೌಂದರವಳ್ಳಿ ದಿ ಲಾಜಿಕಲ್ ಇಂಡಿಯನ್ ಗೆ ಹೇಳಿದರು.