ಒಂದು ಕೆಜಿ ಪ್ಲಾಸ್ಟಿಕ್ ನೀಡಿ; ಉಚಿತವಾಗಿ ತಿಂಡಿಗಳನ್ನು ಪಡೆಯಿರಿ
ಗುಜರಾತ್ನ ಕೆಫೆಯೊಂದರಲ್ಲಿ, ಒಂದು ಕೆಜಿ ತ್ಯಾಜ್ಯಕ್ಕೆ ಉಚಿತವಾಗಿ ತಿಂಡಿ ಮತ್ತು ಅರ್ಧ ಕೆಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಉಚಿತವಾಗಿ ಚಹಾವನ್ನು ಪಡೆಯಬಹುದಾಗಿದೆ.
Monday February 17, 2020,
2 min Read
ಕೆಲವು ದಿನವಳ ಹಿಂದೆ, ಒಡಿಶಾದ ಕೆಫೆಯೊಂದು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ ಉಚಿತ ಆಹಾರವನ್ನು ನೀಡುವ ಮೂಲಕ ಸುದ್ದಿ ಮಾಡಿತ್ತು.
ಇತ್ತಿಚೆಗೆ, ಗುಜರಾತ್ನ ಬುಡಕಟ್ಟು ಪ್ರಾಬಲ್ಯದಲ್ಲಿರುವ ದಾಹೋಡ್ ಜಿಲ್ಲೆಯಲ್ಲಿರುವ ವಿಶಿಷ್ಟ ಕೆಫೆಯೂ ಒಂದು ಕೆಜಿ ಪ್ಲಾಸ್ಟಿಕ್ ಬದಲಾಗಿ ಉಚಿತ ತಿಂಡಿಗಳನ್ನು ನೀಡುವಂತಹ ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ನೀವು ಅರ್ಧ ಕಿಲೋಗ್ರಾಂ ಪ್ಲಾಸ್ಟಿಕ್ ಹೊಂದಿದ್ದರೆ, ಅದಕ್ಕೆ ಪ್ರತಿಯಾಗಿ ಉಚಿತವಾಗಿ ಒಂದು ಕಪ್ ಚಹಾವನ್ನು ಪಡೆಯಬಹುದು. ಸರ್ಕಾರದ ನೇತೃತ್ವದ ಕಾರ್ಯಕ್ರಮವಾದ ಸ್ವಚ್ಛ ಭಾರತ ಅಭಿಯಾನವನ್ನು ಗ್ರಾಮೀಣ ಪ್ರದೇಶಗಳಲ್ಲಿಯೂ ಪಸರಿಸುವುದು ಮತ್ತು ಜನರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಪ್ರೋತ್ಸಾಹಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ಉಪ ಜಿಲ್ಲಾ ಅಭಿವೃದ್ಧಿ ಅಧಿಕಾರಿ, ಎನ್ಪಿ ಪಟನ್ವಾಡಿಯಾ,
"ಈ ವಿಶಿಷ್ಟ ಕೆಫೆಯ ಮೂಲಕ, ನಮ್ಮ ಜಿಲ್ಲೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ಬಿಕ್ಕಟ್ಟಿನಿಂದ ಮುಕ್ತಗೊಳಿಸಲು ನಾವು ಬಯಸುತ್ತೇವೆ. ಈ ಕೆಫೆಯ ಮತ್ತೊಂದು ವಿಶೇಷವೆಂದರೆ, ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಗುಜರಾತ್ ಸರ್ಕಾರದ ‘ಸಖಿ ಮಂಡಲ್' ಯೋಜನೆಯಡಿ ಮಹಿಳೆಯರೇ ಆಹಾರವನ್ನು ತಯಾರಿಸುತ್ತಾರೆ. ಈ ಕೆಫೆಯ ಮೂಲಕ ನಾವು ಈ ಮಹಿಳೆಯರಿಗೆ ಉದ್ಯೋಗವಕಾಶಗಳನ್ಜು ಒದಗಿಸುತ್ತಿದ್ದೇವೆ," ಎಂದೆನ್ನುತ್ತಾರೆ.
ಅಧಿಕಾರಿಗಳ ಪ್ರಕಾರ, ಕೆಫೆಯು ಈ ಯೋಜನೆಯನ್ನು ಜಾರಿಗೆ ತಂದಾಗಿನಿಂದ ಗಣನೀಯ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವು ಸಂಗ್ರಹವಾಗುತ್ತಿದೆ. ಸಂಗ್ರಹವಾದ ಪ್ಲಾಸ್ಟಿಕ್ನ್ನು ಮರುಬಳಕೆ ಮಾಡಲು ಕಳುಹಿಸಲಾಗುತ್ತದೆ. ಈ ಕೆಫೆಯು ಯಶಸ್ಸನ್ನು ಪಡೆದರೆ, ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ಈ ಥರಹದ ಕೆಫೆಯನ್ನು ಪ್ರಾರಂಭಿಸುವ ಯೋಜನೆಯಿದೆ, ವರದಿ ಲೈವ್ ಮಿಂಟ್.
ಇದಕ್ಕೂ ಮುನ್ನ ರಾಜ್ಯದಲ್ಲಿ ಉತ್ಪಾದನೆಯಾಗುವ ಎಲ್ಲಾ ತ್ಯಾಜ್ಯವನ್ನು ಅಜಾಗರೂಕತೆಯಿಂದ ನಿರ್ವಹಿಸಲಾಗುತ್ತಿತ್ತು. ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ "ಈಗ ಈ ಕೆಫೆಯ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಗುರಿ ಹೊಂದಿದ್ದೇವೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಠೇವಣಿಯಿಡಲು, ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಈ ಕೆಫೆ ಸಫಲವಾಗಿದೆ. ಅದಕ್ಕಾಗಿ ನಾವು ಸರಳವಾದ ಒಂದು ಯೋಜನೆಯನ್ನು ಪರಿಚಯಿಸಿದ್ದೇವೆ. ಪ್ಲಾಸ್ಟಿಕ್ಗೆ ಬದಲಾಗಿ ಉಚಿತವಾಗಿ ತಿಂಡಿಗಳನ್ನು ಮತ್ತು ಚಹಾವನ್ನು ನೀಡುತ್ತೇವೆ," ಎನ್ನುತ್ತಾರೆ, ವರದಿ ಎನ್ಡಿಟಿವಿ.
ಒಡಿಶಾದಲ್ಲಿ ಕೆಲವು ದಿನಗಳ ಹಿಂದೆ ಇದೇ ತೆರನಾದ ಕೆಫೆಯನ್ನು ತೆರೆಯಲಾಗಿದೆ. ಅಲ್ಲಿ ಒಂದು ಕಿಲೋಗ್ರಾಂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ 5 ರೂಪಾಯಿ ಊಟವನ್ನು ಕೊಡುತ್ತಾರೆ. ಈ ಉಪಕ್ರಮವನ್ನು ರಾಜ್ಯ ಸರ್ಕಾರದ ಆಹಾರ ಯೋಜನೆಯಡಿಯಲ್ಲಿ ರೂಪಿಸಲಾಯಿತು ಮತ್ತು ಒಡಿಶಾದ ಕೊರಪುಟ್ ಜಿಲ್ಲೆಯ ಕೋಟ್ಪ್ಯಾಡ್ ಅಧಿಸೂಚಿತ ಪ್ರದೇಶದ ಮಂಡಳಿ(ಎನ್ಐಸಿ) ಸ್ಥಾಪಿಸಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.