ಸಮರ್ಪಕವಾದ ರಸ್ತೆ ಇಲ್ಲದ ಕಾರಣ ಹಾವು ಕಚ್ಚಿದ ಮಹಿಳೆಯನ್ನು ಡೋಲಿಯಲ್ಲಿ 8 ಕಿ.ಮೀ. ಹೊತ್ತೋಯ್ದ ಗ್ರಾಮಸ್ಥರು
ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸರಿಯಾದ ರಸ್ತೆ ಇರದ ಕಾರಣ, ಹಾವು ಕಚ್ಚಿದ ೬೫ ವರ್ಷದ ಮಹಿಳೆಯನ್ನು ಸ್ಥಳೀಯರು ಎಂಟು ಕಿಮೀ ದೂರದ ಆಸ್ಪತ್ರೆಯವರೆಗು ಬಿದಿರಿನ ತಾತ್ಕಾಲಿಕ ಡೋಲಿಯಲ್ಲಿ ಹೊತ್ತು ಸಾಗಿದ್ದಾರೆ ಎಂದು ಮಹಿಳೆಯ ಸಂಬಂಧಿಗಳು ಗುರುವಾರ ತಿಳಿಸಿದ್ದಾರೆ.
Friday December 06, 2019,
1 min Read
ಹೊದಿಕೆಗಳು ಹಾಗೂ ಬಿದಿರಿನ ಕೋಲುಗಳನ್ನು ಬಳಸಿ ಒಂದು ತಾತ್ಕಾಲಿಕ ಡೋಲಿ/ಕೈಮಂಚ ತಯಾರಿಸಿ ಅರವತ್ತೈದು ವರ್ಷದ ಬರ್ಕಾಬಾಯ್ ಸಾಂಗ್ಲೆಯನ್ನು ಮಹಾರಾಷ್ಟ್ರದ ಪುಣೆಯ ಜಿಲ್ಲೆಯ ಚಂದಾರ್ನ ಅವರ ಮನೆಯಿಂದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅವರ ಮಗ ಬಾಬು ಸಾಂಗ್ಲೆ ಪಿಟಿಐಗೆ ಹೇಳಿದ್ದಾರೆ.
ಖಾನಾಪುರ ಹಳ್ಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಆ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುಣೆಯ ಸರಕಾರಿ ಸಾಸ್ಸನ್ ಜನೆರಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ಹೇಳಿದರು.
ಸೂರತ್ನಲ್ಲಿ ಉದ್ಯೋಗ ಮಾಡುವ ಬಾಬು ಸಾಂಗ್ಲೆ, ತಮ್ಮ ತಾಯಿಗೆ ಅವರ ಮನೆಯ ಬಳಿ ಮಂಗಳವಾರ ಹಾವು ಕಡಿದಿತ್ತು ಎಂದು ತಿಳಿಸಿದ್ದಾರೆ.
"ಸಮರ್ಪಕವಾದ ರಸ್ತೆ ಸಂಪರ್ಕವಿಲ್ಲದ ಕಾರಣ, ನಮ್ಮ ಹಳ್ಳಿಗೆ ಯಾವ ವಾಹನವೂ ಬರುವುದಿಲ್ಲ. ಹಾಗಾಗಿ, ನನ್ನ ಸಹೋದರ ಹಾಗೂ ಇತರ ಗ್ರಾಮಸ್ಥರು ಸಮಯ ವ್ಯರ್ಥ ಮಾಡದೆ, ನಮ್ಮ ತಾಯಿಯನ್ನು ತಾತ್ಕಾಲಿಕ ಡೋಲಿಯಲ್ಲಿ ಹೊತ್ತು, ಸರಿಯಾದ ರಸ್ತೆಯಿರುವ ಪಾಣ್ಶೆಟ್ ಅಣೆಕಟ್ಟಿನವರೆಗೆ ಎರಡು ಗಂಟೆಗಳ ಕಾಲ ಹೊತ್ತು ತಂದಿದ್ದಾರೆ," ಎಂದರು.
ಪಾಣ್ಶೆಟ್ನಿಂದ, ಮಹಿಳೆಯನ್ನು ಖಾಸಗಿ ಜೀಪೊಂದರಲ್ಲಿ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಅಲ್ಲಿನ ವೈದ್ಯರು, ಪ್ರಾಥಮಿಕ ಚಿಕಿತ್ಸೆ ನೀಡಿ, ಸಸ್ಸೋನ್ ಆಸ್ಪದ ಕರೆದೊಯ್ಯುವಂತೆ ಸೂಚಿಸಿದರು.
ಮಂಗಳವಾರ ರಾತ್ರಿ ಮಹಿಳೆಯನ್ನು ಆಂಬುಲೆನ್ಸ್ ಒಂದರಲ್ಲಿ ನಗರದ ಆಸ್ಪತ್ರೆಗೆ ಸೇರಿಸಲಾಯಿತು. ಎಂದು ಅವರು ಹೇಳಿದರು
ಚಂದಾರ್ನ ನಿವಾಸಿಯೊಬ್ಬರು ತಮ್ಮ ಊರಿನಿಂದ ಸುಮಾರು ಎಂಟು ಕಿ.ಮೀ. ವರೆಗೂ ರಸ್ತೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಮೊದಲು ಒಂದು ಕಚ್ಛಾ ರಸ್ತೆ ಇತ್ತಾದರೂ, ಈ ವರ್ಷದ ಮಳೆಗೆ ಅದೂ ಸಂಪೂರ್ಣವಾಗಿ ಕೊಚ್ಚಿಹೋಗಿದೆ ಎಂದು ನಿವಾಸಿಯೊಬ್ಬರು ಹೇಳಿದರು.
"ಸಮರ್ಪಕವಾದ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣದಿಂದ, ತುರ್ತುಸ್ಥಿತಿಯಲ್ಲಿ ಜನರಿಗೆ ಡೋಲಿಯಲ್ಲಿ ಸಂತ್ರಸ್ತರನ್ನು ಕರೆದೊಯ್ಯುವುದು ಬಿಟ್ಟರೆ ಬೇರಾವ ದಾರಿಯೂ ಇಲ್ಲ. ಅವರನ್ನು ಡೋಲಿಯಲ್ಲಿ ಸುಮಾರು ಎಂಟು ಕಿಮೀಗಳ ದುರ್ಗಮ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಕರೆತಂದು ಸುಗಮ ರಸ್ತೆಗೆ ಬಂದು, ಅಲ್ಲಿನಿಂದ ಆಸ್ಪತ್ರೆಗೆ ಹೋಗಬೇಕು," ಎಂದು ಅವರು ಹೇಳಿದ್ದಾರೆ.