ಖೈದಿಗಳ ಜೀವನೋಪಾಯ ರೂಪಿಸುತ್ತಿರುವ 19 ರ ಯುವಕ

ಆಕಾಶ್ ಸಿಂಗ್ ಅವರ ಸಮಾಜದ ಮೇಲೆ ಪ್ರಭಾವ ಬೀರಬಲ್ಲ ನವೋದ್ಯಮ ಎನರ್ಜಿನಿ ಇನ್ನೋವೇಶನ್ಸ್ ಎರಡು ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಯುಪಿ ಮೂಲದ ತಂಡವು ದೇವಾಲಯಗಳಿಗೆ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ಖೈದಿಗಳಿಗೆ ಜೀವನೋಪಾಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಖೈದಿಗಳ ಜೀವನೋಪಾಯ ರೂಪಿಸುತ್ತಿರುವ 19 ರ ಯುವಕ

Tuesday December 03, 2019,

4 min Read

ಸಮಾಜಕ್ಕೆ ತಮ್ಮ ಕೊಡುಗೆ ನೀಡಲು ತನ್ನ ಹಳ್ಳಿಗೆ ಮರಳಿದ ಯುವ ವಿಜ್ಞಾನಿಯ ಕಥೆ ಇದು. 10 ನೇ ತರಗತಿಯ ನಂತರ, ಆಕಾಶ್ ಸಿಂಗ್ ಹೆಚ್ಚಿನ ಅಧ್ಯಯನಕ್ಕಾಗಿ ಗುರಗಾಂವ್‌ಗೆ ಹೋದರು. ಹಲವಾರು ವಿಜ್ಞಾನ ಮತ್ತು ನಾವೀನ್ಯತೆ ಉತ್ಸವಗಳು, ಸ್ಪರ್ಧೆಗಳು ಮತ್ತು ಸವಾಲುಗಳಲ್ಲಿ ಭಾಗವಹಿಸಿದ ನಂತರ, ಸ್ವಯಂ-ಶಕ್ತಿಯನ್ನು ಉತ್ಪಾದಿಸುವ ವಾಕಿಂಗ್ ಸ್ಟಿಕ್, ಸ್ಮಾರ್ಟ್ ನೀರಾವರಿ ಸಿಂಪರಣಾ ಯಂತ್ರ, ಮತ್ತು ವಿಂಡ್‌ ಹಾರ್ನೆಸ್ಸಿಂಗ್ ಯಂತ್ರಗಳ ತಯಾರಿಕೆಯಲ್ಲಿ ಕೆಲಸ ಮಾಡಿದರು. ಅವರ ಕೆಲಸಕ್ಕೆ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್‌ಎಂಇ) ನಿಂದ ಪ್ರಶಂಸೆಗಳು ಬಂದಿವೆ.


ಈ ಎಲ್ಲಾ ಅನುಭವಗಳು ಆಕಾಶ್ ಅವರ ಎನರ್ಜಿನಿ ಇನ್ನೋವೇಶನ್ಸ್ ಎಂಬ ನವೋದ್ಯಮವನ್ನು ಪ್ರಾರಂಭಿಸಲು ಕಾರಣವಾಯಿತು, ಈ ನವೋದ್ಯಮವು, ದೇವಾಲಯಗಳಿಗೆ ತ್ಯಾಜ್ಯವನ್ನು ಮರುಬಳಕೆ ಮಾಡಲು ಮತ್ತು ಖೈದಿಗಳಿಗೆ ಜೀವನೋಪಾಯವನ್ನು ಪಡೆಯಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.


19 ವರ್ಷದ ಆಕಾಶ್ ಸಿಂಗ್


ಆಕಾಶ್ ಉತ್ತರ ಪ್ರದೇಶದ ಜುವರ್ ಬಳಿಯ ಹಳ್ಳಿಗೆ ಸೇರಿದವರಾದ್ದರಿಂದ, ವೈಜ್ಞಾನಿಕ ಆವಿಷ್ಕಾರಗಳಿಗೆ ಅವರಿಗೆ ಅವಕಾಶಗಳು ಕಡಿಮೆ ಇದ್ದವು. ಒಂದು ನಿರ್ದಿಷ್ಟ ಹಂತದಲ್ಲಿ, ಗ್ರಾಮೀಣ ಭಾರತದ ಇತರ ಅನೇಕ ಭಾಗಗಳು ಸಹ ಅಂತಹ ಅವಕಾಶಗಳಿಂದ ವಂಚಿತವಾಗಿವೆ ಎಂದು ಅವರು ಅರಿತುಕೊಂಡರು. ಅವರು ಸಂಪಾದಿಸಿದ ಜ್ಞಾನವನ್ನು ಹಂಚಿಕೊಳ್ಳಲೆಂದು ತಮ್ಮ ಸಮುದಾಯಕ್ಕೆ ಮರಳಲು ನಿರ್ಧರಿಸಿದರು, ಮತ್ತು ಇತರ ಯುವಕರಿಗೆ ಅವರ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಮತ್ತು ಅವರ ಆಲೋಚನೆಗಳನ್ನು ಪ್ರದರ್ಶಿಸಲು ಪ್ರೇರೇಪಿಸಿದರು.


ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವವನ್ನು(ಫೆಸ್ಟ್) ದಿ ಡೌಜಿ ದೇವಾಲಯ ಸಮಿತಿ ಮತ್ತು ಅಂದಿನ ಜೆವಾರ್‌ನ ಸಮುದಾಯದ ಅಧ್ಯಕ್ಷರೊಂದಿಗೆ ಸೇರಿ ಆಯೋಜಿಸುವ ಮೂಲಕ ಅವರ ಸಾಮಾಜಿಕ ಉದ್ಯಮದ ಪ್ರಯಾಣ ಪ್ರಾರಂಭವಾಯಿತು.


ಬಾಲ್ಯದಲ್ಲಿ, ಆಕಾಶ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಅವರು ಜಿಬಿ ನಗರ ಜಿಲ್ಲಾ ಜೈಲಿನ ಖೈದಿಗಳೊಂದಿಗೆ ಸಂವಹನ ನಡೆಸಿದ್ದರು. ದೇವಾಲಯಗಳಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳ ಕೊರತೆ ಮತ್ತು ಕಾರಾಗೃಹಗಳಲ್ಲಿ ಜೀವನೋಪಾಯದ ಅವಕಾಶಗಳ ಕೊರತೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಅವರ ನವೀನ ಮನಸ್ಸು ಪರಿಹಾರವನ್ನು ಹುಡುಕಿಯೇಬಿಟ್ಟಿತು.


ಉತ್ತರ ಪ್ರದೇಶದ ಜಿಬಿ ನಗರ ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗಾಗಿ ಡಿಜಿಟಲ್ ಸಾಕ್ಷರತಾ ಕಾರ್ಯಾಗಾರ ನಡೆಸಲು ಆಹ್ವಾನಿಸಿದ ಅವರು, ಜೈಲಿನಲ್ಲಿರುವ ಕಳಂಕದಿಂದಾಗಿ ಬಹುಪಾಲು ಜನರು ಮುಕ್ತರಾದ ನಂತರ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ಅವರು ಕಂಡುಕೊಂಡರು. ನಂತರ ಅವರು ದೇವಾಲಯದ ತ್ಯಾಜ್ಯವನ್ನು ಉನ್ನತ ಮಟ್ಟದ ಉತ್ಪನ್ನಗಳಾಗಿ ಪರಿವರ್ತಿಸುವ ಆಲೋಚನೆಯೊಂದಿಗೆ ನವೋದ್ಯಮ ಆರಂಭಿಸಿ ಮತ್ತು ಖೈದಿಗಳನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.


19 ವರ್ಷದ ಈ ಯುವಕನ ಉದ್ಯಮಶೀಲತಾ ಮನೋಭಾವ ಮತ್ತು ಅನುಭೂತಿ ಹೊಂದುವ ಸಾಮರ್ಥ್ಯವನ್ನು ಗುರುತಿಸಿ ಅಶೋಕ ಯಂಗ್ ಚೇಂಜ್ ಮೇಕರ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಯಿತು. ಸಾರ್ವಜನಿಕರಿಗಾಗಿ ಅಶೋಕ ಇನ್ನೋವೇಟರ್ಸ್ ನಡೆಸುತ್ತಿರುವ ಯುವ-ಕೇಂದ್ರಿತ ಕಾರ್ಯಕ್ರಮದ ಮೂಲಕ, ಅವರು ಈಗ ವಿಶ್ವದ ಅತಿದೊಡ್ಡ ಸಾಮಾಜಿಕ ಉದ್ಯಮಿಗಳು ಮತ್ತು ಬದಲಾವಣೆ ರೂವಾರಿಯ ಭಾಗವಾಗಿದ್ದಾರೆ.


“ನಾನು 10 ನೇ ತರಗತಿಯಲ್ಲಿದಾಗಿನಿಂದ, ಜಗತ್ತನ್ನು ಬದಲಿಸಲು ಬಯಸಿದ ಸಮಾನ ಮನಸ್ಕ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ, ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಉದ್ದೇಶವನ್ನು ಕಂಡುಕೊಂಡಾಗ ನನಗೆ ಸಂತೋಷವಾಯಿತು - ಭಾರತದಲ್ಲಿನ ದೇವಾಲಯಗಳಿಂದ ಉತ್ಪತ್ತಿಯಾಗುವ ಯಾವುದೇ ತ್ಯಾಜ್ಯವು ನದಿಗಳನ್ನು ತಲುಪದೆ ಮತ್ತು ನೀರನ್ನು ಕಲುಷಿತಗೊಳಿಸದೆ ಅದನ್ನು ಉಪಯುಕ್ತವಾದದ್ದಾಗಿ ಪರಿವರ್ತಿಸಬಹುದು,” ಎನ್ನುತ್ತಾರೆ ಆಕಾಶ್.


2018 ರಲ್ಲಿ ಆಕಾಶ್ 18 ವರ್ಷದವರಿದ್ದಾಗ, ಇತರ ಆರು ಸದಸ್ಯರೊಂದಿಗೆ ಎನರ್ಜಿನಿ ಇನ್ನೋವೇಶನ್ಸ್ ಅನ್ನು ಈ ಕಲ್ಪನೆಯ ಮೇಲೆ ಸ್ಥಾಪಿಸಿದರು. ಜೈಲಿನಲ್ಲಿರುವ ತ್ಯಾಜ್ಯವನ್ನು ಪರಿಸರ ಸ್ನೇಹಿ ಮತ್ತು ಉನ್ನತ ಮಟ್ಟದ ಉತ್ಪನ್ನಗಳಾದ ಪ್ರತಿಮೆಗಳು, ಶಿಲ್ಪಗಳು ಮತ್ತು ಕರಕುಶಲ ವಸ್ತುಗಳನ್ನಾಗಿ ಪರಿವರ್ತಿಸುವ ಕಾರ್ಯವು ಜೈಲಿನಲ್ಲಿನ ಖೈದಿಗಳಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಈ ನವೋದ್ಯಮವು ಸಹಾಯ ಮಾಡುತ್ತದೆ.


ಇಂದು, ತಂಡವು 22 ಪೂರ್ಣಾವಧಿ ಸದಸ್ಯರನ್ನು ಒಳಗೊಂಡಿದೆ, ಎಲ್ಲರೂ 25 ವರ್ಷದೊಳಗಿನವರಾಗಿದ್ದು, ಗ್ರೇಟರ್ ನೋಯ್ಡಾದ ಬಿಮ್‌ಟೆಕ್‌ನಲ್ಲಿರುವ ಅಟಲ್ ಇನ್ಕ್ಯುಬೇಷನ್‌ ಸೆಂಟರ್‌ನ ಬೆಂಬಲವನ್ನು ಪಡೆದಿದ್ದಾರೆ.


ಖೈದಿಗಳ ಜೀವನೋಪಾಯವನ್ನು ಸುಧಾರಿಸುವುದು

ಭಾರತದಾದ್ಯಂತದ ದೇವಾಲಯಗಳು ಧೂಪದ್ರವ್ಯದ ತುಂಡುಗಳನ್ನು ಸುಡುವುದರಿಂದ ಮತ್ತು ತೆಂಗಿನಕಾಯಿಗಳನ್ನು ಒಡೆಯುವುದರಿಂದ ಸಾಕಷ್ಟು ಪ್ರಮಾಣದ ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತವೆ. ಇದು ಬೂದಿ ಮತ್ತು ತೆಂಗಿನ ಹೊಟ್ಟುಗಳ ದಿಬ್ಬಗಳನ್ನು ಸೃಷ್ಟಿಸುತ್ತದೆ ಮತ್ತು ಸ್ಥಳೀಯ ನೀರು ಸರಬರಾಜನ್ನು ಕಲುಷಿತಗೊಳಿಸುತ್ತದೆ.


ಆಕಾಶ್ ಮತ್ತು ಅವರ ತಂಡ ದೆಹಲಿಯ 150 ಕ್ಕೂ ಹೆಚ್ಚು ದೇವಾಲಯಗಳಿಂದ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (ಎನ್‌ಸಿಆರ್) ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ತ್ಯಾಜ್ಯವನ್ನು ಜಿಬಿ ನಗರ ಜಿಲ್ಲಾ ಜೈಲಿನಲ್ಲಿರುವ ಖೈದಿಗಳಿಗೆ ನೀಡಲಾಗುತ್ತದೆ. ಎನರ್ಜಿನಿ ಇನ್ನೋವೇಶನ್ಸ್ ಖೈದಿಗಳಿಗೆ ಬೂದಿ ಮತ್ತು ತೆಂಗಿನ ಹೊಟ್ಟುಗಳನ್ನು ಶಿಲ್ಪಕಲೆಗಳಾಗಿ ಜೋಡಿಸಲು ತರಬೇತಿ ನೀಡುತ್ತದೆ ಮತ್ತು ಸಂಬಳವನ್ನೂ ನೀಡುತ್ತದೆ.


"ಖೈದಿಗಳೊಂದಿಗಿನ ನನ್ನ ಸಂವಾದದ ಸಮಯದಲ್ಲಿ, ಸರಿಸುಮಾರು 70 ಪ್ರತಿಶತದಷ್ಟು ಮಂದಿ ವಿಚಾರಣಾಧೀನ ಖೈದಿಗಳು ಎಂಬುದನ್ನು ನಾನು ಕಂಡುಕೊಂಡೆ. ಈ ವ್ಯಕ್ತಿಗಳು ತೀರ್ಪಿಗಾಗಿ ಕಾಯುತ್ತಿದ್ದರೂ ಅವರನ್ನು ‘ಅಪರಾಧಿಗಳು’ ಎಂದು ಕರೆಯಲಾಗುತ್ತಿತ್ತು. ಜೈಲಿನಿಂದ ಹೊರಬಂದ ನಂತರ ಅವರಿಗೆ ಯಾವುದೇ ಉದ್ಯೋಗಾವಕಾಶಗಳು ಸಿಗುವುದಿಲ್ಲ. ಜೈಲಿನಲ್ಲಿದ್ದಾಗ ಅವರು ಕೆಲಸ ಮಾಡಿ ಕೌಶಲ್ಯಗಳನ್ನು ಬೆಳೆಸಿಕೊಂಡರೆ, ನಂತರ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ," ಎಂದು ಆಕಾಶ್ ವಿವರಿಸುತ್ತಾರೆ.


ಎನರ್ಜೈನ್‌ ಇನೋವೇಷನ್‌ ತಂಡ


ಜೈಲಿನಲ್ಲಿರುವ 32 ವ್ಯಕ್ತಿಗಳಿಗೆ ಈ ಸಂಸ್ಥೆ ಉದ್ಯೋಗ ಒದಗಿಸಿದ್ದು, ಇದರಿಂದಾಗಿ ಅವರೆಲ್ಲರ ಆರ್ಥಿಕ ಸ್ಥಿರತೆ ಖಚಿತವಾಗಿದೆ. ಪುನರ್ವಸತಿ ಮತ್ತು ಸುಧಾರಣಾ ಕಾರ್ಯಕ್ರಮಗಳನ್ನು ನೀಡಲು ಉತ್ಸುಕರಾಗಿದ್ದ ಈ 25 ವ್ಯಕ್ತಿಗಳಿಗೆ ಶಾಶ್ವತ ಜಾಮೀನು ಸಹ ನೀಡಲಾಯಿತು. ಬಿಡುಗಡೆಯಾದ ಏಳು ಖೈದಿಗಳಿಗೆ ವಿವಿಧ ಸರ್ಕಾರೇತರ ಸಂಸ್ಥೆಗಳೊಂದಿಗೆ ಉದ್ಯೋಗ ಸಂಪಾದಿಸಲು ಎನರ್ಜಿನಿ ಇನ್ನೋವೇಶನ್ಸ್ ಸಹಾಯ ಮಾಡಿದೆ.


“ನಾವು ನಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು, ಖೈದಿಗಳು ಸೆಲ್‌ನ ನಾಲ್ಕು ಗೋಡೆಗಳೊಳಗೆ ಸಮಯ ಕಳೆಯುತ್ತಿದ್ದರು. ಅನೇಕರು ತಮ್ಮ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುವ ಪಥದಲ್ಲಿದ್ದರು. ನಾವು ಅವರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದ ನಂತರ ಅವರು ಹೆಚ್ಚು ಸಕ್ರಿಯರಾದರು. ಅವರು ಹೊರಹೋಗಲು ಪ್ರಾರಂಭಿಸಿದರು, ತೋಟಕ್ಕೆ ಹೋಗಿ, ಇತರ ಖೈದಿಗಳೊಂದಿಗೆ ಸಂವಹನ ನಡೆಸಿದರು. ಕೆಲವರು ಈ ಕೆಲಸವನ್ನು ತುಂಬಾ ಆನಂದಿಸಿದರು, ಅವರು ಪ್ರತಿದಿನ ಎರಡು ಗಂಟೆಗಳ ಕಾಲ ಹೆಚ್ಚುವರಿ ಕೆಲಸ ಮಾಡಲು ಪ್ರಾರಂಭಿಸಿದರು,” ಎನ್ನುತ್ತಾರೆ ಆಕಾಶ್.‌


ಪರಿಣಾಮ

ತಿಂಗಳಿಡೀ ಧೂಪದ ಕಡ್ಡಿಗಳನ್ನು ಸುಡುವುದರಿಂದ ಸಂಗ್ರಹಿಸಿದ ಬೂದಿಯ ಪ್ರಮಾಣ, ಪ್ರತಿ ತ್ರೈಮಾಸಿಕದಲ್ಲಿ ಖೈದಿಗಳಿಗೆ ನೀಡಲಾಗುವ ಸಂಬಳ ಮತ್ತು ಪ್ರತಿ ವರ್ಷ ಜಾಮೀನು ಪಡೆಯುವ ಖೈದಿಗಳ ಸಂಖ್ಯೆ ಗಮನಿಸುವ ಮೂಲಕ ಈ ಉದ್ಯಮವು ಪ್ರಭಾವವನ್ನು ಅಳೆಯುತ್ತದೆ.


ನಾವೀನ್ಯತೆ ಮತ್ತು ಬದಲಾವಣೆಯ ಸಂಸ್ಕೃತಿಯನ್ನು ಸೃಷ್ಟಿಸುವ ಅವಕಾಶವಾಗಿ ಈ ಉದಾಹರಣೆಯನ್ನು ತೆಗೆದುಕೊಳ್ಳುವ ವಿವಿಧ ಸಮುದಾಯಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ನಾಯಕರಲ್ಲಿರುವ ಸಾಮರ್ಥ್ಯವನ್ನು ಆಕಾಶ್ ಗಮನಿಸುತ್ತಾರೆ. ಜೆವಾರ್‌ನ ದೇವಾಲಯ ನಿರ್ವಹಣಾ ಸಮಿತಿಯೊಂದಿಗೆ ತಮ್ಮ ಕೆಲಸವನ್ನು ಅಳೆಯಲು ಮತ್ತು ಅದನ್ನು ದೇಶಾದ್ಯಂತದ ಇತರರೊಂದಿಗೆ ಪುನರಾವರ್ತಿಸಲು ಅವರು ಬಯಸುತ್ತಾರೆ. ಸೆಣಬಿನಿಂದ ಸುಸ್ಥಿರ ಪ್ಯಾಕೇಜಿಂಗ್ ವಸ್ತುಗಳನ್ನು ರಚಿಸಲು ಸಹಾಯ ಮಾಡಲು ಅವರು ತಮ್ಮ ಕೆಲಸವನ್ನು ಮಹಿಳಾ ಸೆಲ್‌ಗೆ ವಿಸ್ತರಿಸುತ್ತಿದ್ದಾರೆ.