ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ 82 ರ ತಾತನ ಕೊಡುಗೆ
ಕೊಲ್ಕತ್ತಾದ 82 ರ ಹರೆಯದ ತಾತ ಪ್ರಧಾನ ಮಂತ್ರಿಗಳ ಕೋವಿಡ್-19 ನಿಧಿಗೆ ತಮ್ಮ ಪಿಂಚನಿಯಿಂದ ಕೂಡಿಟ್ಟ 10 ಸಾವಿರ ರೂ. ದೇಣಿಗೆ ನೀಡಿದ್ದಾರೆ.
Thursday April 16, 2020,
2 min Read
ಭಾರತದಲ್ಲಿ ದಿನೇ ದಿನೇ ಕೋವಿಡ್-19 ಬೀತಿ ಹೆಚ್ಚುತ್ತಲಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12 ಸಾವಿರದ ಗಡಿ ದಾಟಿದೆ. ಮಹಾಮಾರಿಯ ವಿರುದ್ಧ ಹೋರಾಡಲು ಹಲವು ಜನರು ತಮ್ಮದೇ ರೀತಿಯಲ್ಲಿ ಹಣ ನೀಡಿಯೋ ಅಥವಾ ಇನ್ಯಾವುದೋ ರೂಪದಲ್ಲಿ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ.
ಈ ಪಟ್ಟಿಗೆ ಸೇರುವ ಕೊಲ್ಕತ್ತಾದ 82 ರ ವೃದ್ಧರೊಬ್ಬರು, ತಮ್ಮ ಕಾರ್ಯದಿಂದ ಎಲ್ಲರ ಗಮನಸೆಳೆದಿದ್ದಾರೆ. ನಿವೃತ್ತ ಕಾಲೇಜಿನ ಪ್ರಾಧ್ಯಾಪಕರಾದ ಸುಭಾಶ ಚಂದ್ರ ಬ್ಯಾನರ್ಜಿ ದಮ ದಮ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಹಿಂದಿರುವ ಮನೆಯೊಂದರಲ್ಲಿ ಒಬ್ಬರೆ ತಮ್ಮ ಪಿಂಚನಿಯಲ್ಲಿ ಬರುವ ಹಣದಿಂದ ಜೀವನ ನಡೆಸುತ್ತಾರೆ.
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕಳೆದ ಶನಿವಾರ, ತಾತ ಗಸ್ತು ತಿರುಗುತ್ತಿದ್ದ ಅಧಿಕಾರಿಯೊಬ್ಬರಿಗೆ ಮನೆಗೆ ಬರುವಂತೆ ಸನ್ನೆ ಮಾಡಿ ಕರೆದರು.
“ಮೊದ ಮೊದಲು ನಾವು ತಾತನಿಗೆ ಏನೋ ತೊಂದರೆಯಿರಬಹುದು, ಹಾಗಾಗಿ ನಮ್ಮ ಸಹಾಯ ಬಯಸಿದ್ದಾರೆಂದು ತಿಳಿದಿದ್ದೇವು,” ಎಂದರು ತಾತನ ಮನೆಗೆ ತೆರಳಿದ ವಿಮಾನ ನಿಲ್ದಾಣದ ಗಸ್ತು ತಿರುಗುವ ಗುಂಪಿನ ಅಧಿಕಾರಿ, ವರದಿ ದಿ ಟೆಲೆಗ್ರಾಫ್ ಇಂಡಿಯಾ.
ತಾತ ಅಧಿಕಾರಿಯನ್ನು ಒಳಗೆ ಕರೆದು ಕೂರಿಸಿದರು. ಪೋಲಿಸ್ ಅಧಿಕಾರಿಗಳಿಂದ ಏನು ಸಹಾಯವಾಗಬೇಕೆಂದು ಕೇಳಿದಾಗ, ತಾತ ನಾನು ಕೋವಿಡ್-19 ಮಹಾಮಾರಿಯನ್ನು ತಡೆಯುವುದಕ್ಕಾಗಿ ಹಣ ನೀಡಲು ಬಯಸುತ್ತೇನೆ ಎಂದರು.
ತಾತನ ಈ ಮಾತುಗಳಿಂದ ರೋಮಾಂಚಿತರಾದ ಅಧಿಕಾರಗಳು ತಕ್ಷಣವೇ ತಮ್ಮ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದರು. ಅವರು ತಾತ ಪಿಎಮ್-ಕೇರ್ಸ್ ನಿಧಿ ಗೆ ಹಣ ನೀಡಬಹುದೆಂದು ಸಲಹೆ ನೀಡಿದರು.
ತಾತ ತಮ್ಮ ಪಿಂಚನಿ ಹಣದಿಂದ ಕೂಡಿಟ್ಟ 10 ಸಾವಿರ ರೂ.ಗಳನ್ನು ಪಿಎಮ್-ಕೇರ್ಸ್ ನಿಧಿಗೆ ನೀಡಿದರು.
“ಈ ಪರಿಸ್ಥಿತಿಯನ್ನು ಎದುರಿಸಲು ನಾವೆಲ್ಲ ಮುಂದೆ ಬಂದು ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು. ನನಗೆ ಇನ್ನೂ ಹೆಚ್ಚು ನೀಡಬೇಕೆಂಬ ಮನಸ್ಸಿದೆ. ಆದರೆ ನನ್ನ ಪಿಂಚನಿಯ ಬಹುಪಾಲು ಹಣವೆಲ್ಲ ನಾನು ದಿನ ತೆಗೆದುಕೊಳ್ಳುವ ಔಷಧಿಗಳಿಗೆ ಖರ್ಚಾಗಿ ಹೋಗುತ್ತದೆ,” ಎಂದು 80 ರ ತಾತ ಹೇಳಿದರು.
ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಹಲವರ ಗಮನ ಸೆಳೆದಿದೆ. ಉತ್ತರ ಪ್ರದೇಶದ ಐಪಿಎಸ್ ಆಧಿಕಾರಿ ನವ್ನೀತ್ ಸೆಕೆರಾ, ತಾತನ ಕಾರ್ಯವನ್ನು ಶ್ಲಾಘಿಸಿ ಟ್ವೀಟಿಸಿದ್ದಾರೆ.
ಬಿಜೆಪಿ ನಾಯಕ ಸುನೀಲ್ ವಿ ದಿಯೋಧರ ಸಹ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.
ಜಾಗತಿಕವಾಗಿ, ಕೋವಿಡ್-19 ಧನಾತ್ಮಕ ಪ್ರಕರಣಗಳ ಸಂಖ್ಯೆ 2 ಮಿಲಿಯನ್ ಸಮೀಪ ತಲುಪಿತ್ತಿದೆ ಮತ್ತು 1.2 ಲಕ್ಷಕ್ಕೂ ಅಧಿಕ ಜನ ಇದರಿಂದ ಹತರಾಗಿದ್ದಾರೆ.