ಎಂಎಸ್ಎಂಇ, ಎನ್ಬಿಎಫ್ಸಿ, ರಿಯಲ್ ಎಸ್ಟೇಟ್ ಗೆ ಹರಿದು ಬಂದ ನೆರವು: 20 ಲಕ್ಷ ಕೋಟಿ ಪ್ಯಾಕೇಜ್
20 ಲಕ್ಷ ಕೋಟಿಯ ಪ್ಯಾಕೆಜ್ನ ಮೊದಲ ಘೋಷಣೆಯು ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಉದ್ಯೋಗಿಗಳ ಭವಿಷ್ಯ ನಿಧಿ, ಬ್ಯಾಂಕೇತರ ಹಣಕಾಸು ಕಂಪನಿಗಳು, ವಿದ್ಯುತ್ ಸರಬರಾಜು ಕಂಪನಿಗಳು, ರಿಯಲ್ ಎಸ್ಟೆಟ್ ಮತ್ತು ತೆರಿಗೆಯ ಮೇಲೆ ಕೇಂದ್ರಿಕೃತವಾಗಿತ್ತು.
Thursday May 14, 2020,
2 min Read
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್-19 ತಂದೊಡ್ಡಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೆಜ್ನ ವಿವರಗಳನ್ನು ಬುಧವಾರ ಸಾದರಪಡಿಸಿದರು.
ಈ ಪ್ಯಾಕೆಜ್ನ ಮೊದಲ ಘೋಷಣೆಯು ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಉದ್ಯೋಗಿಗಳ ಭವಿಷ್ಯ ನಿಧಿ, ಬ್ಯಾಂಕೇತರ ಹಣಕಾಸು ಕಂಪನಿಗಳು, ವಿದ್ಯುತ್ ಸರಬರಾಜು ಕಂಪನಿಗಳು, ರಿಯಲ್ ಎಸ್ಟೆಟ್ ಮತ್ತು ತೆರಿಗೆಯ ಮೇಲೆ ಕೇಂದ್ರಿಕೃತವಾಗಿತ್ತು.
ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಭಾರತ್ ಅಭಿಯಾನದ ಹಾದಿಯಲ್ಲಿ ಸಾಗುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ವಿತ್ತ ಸಚಿವೆ, “ಈ ಕ್ರಮಗಳು ಬೆಳವಣೆಗೆಯನ್ನು ವೇಗಗೊಳಿಸುತ್ತವೆ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುತ್ತವೆ,” ಎಂದರು.
ಎಂಎಸ್ಎಂಇ
ಸರ್ಕಾರ ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಖಾತರಿರಹಿತ ಸಾಲವನ್ನು ನೀಡಲಿದ್ದು, ಈ ಸಾಲಕ್ಕೆ ಮೊದಲ 12 ತಿಂಗಳು ಯಾವುದೇ ಬಡ್ಡಿ ಪಾವತಿಸಿಬೇಕಾಗಿಲ್ಲ. ಇದರಿಂದ ಅಂದಾಜು 45 ಲಕ್ಷ ಸಣ್ಣ ಉದ್ಯಮಗಳಿಗೆ ಸಹಾಯವಾಗಲಿದೆ.
ಕೋವಿಡ್-19 ಲಾಕ್ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ನಿಲುಕಿರುವ ಎಂಎಸ್ಎಂಇ ಗಳಿಗೆ ರೂ 20 ಸಾವಿರ ಕೋಟಿಯನ್ನು ಒದಗಿಸಲಾಗುವುದು. ಇದು 2 ಲಕ್ಷ ಉದ್ಯಮಗಳಿಗೆ ಸಹಕಾರಿಯಾಗಲಿದೆ. 50 ಸಾವಿರ ಕೋಟಿ ರೂ, ನಿಧಿಯನ್ನು ಸೃಷ್ಟಿಲಸಲಾಗಿದ್ದು, ಇದರಿಂದ ಸಾಮರ್ಥ್ಯವಿರುವ, ಬೆಳೆಯಬಲ್ಲ ಉದ್ಯಮಗಳಿಗೆ ಪ್ರಯೋಜನವಾಗಲಿದೆ.
ಸರ್ಕಾರದಿಂದ ಪ್ರಯೋಜನಗಳನ್ನು ಪಡೆದುಕೊಳ್ಳಲು ಎಂಎಸ್ಎಂಇಯ ವ್ಯಾಖ್ಯಾನವನ್ನು ಸರ್ಕಾರ ಪರಿಷ್ಕರಿಸಿದೆ. ಈ ಹೊಸ ಯೋಜನೆಯಡಿ, ಅತೀ ಸಣ್ಣ ಉದ್ಯಮಗಳ ವ್ಯಾಖ್ಯಾನವನ್ನು ಹಿಂದಿನ ಮಿತಿ 25 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ, ಮತ್ತು ಹೂಡಿಕೆಯ ಮಾನದಂಡಗಳು ಹಿಂದಿನ ಮಿತಿ 1 ಕೋಟಿಯಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಲಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ
ಭವಿಷ್ಯ ನಿಧಿಗೆ ಉದ್ಯೋಗಿಗಳ ಮತ್ತು ಉದ್ಯೋಗದಾತರ ಪಾಲನ್ನು ಶೇ. 12 ರಿಂದ ಶೇ. 10 ಕ್ಕೆ ಇಳಿಸಲಾಗಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ)ಯ ಅಡಿ ಬರುವ ಎಲ್ಲ ಸಂಸ್ಥೆಗಳಿಗೂ ಮುಂದಿನ 3 ತಿಂಗಳ ವರೆಗೆ ಇದು ಅನ್ವಯವಾಗಲಿದೆ.
ಎನ್ಬಿಎಫ್ಸಿ
ಬ್ಯಾಂಕೇತರ ಹಣಕಾಸು ಕಂಪನಿ (ಎನ್ಬಿಎಫ್ಸಿ)ಗಳಿಗೆ 30 ಸಾವಿರ ಕೋಟಿ ರೂ. ನೆರವು ದೊರೆಯಲಿದ್ದು, ಇದಕ್ಕೆ ಭಾರತ ಸರ್ಕಾರದ ಖಾತರಿಯಿರುತ್ತದೆ. ಅಲ್ಲದೆ, ಎನ್ಬಿಎಫ್ಸಿಗಳಿಗೆ ಸಹಾಯ ಮಾಡಲು ಸ್ಕೋಪ್ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.
ಟಿಡಿಎಸ್
ಮೂಲದಲ್ಲಿ ತೆರಿಗೆ ಕಡಿತವನ್ನು ಶೇ. 25 ರಷ್ಟು ಕಡಿತಗೊಳಿಸಲಾಗುವುದು ಎಂದು ವಿತ್ತ ಸಚಿವರ ಘೋಷಿಸಿದರು, ಇದು ತಕ್ಷಣದಿಂದ ಜಾರಿಯಾಗಲಿದ್ದು ಮಾರ್ಚ್ 2021 ರವೆಗೆ ಚಾಲ್ತಿಯಲ್ಲಿರಲಿದೆ. ಈ ಕ್ರಮವು ಜನರಿಗೆ ಅಂದಾಜು 50 ಸಾವಿರ ಕೋಟಿ ರೂ.ಯನ್ನು ಒದಗಿಸಬಹುದು ಎನ್ನಲಾಗಿದೆ.
ಆದಾಯ ತೆರಿಗೆ ರಿಟರ್ನ್ಸ್, ಮೌಲ್ಯಮಾಪನಗಳು ಮತ್ತು ವಿವಾದ್ ಸೆ ವಿಶ್ವಾಸ್ ಯೋಜನೆಯ ನಿಗದಿತ ದಿನಾಂಕಗಳ ವಿಸ್ತರಣೆಯನ್ನು ಸರ್ಕಾರ ಘೋಷಿಸಿತು.
ಡಿಸ್ಕಾಮ್, ರಿಯಲ್ ಎಸ್ಟೆಟ್ ಮತ್ತು ದೇಶಾದ್ಯಂತ ರಸ್ತೆ ಮತ್ತು ಹೆದ್ದಾರಿಗಳ ನಿರ್ಮಾಣ ಯೋಜನೆಗಳಿಗೂ ಸರ್ಕಾರ ಪರಿಹಾರ ನೀಡಿತು.
2014 ಮತ್ತು 2019 ರ ನಡುವೆ ಮೋದಿ ಸರ್ಕಾರವು ಕೈಗೊಂಡ ವಿವಿಧ ಸುಧಾರಣೆಗಳನ್ನು ನೆನಪಿಸಿಕೊಂಡ ವಿತ್ತ ಸಚಿವರು, ಇದರಿಂದ ಬಡವರಿಗೆ ಮತ್ತು ದೀನದಲಿತರಿಗೆ ಮತ್ತು ಉದ್ಯಮಕ್ಕೆ ಅನುಕೂಲವಾಗಿದೆ ಎಂದರು.