1000 ಕೋಟಿಯ ವಿಶೇಷ ಪ್ರಾಜೆಕ್ಟ್​- ದಾಖಲೆ ಬರೆಯಲಿದೆ "ದಿ ಮಹಾಭಾರತ್"

ಟೀಮ್​ ವೈ.ಎಸ್​. ಕನ್ನಡ

1000 ಕೋಟಿಯ ವಿಶೇಷ ಪ್ರಾಜೆಕ್ಟ್​- ದಾಖಲೆ ಬರೆಯಲಿದೆ "ದಿ ಮಹಾಭಾರತ್"

Tuesday April 18, 2017,

3 min Read

ಮುಂದಿನ ವರ್ಷದ ಸೆಪ್ಟಂಬರ್​ನಲ್ಲಿ ಸಿನಿಮಾ ಅಭಿಮಾನಿಗಳಿಗೆ ನಿರೀಕ್ಷೆ ಮಾಡಲು ಕೂಡ ಸಾಧ್ಯವಾಗದೇ ಇರುವ ಸಿನಿಮಾವೊಂದು ಕಾಣಸಿಗಲಿದೆ. ಬಾಹುಬಲಿ ಸಿನಿಮಾ ನೋಡಿಯೇ, ಅಬ್ಬಾ ಇದೆಂತಹಾ ಕಾಸ್ಟ್ಲೀ ಸಿನಿಮಾ ಅಂದುಕೊಂಡವರು, ಅದನ್ನೂ ಮೀರಿಸುಂತಹ ಸಿನಿಮಾವನ್ನು ನೋಡಲಿದ್ದಾರೆ. ಮಲೆಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​ ಎದುರಿಗೆ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್ ನಿಲ್ಲಲಿದ್ದಾರೆ​. ಇನ್ನೊಂದು ಸೀನ್​ನಲ್ಲಿ ಮತ್ತೊಬ್ಬ ಸೂಪರ್​ ಸ್ಟಾರ್. ರೆಪ್ಪೆ ಮುಚ್ಚಲು ಅವಕಾಶ ನೀಡದೇ ಇರುವ ಚಿತ್ರವೊಂದು ತಯಾರಾಗುತ್ತಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ ಈ "ಮಹಾಭಾರತ" ಹೊಸ ಇತಿಹಾಸವನ್ನೇ ನಿರ್ಮಿಸಲಿದೆ. 

image


ಭಾರತೀಯರ ಪಾಲಿಗೆ ಮಹಾಗ್ರಂಥ ಎನಿಸಿರುವ ಮಹಾಭಾರತವನ್ನಿಟ್ಟುಕೊಂಡು ಭಾರತದ ಎಲ್ಲ ಭಾಷೆಗಳಲ್ಲಿಯೂ ಸಿನಿಮಾ ಮಾಡಲು ತಯಾರಿ ನಡೆಸಲಾಗಿದೆ. ಮಹಾಭಾರತದ ಭಾರತೀಯರ ಪಾಲಿಗೆ ಧಾರ್ಮಿಕ, ತಾತ್ವಿಕ, ಹಾಗೂ ಪೌರಾಣಿಕ ಮಹಾಕಾವ್ಯವಾಗಿದೆ. ಜನಮಾನಸದಲ್ಲಿ ಈ ಮಹಾಭಾರತ ಸಾಕಷ್ಟು ಪ್ರಭಾವ ಬೀರಿದೆ. ಮಹಾಭಾರತದಲ್ಲಿ ಬರುವ ಅದೆಷ್ಟೋ ಪಾತ್ರಗಳನ್ನೇ ಇಟ್ಟುಕೊಂಡು ಸಿನಿಮಾ, ನಾಟಕಗಳು ಬಂದಿವೆ. ಅದರಲ್ಲೂ 90ರ ದಶಕದಲ್ಲಿ ರಾಷ್ಟ್ರೀಯ ವಾಹಿನಿಯೊಂದರಲ್ಲಿ ಸಾಕಷ್ಟು ಎಪಿಸೋಡ್‍ಗಳು ಪ್ರಸಾರವಾಗಿದ್ದವು. ಮಹಾಭಾರತ ಧಾರಾವಾಹಿಯಂತೂ ಸಮೂಹ ಸನ್ನಿಯನ್ನೇ ಸೃಷ್ಟಿಸಿತ್ತು. ಈಗ ಇದೇ ಮಹಾಭಾರತವನ್ನು ಇಟ್ಟುಕೊಂಡು ಎರಡು ಅವತರಣಿಕೆಯಲ್ಲಿ ಸಿನಿಮಾ ಮಾಡಲು ಪ್ಲಾನ್​ ಸಿದ್ಧವಾಗಿದೆ. 

ಇದನ್ನು ಓದಿ: ಮನೆ ಬಾಗಿಲಿಗೆ ಮಾವು- ಹಣ್ಣುಗಳ ರಾಜನ ಮಾರಾಟಕ್ಕೆ ಹೊಸ ಪ್ಲಾನ್

ಒಂದು ಸಾವಿರ ಕೊಟಿ ಬಜೆಟ್

ಸೂಪರ್​ ಸ್ಟಾರ್​ಗಳನ್ನು ಇಟ್ಟುಕೊಂಡು ಸಿದ್ಧವಾಗುತ್ತಿರುವ ಮಹಾಭಾರತ ಸಿನಿಮಾಗೆ ಬಜೆಟ್‍ ಅಂದಾಜಿಸಲಾಗಿದೆ. ಮಹಾಭಾರತಕ್ಕೆ ಸುಮಾರು 1,000 ಕೋಟಿ ರೂಪಾಯಿ ಬಜೆಟ್​ ಮಾಡಲಾಗಿದೆ. ಇದಕ್ಕೆ `ದಿ ಮಹಾಭಾರತ್' ಎನ್ನುವ ಟೈಟಲ್ ಇಡಲಾಗಿದೆ. ಭಾರತೀಯ ಸಿನಿಮಾ ಇತಿಹಾಸದಲಲ್ಲಿ "ದಿ ಮಹಾಭಾರತ್​" ದಾಖಲೆಯಾಗಿ ಹೊರಹೊಮ್ಮಲಿದೆ. ಈ ಅದ್ಧೂರಿ ಚಿತ್ರಕ್ಕೆ ಯು.ಎ.ಇ.ನಲ್ಲಿ ಉದ್ಯಮಿಯಾಗಿರುವ ಕನ್ನಡಿಗ ಬಿ.ಆರ್.ಶೆಟ್ಟಿ ಅವರ ಕಂಪನಿ ಬಂಡವಾಳ ಹೂಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಶೇಷ. ಜಾಹೀರಾತುಗಳನ್ನು ವಿಭಿನ್ನವಾಗಿ ನಿರ್ದೇಶನ ಮಾಡುತ್ತಿದ್ದ ವಿ.ಎ.ಶ್ರೀಕುಮಾರ್ ಮೆನನ್ ಅವರ ಈ "ದಿ ಮಹಾಭಾರತ್" ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ದೇಶ-ವಿದೇಶದ ಘಟಾನುಘಟಿಯರ ತಾರಾ ಬಳಗ ಅಭಿನಯಿಸಲಿದೆ.

" ಬಿ ಆರ್ ಶೆಟ್ಟಿಯವರ ಈ ಕನಸಿನ ಪ್ರಾಜೆಕ್ಟ್ ಹಲವು ಭಾಷೆಗಳಲ್ಲಿ ಮೂಡಿ ಬರಲಿದ್ದು, ವಿಶ್ವದಾದ್ಯಂತ 300 ಕೋಟಿ ಜನರನ್ನು ತಲುಪುವ ವಿಶ್ವಾಸವಿದೆ. ಪಾತ್ರಗಳ ವರ್ಚಸ್ಸಿಗೆ ಎಲ್ಲೂ ಧಕ್ಕೆಯಾಗದಂತೆ ನಿರ್ಮಿಸುವ ಉದ್ದೇಶವಿಟ್ಟುಕೊಂಡೇ ನಿರ್ದೇಶಕ ಶ್ರೀಕುಮಾರ್ ಮೆನನ್ ಕಳೆದ ಕೆಲವು ವರ್ಷಗಳಿಂದ ಸಾಹಿತ್ಯ ಸಂಶೋಧನೆಯಲ್ಲಿ ಬ್ಯುಸಿಯಾಗಿದ್ದಾರೆ."
- ಎಂ.ಟಿ.ವಾಸುದೇವನ್ ನಾಯರ್, ಹೆಸರಾಂತ ಸಾಹಿತಿ

2018ರಿಂದ ಚಿತ್ರೀಕರಣ

ಈ ಮಹಾಕಾವ್ಯದ ಚಿತ್ರೀಕರಣ 2018ರ ಸೆಪ್ಟೆಂಬರ್‍ನಲ್ಲಿ ಆರಂಭಗೊಳ್ಳಲಿದ್ದೂ, ಅದು 2020ರ ಹೊತ್ತಿಗೆ ಮುಕ್ತಾಯಗೊಳ್ಳುತ್ತದೆ ಎಂದು ಬಿ ಆರ್ ಶೆಟ್ಟಿ ಕಂಪನಿ ಮಾಹಿತಿ ನೀಡಿದೆ. ಆ ವೇಳೆಗೆ ಎರಡು ಆವತರಣಿಕೆಯಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ. ಮೊದಲ ಭಾಗ ಬಿಡುಗಡೆಯಾದ 90 ದಿನಗಳ ನಂತರ ಎರಡನೇ ಭಾಗ ಬಿಡುಗಡೆಯಾಗಲಿದೆ.

ಭೀಮನ ದೃಷ್ಟಿಯಲ್ಲಿ ಕತೆ

ಮಹಾಭಾರತವನ್ನು ಒಬ್ಬೊಬ್ಬರು ಒಂದು ರೀತಿಯಲ್ಲಿ ಹೇಳುತ್ತಾ ಹೋಗಿದ್ದಾರೆ. ಈ ಬಾರಿ ಶ್ರೀಕುಮಾರನ್ ಈ ವiಹಾಭಾರತವನ್ನು ಭೀಮನ ದೃಷ್ಟಿಯಲ್ಲಿಟ್ಟುಕೊಂಡು ಹೇಳಲು ಹೊರಟಿದ್ದಾರಂತೆ. ಅಲ್ಲದೇ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ನಿರ್ಮಾಣಗೊಳ್ಳಲಿದ್ದು, ದೇಶದ ಇತರೆ ಹಾಗೂ ವಿದೇಶಿ ಭಾಷೆಗಳಿಗೆ ಡಬ್ ಆಗಲಿದೆ.

image


"ರಂಡ್​ಮೂಳಮ್"​ ಕೃತಿ ಅಳವಡಿಕೆ

ಈ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿದ್ದು, ಅವುಗಳನ್ನು ತೆರೆ ಮೇಲೆ ತರುವುದು ಸಾಹಸದ ಕೆಲಸವೇ ಸರಿ. ಈ ಸಿನಿಮಾಗೆ ಮಲಯಾಳಂನ ಖ್ಯಾತ ಸಾಹಿತಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಎಂ. ಟಿ. ವಾಸುದೇವನ್ ನಾಯರ್ ಅವರ `ರಂಡಾಮೂಳಮ್' ಕಾದಂಬರಿಯನ್ನು ಚಿತ್ರಕತೆಗೆ ಅಳವಡಿಸಿಕೊಳ್ಳಲಾಗಿದೆ. ಭೀಮನ ದೃಷ್ಟಿಯಲ್ಲಿ ಮಹಾಭಾರತದ ಕಥೆ ಹೇಳುವ ಪುಸ್ತಕ ಇದಾಗಿದ್ದು, ಕನ್ನಡದಲ್ಲಿ `ಭೀಮಾಯಣ' ಎಂದು ಅನುವಾದಗೊಂಡಿದೆ. ಮಲಯಾಳಮ್​ ನಟ ಮೋಹನ್‍ಲಾಲ್ ಈ ಸಿನಿಮಾದಲ್ಲಿ ಭೀಮನ ಪಾತ್ರವಹಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿವೆ.

ಮೇಕ್​ ಇನ್​ ಇಂಡಿಯಾ ಪ್ರಾಡಕ್ಟ್​

  ಯುಎಇ ಎಕ್ಸೇಚೇಂಜ್ ಮತ್ತು ಎನ್‍ಎಂಸಿ ಹೆಲ್ತ್​ಕೇರ್ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಬಿ.ಆರ್.ಶೆಟ್ಟಿ ಅವರು ಭಾರತೀಯ ಕಲೆ ಹಾಗೂ ಸಂಸ್ಕೃತಿಯ ಆರಾಧಕರಾಗಿದ್ದು, ಅವರ ಈ ಅಭಿಮಾನದಿಂದಲೇ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಇದೊಂದು ಅಪ್ಪಟ `ಮೇಕ್ ಇನ್ ಇಂಡಿಯಾ' ಪ್ರಾಡಕ್ಟ್ ಆಗಲಿದೆಯಂತೆ.

ರಾಜಮೌಳಿ ಪ್ರಾಜೆಕ್ಟ್

`ಬಾಹುಬಲಿ' ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಮಹಾಭಾರತ ಕುರಿತ ಸಿನಿಮಾ ಬಗ್ಗೆ ಚಿಂತನೆ ನಡೆಸಿದ್ದು, ಯೋಜನೆ ಕುರಿತು ನಟ ಆಮಿರ್ ಖಾನ್ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಪ್ರಧಾನ ಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನು ಓದಿ:

1. ಸೌರಶಕ್ತಿ ಬಳಕೆ ಬಗ್ಗೆ ಹೆಚ್ಚು ಜಾಗೃತಿ- ಪವರ್​ ಕಟ್​ ಪ್ರಾಬ್ಲಂಗೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ 

2. ತರಕಾರಿ, ಸೊಪ್ಪು ಬೆಳಿತಾರೆ- ಡಿಸ್ಕೌಂಟ್​ನಲ್ಲಿ ವ್ಯಾಪಾರಾ ಮಾಡುತ್ತಾರೆ- ಇದು 'ಸಾಸ್ಕೆನ್ ಟೆಕ್ನಾಲಜಿಸ್'​ ಗೋ ಗ್ರೀನ್ ಮಂತ್ರ

3. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!