ಆತ್ಮನಿರ್ಭರ ಭಾರತ ಆ್ಯಪ್ ಇನ್ನೊವೆಷೆನ್ ಸ್ಪರ್ಧೆಗೆ 6,940 ಪ್ರಸ್ತಾವನೆಗಳು
ಅತ್ಯುತ್ತಮ ಭಾರತೀಯ ಅಪ್ಲಿಕೇಶನ್ಗಳನ್ನು ಗುರುತಿಸಿ, ಅವುಗಳನ್ನು ವಿಶ್ವ ದರ್ಜೆಯ ಮಾನದಂಡಗಳಿಗೆ ಹೊಂದುವಂತೆ ಅಭಿವೃದ್ಧಿಪಡಿಸುವುದು ಆತ್ಮನಿರ್ಭರ ಭಾರತ ಆ್ಯಪ್ ಇನ್ನೊವೆಷೆನ್ ಚ್ಯಾಲೆಂಜ್ ಸ್ಪರ್ದೆಯ ಉದ್ದೇಶವಾಗಿದೆ.
Tuesday July 28, 2020,
2 min Read
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಆತ್ಮ ನಿರ್ಭರ ಭಾರತ ಆಪ್ ಇನ್ನೋವೇಶನ್ ಚಾಲೆಂಜ್ಗೆ ಎಂಟು ವಿಭಾಗಗಳಲ್ಲಿ 6,940 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ತಿಳಿಸಿದೆ.
ಕಚೇರಿ ಉತ್ಪಾದಕತೆ ಮತ್ತು ವರ್ಕ್ ಫ್ರಂ ಹೊಮ್, ಸಾಮಾಜಿಕ ಜಾಲತಾಣ, ಇ-ಕಲಿಕೆ, ಮನರಂಜನೆ, ಆರೋಗ್ಯ ಮತ್ತು ಕ್ಷೇಮ, ಅಗ್ರಿಟೆಕ್ ಮತ್ತು ಫಿನ್ಟೆಕ್, ಸುದ್ದಿ ಮತ್ತು ಆಟಗಳು ಎಂಬ ಎಂಟು ವಿಭಾಗಗಳಲ್ಲಿ ವ್ಯಾಪಾರ - ಬಳಕೆಗೆ ಈಗಾಗಲೇ ಲಭ್ಯವಿರುವ ಅತ್ಯುತ್ತಮ ಭಾರತೀಯ ಅಪ್ಲಿಕೇಶನ್ಗಳನ್ನು ಗುರುತಿಸಿ, ಅವುಗಳನ್ನು ವಿಶ್ವ ದರ್ಜೆಯ ಮಾನದಂಡಗಳಿಗೆ ಹೊಂದುವಂತೆ ಅಭಿವೃದ್ಧಿಪಡಿಸುವುದು ಈ ಸ್ಪರ್ದೆಯ ಹಿಂದಿನ ಉದ್ದೇಶವಾಗಿದೆ.
ಜುಲೈ 4 ಕ್ಕೆ ಶುರುವಾಗಿದ್ದ ಈ ಸ್ಪರ್ಧೆ ಜುಲೈ 26 ಕ್ಕೆ ಮುಕ್ತಾಯಗೊಂಡಿದ್ದು, 3001 ಪ್ರಸ್ತಾವನೆಗಳನ್ನು ಸಂಘ ಸಂಸ್ಥೆಗಳಿಂದಲೂ, 3,939 ಪ್ರಸ್ತಾವನೆಗಳನ್ನು ವ್ಯಕ್ತಿಗಳಿಂದ ಪಡೆದಿದೆ.
ವ್ಯಕ್ತಿಗಳ ಸಲ್ಲಿಕೆಗಳಲ್ಲಿ, ಸುಮಾರು 1,757 ಅಪ್ಲಿಕೇಶನ್ಗಳು ಬಳಸಲು ಸಿದ್ಧವಾಗಿದ್ದರೆ, 2,182 ಅಪ್ಲಿಕೇಶನ್ಗಳು ಅಭಿವೃದ್ಧಿ ಹಂತದಲ್ಲಿವೆ. ಸಂಸ್ಥೆಗಳು ಮತ್ತು ಕಂಪನಿಗಳು ಸಲ್ಲಿಸಿದ ಅಪ್ಲಿಕೇಶನ್ಗಳಲ್ಲಿ, 1,742 ಅನ್ನು ಈಗಾಗಲೇ ನಿಯೋಜಿಸಲಾಗಿದ್ದು, ಉಳಿದ 1,259 ಅಪ್ಲಿಕೇಶನ್ಗಳು ಅಭಿವೃದ್ಧಿ ಹಂತದಲ್ಲಿವೆ.
ಈ ಸಲ್ಲಿಕೆಗಳ ವಿಭಾಗವಾರು ವಿವರಗಳನ್ನು ನೋಡುವುದಾದರೆ 1,142 ಆ್ಯಪ್ಗಳು ವ್ಯಾಪಾರದಲ್ಲಿ, 1,062 ಆ್ಯಪ್ಗಳು ಇ-ಕಲಿಕೆಯಲ್ಲಿ. 1,155 ಆ್ಯಪ್ಗಳು ಸಾಮಾಜಿಕ ಜಾಲತಾಣದಲ್ಲಿ, 326 ಆ್ಯಪ್ಗಳು ಕಚೇರಿ ಮತ್ತು ವರ್ಕ್ ಫ್ರಂ ಹೋಮ್, 237 ಆ್ಯಪ್ಗಳು ಸುದ್ದಿ ಮತ್ತು 320 ಆ್ಯಪ್ಗಳು ಮನರಂಜನೆ ವಿಭಾಗದ ಅಡಿಯಲ್ಲಿವೆ.
ಸುಮಾರು 1,135 ಆ್ಯಪ್ಗಳನ್ನು ಇತರೆ ವಿಭಾಗಗಳಲ್ಲಿ ಸಲ್ಲಿಸಲಾಗಿದೆ. ಒಟ್ಟಾರೆ ಸಲ್ಲಿಕೆಗಳಲ್ಲಿ 271 ಆ್ಯಪ್ಗಳನ್ನು ಒಂದು ಲಕ್ಷಕ್ಕೂ ಅಧಿಕ ಬಾರಿ ಡೌನ್ಲೋಡ್ ಮಾಡಿಕೊಳ್ಳಲಾಗಿದ್ದು, 89 ಆ್ಯಪ್ಗಳ ಡೌನ್ಲೋಡ್ ಸಂಖ್ಯೆ ದಶಲಕ್ಷಕ್ಕೂ ಅಧಿಕವಾಗಿದೆ.
ಸ್ಪರ್ಧೆಗೆ ಸಣ್ಣ ಊರುಗಳು, ದೂರದ ಪ್ರದೇಶಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಜನರು ಭಾಗವಹಿಸಿದ್ದಾರೆ.
ಇದು ನಮ್ಮ ದೇಶದಲ್ಲಿ ಇರುವ ಪ್ರತಿಭೆಯನ್ನು ತೋರಿಸುತ್ತದೆ ಮತ್ತು ಈ ಆಪ್ ಇನ್ನೋವೇಶನ್ ಚಾಲೆಂಜ್ ಭಾರತೀಯ ಟೆಕ್ ಡೆವಲಪರ್ಗಳು, ಉದ್ಯಮಿಗಳು ಮತ್ತು ಕಂಪೆನಿಗಳಿಗೆ ಭಾರತಕ್ಕಾಗಿ ನಿರ್ಮಿಸಲು ಸರಿಯಾದ ಅವಕಾಶವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸುಲಭವಾಗಿ ಬಳಸಬಹುದಾದ ಇಂಟರ್ಫೇಸ್ನೊಂದಿಗೆ ದೃಢವಾದ, ಸ್ಕೇಲೆಬಲ್ ಮತ್ತು ಸುರಕ್ಷಿತವಾದ ಮತ್ತು ಬಳಕೆದಾರರಿಗೆ ಪುನಃ ಬಳಸಬೇಕೆನ್ನುವ ಅನುಭವ ನೀಡುವ ಅಪ್ಲಿಕೇಶನ್ಗಳನ್ನು ಗುರುತಿಸುವುದರಲ್ಲಿ ನಿಜವಾದ ಸವಾಲು ಇದೆ ಎಂದು ಸಚಿವಾಲಯ ಭಾವಿಸಿದೆ.
ಸ್ಕ್ರೀನಿಂಗ್ ಸಮಿತಿಗಳು ಈಗಾಗಲೇ ವಿವಿಧ ನಿಯತಾಂಕಗಳಲ್ಲಿ ಅಪ್ಲಿಕೇಶನ್ಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದು, ಆತ್ಮ ನಿರ್ಭರ ಭಾರತ ಆ್ಯಪ್ ಪರಿಸರ ವ್ಯವಸ್ಥೆಯು ಭಾರತೀಯ ತಂತ್ರಜ್ಞಾನ ಸ್ಟಾರ್ಟ್ಅಪ್ಗಳಿಗೆ ಮೌಲ್ಯಕ್ಕೆ ದಾರಿ ತೋರಿಸಿ, ಬಹು ಟ್ರಿಲಿಯನ್ ಡಾಲರ್ಗಳ ಅಪ್ಲಿಕೇಶನ್ ಆರ್ಥಿಕತೆಗೆ ಪ್ರವೇಶ ಪಡೆಯಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ.