ಪ್ರಯಾಣಿಕರ ಮನ ಗೆಲ್ಲೋದಿಕ್ಕೆ ಹೊಸ ಪ್ಲಾನ್​- ಬಿಎಂಟಿಸಿಯಿಂದ ಹೊಸ ಟೆಕ್ನಾಲಜಿ

ಟೀಮ್​ ವೈ.ಎಸ್​. ಕನ್ನಡ

ಪ್ರಯಾಣಿಕರ ಮನ ಗೆಲ್ಲೋದಿಕ್ಕೆ ಹೊಸ ಪ್ಲಾನ್​- ಬಿಎಂಟಿಸಿಯಿಂದ ಹೊಸ ಟೆಕ್ನಾಲಜಿ

Sunday August 07, 2016,

2 min Read

ಇವತ್ತು ಯಾವುದೇ ಉದ್ಯಮದಲ್ಲಿ ಗೆಲ್ಲಬೇಕು ಅಂದ್ರೆ ಮೊದಲು ಕಸ್ಟಮರ್​ಗಳ ಮನ ಗೆಲ್ಲಬೇಕು. ಗ್ರಾಹಕರೇ ಉದ್ಯಮದಲ್ಲಿನ ಯಶಸ್ಸಿನ ದೇವರುಗಳು. ಅವರು ವರ ಕೊಟ್ರೆ ಉದ್ಯಮ ಗೆಲ್ಲಬಹುದು. ಕೈ ಕೊಟ್ರೆ ಉದ್ಯಮಿಗಳು ಗಂಟುಮೂಟೆ ಕಟ್ಟಿಕೊಂಡು ಮನೆಗೆ ಹೋಗೋದು ಗ್ಯಾರೆಂಟಿ. ಇದು ಕೇವಲ ಉದ್ಯಮದಲ್ಲಿ ಮಾತ್ರವಲ್ಲ, ಸೇವಾ ವಲಯದ ಎಲ್ಲಾ ಕಡೆಗಳಲ್ಲೂ ಇದು ಅನ್ವಯಿಸುವ ತತ್ವ. ಈಗ ಗ್ರಾಹಕರ ಮನ ಗೆಲ್ಲೋದಿಕ್ಕೆ ಹೊರಟಿರೋದು ಬೆಂಗಳೂರು ಮಹಾನಗರದ ಸಾರಿಗೆ ಹೃದಯ ಬಿಎಂಟಿಸಿ.

image


ಬಿಎಂಟಿಸಿ. ಈ ಸಂಸ್ಥೆಯ ಹೆಸರು ಕೇಳಿದ್ರೆ ಸಾಕು ನಮ್ಮ ಕಣ್ಮುಂದೆ ಸಾಕಷ್ಟು ಅವ್ಯವಸ್ಥೆಗಳು ಕಾಣುತ್ತವೆ. ಆದ್ರೆ, ಇದೀಗ ಬಿಎಂಟಿಸಿ ಸಂಸ್ಥೆ ಹಲವು ಹೈಟೆಕ್ ವ್ಯವಸ್ಥೆಯನ್ನ ಜಾರಿಗೆ ತಂದಿದೆ. ದಿನದಿಂದ ದಿನಕ್ಕೆ ಬಿಎಂಟಿಸಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಜನರಿಗೆ ಹೆಚ್ಚು ಅನುಕೂಲ ನೀಡುವಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯಶಸ್ವಿಯಾಗಿದೆ.

ಇದನ್ನು ಓದಿ: ಮಾಂಸಾಹಾರವನ್ನು ಸಂರಕ್ಷಿಸಲು ಬಂದಿದೆ ಹೊಸ ತಂತ್ರಜ್ಞಾನ

ಹಲವು ಸಲ ಬಿಎಂಟಿಸಿ ಬಸ್ ಚಾಲಕರು ಬಸ್ ರಷ್ ಇತ್ತು ಅಂದ್ರೆ ಬಸ್ ನಿಲ್ಲಸದೆ ಹೋಗುವುದು. ಟ್ರಾಫಿಕ್ ಹೆಚ್ಚಿತ್ತು ಅಂದ್ರೆ ಬೇರೇ ಮಾರ್ಗದಲ್ಲಿ ಹೋಗೋದವುದು ಕಾಮನ್ ಆಗಿಬಿಟ್ಟಿದೆ. ಅನಿವಾರ್ಯವಾಗಿ ಒಮ್ಮೊಮ್ಮೆ ಬೇಗ ಹೋಗುವ ಸಲುವಾಗಿ ಬಿಎಂಟಿಸಿ ಬಸ್ ಚಾಲಕರು ಹೀಗೆ ಮಾಡುವುದು ಉಂಟು. ಆಗ ಅವರನ್ನು ಪ್ರಯಾಣಿಕರು ಪ್ರಶ್ನಿಸಿದ್ರೆ, ಬಿಎಂಟಿಸಿ ಚಾಲಕರು ಯಾವುದನ್ನು ಲೆಕ್ಕಿಸುವುದಿಲ್ಲ. ಆದ್ರೆ ಇನ್ಮುಂದೆ ಈ ರೀತಿ ಮಾಡಿದ್ರೆ ಅವರಿಗೆ ಎಚ್ಚರಿಕೆ ಧ್ವನಿ ಬರುತ್ತೆ.

image


ಹೌದು, ಬಿಎಂಟಿಸಿ ಚತುರ ಸಾರಿಗೆ ವ್ಯವಸ್ಥೆ ಯೋಜನೆಯನ್ನ ಪರಿಚಯಿಸಿದೆ. ಈ ಯೋಜನೆಯಲ್ಲಿ ಬಸ್ಸಿನ ಕುರಿತ ಕ್ಷಣ-ಕ್ಷಣದ ಮಾಹಿತಿ ಸಿಗಲಿದೆ. ಬಸ್ಸುಗಳ ಕುರಿತು ಬೆರಳ ತುದಿಯಲ್ಲಿ ಮಾಹಿತಿ ಸಿಗಲಿದ್ದು, ಚಾಲಕರು ಯಡವಟ್ಟು ಮಾಡಿದರೆ ಬಸ್​ನಲ್ಲಿ ಇರುವ ವಾಯ್ಸ್ ಕಿಟ್​​ನ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡಲಾಗುತ್ತೆ. ಸರಿಯಾಗಿ ಸ್ಟಾಪ್ ನೀಡುವಂತೆ ಮತ್ತು ಸರಿಯಾದ ಮಾರ್ಗದಲ್ಲಿ ಹೋಗುವಂತೆ ಅವರಿಗೆ ಸೂಚಿಸಲಾಗುತ್ತದೆ. ತಪ್ಪು ಮಾಡಿದ್ದಕ್ಕೆ ಚಾಲಕರು ಜವಾಬು ನೀಡುವಂತೆ ಯೋಜನೆಯನ್ನು ಬಿಎಂಟಿಸಿ ಜಾರಿ ಮಾಡಿದೆ.

" ಚತುರ ಸಾರಿಗೆ ವ್ಯವಸ್ಥೆಯಡಿಯಲ್ಲಿ ಇದನ್ನ ಅಳವಡಿಸಲಾಗಿದ್ದು, ನಿಯಂತ್ರಣ ಕೊಠಡಿಗೆ ಪ್ರತಿ 10 ಸೆಕೆಂಡ್‌ಗೊಮ್ಮೆ ಎಲ್ಲಾ ಬಸ್ಸುಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಎಲ್ಲ ಬಸ್​ಗಳಿಗೂ ಇದನ್ನ ಅಳವಡಿಸಿರುವುದರಿಂದ ತುರ್ತು ಸಂದರ್ಭದಲ್ಲಿ ನಿರ್ವಾಹಕರು ನೆರವು ಪಡೆಯಲು ಸಹಾಕಾರಿಯಾಗಲಿದೆ. ಕಂಟ್ರೋಲ್ ರೂಮ್​ನಿಂದ ಚಾಲಕರಿಗೆ ಸರಿಯಾದ ದಾರಿ ತೋರಿಸಲು ಸಹಾಯಕಾರಿಯಾಗಿದೆ."
 - ವಿಶ್ವಜಿತ್ ಮಿತ್ರ, ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕ

ಬಿಎಂಟಿಸಿ ಸಿಬ್ಬಂದಿಗಳು ಕೂಡ ಈ ಹೊಸ ವ್ಯವಸ್ಥೆಯನ್ನ ಸ್ವಾಗತಿಸಿದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಈಡೀ ಸಿಬ್ಬಂದಿಗಳಿಗೆ ಜನರು ಶಾಪ ಹಾಕುವುದು ತಪ್ಪಲಿದೆ. ಇನ್ಮುಂದೆ ಎಲ್ಲರು ಭಯದಿಂದ ಸರಿಯಾಗಿ ಕೆಲಸ ಮಾಡಲಿದ್ದಾರೆ ಎನ್ನುತ್ತಾರೆ ಸಿಬ್ಬಂದಿಗಳು.

"ಬಿಎಂಟಿಸಿಯ ಎಲ್ಲಾ ಚಾಲಕರು ಮತ್ತು ನಿರ್ವಾಹಕರು ಒಂದೇ ಮನಸ್ಥಿತಿಯನ್ನು ಹೊಂದಿಲ್ಲ. ಕೆಲವರು ಉತ್ತಮ ಸೇವೆ ನೀಡಿದ್ರೂ ನಮ್ಮ ಮೇಲೆ ಪ್ರಯಾಣಿಕರಿಗೆ ಗೌರವ ಇಲ್ಲ. ಆದ್ರೆ ಈಗ ಜಾರಿಗೆ ತರಲು ಉದ್ದೇಶಿಸಿರುವ ತಂತ್ರಜ್ಞಾನ ನಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆ ಆಗಲಿದೆ."
- ಕೃಷ್ಣ, ನಿರ್ವಾಹಕ

ಈ ಹೊಸ ತಂತ್ರಜ್ಞಾನ ಆಳವಡಿಕೆಯಿಂದಾಗಿ ಬಿಎಂಟಿಸಿ ಸಂಸ್ಥೆ ನಗರದ ಪ್ರಯಾಣಿಕರ ಜೊತೆ ಮತ್ತಷ್ಟು ಜನಸ್ನೇಹಿ ಆಗಲಿದೆ. ಉತ್ತಮ ಸೇವೆ ಮತ್ತು ಆಧುನಿಕತೆಯನ್ನು ತುಂಬಾ ವೇಗವಾಗಿ ಅಳವಡಿಸಿಕೊಳ್ಳುವ ಮೂಲಕ ಬಿಎಂಟಿಸಿ ಜನರನ್ನು ಸೆಳೆಯುವಲ್ಲಿ ಸಫಲವಾಗಿದೆ.

ಇದನ್ನು ಓದಿ

1. ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡ ರಂಗಭೂಮಿ ಪ್ರತಿಭೆ

2. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

3. ಟೊಮ್ಯಾಟೋ ಬೆಳೆಯಲ್ಲಿ ಹೊಸ ಮ್ಯಾಜಿಕ್​- ಜಪಾನ್​ ತಳಿಯಿಂದ ಲಾಭದ ಕಿಕ್​