ರಾಜಧಾನಿಯಲ್ಲೇ ಕತ್ತಲು - ಬೆಂಗಳೂರಿನ 33,000 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ

ಟೀಮ್​ ವೈ.ಎಸ್​​.ಕನ್ನಡ

ರಾಜಧಾನಿಯಲ್ಲೇ ಕತ್ತಲು - ಬೆಂಗಳೂರಿನ 33,000 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ

Sunday June 19, 2016,

2 min Read

ಬೆಂಗಳೂರು ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ ಅಂತಾನೇ ಹೆಸರು ಮಾಡಿರುವ ಈ ಉದ್ಯಾನ ನಗರಿಯಲ್ಲೀಗ ಅಂಧಕಾರ. ಹೌದು ಅಚ್ಚರಿಯಾದ್ರೂ ಇದು ಸತ್ಯ. ರಾಜ್ಯ ರಾಜಧಾನಿಯ 33,000 ಮನೆಗಳಲ್ಲಿ ಬೆಳಕೇ ಇಲ್ಲ, ಅರ್ಥಾತ್ ಈ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಸಿಕ್ಕಿಲ್ಲ. ಇತ್ತೀಚೆಗಷ್ಟೆ ನಡೆಸಿದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಪ್ರಕಾರ 23,17,877 ಮನೆಗಳ ಪೈಕಿ 32,803 ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಅದರರ್ಥ ಬೆಂಗಳೂರಿನ ಶೇ.1.4ರಷ್ಟು ಮನೆಗಳು ಸೀಮೆಎಣ್ಣೆ ಹಾಗೂ ಇತರ ಎಣ್ಣೆ ಲ್ಯಾಂಪ್‍ಗಳನ್ನು ನಂಬಿ ಬದುಕುತ್ತಿದ್ದಾರೆ. ಇಡೀ ದೇಶದ ಸಂಖ್ಯೆಗೆ ಹೋಲಿಸಿದ್ರೆ ಇದು ಮೂರು ಪಟ್ಟು ಹೆಚ್ಚು.

ಇದನ್ನು ಓದಿ: ಪ್ರಾಣಿಗಳ ಧ್ವನಿ ಕೇಳಿಸುವ ಗೂಗಲ್..!

ಬೆಂಗಳೂರಿಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದು 1906ರಲ್ಲಿ, ಶಿವನಸಮುದ್ರ ಜಲವಿದ್ಯುತ್ ಸ್ಥಾವರದಿಂದ ಉದ್ಯಾನ ನಗರಿಗೆ ಕರೆಂಟ್ ಪೂರೈಸಲಾಗಿತ್ತು. ಸಿಟಿ ಮಾರ್ಕೆಟ್‍ನ ಕಟ್ಟಡಗಳಿಗೆ ಮೊದಲು ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಕೇವಲ ಬೆಂಗಳೂರು ಮಾತ್ರವಲ್ಲ ಕರ್ನಾಟಕದ ಉಳಿದ ನಗರಗಳ ಸ್ಥಿತಿ ಕೂಡ ಇನ್ನೂ ಯಾತನಾಮಯವಾಗಿದೆ. ನಗರ ಪ್ರದೇಶಗಳ ಶೇ. 2.4ರಷ್ಟು ಮನೆಗಳಿಗೆ ಅಂದ್ರೆ ಒಟ್ಟು 50,90,399 ಮನೆಗಳಲ್ಲಿ 1,32,849 ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ.

image


ಬೆಂಗಳೂರು ನಿವಾಸಿಗಳು ಬೆಳಕಿಗಾಗಿ ಸೀಮೆ ಎಣ್ಣೆ ಅವಲಂಬಿಸಿರುವುದು ನಿಜಕ್ಕೂ ವಿಷಾಧನೀಯ ಅಂತಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿರುವವರು ಬಹುತೇಕ ಕೊಳಗೇರಿ ನಿವಾಸಿಗಳು. ಅನಿವಾರ್ಯವಾಗಿ ಮೇಣದ ಬತ್ತಿ ಬೆಳಕನ್ನು ನೆಚ್ಚಿಕೊಂಡಿದ್ದಾರೆ. ಸೀಮೆ ಎಣ್ಣೆಯನ್ನು ಇಂಧನವಾಗಿ ಬಳಸುವ ಮೂಲಕ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ, ಇನ್ನು ಕೆಲವರು ಅಕ್ಕಪಕ್ಕದ ಮನೆಗಳಿಂದ ಕದ್ದು ಕರೆಂಟ್ ಪಡೆದುಕೊಳ್ತಿದ್ದಾರೆ ಅನ್ನೋದು ಅವರ ಬೇಸರದ ನುಡಿ.

ಆದ್ರೆ ಬೆಸ್ಕಾಂ ಅಧಿಕಾರಿಗಳು ಹೇಳೋದೇ ಬೇರೆ. ವಿದ್ಯುತ್ ಸಂಪರ್ಕವಿಲ್ಲದ ಮನೆಗಳೆಲ್ಲ ಅಕ್ರಮವಾಗಿ ನಿರ್ಮಾಣಗೊಂಡಂಥವು ಜೊತೆಗೆ ಇನ್ನು ಕೆಲವು ಇನ್ನೂ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ಎನ್ನುತ್ತಾರೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಪಾಂಡೆ. 

"ವಿದ್ಯುತ್ ಸಂಪರ್ಕವೇ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುತ್ತಿರುವ ಕುಟುಂಬಗಳಿಗೆ ಕರೆಂಟ್ ಪೂರೈಸಲು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಬೆಸ್ಕಾಂ ಜನವರಿಯಲ್ಲಿ ಯೋಜನೆಯೊಂದನ್ನು ಜಾರಿ ಮಾಡಿದೆ. ಇನ್ನೊಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಕರ್ನಾಟಕದಲ್ಲಿ ಪ್ರಮುಖವಾಗಿ ಪಶ್ಚಿಮಘಟ್ಟದಲ್ಲಿ ಸುಮಾರು 37 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಅನ್ನೋದು ಅರಿವಿಗೆ ಬಂದಿದೆ. ಆ ಹಳ್ಳಿಗಳಿಗೆಲ್ಲ ಇನ್ನೊಂದು ವರ್ಷದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುವುದು''
- ಪಂಕಜ್ ಪಾಂಡೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ

ರಾಜ್ಯ ಸರ್ಕಾರ ಬೆಂಗಳೂರಿನ ಮೇಕ್ ಓವರ್‍ಗಾಗಿ 7,300 ಕೋಟಿ ರೂಪಾಯಿ ಮೀಸಲಿಟ್ಟಿದೆ. ಆ ಹಣದಲ್ಲಿ ಕೊಂಚ ಭಾಗವನ್ನಾದ್ರೂ ವಿದ್ಯುತ್ ಸಂಪರ್ಕ ನೀಡಲು ಬಳಸಿಕೊಳ್ಳಲಿ ಎಂಬ ಆಶಯ ಸಾರ್ವಜನಿಕರದ್ದು. 

ಇದನ್ನು ಓದಿ

1. ಜೇಬಲ್ಲಿ ದುಡ್ಡಿಲ್ಲ...ಮೊಬೈಲ್​ನಲ್ಲಿ ಕರೆನ್ಸಿ ಇಲ್ಲ.. ಡೋಂಟ್​ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ

2. ಮಹಿಳಾ ಕ್ರಿಕೆಟ್ ನ ಮಿರಾಕಲ್ ಮಿಥಾಲಿ ರಾಜ್

3. ಒಂದೇ ರಾತ್ರಿ ಊರಿಗೆ ಊರೇ ಮಾಯ..!