ಓಮಿತ್ರ ಹುಟ್ಟಿಗೆ ಕಾರಣ ಆ 30 ಗಂಟೆಗಳು !

ಟೀಮ್​​ ವೈ.ಎಸ್​.

ಓಮಿತ್ರ ಹುಟ್ಟಿಗೆ ಕಾರಣ ಆ 30 ಗಂಟೆಗಳು !

Saturday September 19, 2015,

3 min Read

ಸಂಪರ್ಕ ಇವತ್ತಿನ ಬಹುಮುಖ್ಯ ಸಾಧನ. ಜನರನ್ನು ಸಂಪರ್ಕಿಸಲು ಮಾರುಕಟ್ಟೆಯಲ್ಲಿ ಇಂದು ನೂರಾರು ಆ್ಯಪ್​​ಗಳಿವೆ. ಒಂದೇ ಏರಿಯಾದ ಜನರನ್ನು ಸಂಪರ್ಕಿಸಲು ಸಾಮಾಜಿಕ ಸಂಪರ್ಕ ಆ್ಯಪ್​ಗಳು​ ಅಥವಾ ಪ್ರಯಾಣ ಜೊತೆಗಾರ ಆ್ಯಪ್​ಗಳು ಹೀಗೆ ನಾನಾ ಬಗೆಯ ಆ್ಯಪ್​ಗಳಿವೆ. ಇಂತಹದ್ದೇ ಒಂದು ಆ್ಯಪ್ -ಓಮಿತ್ರ. ಒಂದು ಅಪರೂಪದ ಭಾರತೀಯ ರೈಲ್ವೇ ಸಾಮಾಜಿಕ ಆ್ಯಪ್ ಇದು. ರೈಲು ಪ್ರಯಾಣಿಕರು ಸಹಜವಾಗಿಯೇ ಎದುರಿಸುವ ಸಮಸ್ಯೆಗಳನ್ನು ನಿವಾರಿಸಲೆಂದೇ ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.

ರೈಲ್ವೆ ಪ್ರಯಾಣಿಕರಿಗಾಗಿ ಆ್ಯಪ್ ಅಭಿವೃದ್ಧಿಪಡಿಸಿದವರು ವಿಕಾಸ್ ಜಗತೇಯ. ಅದಕ್ಕೆ ಕಾರಣವಾಗಿದ್ದು, ಭಯಾನಕವಾದ ಒಂದು ರೈಲು ಪ್ರಯಾಣ ! ಅವರು ರಾಜಸ್ಥಾನದಿಂದ ಹೈದ್ರಾಬಾದ್​ಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದರು. ಸುದೀರ್ಘ 30 ಗಂಟೆಗಳ ಪ್ರಯಾಣವದು. ಈ ಪ್ರಯಾಣದಲ್ಲೇ ಅವರಿಗೆ ರೈಲು ಪ್ರಯಾಣದ ಸಂಕಷ್ಟ ಅರಿವಿಗೆ ಬಂದದ್ದು. ಬಹುತೇಕ ಪ್ರಯಾಣಿಕರದ್ದು ಏಕರೀತಿಯ ಸಮಸ್ಯೆಯಾಗಿತ್ತು. ಯಾರಿಗೋ ಕುಟುಂಬದ ಸದಸ್ಯರಿಗೆ ಬೇರೆ ಬೇರೆ ಕಂಪಾರ್ಟ್​ಮೆಂಟ್​​ಗಳಲ್ಲಿ ಸೀಟ್ ಸಿಕ್ಕಿತ್ತು, ಇನ್ನೂ ಕೆಲವರಿಗ ಸರಿಯಾದ ಆಹಾರ ಸಿಕ್ಕಿರಲಿಲ್ಲ... ಇನ್ನೂ ಕೆಲವರಿಗೆ ಯಾವ ಸ್ಟೇಷನ್​​ನಲ್ಲಿ ಇಳಿಯಬೇಕು ಎನ್ನುವುದು ಚಿಂತೆಯ ವಿಷಯವಾಗಿತ್ತು... ಹಾಗೇ ಪ್ರಯಾಣದ ಕುರಿತೂ ಸರಿಯಾದ ಮಾಹಿತಿ ಇರುತ್ತಿರಲಿಲ್ಲ...

"ನನಗೆ ಆಗಲೇ ಈ ಐಡಿಯಾ ಹುಟ್ಟಿಕೊಂಡಿದ್ದು. ಸಹ-ಪ್ರಯಾಣಿಕರನ್ನು ಸಂಪರ್ಕಿಸುವ ಮೂಲಕ ರೈಲು ಪ್ರಯಾಣವನ್ನು ಮತಷ್ಟು ಸುಲಭ ಮಾಡುವ ಚಿಂತನೆ ಹುಟ್ಟಿಕೊಂಡಿತ್ತು." ಎನ್ನುತ್ತಾರೆ ವಿಕಾಸ್. ಒಮ್ಮೆ ಐಆರ್​ಸಿಟಿಸಿ ಮೂಲಕ ಟಿಕೆಟ್ ಬುಕ್ ಮಾಡಿ ಎಸ್ಎಂಎಸ್ ಸಂದೇಶ ರವಾನೆಯಾದರೆ ಸಾಕು, ಈ ಆ್ಯಪ್ ಆ ಎಸ್ಎಂಎಸ್ ಅನ್ನು ಸಂಗ್ರಹಿಸುತ್ತದೆ. ಆ ಪ್ರಯಾಣಿಕನಿಗೆ ಸಂಬಂಧಿಸಿದ ಎಲ್ಲಾ ಪ್ರಯಾಣ ಮಾಹಿತಿಗಳನ್ನೂ ಅದು ಒದಗಿಸುತ್ತದೆ. ಟ್ರೈನ್ ಟ್ರ್ಯಾಕಿಂಗ್, ಸಹ ಪ್ರಯಾಣಿಕರ ಹುಡುಕಾಟ, ಪ್ರಯಾಣಕ್ಕೂ ಮುನ್ನ ಜ್ಞಾಪಿಸುವುದು, ವೈಟಿಂಗ್ ಲಿಸ್ಟ್​ನಿಂದ ಟಿಕೆಟ್ ಕನ್​​ಫರ್ಮೆ ಷನ್ ಸೇರಿದಂತೆ ರಿಯಲ್ ಟೈಮ್ ಟ್ರ್ಯಾಕಿಂಗ್, ರೈಲಿನ ಆಗಮನ, ನಿರ್ಗಮನ, ನಿಲುಗಡೆ ಇತ್ಯಾದಿ ಮಾಹಿತಿಗಳನ್ನು ಒದಗಿಸುತ್ತದೆ.

ಈ ಆ್ಯಪ್ ಹೆಚ್ಚುವರಿಯಾಗಿ ಸಹ ಪ್ರಯಾಣಿಕರನ್ನು ಸಂಪರ್ಕಿಸಲು ನೆರವು ನೀಡುತ್ತದೆ. ಪ್ರಯಾಣದ ವೇಳೆ ಗೆಳೆತನ ಬೆಳೆಸಲು, ಬರ್ತ್​ಗಳನ್ನು ಬದಲಾಯಿಸಿಕೊಳ್ಳಲು ಪ್ರಮುಖ ಸಂಪರ್ಕ ಸಾಧನವಾಗಿ ಈ ಆ್ಯಪ್ ಬಳಕೆಯಾಗುತ್ತಿದೆ. ಇದರಲ್ಲಿ ಮತ್ತೊಂದು ಮುಖ್ಯವಾದ ಅಂಶವೇನೆಂದರೆ ಅದು ಎಸ್ಒಎಸ್ ಎನ್ನುವ ಸೆಕ್ಯುರಿಟಿ ಬಟನ್, ಕೇವಲ ಐದೇ ನಿಮಿಷದಲ್ಲಿ ಪ್ರತಿಕ್ರಿಯೆ ಲಭ್ಯವಾಗುತ್ತದೆ.

ಸವಾಲುಗಳು

ಟೀಮ್​​ ಓಮಿತ್ರ

ಟೀಮ್​​ ಓಮಿತ್ರ


ಈ ಐಡಿಯಾ ಕುರಿತು ಆಸಕ್ತಿ ಉಳ್ಳ ಮತ್ತು ಕೆಲಸ ಮಾಡಬಲ್ಲ ಸರಿಯಾದ ಜನರ ತಂಡ ಕಟ್ಟುವುದು ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ವಿಕಾಸ್. ಸಾಮಾಜಿಕವಾಗಿ ಯಾರೇ ಅಪರಿಚಿತರೊಂದಿಗೆ ಮಾತನಾಡಬಾರದು ಎನ್ನುವಂತಹ ವಾತಾವರಣವಿದ್ದಾಗ, ಅದಕ್ಕೆ ವಿರುದ್ಧವಾಗಿ ಹೊಸ ಉತ್ಪನ್ನವೊಂದನ್ನು ತಯಾರಿಸಲು ನಾವು ಹೊರಟಿದ್ದೆವು. ಈ ಆ್ಯಪ್ ಅಂತಹದ್ದೊಂದು ಅಂತರವನ್ನು, ಹಿಂಜರಿತವನ್ನು ತೊಡೆದುಹಾಕಿ, ಪ್ರತಿಯೊಬ್ಬರ ಮಧ್ಯೆ ಒಂದು ಆರೋಗ್ಯಕಾರಿ ಸಂವಹನ ಏರ್ಪಡಿಸಲು ಉದ್ದೇಶಿಸಿತ್ತು. ಓಮಿತ್ರವನ್ನು ವಿಕಾಸ್ ಅವರು ಏಕಾಂಗಿಯಾಗಿ ಸ್ಥಾಪಿಸಿದರೂ, ಅವರ ತಂಡದಲ್ಲಿ 3 ಮಂದಿ ಪೂರ್ಣ ಕಾಲಿಕ ಡೆವಲಪರ್ಸ್​ಗಳು ಮತ್ತು ಇಂಟರ್ನಿಗಳನ್ನು ಒಳಗೊಂಡಿದೆ.

ಈ ತಂಡವು ಆ್ಯಪ್ ಮೂಲಕ ಜಾಹೀರಾತು ಆದಾಯ ನಿರೀಕ್ಷಿಸುತ್ತಿದೆ. ಜೊತೆಗೆ ಆಹಾರ ಮತ್ತು ಇತರೆ ಪ್ರಯಾಣದ ಉತ್ಪನ್ನಗಳನ್ನು ಆ್ಯಪ್​ನಲ್ಲಿ ಅಳವಡಿಸಲು ತೀರ್ಮಾನಿಸಿದೆ. "ಸಧ್ಯಕ್ಕೆ ನಾವು ಪ್ರಯಾಣವನ್ನು ಸುಲಭಗೊಳಿಸುವತ್ತ ಗಮನಹರಿಸಿದ್ದೇವೆ. ರೈಲು-ಪ್ರಯಾಣದ ಉತ್ಪನ್ನಗಳನ್ನು ಸುಲಭವಾಗಿ ದೊರಕಿಸಿಕೊಡುವುದು ನಮ್ಮ ಉದ್ದೇಶವಾಗಿದೆ." ಎನ್ನುತ್ತಾರೆ, ವಿಕಾಸ್. ಸಧ್ಯಕ್ಕೆ, ಈ ಆ್ಯಪ್ ಸುಮಾರು ನಾಲ್ಕು ಸಾವಿರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದು, ಪ್ರತಿವಾರ 10% ಅಭಿವೃದ್ಧಿ ಕಾಣುತ್ತಿದೆ.

ಮಾರುಕಟ್ಟೆ ಮತ್ತು ಬೆಳವಣಿಗೆ

ಭಾರತದ ರೈಲು ಪ್ರಯಾಣ ವಲಯದಲ್ಲಿ ಆ್ಯಪ್ ಪ್ರಪಂಚ ನಿಧಾನಕ್ಕೆ ಕಾಲಿಡುತ್ತಿದೆ. 2013-14ರಲ್ಲಿ ಸುಮಾರು 8,420 ದಶಲಕ್ಷ ಪ್ರಯಾಣಿಕರು ಭಾರತೀಯ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಆದಾಗ್ಯೂ, ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮತ್ತು ನಿರೀಕ್ಷೆಗಳನ್ನು ಈಡೇರಿಸುವುದು ಅತಿ ದೊಡ್ಡ ಸವಾಲಾಗಿ ಉಳಿದಿದೆ ಎಂದು ರೈಲ್ವೇ ಇಲಾಖೆಯ ವರದಿಯೊಂದು ಹೇಳುತ್ತದೆ.

ಈ ತಂಡವು ರಿಸ್ತಾ ಎನ್ನುವ ಮತ್ತೊದು ಸುರಕ್ಷಾ ಆ್ಯಪ್ಅನ್ನು ಅಭಿವೃದ್ಧಿಪಡಿಸಿದೆ. ಸ್ಥಳೀಯ ಎಂಎಂಟಿಸಿ ರೈಲು ಪ್ರಯಾಣಿಕರಿಗೆ ಕೇವಲ ಐದೇ ನಿಮಿಷದಲ್ಲಿ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ. ಸಧ್ಯಕ್ಕೆ ರಿಸ್ತಾ ಆ್ಯಪ್ ಹೈದ್ರಾಬಾದ್​ನ ಎಂಎಂಟಿಎಸ್ ಪ್ರಯಾಣಿಕರ ಬಳಕೆಗೆ ಲಭ್ಯವಿದೆ.

ರೈಲ್ವೇ ಸುರಕ್ಷಾ ದಳದ ಜೊತೆ ಮಾತುಕತೆ ನಡೆಸುತ್ತಿರುವ ಈ ತಂಡ ಈ ಆ್ಯಪ್​​ಗೆ ಶೀಘ್ರದಲ್ಲೇ ಪೇಟೆಂಟ್ ಪಡೆಯುವ ನಿರೀಕ್ಷೆಯಲ್ಲಿದೆ. ಆ್ಯಪ್ ಅಭಿವೃದ್ಧಿ ಸಂಬಂಧ ಸೌತ್ ಸೆಂಟ್ರಲ್ ರೈಲ್ವೇ ಮತ್ತು ಆರ್​ಪಿಎಫ್ ಜೊತೆ ಈ ಸಂಸ್ಥೆ ನಿರಂತರ ಸಂಪರ್ಕದಲ್ಲಿದೆ.

ಹೆಚ್ಚು ಹೆಚ್ಚು ಜನರು ಡಿಜಿಟಲ್ ಪ್ರಪಂಚಕ್ಕೆ ಪ್ರವೇಶಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈಲ್ವೇ ಪ್ರಯಾಣಕ್ಕೆ ಇಂಟಲಿಜೆಂಟ್ ಸಿಸ್ಟಮ್​​ನ ಅಗತ್ಯವಿದೆ. ಹೀಗಾಗಿ, ರೈಲು ಪ್ರಯಾಣದ ಆ್ಯಪ್​​ಗಳ ಸಂಖ್ಯೆಯಲ್ಲೂ ಸಾಕಷ್ಟು ಏರಿಕೆಯಾಗಿದೆ. ಈ ಆ್ಯಪ್​ಗಳು ಪ್ರಯಾಣಿಕರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತವೆ. ರೈಲ್ಯಾತ್ರಿ, ಟ್ರೈನ್ನ್​​ ಮ್ಯಾನ್​​ ಮತ್ತು ಕನ್ಫರ್ಮ್ಟಿಕೆಟ್ ಪ್ರಮುಖ ಆ್ಯಪ್​​ ಗಳಾಗಿವೆ.