ಬಾರೋ ಸಾಧನ ಕೇರಿಯತ್ತ..

ಚೈತ್ರ.ಎನ್​​

ಬಾರೋ ಸಾಧನ ಕೇರಿಯತ್ತ..

Tuesday November 03, 2015,

3 min Read

ಸರಸವೇ ಜೀವನ, ವಿರಸವೇ ಮರಣ, ಸಮರಸವೇ ಜೀವನ ಎನ್ನುತ್ತಾ ಬದುಕಿನ ಬೇವು ಬೆಲ್ಲವನ್ನು ತೆರೆದಿಟ್ಟ ಯುಗದ ಕವಿ, ಜಗದ ಕವಿ, ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ನಮ್ಮ ಹೆಮ್ಮೆಯ ದ.ರಾ. ಬೇಂದ್ರೆ. ಮೂಡಲ ಮನೆಯ ಮುತ್ತಿನ ತೋರಣದ ಕನ್ನಡದ ಮುತ್ತು. ಜ್ಞಾನ ಪೀಠದ ಮಾಣಿಕ್ಯ ರತ್ನ. ಬೇಂದ್ರೆಯವರು ಜನವರಿ 31, 1896 ರಲ್ಲಿ ಧಾರಾವಾಡದಲ್ಲಿ ಜನಿಸಿದರು. ಬೇಂದ್ರೆಯವರ ಸಾಹಿತ್ಯದ ಒಡಲಾಳದಲ್ಲಿ ಧಾರಾವಾಡದ ಕಂಪು ಪಸರಿಸಿಕೊಂಡಿದೆ. ಅಲ್ಲಿನ ಬೀದಿ ಬೀದಿಗಳಲ್ಲಿ ಇಂದಿಗೂ ಬೇಂದ್ರೆಯವರ ಸಾಹಿತ್ಯದ ಸೊಗಡು ಘಮಿಸುತ್ತವೆ. ನವೋದಯ ಕಾಲದಲ್ಲಿ ಸಾಹಿತ್ಯ ಲೋಕದಲ್ಲಿ ಹೊಸ ಹಾದಿಯನ್ನು ತೆರೆದಿಟ್ಟ ವರಕವಿ ಬೇಂದ್ರೆಯವರು ಬಾಲ್ಯದಿಂದಲೂ ಪಠ್ಯದ ಮೂಲಕ ನಮ್ಮೆಲ್ಲರಿಗೂ ಚಿರಪರಿಚಿತ. ಅವರ ಒಂದೊಂದು ಕವಿತೆಗಳು, ಕಾವ್ಯಗಳನ್ನು ಓದುವಾಗ ಹೊಸ ಪುಳಕ ಕುತೂಹಲದ ತಿಲ್ಲಾನ. ಬಾರೋ ಸಾಧನಕೇರಿಗೆ ಅನ್ನುತ್ತಾ ಧಾರಾವಾಡದ ಮಣ್ಣಿನ ಕಂಪನು ಇಡೀ ಭಾರತಕ್ಕೆ ಹರಡಿದರು. ಪಂಪನಿಗೆ ಬನವಾಸಿ ಹೇಗೋ ಬೇಂದ್ರೆಯವರಿಗೆ ಧಾರಾವಾಡ ಹಾಗೇಯೇ.!

image


ವಿಧಿಯನ್ನು ಬಹಳವಾಗಿ ನಂಬುತ್ತಿದ್ದ ಬೇಂದೆಯವರು ಧಾರಾವಾಡದಿಂದ 16 ವರ್ಷ ದೂರವಿದ್ದರು ನಂತರ ಸಾಧನ ಕೇರಿಗೆ ಮರಳಿ ಬಂದರು. ಇದೆಲ್ಲವನ್ನು ವಿಧಿ ನಿಯಮ ಎಂದರು. ರಾಮಚಂದ್ರ ಬೇಂದ್ರೆ ತಂದೆ, ಅಂಬವ ತಾಯಿ. ಅಂಬಿಕೆಯ ತನಯ ನಾನು ದತ್ತ ಎಂಬ ಅರ್ಥದಲ್ಲಿ "ಅಂಬಿಕಾತನಯದತ್ತ" ಎಂಬ ಕಾವ್ಯನಾಮ ಇರಿಸಿಕೊಂಡರು. ಕರ್ನಾಟಕದ ಕುಲ ತಿಲಕ ಬೇಂದ್ರೆಯವರು 12 ನೇ ವಯಸಿನಲ್ಲೇ ತಂದೆಯನ್ನು ಕಳೆದುಕೊಂಡರು. ನಂತರ ಮಾವನ ಸಹಾಯದಿಂದ ವಿದ್ಯಾಭ್ಯಾಸ ಪೂರ್ತಿ ಮಾಡಿದರು. ಪ್ರಾಥಮಿಕ ಶಿಕ್ಷಣಕ್ಕಾಗಿ ಬಾಲ್ಯವನ್ನು ಧಾರಾವಾಡದಲ್ಲೆ ಕಳೆದರು. ಪುಣೆಯಲ್ಲಿ ಪದವಿ ಪೂರೈಸಿದರು. ಗದಗಿನಲ್ಲಿ ಮುಖ್ಯೋಪಾಧ್ಯಯರಾದರು. ನಂತರ ವಿಕ್ಟೋರಿಯಾದಲ್ಲಿ ಪ್ರಾಧ್ಯಾಪಕರಾದರು. 1919ರಲ್ಲಿ ಹುಬ್ಬಳ್ಳಿಯಲ್ಲಿ ಲಕ್ಷೀಬಾಯಿಯನ್ನು ಮದುವೆಯಾದರು,

ಆಕಾಶವಾಣಿಗೆ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1922 ರಲ್ಲಿ ಸಾಹಿತ್ಯ ಆಸಕ್ತರೆಲ್ಲಾ ಒಟ್ಟಿಗೆ ಸೇರಿ ರೂಪಿಸಿದ "ಗೆಳೆಯರ ಗುಂಪು" ಇಂದಿಗೂ ಸಾಹಿತ್ಯಸಕ್ತರನ್ನು ಒಟ್ಟು ಮಾಡುತ್ತಲೇ ಇದೆ. ದಸರಾ ಸಮಯದಲ್ಲಿ ನಾಡಹಬ್ಬ ಎನ್ನುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬವನ್ನು ಆರಂಭಿಸಿದರು ಬೇಂದ್ರೆ. ಪದ್ಯಗಳ ಪಿತಾಮಹ ಅಂತಲೇ ಕರೆಯುತ್ತಿದ್ದ ಬೇಂದ್ರೆಯವರ ಕವನಗಳಲ್ಲಿ ಕನ್ನಡದ ನೆಲ , ಪ್ರಕೃತಿ, ಬದುಕಿನ ಸಾರಾ, ದಾಂಪತ್ಯದ ಗುಟ್ಟು, ಎಲ್ಲವೂ ಮನೆ ಮಾಡಿತ್ತು. 1918 ರಲ್ಲಿ ಮೊದಲ ಕವನ ಪ್ರತಾಪ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದ ಅವರ ಕಾವ್ಯ ಕುಸುರಿ ಮುಂದುವರೆಯುತ್ತಲೇ ಹೋಯಿತು. ಕೃಷ್ಣಕುಮಾರಿ, ಗರಿ, ಉಯ್ಯಾಲೆ, ನಾದಲೀಲೆ,ಗಂಗಾವತರಣ, ಮುಗಿಲ ಮಲ್ಲಿಗೆ, ನಾಕುತಂತಿ ಹೀಗೆ ಹಲವಾರು ಪ್ರಸಿದ್ಧ ಕಾವ್ಯಗಳು, ಹಲವಾರು ನಾಟಕಗಳು, ಸಾಹಿತ್ಯ ವಿಮರ್ಶೆ, ಅನುವಾದವನನ್ನು ಕೊಡುಗೆಯಾಗಿ ನೀಡಿದ್ದಾರೆ.

ಬೇಂದೆಯವರಿಗೆ ಜ್ಞಾನಪೀಠ ಹೊತ್ತು ತಂದ ನಾಕುತಂತಿ ಆಧ್ಯಾತ್ಮಿಕ ವಲಯದ ನಿಗೂಢ ಕಾವ್ಯ. ಸಮಸ್ತ ಸೃಷ್ಠಿಯೇ ವಿರಾಗಿಯ ವೀಣೆ. ಆ ವೀಣೆಯ 4 ತಂತಿಗಳೇ ನಾನು ಪುರುಷ, ನೀನು ಆಂದರೆ ಸ್ತ್ರೀ. ಈ ಇಬ್ಬರ ಸಂತಾನವೇ ಆನು ಎಂಬ ತತ್ವ. ಇದೆಲ್ಲದಕ್ಕೂ ಆಧಾರವಾಗಿರುವುದೇ ಪರಾತ್ಮಕ ಶಕ್ತಿಯಾಗಿರುವ ತಾನು. ವಿರಾಟವೆಂಬ ವೀಣೆಯಿಂದಲೇ ಈ ವಿಶ್ವ ವಿಕಸನಗೊಂಡಿದೆ ಎಂಬುದು ಬೇಂದ್ರೆಯವರ ಆಧ್ಯಾತ್ಮಿಕ ದರ್ಶನ.

ಡೈವೋರ್ಸ್‍ಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಸುಖಿ ದಾಂಪತ್ಯಕ್ಕೆ ಮುಖ್ಯವಾಗಿ ಏನಿರಬೇಕು ಎನ್ನುವುದನ್ನು ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು. ಪ್ರೀತಿ ಇದ್ದರೇ ಮತ್ಯಾವೂದು ಮುಖ್ಯವಲ್ಲ ಅಂತಾರೆ ಬೇಂದ್ರೆ. ದಾಂಪತ್ಯಕ್ಕೆ ಬೇಂದ್ರೆಯವರು ನೀಡುತ್ತಿದ್ದ ಮಹತ್ವವನ್ನು ಹಿರಿಯ ಸಂಶೋಧಕರಾದ ಹಂಪ ನಾಗರಾಜಯ್ಯರವರು ಟಿವಿ ಶೋವೊಂದರಲ್ಲಿ ಹೀಗೆ ಹೇಳುತ್ತಾರೆ "ಆಗ ತಾನೇ ನನಗೆ ಮದುವೆಯಾಗಿತ್ತು, ನಾನು ನನ್ನ ಪತ್ನಿ ಕಮಲ ಧಾರಾವಾಡದಿಂದ ಬೆಂಗಳೂರಿಗೆ ಬರುತ್ತಿದ್ದೆವು, ಆ ಸಮಯದಲ್ಲಿ ನಮ್ಮ ಜೊತೆಗೆ ಬೇಂದ್ರೆಯವರು ಬಂದರು. ಈಡೀ ರಾತ್ರಿ ದಾಂಪತ್ಯ ಅಂದ್ರೆ ಹೇಗಿರಬೇಕು ಅನ್ನೊದನ್ನು ತಿಳಿಸಿಕೊಟ್ಟರು. ಭರತೇಶ ವೈಭವದ ಕಡೆಯ ಅಧ್ಯಾಯನದ ಸಂಧಿಯನ್ನು ನೀವಿಬ್ಬರು ತಪ್ಪದೇ ಓದಬೇಕು ಅದರಲ್ಲಿ ಯಶಸ್ವಿ ದಾಂಪತ್ಯದ ಗುಟ್ಟಿದೆ" ಎಂದು ಹೇಳಿದ್ದರು ಎಂದು ನೆನೆಸಿಕೊಳ್ಳುತ್ತಾರೆ.

image


ಇನ್ನು ಬೇಂದ್ರೆಯವರು ಇತ್ತೀಚಿನ ದಿನಗಳಲ್ಲಿ ಇಂದಿನ ಯುವಪೀಳಿಗೆಗೆ ಹೆಚ್ಚು ಹತ್ತಿರವಾಗುತ್ತಿರುವುದು ಅವರ ಭಾವಗೀತೆಗಳಿಂದ. ಅವರ ಹಾಡುಗಳನ್ನು ಪದೇ ಪದೇ ಗುನುಗುವಂತೆ ಮಾಡಿದೆ. "ಒಂದೇ ಬಾರಿ ಹಾಂಗ ನೋಡಿ ಚೆಂದ ನಗೆ ಹಾಂಗ ಬೀರಿ ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ..." ಹಾಡು ಟೀನೆಜ್‍ನ ಪ್ರತಿ ಹೆಣ್ಣಿನ ಕ್ರಶ್‍ಗಳ ಪ್ರತಿರೂಪವಾಗಿ ಅರ್ಥಪೂರ್ಣವಾಗಿ ಭಾವಾಭಿವ್ಯಕ್ತವಾಗುತ್ತದೆ.

"ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತಾ ಆಗ ಸಂಜೆ ಆಗಿತ್ತಾ...."ಎಂದು ಹಾಡುತ್ತಾ ಮುಸ್ಸಂಜೆಗೂ ಶೃಂಗಾರದ ರಸವನ್ನು ಲೇಪಿಸುತ್ತಾರೆ. ಅಲ್ಲಿ ಹೆಣ್ಣೊಬ್ಬಳ ವಿರಹದ ಬೇಗೆಯನ್ನು ಅತ್ಯಂತ ಗಟ್ಟಿಯಾಗಿ ಮುಜುಗರವಾಗದಂತೆ ತೀವ್ರತೆಯನ್ನು ವ್ಯಕ್ತಪಡಿಸುತ್ತಾರೆ. ಇಂದಿಗೂ ಅದೊಂದು ಯುಗಳ ಗೀತೆಯಾಗಿದೆ. ಅಲ್ಲದೇ ಇಂದಿಗೂ ಅದೆಷ್ಟೋ ಸಾಹಿತ್ಯ ಪ್ರಿಯರ, ನಾಟಕಾಸಕ್ತಿಯ ವಿದ್ಯಾರ್ಥಿಗಳ ಕಾಲರ್ ಟ್ಯೂನ್ ಆಗಿದೆ.

"ನೀ ಹಿಂಗಾ ನೋಡಬ್ಯಾಡ ನನ್ನ, ನೀ ಹಿಂಗಾ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ" ಇಂದಿಗೂ ಕಂಬನಿ ಹೊತ್ತು ತರುವ ಈ ಹಾಡು ಬೇಂದ್ರೆಯವರ ಬದುಕಿನ ದೊಡ್ಡ ಆಘಾತವನ್ನೆ ಬಿಂಬಿಸುತ್ತದೆ. ಬೇಂದ್ರೆಯವರು ಪುತ್ರನನ್ನು ಕಳೆದುಕೊಂಡ ಸಮಯದಲ್ಲಿ ಅವರ ಹೆಂಡತಿಯ ನೋಟವನ್ನು ಎದುರಿಸಲಾರದೇ ಅದನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ ಆ ಹಿರಿಯ ಜೀವ ಸಾಹಿತ್ಯವನ್ನು ಅದೆಷ್ಟು ಜೀವಿಸಿಬಿಟ್ಟಿದ್ದರು ಎಂದು ಮನ ಚಿಂತಿಸುತ್ತದೆ.

image


"ಕುರುಡು ಕಾಂಚಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು" ಹಾಡು ಸಿರಿವಂತರ ಸೊಕ್ಕಿನ ಬಡವರ ರೋಧನೆಯ ಅನಾವರಣದ ಈ ಭಾವಗೀತೆ ಇಂದಿಗೂ ಪ್ರಸ್ತುತ.

"ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ ವಾರಕ್ಕೆ ಮೂರು ಸಾರಿ ಬಂದು ಹೋದವ?" ಹಾಡು ಇಂದಿಗೂ ಹೆಣ್ಣು ನೋಡಿಕೊಂಡು ಹೋದ ಹುಡುಗಿಯನ್ನು ಛೇಡಿಸಲು ಹಾಡುವುದು ಉಂಟು.

ಇನ್ನು ಶ್ರಾವಣ ಮಾಸದ ವರ್ಣನೆಯ ಆರ್ಭಟಕ್ಕೆಸಾಹಿತ್ಯ ಪ್ರಿಯರು ಕರಗಿ ಹೋಗಿದ್ದಾರೆ. "ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ. ಶ್ರಾವಣ ಕುಣಿದಾಂಗ ರಾವಣ". ಹುಬ್ಬಳ್ಳಿಯ ಪ್ರಕೃತಿ ಅಲ್ಲಿ ನಿತ್ಯ ಮನೆ ಮಾಡಿತ್ತು.

"ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ" ಹಾಡು ಇಂದಿಗೂ ಬೆಳ್ಳಿಮೋಡದ ಚಿತ್ರದ ಜೊತೆ ಜೊತೆಗೆ ಸಾಗುತ್ತದೆ.

"ಇಳಿದು ಬಾ ತಾಯಿ ಇಳಿದು ಬಾ" ಎಂದು ಗಂಗೆಯನ್ನು ಬೇಂದ್ರೆವರು ಕರೆದ ಪರಿ ಇಂದಿಗೂ ಹರಿಯುತ್ತಲೇ ಇದೆ.

ಕನ್ನಡದ ಯುಗದ ಕವಿ ಜಗದ ಕವಿಗೆ ಬೇಂದ್ರೆ ಮಾಸ್ತರಿಗೆ ನಮ್ಮ ವಿಶ್ವದ ಸಾಹಿತ್ಯ ಪ್ರೇಮಿಗಳ ಪ್ರೀತಿಯ ನಮಸ್ಕಾರ!

    Share on
    close