ಭಾರತದ ತ್ಯಾಜ್ಯ ನಿರ್ವಹಣಾ ಸಮಸ್ಯೆಯನ್ನು ಪರಿಹರಿಸಬಲ್ಲದು ಹುಬ್ಬಳ್ಳಿಯ ಈ ಸಾಧನ

ನೆಲದೊಳಗೆ ಇಡಲಾಗಿರುವ ಕಸದ ಡಬ್ಬಿಯನ್ನು ಎತ್ತಿ ಮಾನವರ ಹಸ್ತಕ್ಷೇಪವಿಲ್ಲದೆಯೆ ಕಸವನ್ನು ನಿರ್ವಹಣೆ ಮಾಡುತ್ತದೆ ಹುಬ್ಬಳ್ಳಿಯ ವಿಶ್ವನಾಥ ಪಾಟೀಲ್‌ ಅವರ ಸಾಧನ.

ಭಾರತದ ತ್ಯಾಜ್ಯ ನಿರ್ವಹಣಾ ಸಮಸ್ಯೆಯನ್ನು ಪರಿಹರಿಸಬಲ್ಲದು ಹುಬ್ಬಳ್ಳಿಯ ಈ ಸಾಧನ

Wednesday February 03, 2021,

1 min Read

ದೇಶದಲ್ಲಿ ಬೆಳೆಯುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯ ನಿರ್ವಹಣೆಯು ಒಂದು. ತ್ಯಾಜ್ಯ ಭೂಮಿ ಸೇರಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಹುಬ್ಬಳ್ಳಿಯ ವಿಶ್ವನಾಥ ಪಾಟೀಲ ಎನ್ನುವವರು ಕಸದ ಡಬ್ಬಿಗೆ ಸಂಪರ್ಕಿಸಲಾಗಿರುವ ಅನನ್ಯವಾದ ವಿಲೇವಾರಿ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ.


ಸ್ವಚ್ಛ ಸ್ವಸ್ಥ ಎಂಬ ಟ್ರಸ್ಟ್‌ ನಡೆಸುವ ವಿಶ್ವನಾಥ ಪಾಟೀಲ್‌ ಸ್ವಯಂಚಾಲಿತ ವಾಹನ ಬಳಸಿ ನೆಲದಲ್ಲಿ ಕಸದ ಡಬ್ಬಿ ಇಡುವ ವಿಶಿಷ್ಟ ದಾರಿಯನ್ನು ಕಂಡುಕೊಂಡಿದ್ದಾರೆ.


“ನಾನು ಕಸದ ಡಬ್ಬಿ ಇರುವ ಸ್ವಯಂಚಾಲಿತ ವಾಹನವನ್ನು ತಯಾರಿಸಿದ್ದೇನೆ, ಅದು ಸೋರುವುದಿಲ್ಲ. ಹೊರಗಡೆಯಿಂದ ನೋಡಿದರೆ ಕಸ ಕಾಣದಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ,”ಎಂದು ವಿಶ್ವನಾಥ ಎಎನ್‌ಐಗೆ ತಿಳಿಸಿದರು.

ಲಾಜಿಕಲ್‌ ಇಂಡಿಯನ್‌ ಪ್ರಕಾರ, ವಿಶೇಷವಾದ ಸಂವೇದಕಗಳನ್ನು ಅಳವಡಿಸಿರುವ ಈ ಕಸದ ಡಬ್ಬಿಗಳು ಕಣ್ಣಿಗೆ ಬೀಳದೆ ತ್ಯಾಜ್ಯವನ್ನು ಸಂಗ್ರಹಿಸುತ್ತವೆ. ಕಸದಿಂದ ಡಬ್ಬಿ 70 ಪ್ರತಿಶತ ತುಂಬಿದರೆ ಅಧಿಕಾರಿಗಳಿಗೆ ಸೂಚನೆ ನೀಡಿ ಎಚ್ಚರಿಸುತ್ತದೆ. ಇದರಿಂದ ಹೆಚ್ಚಿನ ತ್ಯಾಜ್ಯ ಡಬ್ಬಿಯಲ್ಲಿ ಶೇಖರಣೆಗೊಳ್ಳುವುದು ತಪ್ಪುತ್ತದೆ.


“ಈ ಕಸದ ಡಬ್ಬಿಯ ವಿಶೇಷತೆಯೆಂದರೆ ಇವುಗಳು ತೆರೆದ ಸ್ಥಳಗಳಲ್ಲಿ ಕಸ ಎಸೆಯುವುದಕ್ಕೆ ಹೋಲಿಸಿದರೆ ಅತಿ ಕಡಿಮೆ ಸ್ಥಳವನ್ನು ಆಕ್ರಮಿಸುತ್ತದೆ ಮತ್ತು ಸಾಮಾನ್ಯ ಡಬ್ಬಿಗಳಿಗಿಂತ ಹೆಚ್ಚಿಗೆ ಕಸವನ್ನು ಶೇಖರಿಸಿಕೊಳ್ಳುತ್ತವೆ,” ಎನ್ನುತ್ತಾರೆ ವಿಶ್ವನಾಥ.


ನೆಲದಲ್ಲಿರುವ ಕಸದ ಡಬ್ಬಿಗಳಿಂದ ಕಸ ತೆಗೆಯುವ ಪ್ರಕ್ರಿಯೆ ಎಷ್ಟೊಂದು ಸಮರ್ಥವಾಗಿದೆಯೆಂದರೆ ಕಸ ವರ್ಗಾಯಿಸುವಾಗ ಒಂಚೂರು ಕಸ ಹೊರಗಡೆ ಬೀಳುವುದಿಲ್ಲ.


ಪಾಟೀಲ ಅವರು ಒಂದು ವ್ಯಾನ್‌ ವಿನ್ಯಾಸಗೊಳಿಸಿದ್ದು, ಅತಿ ಕನಿಷ್ಟ ಮಾನವ ಸಂಪರ್ಕದೊಂದಿಗೆ ಕಸವನ್ನು ವರ್ಗಾಯಿಸಬಹುದಾಗಿದೆ.


ಭಾರತದಲ್ಲಿ ದಿನೇ ದಿನೇ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಬೆಂಗಳೂರನ್ನು ಗಾರ್ಬೆಜ್‌ ಸಿಟಿ ಎಂದು ಕರೆಯುವ ಮಟ್ಟಿಗೆ ಸಮಸ್ಯೆ ಆಳಕ್ಕಿಳಿದಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಲೆಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.


ಬೆಂಗಳೂರಿನ ನವೋದ್ಯಮವೊಂದು ಇದೇ ನಿಟ್ಟಿನಲ್ಲಿ ಜಲೋಬ್‌ದಸ್ತ್‌ ಎಂಬ ಯಂತ್ರದೊಂದಿಗೆ ಮಲಹೊರುವ ಪದ್ಧತಿಗೆ ವಿದಾಯ ಹೇಳಲು ಪ್ರಯತ್ನಿಸುತ್ತಿದೆ.