ಸದ್ದಿಲ್ಲದೆ ಮೊಳಗುತಿದೆ ಕನ್ನಡದ “ಕಹಳೆ”

ಸಮಾನ ಮನಸ್ಕರೆಲ್ಲರೂ ಸೇರಿ ಸಾಹಿತ್ಯಕ್ಕಾಗಿ ಕಹಳೆ ಎಂಬ ಹೆಸರಿನ ಗುಂಪನ್ನು ಕಟ್ಟಿ, ಡಿಜಿಟಲ್ ತಂತ್ರಜ್ಞಾನದ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಸಾರುವಲ್ಲಿ ಸಕ್ರೀಯರಾಗಿದ್ದಾರೆ. ಇದರ ಮೂಲಕ ಎಲ್ಲರಿಗೂ ಸಾಹಿತ್ಯದ ಕುರಿತಾಗಿ ಆಸಕ್ತಿ ಮೂಡಿಸುತ್ತಿದ್ದಾರೆ.

ಸದ್ದಿಲ್ಲದೆ ಮೊಳಗುತಿದೆ ಕನ್ನಡದ “ಕಹಳೆ”

Friday November 01, 2019,

3 min Read

ಎಲ್ಲ ಸಾಹಿತ್ಯಭಿಮಾನಿಗಳು, ಓದುಗರು ಒಂದೆಡೆ ಸೇರಿ ಸದ್ದಿಲ್ಲದೆ ಕಹಳೆಯನ್ನು ಕಟ್ಟಿ ಅದರಿಂದ ಮತ್ತಷ್ಟು ಕನ್ನಡದ ಕಂಪನ್ನು ಸೂಸುವಂತೆ ಮಾಡುತ್ತಿದ್ದಾರೆ. ಸಮಾನ ಮನಸ್ಕರು ಒಂದೆಡೆ ಸೇರಿದರೆ ಏನಾದರೂ ಮಾಡಬಹುದು ಎಂಬುದಕ್ಕೆ ಈ “ಕಹಳೆ” ತಂಡವೇ ಸಾಕ್ಷಿಯಾಗಿದೆ.


ಇಲ್ಲಿರುವ ಎಲ್ಲರು ಇಂಜನೀಯರಿಂಗ್, ಬ್ಯೂಸಿನೆಸ್ ಹೀಗೆ ಬೇರೆ ಬೇರೆ ಕ್ಷೇತ್ರಕ್ಕೆ ಸೇರಿದರೂ ಕೂಡ ಸಾಹಿತ್ಯ ಹಾಗೂ ಕನ್ನಡದ ಪ್ರೀತಿಯೊಂದು ಇವರನ್ನು ಒಂದೆಡೆ ಕಲೆಯುವಂತೆ ಮಾಡಿದೆ. ಎರಡು ವರ್ಷಗಳ ಹಿಂದೆ ಶುರುವಾದ ಕಹಳೆ ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ.


q

ಕಹಳೆಯ ಸಂಸ್ಥಾಪಕರಾದ ವಿನಯಕುಮಾರ್ ಸಜ್ಜನರ್

2016 ರಲ್ಲಿ ಫೇಸ್ ಬುಕ್ ನಲ್ಲಿ ಕವಿತೆ ವಾಚನ ಪೋಸ್ಟ್ ನೋಡಿ ಕವನ ವಾಚನ ಮಾಡೋದಕ್ಕೆ ಹೋದಾಗ ಅಲ್ಲಿ ಕನ್ನಡ ಕವಿತೆ ಓದಲು ಅವಕಾಶ ಕೊಡದಿದ್ದಾಗ ಸಿಟ್ಟಿನಿಂದ ಕನ್ನಡಿಗರಿಗೂ ಇಂತಹ ವೇದಿಕೆಗಳು ದೊರಕಬೇಕೆಂದು ಸಮಾನ ಮನಸ್ಕರು ಸೇರಿ ಜಗುಲಿ ಸಾಲು ಎಂಬುದನ್ನು ರೂಪಿಸಿ ಕಹಳೆ ತಂಡ ಕಟ್ಟಿದ್ದು, ಈಗ ಅದು ಇಲ್ಲಿಯವರೆಗೂ ಬಂದು ನಿಂತಿದೆ ಎನ್ನುತ್ತಾರೆ ವಿನಯ್‌ಕುಮಾರ್.


ಬರೆದಂತಹ ಕವಿತೆಗಳನ್ನು ಓದುವ ಖುಷಿಯೇ ಬೇರೆ, ಅದನ್ನು ಕೇಳೊದಕ್ಕೆ ಒಂದಷ್ಟು ಕಿವಿಗಳಿದ್ರೆ ಮತ್ತಷ್ಟು ಚೆಂದ. ಅದಕ್ಕೆಂದೆ ಕಹಳೆಯು ರೂಪಿಸಿದ ವೇದಿಕೆಯೆ ‘ಕವನ ವಾಚನ ಕಾರ್ಯಕ್ರಮ’ವಾದ ‘ಜಗುಲಿ ಸಾಲು’ ಬೆಂಗಳೂರಿನ ಅಟ್ಟಾ ಗಲಾಟದಲ್ಲಿ ಕವನ ವಾಚನ ಕಾರ್ಯಕ್ರಮಗಳು ನಡೆದಿವೆ. ಸುಮಾರು ೫೦೦ಕ್ಕೂ ಹೆಚ್ಚು ಜನರು ಕವಿತೆಗಳನ್ನು ಹಂಚಿಕೊಂಡಿದ್ದಾರೆ.


ದೂರದೂರಿನಿಂದ ಬಂದು ಕಹಳೆ ಕಟ್ಟೆಯಲ್ಲಿ ಕವನ ವಾಚನ ಮಾಡಲಾಗುವುದಿಲ್ಲ ಎಂಬ ಕೊರಗಿನವರಿಗೆಂದೇ ‘ಆನ್‌ಲೈನ್ ಕವನ ವಾಚನ’ ಕಾರ್ಯಕ್ರಮ ರೂಪವಾಯಿತು. ಇಲ್ಲಿ ಕವನ ವಾಚನದ ಸುಮಾರು 200 ಕ್ಕೂ ಹೆಚ್ಚು ವಿಡಿಯೋಗಳು ಕಹಳೆ ಫೇಸ್ಬುಕ್ ಪುಟದಲ್ಲಿ ಪ್ರಕಟವಾಗಿವೆ. ದುಬೈ, ಸ್ಪೇನ್, ಅಮೇರಿಕಾ, ಆಫ್ರಿಕಾ ಹೀಗೆ ಬೇರೆ ದೇಶಗಳಿಂದ ಸಾಹಿತ್ಯಾಭಿಮಾನಿಗಳು ಇದರಲ್ಲಿ ಭಾಗವಹಿಸಿದ್ದು, ಕನ್ನಡಿಗರು ಹೀಗೆ ಎಲ್ಲೆಡೆ ಹರಡಿದ್ದಾರೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿ.

ಕಹಳೆ ಬ್ಲಾಗ್

ಕಹಳೆಯು ಇಷ್ಟಕ್ಕೆ ಸುಮ್ಮನಾಗದೇ ಹೊಸ ಬರಹಗಾರರಿಗೆ ವೇದಿಕೆಯಾಗಬೇಕೆಂದು ರೂಪಿಸಿದ ತಾಣವೇ ಕಹಳೆ ಬ್ಲಾಗ್. ಇಲ್ಲಿ ಕವಿತೆಗಳು, ಲೇಖನಗಳು, ಪ್ರವಾಸ ಕಥನ, ಕಥೆ, ಕಾದಂಬರಿ ಅಲ್ಲದೆ ಸಾಹಿತ್ಯದ ವಿವಿಧ ಮಜಲುಗಳ ಅನಾವರಣವಿದೆ. ಇವರೆಗೆ ನೂರಕ್ಕೂ ಹೆಚ್ಚು ಲೇಖಕರು, ಕವಿಗಳು ಕಹಳೆಯ ಬ್ಲಾಗ್‌ಲ್ಲಿ ಬರವಣಿಗೆ ಛಾಪನ್ನು ಮೂಡಿಸಿದ್ದಾರೆ. ಅಲ್ಲದೇ ಇಲ್ಲಿಯ ತನಕ 8000 ಕ್ಕೂ ಹೆಚ್ಚು ಜನರು ಬ್ಲಾಗ್‌ಗೆ ಭೇಟಿ ಕೊಟ್ಟಿದ್ದು ಖುಷಿಯ ಸಂಗತಿ ಎಂದು ಕಹಳೆಯ ಮುಖ್ಯ ನಿರ್ವಾಹಕ ವಿನಯ್‌ಕುಮಾರ್ ಹೇಳುತ್ತಾರೆ.


ಕಹಳೆ ಕಟ್ಟೆ

q

ಕಹಳೆ ಕಟ್ಟೆಯ ಕಾರ್ಯಕ್ರಮದಲ್ಲಿ ಲೇಖಕ ವಸುಧೇಂದ್ರ

ಅಷ್ಟೇ ಅಲ್ಲದೆ, ಸಾಹಿತ್ಯ ಸೂಕ್ಷ್ಮ ಗಳನ್ನು ಅರಿಯುವ ಪ್ರಯತ್ನವಾಗಿ ಅದನ್ನು ಹೊಸ ತಲೆಮಾರಿಗೆ ದಾಟಿಸುವುದಕ್ಕಾಗಿ ರೂಪುಗೊಂಡ ಕಾರ್ಯಕ್ರಮವೇ ‘ಕಹಳೆ ಕಟ್ಟೆ’. ಇಲ್ಲಿ ಪ್ರಸಿದ್ಧ ಲೇಖಕರನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ಕೊಡಿಸುವುದು ಇದರ ಪ್ರಮುಖ ಉದ್ದೇಶ. ಈವೆರೆಗೂ ವಸುಧೇಂದ್ರ, ಜೋಗಿ, ಎಂ.ಆರ್.ಕಮಲಾ, ಕೆ.ಎನ್.ಗಣೇಶಯ್ಯ ಅವರು ಇದರಲ್ಲಿ ಪಾಲ್ಗೊಂಡು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.


ತಲೆಮಾರು

ಹಾಗೇಯೇ ಹಳೆಯ ತಲೆಮಾರಿನ ಕವಿತೆಯನ್ನು ಹೊಸ ತಲೆಮಾರಿಗೆ ದಾಟಿಸುವುದಕ್ಕಾಗಿ ಮಾಡಿದ ಪುಟ್ಟ ಪ್ರಯತ್ನವೇ “ತಲೆಮಾರು”. ಇಲ್ಲಿ ಯುವಕವಿಗಳು ಹಳೇ ತಲೆಮಾರಿನ ಕವಿಗಳ ಕವಿತೆಗಳನ್ನು ಓದಿ ಅವುಗಳನ್ನು ವಿಡಿಯೋ ಮಾಡುತ್ತಾರೆ. ಅವು ಕಹಳೆ ಫೇಸ್ಬುಕ್ ಪುಟದಲ್ಲಿ ಪ್ರಕಟವಾಗುತ್ತವೆ. ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಕುವೆಂಪು, ರಾಮಾನುಜನ್ ಹೀಗೆ ಹಲವು ಕವಿಗಳ 20 ಕ್ಕೂ ಹೆಚ್ಚು ಇಂತಹ ವಿಡಿಯೋ ಸರಣಿಗಳು ಹೊರಬಂದಿವೆ.


ಪುಸ್ತಕಗಳನ್ನು ಓದುವವರಿಲ್ಲ ಎನ್ನುತ್ತಿರುವ ಈ ಕಾಲಘಟ್ಟದಲ್ಲಿ ಪುಸ್ತಕ ಪ್ರೇಮಿಗಳಿಗೆ ಹೊಸ ಪುಸ್ತಕವನ್ನು ಪರಿಚಯಿಸುವುದು. ತಾವು ಓದಿದ ಪುಸ್ತಕದ ಬಗ್ಗೆ ಬರೆದು ಅಥವಾ ವಿಡಿಯೋ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ವೇದಿಕೆಯಾಗಿದ್ದು, ಪುಸ್ತಕ ಪ್ರೀತಿ ಎಂಬ ಯೋಜನೆ. ಇಲ್ಲಿಯವರೆಗೂ ಅನೇಕ ಪುಸ್ತಕದ ಕುರಿತ ವಿಡಿಯೋಗಳು ಹಾಗೂ ಬರಹಗಳು ಕಹಳೆ ಪುಟದಲ್ಲಿ ಪ್ರಕಟಗೊಂಡಿವೆ.


ಪುಟಸೂಚಕ

ಪುಸ್ತಕ ಓದುವಾಗ ಪುಟ ಮರೆತು ಹೋದರೆ ಎಂಬ ಪರಿಕಲ್ಪನೆ ಬಂದಾಗ ಕನ್ನಡದ್ದೆ ಪುಟಸೂಚಕ ಮಾಡುವ ಯೋಚನೆಯೊಂದು ತಲೆಯಲ್ಲಿ ಬಂದಾಗ, ಕನ್ನಡ ಲೇಖಕರ ಭಾವಚಿತ್ರ ಹಾಗೂ ಅವರು ಬರೆದ ಸಾಲುಗಳ ಪುಟಸೂಚಕಗಳು ಕಹಳೆಯಿಂದ ರೂಪುಗೊಂಡವು.


ಇತರ ಯೋಜನೆಗಳು

ಕಹಳೆ ತಂಡವು ಒಂದು ಪದ ಅಥವಾ ವಿಷಯವನ್ನಿಟ್ಟುಕೊಂಡು ಕವಿತೆ ರಚಿಸಬೇಕಾದ ‘ಪದ-ಪಲ್ಲಕ್ಕಿ’ ಎಂಬ ಯೋಜನೆ, ಪ್ರಕಾಶನದ ಬಗ್ಗೆ ಸರಿಯಾಗಿ ತಿಳಿಯಲು ಪ್ರಕಾಶಕರೊಂದಿಗೆ ಮಾತು-ಕಥೆ ಏರ್ಪಡಿಸಿದ್ದಲ್ಲದೆ ವಿನಯ್ ಅವರು ಕನ್ನಡಕ್ಕಾಗಿ ಹಾಗೂ ಸಾಹಿತ್ಯಕ್ಕಾಗಿ ಅನೇಕ ಯೋಜನೆಗಳನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಜಾರಿ ಮಾಡಬೇಕಿದೆ ಎನ್ನುತ್ತಾರೆ.


“ಇಂದು ಕರ್ನಾಟಕ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ನಮ್ಮ ಕಾರ್ಯಕ್ರಮಗಳಿಗೆ ಪ್ರತಿಕ್ರಿಯೆ ಬರುತ್ತಿರುವುದು ನಮ್ಮ ಕೆಲಸಕ್ಕೆ ಹಿಡಿದ ಕೈಗನ್ನಡಿ. ಕನ್ನಡ ಭಾಷಾ ಪ್ರೀತಿಯೊಂದಿಗೆ ಸಾಹಿತ್ಯದ ಕಂಪನ್ನು ಎಲ್ಲಡೆ ಹರಡುವುದು ಕಹಳೆಯ ಬಹುಮುಖ್ಯ ಉದ್ದೇಶ.”


ಇದು ಕೇವಲ ಒಬ್ಬಿಬ್ಬರದಲ್ಲ, ಇದೊಂದು ತಂಡವಾಗಿ ರೂಪುಗೊಂಡಿದ್ದು ಕ್ರಿಯೇಟಿವ್ ಹೆಡ್ ಹಾಗೂ ಸಂಸ್ಥಾಪಕರಾದ ವಿನಯ್‌ಕುಮಾರ್ ಸಜ್ಜನರ್, ಕಟೆಂಟ್ ಹೆಡ್ ಆಗಿ ಅಕ್ಷಯ ಹಿರೇಮಠ, ಮೀಡಿಯಾ ಆಂಡ್ ಆರ್ಟ್ ಹೆಡ್ ಆಗಿ ಬಸವರಾಜ್ ಶಿವನಾಯ್ಕರ್, ಸೋಷಿಯಲ್ ಮೀಡಿಯಾ ಹೆಡ್ ಆಗಿ ಪ್ರವೀಣಕುಮಾರ್ ಹೂಗಾರ್, ಬ್ಲಾಗ್ ಹೆಡ್ ಆಗಿ ಸುಷ್ಮಾ ವೆಂಕಟೇಶ್, ಪುಟಸೂಚಕಗಳಿಗೆ ಚಿತ್ರ ಬಿಡಿಸುವ ಕಲಾವಿದರಾಗಿ ಕುಮಾರ್ ಸ್ಥಾವರೇಮಠ, ರಶ್ಮಿ ಹಾಗೂ ಅನ್ನಪೂರ್ಣ ಅವರು ಸ್ವಯಂಸೇವಕರಾಗಿ ಕಹಳೆಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಕಹಳೆಯ ಈ ಪುಟ್ಟ ಪ್ರಯತ್ನಕ್ಕೆ ಅಟ್ಟ ಗಲಾಟ, ನಮ್ಮ ಕರ್ನಾಟಕ ಮೆಮ್ಸ್, ಸಾವಣ್ಣ ಪಬ್ಲಿಕೇಷನ್ಸ್, ಅನೇಕ ಸಂಸ್ಥೆಗಳು ಬೆನ್ನೆಲುಬಾಗಿ ನಿಂತಿದ್ದಾರೆ.

“ಕಹಳೆಯು ಹೊಸ ಪ್ರತಿಭೆಗಳಿಗೆ ಒಂದೊಳ್ಳೆಯ ವೇದಿಕೆಯಾಗಿದ್ದು, ಮರೆಯಲ್ಲಿರುವಂತಹ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ. ಕನ್ನಡಕ್ಕಾಗಿ ಹಾಗೂ ಸಾಹಿತ್ಯಕ್ಕಾಗಿ ವೇದಿಕೆಗಳು ಕಡಿಮೆಯಾಗುತ್ತಿದ್ದು, ಈಗ ಕಹಳೆಯು ಕನ್ನಡದ ಪ್ರಮುಖ ವೇದಿಕೆಯಾಗಿ ರೂಪುಗೊಂಡಿದೆ.” ಕಹಳೆಯ ಪುಟಸೂಚಕದ ಕಲಾವಿದರಾದ ಕುಮಾರ್ ಸ್ಥಾವರೆಮಠ.