ಬೆಟ್ಟ ಗುಡ್ಡಗಳನ್ನು ದಾಟಿ, ಸ್ವತಃ ದೋಣಿ ನಡೆಸಿಕೊಂಡು ಹೋಗಿ ಮಕ್ಕಳಿಗೆ ಪಾಠ ಮಾಡುತ್ತಾರೆ ಕೇರಳದ ಈ ಶಿಕ್ಷಕಿ

ಕಳೆದ ಹದಿನಾರು ವರ್ಷಗಳಿಂದ, ಉಷಾಕುಮಾರಿ ಪ್ರತಿದಿನ ಎರಡು ಗಂಟೆಗಳ ಕಾಲ ದಕ್ಷಿಣ ಕೇರಳದ ಉಷ್ಣವಲಯದ ಗುಡ್ಡ ಪ್ರದೇಶ, ಕಾಡಿನಲ್ಲಿ ಸಂಚರಿಸಿ ಬುಡಕಟ್ಟು ಜನಾಂಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಬೆಟ್ಟ ಗುಡ್ಡಗಳನ್ನು ದಾಟಿ, ಸ್ವತಃ ದೋಣಿ ನಡೆಸಿಕೊಂಡು ಹೋಗಿ ಮಕ್ಕಳಿಗೆ ಪಾಠ ಮಾಡುತ್ತಾರೆ ಕೇರಳದ ಈ ಶಿಕ್ಷಕಿ

Tuesday August 27, 2019,

2 min Read

ಕೇರಳ ಮೂಲದ ಉಷಾಕುಮಾರಿ ದಕ್ಷಿಣ ಕೇರಳದಲ್ಲಿರುವ ಕುನ್ನತುಮಲ ಅಗಸ್ತ್ಯ ಏಕ ಅಧ್ಯಾಪಕಾ ಶಾಲೆಯಲ್ಲಿರುವ ಏಕೈಕ ಶಿಕ್ಷಕಿ. ಅರಣ್ಯ ಪ್ರದೇಶದ ಮಕ್ಕಳಿಗೆ ಶಿಕ್ಷಣವನ್ನು ತರಲು ಅವರು ತೆಗೆದುಕೊಳ್ಳುತ್ತಿರುವ ಪ್ರಯಾಣವೇ ಉಳಿದವರಿಗಿಂತ ಅವರನ್ನು ಭಿನ್ನವಾಗಿಸುತ್ತದೆ.


ಶಾಲೆ ತಲುಪಲು ತೀರದಲ್ಲಿ ದೋಣಿ ನಡೆಸಿಕೊಂಡು ಹೋಗುತ್ತಿರುವ ಶಿಕ್ಷಕಿ ಉಷಾಕುಮಾರಿ (ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್)


ಉಷಾಕುಮಾರಿಯವರ ದಿನಚರಿ ಬೆಳಿಗ್ಗೆ 7.30 ಕ್ಕೆ ಪ್ರಾರಂಭವಾಗುತ್ತದೆ. ಅಂಬೂರಿ ಗ್ರಾಮದ ನಿವಾಸಿಯಾದ ಅವರು ತಿರುವನಂತಪುರಂನ ಕುಂಬಿಕಲ್ ಕಡವುಗೆ ಪ್ರಯಾಣಿಸುತ್ತಾರೆ ಮತ್ತು ಅಲ್ಲಿಂದ ದಡಕ್ಕೆ ದೋಣಿ ಓಡಿಸಿಕೊಂಡು ಹೋಗುತ್ತಾರೆ. ನಂತರ ಅವರು ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಕಾಡಾನೆಗಳು ಮತ್ತು ಚಿರತೆಗಳನ್ನು ಹೊಂದಿರುವ ಕುನ್ನತುಮಾಲಾದ ಕಣ್ಣಿ ಬುಡಕಟ್ಟು ವಾಸಸ್ಥಳ ಪ್ರದೇಶವನ್ನು ತಲುಪುತ್ತಾರೆ.


ಇಂತಹ ದುರ್ಗಮ ದಾರಿಯಲ್ಲಿ ಸಾಗಿ ಹೋಗುವ ಉಷಾಕುಮಾರಿಯವರು ಒಂದು ದಿನವೂ ಶಾಲೆಗೆ ತಡವಾಗಿ ಹೋಗಿಲ್ಲ.


ಅವರು ಈ ಮಾರ್ಗದ ಮೂಲಕ ಎರಡು ಗಂಟೆಗಳ ಕಾಲ ಚಾರಣ ಮಾಡುತ್ತಾರೆ ಮತ್ತು ದಾರಿಯಲ್ಲಿ ತಮ್ಮ ಕೆಲವು ವಿದ್ಯಾರ್ಥಿಗಳನ್ನು ಸಮವಸ್ತ್ರದಲ್ಲಿ ಭೇಟಿಯಾಗುತ್ತಾರೆ. (ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್)


ಕಳೆದ 16 ವರ್ಷಗಳಿಂದ, ಕೇರಳದ ಅಗಸ್ತ್ಯಾರ್ಕೂಡಂ ಜೀವಗೋಳದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸುವ ಶಾಲೆಯನ್ನು ತಲುಪುವ ಅವರ ಪ್ರಯಾಣವಿದು ಎಂದು ದಿ ಹಿಂದೂ ವರದಿ ಮಾಡಿದೆ.


ಇಡೀ ಶಾಲೆಯಲ್ಲಿ ಏಕೈಕ ಶಿಕ್ಷಕರಾಗಿರುವ ಉಷಾಕುಮಾರಿ, ಗಣಿತಶಾಸ್ತ್ರ, ಭಾಷೆಗಳು ಮತ್ತು ಪರಿಸರ ಅಧ್ಯಯನಗಳಂತಹ ಎಲ್ಲಾ ವಿಷಯಗಳನ್ನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ 14 ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಶಾಲೆಯ ಕಟ್ಟಡವನ್ನು ನಿರ್ಮಿಸುವ ಮುಂಚೆ ಉಷಾಕುಮಾರಿ ತಮ್ಮ ವಿದ್ಯಾರ್ಥಿಗಳಿಗೆ ಕಲ್ಲು ಹಾಸಿಗೆಗಳು ಅಥವಾ ಮರಗಳ ಮೇಲೆ ಕಲಿಸುತ್ತಿದ್ದರು.


ಉಷಾಕುಮಾರಿ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡೆಗಳಂತಹ ಮಕ್ಕಳ ಒಟ್ಟಾರೆ ಅಭಿವೃದ್ಧಿಗಾಗಿ ಇತರ ಪಠ್ಯೇತರ ಚಟುವಟಿಕೆಗಳನ್ನು ಸಹ ಕಲಿಸುತ್ತಾರೆ.


ಅವರು ಹೇಳುತ್ತಾರೆ:


ಈ ಮಕ್ಕಳನ್ನು ಸಮರ್ಥರನ್ನಾಗಿ ಮಾಡುವುದು ಮುಖ್ಯವಾಗಿದೆ. ಇಲ್ಲಿ ಓದಿದ ನಂತರ ಅವರು ಪರ ಊರಿನಲ್ಲಿ ಶಾಲೆಗೆ ಹೋದಾಗ ಅಲ್ಲಿನ ಮಕ್ಕಳಷ್ಟೇ ಇವರೂ ತಿಳಿದುಕೊಂಡಿರಬೇಕು, ದಿ ನ್ಯೂಸ್‌ ಮಿನಿಟ್ ವರದಿ ಮಾಡಿದೆ.


ಅವರು ಶಿಕ್ಷಕಿಯಾಗಿದ್ದರೂ, ಮಕ್ಕಳಿಗೆ ಪೌಷ್ಟಿಕಾಂಶ ದೊರೆಯಲು ಸಮರ್ಪಕವಾಗಿ ಹಾಲು ಹಾಗೂ ಮೊಟ್ಟೆಗಳು ತಲುಪಿಸುತ್ತಾರೆ. ಅವರ ಅನುಪಸ್ಥಿತಿಯಲ್ಲಿ, ಇದೆಲ್ಲವನ್ನೂ ನೋಡಿಕೊಳ್ಳಲು ಓರ್ವ ಉಸ್ತುವಾರಿಯನ್ನು ನೇಮಿಸಲಾಗಿದ್ದು ಅವರು ಮಕ್ಕಳಿಗೆ ವೇಳಾಪಟ್ಟಿ ಪ್ರಕಾರ ಆಹಾರ ನೀಡುತ್ತಾರೆ.


ಕೆಲವೊಮ್ಮೆ ಅವರಿಗೆ ಸಂಬಳವಾಗದಿದ್ದಾಗ ಅವರು ತಮ್ಮದೇ ಹಣವನ್ನು ವ್ಯಯಿಸಿ ಮಕ್ಕಳಿಗೆ ಹಾಲು ಹಾಗೂ ಮೊಟ್ಟೆಗಳನ್ನು ತರುತ್ತಾರೆ.


ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಯನ್ನು ಗೌರವಿಸಿದ ಉಷಾಕುಮಾರಿಯವರಿಗೆ ಕಾನ್ಫೆಡ್‌ನಿಂದ (ಕೇರಳ ಅಸೋಸಿಯೇಷನ್ ​​ಫಾರ್ ನಾನ್‌‌ಫಾರ್ಮಲ್ ಎಡುಕೇಷನ್ ಅಂಡ್ ಡೆವಲೆಪ್ಮೆಂಟ್) ಸಾಕ್ಷರಥ ಪುರಸ್ಕರಂ ಬಿರುದು ನೀಡಲಾಗಿದೆ.