ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಗೆರ್ರಿ ಮಾರ್ಟಿನ್

ಟೀಮ್​ ವೈ.ಎಸ್​. ಕನ್ನಡ

ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಗೆರ್ರಿ ಮಾರ್ಟಿನ್

Wednesday September 14, 2016,

3 min Read

ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ಇರುತ್ತದೆ. ಕೆಲವರಿಗೆ ಸಾಕು ಪ್ರಾಣಿಗಳನ್ನು ಸಾಕುವುದು ಇಷ್ಟವಾದ್ರೆ, ಇನ್ನು ಕೆಲವರಿಗೆ ಪಕ್ಷಿಗಳು ಅಂದ್ರೆ ಪಂಚಪ್ರಾಣ. ಮತ್ತೆ ಕೆಲವರ ಆಸಕ್ತಿ ಬೇರೆಯದ್ದೇ ಆಗಿರುತ್ತದೆ. ಆದ್ರೆ ಈಗ ನಾವು ಹೇಳ ಹೊರಟಿರುವ ಕಥೆ ಎಲ್ಲಕ್ಕಿಂತ ವಿಭಿನ್ನವಾಗಿದೆ. ಇವರ ಹೆಸರು ಗೆರ್ರಿ ಮಾರ್ಟಿನ್​. ಈ ಗೆರ್ರಿ ಮಾರ್ಟಿನ್​ಗೆ ಇಷ್ಟ ಆಗೋದು ಕಾಳಿಂಗ ಸರ್ಪಗಳು ಮತ್ತು ಅಪಾಯಕಾರಿ ಮೊಸಳೆಗಳು. ಮಾರ್ಟಿನ್​ ಕೈಯಲ್ಲಿ ಈ ಅಪಾಯಕಾರಿ ಜೀವಿಗಳು ಹೇಳಿದಂತೆ ಕೇಳುತ್ತವೆ. ಅಷ್ಟೇ ಅಲ್ಲ ಗೆರ್ರಿ ಮಾರ್ಟಿನ್​ ಈಗ ಪ್ರಾಣಿಗಳ ಜೊತೆ ಮನುಷ್ಯ ಉತ್ತಮ ಭಾಂಧವ್ಯ ಹೊಂದುವ ಬಗೆಯನ್ನು ಕಲಿಸಿಕೊಡುತ್ತಿದ್ದಾರೆ.

image


ಪ್ರಾಣಿ ಪಕ್ಷಿಗಳೆಂದರೆ ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತದೆ. ಪ್ರಪಂಚದ ಪ್ರತಿಯೊಬ್ಬರಿಗೆ ಪ್ರಾಣಿ ಪಕ್ಷಿಗಳನ್ನು ನೋಡಲು ಕಾತರತೆ ಇರುತ್ತದೆ. ಆದರೆ ಒಂದು ರೀತಿಯಲ್ಲಿ ಅದ್ರ ಬಗ್ಗೆ ಭಯವೂ ಇರುತ್ತದೆ. ಆದರೆ ಬೆಂಗಳೂರು ಮೂಲದ ಯುವಕನೊಬ್ಬ ಶಾಲಾ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ನಿಸರ್ಗ ಹಾಗೂ ಪ್ರಾಣಿಗಳನ್ನು ನೋಡುವ, ಪ್ರೀತಿಸುವ ಬಗೆ ಹೇಗೆ ಎಂಬುದನ್ನು ತಿಳಿಸಿಕೊಡುವ ಕಾಯಕ ಮಾಡುತ್ತಿದ್ದಾನೆ.

ಇದನ್ನು ಓದಿ: ಟೇಸ್ಟಿ "ಟೀ" ಮ್ಯಾಜಿಕ್​- ಒಂದೇ ಕಪ್​ ಚಹಾದಲ್ಲಿ ಸಿಗುತ್ತೆ ಉತ್ಸಾಹದ ಕಿಕ್​..!

ಪರಿಸರ ಮತ್ತು ಪ್ರಾಣಿಗಳ ಮೇಲೆ ಪ್ರೀತಿ, ಕಾಳಜಿಯನ್ನು ಹೊಂದಿರುವ ಬೆಂಗಳೂರಿನ ಗೆರ್ರಿ ಮಾರ್ಟಿನ್ ಎಂಬ ಯುವಕನಿಗೆ ಕಾಡುಮೇಡುಗಳಲ್ಲಿನ ಅಲೆದಾಟ ಹಾಗೂ ಉರಗಗಳನ್ನು ಹಿಡಿಯುವ ಹವ್ಯಾಸ ಸ್ವಲ್ಪ ಹೆಚ್ಚಾಗಿತ್ತು. ಹವ್ಯಾಸ ಹೆಚ್ಚಾದಂತೆ ಅವರಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು.

image


ಗೆರ್ರಿ ಮಾರ್ಟಿನ್ ಅವರಿಗೆ ಈ ಪ್ರಾಣಿ ಮತ್ತು ನಿಸರ್ಗದ ಮೇಲಿನ ಪ್ರೀತಿ ಹೆಚ್ಚಾಗಿದ್ದು ತಮ್ಮ ಅಜ್ಜನ ಪ್ರಭಾವದಿಂದಾಗಿ ಮಾರ್ಟಿನ್ ಅವರಿಗೆ ಅವರ ತಾತ ವಿಷಕಾರಿ ಹಾವಾದ ಕಾಳಿಂಗ ಸರ್ಪವನ್ನು ಹಿಡಿಯುವುದನ್ನು ಕಲಿಸಿದರು. ಇದರ ಪರಿಣಾಮ ಗೆರ್ರಿ ಮಾರ್ಟಿನ್ ಈಗ ಕಾಳಿಂಗ ಸರ್ಪ ಮತ್ತು ಮೊಸಳೆಗಳನ್ನು ಹಿಡಿಯುವುದರಲ್ಲಿ ಸಿದ್ಧ ಹಸ್ತರಾಗಿದ್ದಾರೆ.

"ಯಾವುದೇ ಪ್ರಾಣಿಗಳು ಕೂಡ ಅಪಾಯಕಾರಿಯಲ್ಲ. ಆದ್ರೆ ಅವುಗಳ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕು ಅಷ್ಟೇ. ಅವುಗಳಿಗೂ ಒಂದು ಭಾವನೆಗಳಿವೆ. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದ್ರೆ ಅವುಗಳ ಬಗೆಗಿನ ಕಲಿಕೆ ನಮ್ಮನ್ನು ಅವುಗಳ ಜೊತೆ ಸಂಬಂಧ ಬೆಳೆಸಲು ಪ್ರೇರೆಪಿಸುತ್ತದೆ."
- ಗೆರ್ರಿ ಮಾರ್ಟಿನ್​, ಪ್ರಾಣಿಪ್ರಿಯ

ಇವರ ವನ್ಯ ಜೀವಿ ಕಲೆಯನ್ನು ಮೊದಲಿಗೆ ಗುರುತಿಸಿ ಅದನ್ನು ಪ್ರಪಂಚಕ್ಕೆ ತೋರಿಸಿದ್ದು ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್. ಪ್ರಾಣಿ ಪಕ್ಷಿಗಳ ಬಗೆಗೆ ವಿಭಿನ್ನ ಮತ್ತು ವಿಶಿಷ್ಟ ಕಾರ್ಯಕ್ರಮ ಮಾಡುವುದರಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್​ನವರದ್ದು ಎತ್ತಿದ ಕೈ. ಮಾರ್ಟಿನ್ ಅವರ ಪ್ರತಿಭೆ ಕಂಡ ಈ ಚಾನೆಲ್ ಮಂದಿ ಕಾಳಿಂಗ ಸರ್ಪ ಮತ್ತು ಮೊಸಳೆಗಳ ಕುರಿತಂತೆ ಒಂದು ಸಾಕ್ಷ್ಯಚಿತ್ರ ಹಾಗೂ ಟೆಲಿಚಿತ್ರಗಳನ್ನು ನಿರ್ಮಾಣ ಮಾಡಲು ಮಾರ್ಟಿನ್ ಅವರನ್ನು ಬಳಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಮಾರ್ಟಿನ್​ಗೆ ಹಲವು ದೇಶಗಳನ್ನು ಸುತ್ತವ ಅವಕಾಶ ದೊರೆಯಿತು. ದೇಶಗಳನ್ನು ಸುತ್ತವುದರ ಜೊತೆಗೆ ಜಗತ್ತಿನ ಹೆಸರಾಂತ ವಿಜ್ಞಾನಿಗಳ ಜತೆಯಲ್ಲಿ ಕೆಲಸ ಮಾಡುವ ಅವಕಾಶ ಮಾರ್ಟಿನ್ ಅವರಿಗೆ ಸಿಕ್ಕಿತು.

image


ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್​ನಲ್ಲಿ ಕಾಳಿಂಗ ಸರ್ಪ ಮತ್ತು ಮೊಸಳೆಯ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಾಣದ ಪ್ರಾಜೆಕ್ಟ್ ಮುಗಿದ ಮೇಲೆ ಮಾರ್ಟಿನ್ ಪರಿಸರ ಮತ್ತು ಪ್ರಾಣಿಗಳ ಕುರಿತಂತೆ ಒಂದು ಸಂಸ್ಥೆಯನ್ನು ಆರಂಭಿಸುವ ಅಲೋಚನೆ ಮಾಡಿದರು. ತಮ್ಮ ಸ್ನೇಹಿತರೊಂದಿಗೆ ಚರ್ಚೆ ನಡೆಸಿದ ಮಾರ್ಟಿನ್ ಅವರು ಸ್ವಲ್ಪ ದಿನಗಳಲ್ಲೆ "ದಿ ಗೆರ್ರಿ ಮಾರ್ಟಿನ್ ಪ್ರಾಜೆಕ್ಟ್" ಎಂಬ ಸಂಸ್ಥೆ ಕಟ್ಟಿದರು. ಈ ಗೆರ್ರಿ ಮಾರ್ಟಿನ್ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರ ಹಾಗೂ ಪ್ರಾಣಿಗಳನ್ನು ನೋಡುವುದು ಹೇಗೆ ಅವುಗಳ ಬಗ್ಗೆ ಅರಿಯುವುದು ಹೇಗೆ ಎಂಬುದನ್ನು ಮಾರ್ಟಿನ್ ತಿಳಿಸಿಕೊಡುತ್ತಾರೆ.

"ಗೆರ್ರಿ ಮಾರ್ಟಿನ್​ ಪ್ರಾಜೆಕ್ಟ್​ನಿಂದ ನಾವು ಸಾಕಷ್ಟು ಕಲಿತಿದ್ದೇವೆ. ಹಾವುಗಳು ಮತ್ತು ಇತರೆ ಪ್ರಾಣಿಗಳು ಕೂಡ ಮನುಷ್ಯನಂತೆ ಪರಿಸರಕ್ಕೆ ಅತೀ ಮುಖ್ಯ. ಅವುಗಳನ್ನು ನಾವು ಪ್ರೀತಿ ತೋರಿಸಿ, ಕಾಪಾಡಬಹುದು."
- ವಿದ್ಯಾರ್ಥಿ, ಗೆರ್ರಿ ಮಾರ್ಟಿನ್​ ಪ್ರಾಜೆಕ್ಟ್​

ಅಷ್ಟೇ ಅಲ್ಲದೆ ತಮ್ಮದೇ ಫಾರ್ಮ್​ನಲ್ಲಿ ಮಾರ್ಟಿನ್ ಸಾಕಿರುವ ಪ್ರಾಣಿ ಪಕ್ಷಿಗಳ ಕುರಿತಂತೆ ಸಾಕಷ್ಟು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ತಮ್ಮ ಫಾರ್ಮ್​ನಲ್ಲಿ ಸಾಕಿರುವ ಪ್ರಾಣಿ ಪಕ್ಷಿಗಳ ಕುರಿತಂತೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. "ದಿ ಗೆರ್ರಿ ಮಾರ್ಟಿನ್ ಪ್ರಾಜೆಕ್ಟ್" ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸುವುದು ಅವರ ಗುರಿ. ಇವರ ಮೂಲ ಉದ್ದೇಶ ಪ್ರಾಣಿ ಮತ್ತು ಪಕ್ಷಿಗಳನ್ನು ಕಂಡರೆ ಭಯಪಡುವ ಮಕ್ಕಳು ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬಿ ಅವುಗಳ ಜೊತೆ ಉತ್ತಮ ಬಾಂಧವ್ಯ ಮೂಡುವಂತೆ ಮಾಡುವುದು ಆಗಿದೆ. ಸದ್ಯಕ್ಕೆ ಚಿಕ್ಕ ಬೆಳಂದೂರು ಬಳಿಯಿರುವ ಗೆರ್ರಿ ಮಾರ್ಟಿನ್​​ ಕನಸಿನ ತಾಣ ಹೆಚ್ಚು ಆಕರ್ಷಣೆಯನ್ನು ಹೊಂದಿದೆ. 

ಇದನ್ನು ಓದಿ:

1. ಗುಡ್​ಮಾರ್ನಿಂಗ್​​...! ಎದ್ದು ಬಿಡಿ... ಯಶಸ್ಸಿನ ಕಥೆಯನ್ನು ನೀವೇ ಬರೆಯಿರಿ..!

2. ಕಾಡು ಬೆಳೆಸಿ ನಾಡು ಉಳಿಸಿದ "ಜಾಧವ್"​​

3. ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!