ಕನ್ನಡದ ಸೇವಾ ಕೈಂಕರ್ಯ ನೆರವೇರಿಸಲು ಕಂಕಣ ತೊಟ್ಟಿದ್ದರೆ ಈ ಜನಮೆಚ್ಚಿದ ಐಎಎಸ್-ಕೆಎಎಸ್ ಅಧಿಕಾರಿ ಕಂ ಸಾಹಿತಿ

ವಿಶ್ವಾಸ್​

ಕನ್ನಡದ ಸೇವಾ ಕೈಂಕರ್ಯ ನೆರವೇರಿಸಲು ಕಂಕಣ ತೊಟ್ಟಿದ್ದರೆ ಈ ಜನಮೆಚ್ಚಿದ ಐಎಎಸ್-ಕೆಎಎಸ್ ಅಧಿಕಾರಿ ಕಂ ಸಾಹಿತಿ

Thursday February 11, 2016,

3 min Read

ಹಿಂದೊಮ್ಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರು ಹೇಳುತ್ತಿದ್ದಂತೆ ನೆನಪಾಗುತ್ತಿದ್ದ ಅತ್ಯಂತ ಪ್ರಮುಖ ಹೆಸರು ಮನು ಬಳಿಗಾರ್. ಮನು ಬಳಿಗಾರ್ ಅನ್ನುವ ಹೆಸರು ಕಳೆದ ಒಂದೆರಡು ದಶಕಗಳಿಂದ ಕರ್ನಾಟಕದಲ್ಲಿ ಪ್ರಾಯಶಃ ಕನ್ನಡಿಗರಿಗೆ ಚಿರಪರಿಚತವಾದ ಹೆಸರು. ಇವರಿಗೆ ಪ್ರತ್ಯೇಕ ಪರಿಚಯದ ಅಗತ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಖ್ಯಾತರಾಗಿದ್ದಾರೆ. ಓರ್ವ ಅಧಿಕಾರಿಯಾಗಿ ಕನ್ನಡಿಗರೊಂದಿಗೆ ಕಲೆತು ಬೆರೆತು ಜನಪ್ರಿಯತೆಯ ಉತ್ತುಂಗ ತಲುಪಿದ ಮನು ಬಳಿಗಾರ್, ಸಾಹಿತ್ಯ ಕ್ಷೇತ್ರದಲ್ಲಿಯೂ ಕೈಯಾಡಿಸಿ ಹೆಸರು ಮಾಡಿದವರು. ಈಗ ಈ ಹೆಸರು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಅಖಾಡದಲ್ಲಿಯೂ ಕೇಳಿ ಬರುತ್ತಿದೆ. ಕನ್ನಡದ ಕೈಂಕರ್ಯ ನೆರವೇರಿಸಲು ಸಂಕಲ್ಪಗೈದಿರುವ ಮನು ಬಳಿಗಾರ್ ಅಧಿಕೃತವಾಗಿ ಕಸಾಪದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

image


ಮನು ಬಳಿಗಾರ್ ಕವಿ, ನಾಟಕಕಾರ, ಲೇಖಕ ಹಾಗೂ ಅತ್ಯುತ್ತಮ ವಾಗ್ಮಿ. ಅನೇಕ ಸಮಾರಂಭಗಳಲ್ಲಿ ಮನು ಬಳಿಗಾರ್ ಸ್ವತಃ ಹಾಡು ಹೇಳುವ ಮೂಲಕ ತಾವೊಬ್ಬರು ಅಪರೂಪದ ಹಾಡುಗಾರರೂ ಅನ್ನುವುದನ್ನು ಸಾಬೀತು ಮಾಡಿದ್ದಾರೆ. ಇದೆಲ್ಲದರ ಹೊರತಾಗಿ ಮನು ಬಳಿಗಾರ್ ಕರ್ನಾಟಕ ಕಂಡ ಅತ್ಯಂತ ದಕ್ಷ ಹಾಗೂ ನಿಷ್ಟ ಆಡಳಿತಗಾರ. ಅವರು ತಮ್ಮ ವೃತ್ತಿಯಲ್ಲಿ ಎಲ್ಲೂ ಹೆಸರು ಕೆಡಿಸಿಕೊಳ್ಳದೇ, ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ ಅನ್ನುವ ಮಾತೂ ಇದೆ.

ಇದನ್ನು ಓದಿ:

ಅಂದದ ಉಗುರಿಗೆ ಸುಲಭದ ರೀಮುವರ್ ಟಿಶ್ಯೂ-ಪ್ಯಾಡ್

ಮೂಲತಃ ಕೆಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಮನು ಬಳಿಗಾರರು, ಮಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯೊಂದಿಗೆ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಬಳಿಕ ಸರ್ಕಾರದ ಅನೇಕ ಹುದ್ದೆಗಳಲ್ಲಿ ಗುಲ್ಬರ್ಗ, ವಿಜಾಪುರ, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿದರು. ಬೆಳಗಾವಿಯಲ್ಲಿ ಸೇವೆ ಸಲ್ಲಿಸುವ ವೇಳೆ ಅಲ್ಲಿ ಮರಾಠಿ ಭಾಷಿಕರ ಜೊತೆ ಬೆರೆತು, ಅವರನ್ನೂ ಕನ್ನಡ ಕಲಿಯಲು ಉತ್ತೇಜಿಸಿದ್ದು ಮನು ಬಳಿಗಾರರ ಸಾರ್ವಜನಿಕ ಸರಳ ಸಂಪರ್ಕ ಸ್ವಭಾವಕ್ಕೆ ಸಾಕ್ಷಿ. ಈ ರೀತಿ ಓರ್ವ ಅಧಿಕಾರಿಯಾಗಿ ವಿಭಿನ್ನ ರೀತಿಯಲ್ಲಿ ಕನ್ನಡದ ಸೇವೆಗೈದ ಅಪರೂಪದ ವ್ಯಕ್ತಿ ಅನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಗಡಿನಾಡಿನಲ್ಲಿ ಕ್ಷೀಣವಾಗುತ್ತಿರುವ ಕನ್ನಡಕ್ಕೆ ಹೊಸ ಧ್ವನಿ ನೀಡಿದ ಕೀರ್ತಿಯೂ ಅವರದ್ದು. ಗಡಿ ನಾಡಿನ ಕನ್ನಡಿಗರ ಶ್ರೇಯೋಭಿವೃದ್ಧಿಗೆ ಅವರು ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದ್ದಾರೆ.

ಬಿಬಿಎಂಪಿಯ ಉಪಾಯುಕ್ತರಾಗಿಯೂ ಸೇವೆ ಸಲ್ಲಿಸಿರುವ ಮನು ಬಳಿಗಾರ್, ಮಹಾನಗರದಲ್ಲಿ ಸ್ವಚ್ಛತೆ ಕಾಪಾಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಜೊತೆಗೆ ಸ್ವತಃ ಮುತುವರ್ಜಿಯಿಂದ ನಗರವಾಸಿಗಳಲ್ಲಿ ನೈರ್ಮಲ್ಯದ ಕುರಿತಾಗಿ ಅರಿವು ಮೂಡಿಸಲು ಮುಂದಾಗಿದ್ದರು. ಈ ನಿಟ್ಟಿನಲ್ಲಿ ಬೇರೆ ಪಾಲಿಕೆಯ ಅಧಿಕಾರಿಗಳೊಂದಿಗೆ ಸ್ವಯಂ ತಾವೇ ಕೊಳಚೆ ಪ್ರದೇಶಗಳು, ಮಾರುಕಟ್ಟೆ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಯಾವುದೇ ಸಮಸ್ಯೆಯಾದರೂ ಕ್ಷಣಾರ್ಧದಲ್ಲಿ ಪರಿಹಾರ ಸೂಚಿಸುವ ಚಾಕಚಕ್ಯತೆ ಅವರಲ್ಲಿತ್ತು ಎಂದು ಈಗಲೂ ನೆನಪು ಮಾಡಿಕೊಳ್ಳುತ್ತಾರೆ, ಅವರ ಜೊತೆ ಕೆಲಸ ನಿರ್ವಹಿಸಿದ ಸಹುದ್ಯೋಗಿಗಳು.

image


ವಿಜಯಪುರದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅಲ್ಲಿನ ಸಮಗ್ರ ಗ್ರಾಮಾಣಾಭಿವೃದ್ಧಿ ಯೋಜನೆಯ ಸಮರ್ಪಕ ಜಾರಿಯ ಕಾರಣ ಮನುಬಳಿಗಾರ್ರಿಗೆ ಎರಡು ಸುವರ್ಣ ಪದಕಗಳು ಅರಸಿಕೊಂಡು ಬಂದಿದ್ದವರು. ಇದು ಅವರ ಅವಿರತ ಕಾರ್ಯಕ್ಷಮತೆ ಹಾಗೂ ದಕ್ಷತೆಗೆ ಹಿಡಿದ ಕೈಗನ್ನಡಿ. ಇಂತಹ ಪ್ರತಿಭಾನ್ವಿತ ಅಧಿಕಾರಿ ಮನು ಬಳಿಗಾರ್ ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ. ಕೃಷಿ ಪ್ರಧಾನ ಕುಟುಂಬದ ರೈತ ಪರಮೇಶ್ವರಪ್ಪ ಇವರ ತಂದೆ. ತಂದೆಯ ಆಸಕ್ತಿ ಹಾಗೂ ಕಾಳಜಿಯ ಜೊತೆ ಕಟ್ಟುನಿಟ್ಟಿನ ಶಿಸ್ತು ಕ್ರಮವೇ, ಮನು ಬಳಿಗಾರರ ಜೀವನದಲ್ಲಿ ಅತ್ಯಂತ ಶಿಸ್ತುಬದ್ಧ ದೈನಂದಿನ ರೂಪುಗೊಳ್ಳಲು ಕಾರಣ. ಮನು ಬಳಿಗಾರ್ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು ಶಿಗ್ಲಿ ಗ್ರಾಮನದಲ್ಲೇ. ಆಂಗ್ಲ ಸಾಹಿತ್ಯದ ಬಿ.ಎ ಹಾಗೂ ಬಳಿಕ ಎಲ್ಎಲ್ಬಿ ಶಿಕ್ಷಣ ಮುಗಿಸಿದ ಅವರು ಕಾರ್ಯಕ್ಷೇತ್ರವಾಗಿ ಆಯ್ದುಕೊಂಡಿದ್ದು ಕರ್ನಾಟಕ ಆಡಳಿತ ಸೇವೆಯನ್ನು.

ಕನ್ನಡ ಸಾಹಿತ್ಯ ಲೋಕದಲ್ಲೂ ಮನು ಬಳಿಗಾರ್ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ಬಳಿಗಾರರು ಈವರೆಗೆ ಸುಮಾರು 22 ಪುಸ್ತಕಗಳು, 5 ಕವನ ಸಂಕಲನಗಳು, 3 ಜೀವನ ಚರಿತ್ರೆಗಳೂ, 2 ಪ್ರಬಂಧಗಳ ಜೊತೆ 4 ಸಣ್ಣಕಥಾ ಸಂಗ್ರಹಗಳನ್ನು ಪ್ರಕಟಗೊಳಿಸಿದ್ದಾರೆ. ವಿಶೇಷವೆಂದರೆ ಮನು ಬಳಿಗಾರ್ ವಿಶ್ವಕವಿ ರವೀಂದ್ರನಾಥ ಠ್ಯಾಗೋರರ ಕೆಲವು ಕವನ ಸಂಕಲಗಳನ್ನೂ ಕನ್ನಡಕ್ಕೆ ಅನುವಾಧಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮನು ಬಳಿಗಾರ್ರ ನಿರಂತರ ಅಕ್ಷರಸೇವೆಯನ್ನು ಪರಿಗಣಿಸಿ ಗೋರೂರು ಪ್ರಶಸ್ತಿ, ರನ್ನ ಹಾಗೂ ಲಿಂಗರಾಜ ದೇಸಾಯಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಸಂಗೀತ ಮನು ಬಳಿಗಾರರ ಇನ್ನೊಂದು ಆಸಕ್ತಿಕರ ಕ್ಷೇತ್ರ. ಇವರು ಭೀಮ್​ಸೇನ್ ಜೋಶಿ, ಸಿದ್ಧರಾಮ ಜಂಬಲದಿನ್ನಿ, ಸತ್ಯವತಿ, ಎಸ್.ಎಂ ಶೀಲಾ ಮುಂತಾದ ಸಂಗೀತ ಪರಿಣಿತರಿಂದ ಪ್ರಭಾವಿತರಾದವರು. ಇವರು ಸ್ವತಃ ಅಕ್ಕಮಹಾದೇವಿ ಹಾಗೂ ಬಸವಣ್ಣನವರ ವಚನಗಳು, ರಾಷ್ಟ್ರಕವಿ ಕುವೆಂಪು ಹಾಗೂ ವರಕವಿ ಬೇಂದ್ರೆಯವರ ಭಾವಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಾರೆ. 2004ರಲ್ಲಿ ಗದಗ್ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ಅವರನ್ನು ಅರಸಿಕೊಂಡು ಬಂದಿತ್ತು. 2005ರಲ್ಲಿ ಸಿಂಗಪುರದಲ್ಲಿ ನಡೆದಿದ್ದ 2ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿಯೂ ಮನು ಬಳಿಗಾರ್ ಆಯ್ಕೆಯಾಗಿದ್ದರು.

ಬಿಟಿಎಂ ಲೇ ಔಟ್​ನಲ್ಲಿರುವ ಮನು ಬಳಿಗಾರರ ಶಿಗ್ಲಿ ಮನೆಯಲ್ಲಿ ದೊಡ್ಡ ಗ್ರಂಥ ಭಂಡಾರವೇ ಇದೆ. ಸದಾಕಾಲ ಏನಾದರು ಓದುವ ಅಥವಾ ಬರೆಯುವ ಮನು ಬಳಿಗಾರ್, ಅತ್ಯಂತ ಸರಳ, ನಿಸ್ಪೃಹ, ಸಜ್ಜನ ಸ್ನೇಹ ಜೀವಿ ಅನ್ನೋದರಲ್ಲಿ ಎರಡು ಮಾತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿದ್ದಾಗ ಅನೇಕ ಕನ್ನಡಪರ ಕೆಲಸಗಳನ್ನು ನಿರ್ವಹಿಸಿದ ಅವರು, ಈಗ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷಗಾಧಿಗೆ ಸ್ಫರ್ಧಿಸಿತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಅನ್ನುವ ಮಾತು ಕನ್ನಡಿಗರಿಂದ ಕೇಳಿ ಬರುತ್ತಿದೆ.

ಇದನ್ನು ಓದಿ

ಒಂದೇ ಶಿಲ್ಪದಲ್ಲಿ ಹಲವು ಕಲೆಗಳ ಗುಟ್ಟು..!

ಕಸದಲ್ಲೂ ಕಲೆ ಅರಳುತ್ತದೆ..!

ನರೇಂದ್ರ ಮೋದಿ ಕ್ಷೇತ್ರದಲ್ಲಿ ದೇಶದ ಮೊಟ್ಟ ಮೊದಲ ಆಹಾರ ಧಾನ್ಯದ ಬ್ಯಾಂಕ್...