ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

ಉಷಾ ಹರೀಶ್​​

ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

Thursday February 18, 2016,

4 min Read

ಸಾಮಾನ್ಯವಾಗಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಸೇರಿಕೊಂಡು ಉತ್ತಮ ಸಂಬಳ ಪಡೆದು ಲೈಫ್ ಸೆಟಲ್ ಮಾಡಿಕೊಳ್ಳುವ ತವಕದಲ್ಲಿರುತ್ತಾರೆ. ಆದರೆ ಮೈಸೂರಿನ ನಾಲ್ವರು ಯುವಕರು ಕಷ್ಟಪಟ್ಟು ನಾಲ್ಕೈದು ವರ್ಷ ಇಂಜಿನಿಯರಿಂಗ್‌ನ ಎಲ್ಲ ಪುಸ್ತಕಗಳನ್ನು ಅರೆದು ಕುಡಿದು ಉತ್ತಮ ಅಂಕ ಪಡೆದು ಯಾವುದೇ ಕೆಲಸಕ್ಕೆ ಹೋಗದೇ ಸಾಮಾಜಿಕ ಕಳಕಳಿಯೊಂದಿಗೆ ಮೈಸೂರಿನ ಜನತೆಗೆ ಉತ್ತಮ ಊಟವನ್ನು ನೀಡಬೇಕು ಎಂಬ ಉದ್ದೇಶದಿಂದ ಫುಡ್‌ಬಾಕ್ಸ್ ಎಂಬ ಡಿಲೆವರಿ ಕ್ಯಾಟರಿಂಗ್ ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ.

image


ಇತ್ತೀಚಿನ ದಿನಗಳಲ್ಲಿ ಮನೆ ಬಿಟ್ಟು ಕೆಲಸದ ನಿಮಿತ್ತವೋ, ವಿದ್ಯಾಬ್ಯಾಸಕ್ಕೆಂದೊ ಬೇರೆ ಊರಿನಲ್ಲಿ ಇರಬೇಕಾದಂತಹ ಪರಿಸ್ಥಿತಿ ಸೃಷ್ಟಿಯಾದರೆ ಅವರಿಗೆ ಮೊದಲು ಬರುವ ಸಮಸ್ಯೆ ಊಟದ್ದು. ಸಮಯಕ್ಕೆ ಸರಿಯಾಗಿ ಊಟ ಮಾಡಲಾಗುವುದಿಲ್ಲ. ಊಟಕ್ಕೆಂದು ಹೊಟೇಲ್‌ಗೆ ಹೋದರೂ ಉತ್ತಮವಾದ ಊಟ ದೊರೆಯುವುದಿಲ್ಲ. ಅಷ್ಟೇ ಅಲ್ಲದೇ ಪ್ರತಿ ದಿನ ಹೊಟೇಲ್‌ನ ಊಟ ತಿಂದರೆ ಅಸಿಡಿಟಿಯ ಸಮಸ್ಯೆ ಬರುತ್ತದೆ. ಹೊಟೇಲ್ ಊಟದಿಂದ ಜೇಬಿಗೂ ಕತ್ತರಿ ಬೀಳುತ್ತದೆ. ಆದರೆ ಕಡಿಮೆ ದರದಲ್ಲಿ ಉತ್ತಮ ಊಟವನ್ನು ನೀವಿದ್ದ ಜಾಗಕ್ಕೆ ತಲುಪಿಸುವ ಯೋಜನೆಯೆ ಫುಡ್ ಬಾಕ್ಸ್. ಮುರುಳಿ ಗುಂಡಣ್ಣ , ಅಲಾಪ್,ಯತಿರಾಜ್, ಸುಹಾಸ್ ಕೃಷ್ಣ ಎಂಬ ನಾಲ್ವರು ಯುವಕರೇ ಈ ಫುಡ್‌ಬಾಕ್ಸ್ ಯೋಜನೆಯ ರೂವಾರಿಗಳು.

ಇದನ್ನು ಓದಿ

ರಸ್ತೆ ಬದಿಯ ಆಹಾರ ಮಾರಾಟಗಾರರಿಂದ ಉದ್ಯಮಶೀಲತೆಯ ಪಾಠಗಳು..!

ಈ ನಾಲ್ವರು ಇಂಜಿನಿಯರಿಂಗ್ ಮುಗಿಸಿದ್ದರು ಅಲಾಪ್ ಗಾಲ್ಫ್ ಆಟಗಾರರಾಗಿದ್ದು ಅದರಲ್ಲೇ ಮುಂದುವರೆಯುವ ಆಲೋಚನೆ ಹೊಂದ್ದಿದ್ದಾರೆ. ಯತಿರಾಜ್ ಎಂಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಫುಡ್‌ಬಾಕ್ಸ್‌ನ ಮುಖ್ಯ ಸಂಸ್ಥಾಪಕ ಮುರುಳಿ ಗುಂಡಣ್ಣ. ಇವರು ಈ ಮೊದಲು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲ ತಿಂಗಳುಗಳ ಕಾಲ ಕೆಲಸ ನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಊಟದ ಸಮಸ್ಯೆಯಯನ್ನು ಸಾಕಷ್ಟು ಅನುಭವಿಸಿದ್ದಾರೆ. ಅಷ್ಟೇ ಅಲ್ಲದೇ ಮುರುಳಿ ಅವರಿಗೆ ಮೊದಲಿನಿಂದಲೂ ಊಟಕ್ಕೆ ಸಂಬಂಧಿಸಿದಂತೆ ಸ್ವಂತವಾಗಿ ಬ್ಯುಸಿನೆಸ್ ಮಾಡಬೇಕು ಎಂಬ ಉತ್ಕಟತೆ ಇತ್ತು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು 10 ತಿಂಗಳು ಅನುಭವಿಸಿದ ಕಷ್ಟದ ಅರಿವಿತ್ತು. ಬೇರೆ ಫರ್ಮ್‌ನಲ್ಲಿ ದುಡಿಯುವುದಕ್ಕಿಂತ ಸ್ವಂತದ ಉದ್ದಿಮೆಯೊಂದಿದ್ದರೆ ಯಾರನ್ನು ಏನು ಕೇಳುವಂತಿಲ್ಲ ಎಂಬ ಆಸೆಯೊಂದಿಗೆ ತನ್ನ ಯೋಜನೆಯನ್ನು ಗೆಳೆಯರೊಂದಿಗೆ ಚರ್ಚೆ ಮಾಡಿದಾಗ ಅವರು ಸಹ ಇದಕ್ಕೆ ಕೈಜೋಡಿಸಿದರು. ಆಗ ಪ್ರಾರಂಭವಾಗಿದ್ದೇ ಫುಡ್ ಬಾಕ್ಸ್.

image


ಫುಡ್ ಬಾಕ್ಸ್ ವಿಶೇಷತೆ

ಅಮ್ಮನ ಕೈತುತ್ತು ನಿಮ್ಮ ಬಳಿಗೆ ಎಂಬ ವಿಶೇಷ ಟ್ಯಾಗ್‌ಲೈನ್‌ನೊಂದಿಗೆ ನೀವು ಕರೆ ಮಾಡಿದರೆ ನೀವಿದ್ದ ಜಾಗಕ್ಕೆ ಊಟವನ್ನು ಮತ್ತು ತಿಂಡಿಯನ್ನು ಮುರುಳಿ ಮತ್ತವರ ಸ್ನೇಹಿತರು ತಂದು ಕೊಡುತ್ತಾರೆ. ಈ ಯೊಜನೆಗೆ ಯಾವುದೇ ರೀತಿಯ ಹೋಲ್ಡಿಂಗ್ಸ್, ಪಾಂಪ್ಲೇಟ್, ಅಥವಾ ಪತ್ರಿಕೆಗಳಲ್ಲಿ ಜಾಹಿರಾತನ್ನು ಇದುವರೆಗೂ ಈ ಯುವಕರು ನೀಡಿಲ್ಲ. ಬದಲಾಗಿ ಈ ಯೋಜನೆ ಪ್ರಾರಂಭ ಮಾಡಿದ ಮೊದಲ ದಿನ ಮುರುಳಿ ಮತ್ತವರ ಸ್ನೇಹಿತರು ತಮ್ಮ ಪರಿಚಯಸ್ಥರಿಗೆ ಸುಮಾರು 80 ಊಟವನ್ನು ಅವರು ಇರುವ ಜಾಗಕ್ಕೆ ಕೊಟ್ಟು ಅವರಿಗೆ ತಮ್ಮ ಯೋಜನೆಯನ್ನು ವಿವರಿಸುವ ಒಂದು ಪತ್ರವನ್ನು ಮತ್ತು ಫೋನ್ ನಂಬರ್‌ನ್ನು ಕೊಟ್ಟು ಬಂದರು ಅದಾದ ಮರುದಿನ ಅವರಿಗೆ ಅಚ್ಚರಿಯೆನ್ನುವಂತೆ 40 ಕ್ಕೂ ಹೆಚ್ಚು ಆರ್ಡರ್‌ಗಳು ಅವರಿಗೆ ಫೋನಿನ ಮೂಲಕ ಬಂದವು. ಅಂದಿನಿಂದ ಇಂದಿನವರೆಗೂ ಇವರ ಫುಡ್‌ಬಾಕ್ಸ್‌ಗೆ ಮೈಸೂರಿನಾದ್ಯಂತ ಒಳ್ಳೆ ಬೇಡಿಕೆ ಇದ್ದು ದಿನೊವೊಂದಕ್ಕೆ 100 ಕ್ಕೂ ಹೆಚ್ಚಿನ ಆರ್ಡರ್ ಸಿಗುತ್ತಿದೆ.

ವಾಟ್ಸ್ ಆ್ಯಪ್ ಮೂಲಕ ಮೆನು ಪಟ್ಟಿ

ಇವರ ಫುಡ್ ಬಾಕ್ಸ್‌ಗೆ ಒಂದು ಬಾರಿ ಕರೆ ಮಾಡಿದರೆ ಆ ನಂಬರ್‌ನ್ನು ಇವರ ಫುಡ್‌ಬಾಕ್ಸ್ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಳ್ಳುತ್ತಾರೆ. ಆ ಗ್ರೂಪ್ ಮೂಲಕ ಮರುದಿನದ ಮೆನುವನ್ನು ಪ್ರತಿ ದಿನ ರಾತ್ರಿಯೇ ಕಳುಹಿಸುತ್ತಾರೆ. ಆ ಮೂಲಕ ಯಾರಿಗಾದರೂ ಉಪಹಾರದ ಅವಶ್ಯಕತೆ ಇದ್ದರೆ ಉಪಾಹರ, ಊಟದ ಅವಶ್ಯಕತೆ ಇದ್ದರೆ ಊಟವನ್ನು ಆರ್ಡರ್ ಮಾಡಬಹುದು. ಉಪಹಾರವನ್ನು ಬೆಳಗ್ಗೆ 8ಗಂಟೆಗೆ ಊಟವನ್ನು 12 ಗಂಟೆಗೆ ರಾತ್ರಿ ಊಟವನ್ನು 7 ಗಂಟೆಗೆ ಆರ್ಡರ್ ಮಾಡಿದರೆ ಸಾಕು. 25ಕ್ಕೂ ಹೆಚ್ಚು ಜನಕ್ಕೆ ಅವಶ್ಯಕತೆ ಇದ್ದರೆ ಒಂದು ದಿನ ಮುಂಚಿತವಾಗಿ ಹೇಳಬೇಕು. ಪ್ರತಿ ದಿನ ಒಂದೊಂದು ಮೆನು ಇರುತ್ತದೆ. ಮೆನುವಿನಲ್ಲಿ ಇಲ್ಲದಿರುವ ತಿಂಡಿ ಏನಾದರೂ ಬೇಕಾದಲ್ಲಿ ಸಹ ಆರ್ಡರ್ ಮಾಡಬಹುದು ಆದರೆ ಅದು 5 ಕ್ಕಿಂತ ಹೆಚ್ಚಾಗಿರಬೇಕು. ಊಟ ತಿಂಡಿ ದಿನದಿಂದ ದಿನಕ್ಕೆ ಬೇರೆ ಬೇರೆ ಇರುತ್ತದೆ. ಸಧ್ಯ ಸಸ್ಯಹಾರವನ್ನು ಮಾತ್ರ ಇವರು ಕೊಡುತ್ತಿದ್ದಾರೆ. ಇವರ ಅಡುಗೆ ಮನೆಯೂ ಸಹ ಉತ್ತಮವಾಗಿದ್ದು ಯಾವುದೇ ಸೋಡಾ ಬಳಸದೇ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ.

image


ಆನ್‌ಲೈನ್ ಮೂಲಕವೂ ಆರ್ಡರ್ ಮಾಡಬಹುದು

ಈ ಫುಡ್ ಬಾಕ್ಸ್ ಪ್ರಾರಂಭ ಮಾಡುವುದಕ್ಕೂ ಮುನ್ನ ಮುರುಳಿ ಮತ್ತವರ ಗೆಳೆಯರು ಓಕುಳಿ ಡಾಟ್‌ಕಾಮ್ ಎಂಬ ಹೆಸರಿನ ವೆಬ್‌ಸೈಟ್ ಮೂಲಕ ಮೈಸೂರಿನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸಗಳನ್ನು ಮಾಡುತ್ತಿದ್ದರು. ಸಧ್ಯಕ್ಕೆ ಈ ವೆಬ್‌ಸೈಟ್‌ನಲ್ಲಿ ಫುಡ್ ಬಾಕ್ಸ್‌ಗಾಗಿ ರಿಜಿಸ್ಟರ್ ಮಾಡಿಕೊಂಡು ನಿಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಬಹುದು. ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ಇವರು ಆರ್ಡರ್ ತೆಗೆದುಕೊಳ್ಳುತ್ತಿದ್ದು, ಈಗಾಗಲೇ ವಿಪ್ರೋ ಎಲ್‌ಆ್ಯಂಡ್ ಟಿ ನಂತಹ ಕಂಪನಿಗಳಿಗೆ ಊಟ ಸಪ್ಲೈ ಮಾಡಿದ್ದಾರೆ. ಇತ್ತೀಚೆಗಷ್ಟೇ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿ ತಮ್ಮ ಯೋಜನೆ ಬಗ್ಗೆ ವಿವರಿಸಿದ್ದಾರೆ. ಇವರ ಹೊಸತನದ ಯೋಜನೆ ಕಂಡು ಮೆಚ್ಚಿರು ನಾರಾಯಣ ಮೂರ್ತಿ ಮುರುಳಿ ಗುಂಡಣ್ಣ ಮತ್ತವರ ಸ್ನೇಹಿತರಿಗೆ ಬೆನ್ನುತಟ್ಟಿದ್ದಾರೆ.

ದರವೂ ಬಹಳ ಕಡಿಮೆ

ಫುಡ್ ಬಾಕ್ಸ್‌ನಲ್ಲಿನ ಆಹಾರದ ದರವೂ ಸಹ ಕಡಿಮೆಯಿದ್ದು ಬೆಳಗಿನ ತಿಂಡಿ 40 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟ 50 ರೂಪಾಯಿಗೆ ದೊರೆಯುತ್ತದೆ. ಮೂರು ವೇಳೆಗೂ 130 ರೂಪಾಯಿಗೆ ಕೊಡುತ್ತಿದ್ದಾರೆ. ಬೇರೆ ಊರುಗಳಿಂದ ಮೈಸೂರಿಗೆ ಬಂದಾಗ ಫುಡ್ ಬಾಕ್ಸ್ ನ ಊಟವನ್ನು ಟೇಸ್ಟ್ ಮಾಡಿದ ಕೊಡಗು, ಬೆಂಗಳೂರಿನ ಸಾಕಷ್ಟು ಮಂದಿ ಅಲ್ಲೂ ಈ ಯೋಜನೆಯನ್ನು ಪ್ರಾರಂಭಿಸುವಂತೆ ಬೇಡಿಕೆ ಇಟ್ಟ್ದಿದ್ದಾರೆ. ಈ ಒಟ್ಟಿನಲ್ಲಿ ಎಸಿ ಅಡಿಯಲ್ಲಿ ಕುಳಿತು ತಿಂಗಳಾದ ಕೂಡಲೇ ಉತ್ತಮ ಸಂಬಳ ಎಣಿಸಬೇಕಾದ ಯುವಕರು ಮೈಸೂರಿನ ಮಂದಿಗೆ ಉತ್ತಮ ಆಹಾರ ನೀಡುತ್ತಾ ಮೆಚ್ಚುಗೆ ಗಳಿಸಿ ಸಂಪಾದಿಸುತ್ತಿದ್ದಾರೆ.

" ನನಗೆ ಚಿಕ್ಕಂದಿನಿಂದಲೂ ಊಟದ ವಿಷಯವಾಗಿ ಏನಾದರೂ ಮಾಡಲೇ ಬೇಕು ಎಂಬ ಆಸೆ ಇತ್ತು. ಅದು ಈಗ ನೇರವೆರಿದೆ. ನಾವು ನಾಲ್ವರು ಸ್ನೇಹಿತರ ಸೇರಿಕೊಂಡು ಆರಂಭಿಸಿರುವ ಈ ಸಣ್ಣ ಉದ್ಯಮಕ್ಕೆ ಮೈಸೂರಿಗರಿಂದ ಉತ್ತಮ ಪ್ರೋತ್ಸಾಹ ದೊರೆತಿದೆ. ಯಾವುದ ಅಬ್ಬರದ ಪ್ರಚಾರ ಮಾಡದೇ ಬರೀ ಬಾಯಿ ಮಾತಿನಿಂದಲೇ ಉತ್ತಮ ಪ್ರತಿಕ್ರಿಯೆ ಪಡೆಯಲು ಮುಖ್ಯ ಕಾರಣ. ಇದಕ್ಕೆ ನಮ್ಮ ಪೋಷಕರು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಇನ್ನು ನನ್ನ ಗೆಳೆಯರಾದ ಅಲಾಪ್,ಯತಿರಾಜ್, ಸುಹಾಸ್ ಕೃಷ್ಣ ನಮ್ಮ ಜೊತೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಈ ಯಶಸ್ಸಿಗೆ ಕಾರಣಕರ್ತರು. ಮುಂದಿನ ದಿನಗಳಲ್ಲಿ ಮಾಂಸಹಾರವನ್ನು ಪ್ರಾರಂಭಿಸಬೇಕೆಂಬ ಯೋಜನೆಯಲ್ಲಿದ್ದೇವೆ. ಭವಿಷ್ಯದಲ್ಲಿ ಬೆಂಗಳೂರು ಮತ್ತಿತರ ಕಡೆಗಳಲ್ಲೂ ನಮ್ಮ ಫ್ರಾಂಚೈಸಿಗಳನ್ನು ತೆರೆಯುವ ಆಲೋಚನೆ ಇದೆ. "

-ಮುರುಳಿ ಗುಂಡಣ್ಣ, ಫುಡ್ ಬಾಕ್ಸ್ ತಂಡದ ಸದಸ್ಯ

ಇದನ್ನು ಓದಿ

1. ಹೊಟ್ಟೆಯ ಸಂಗಾತಿ, ಹಸಿವಿನ ಶತ್ರು `Swiggy’

2. ನಂಬರ್ ರಿಜಿಸ್ಟರ್ ಮಾಡಿ ಫ್ರೆಶ್ ತರಕಾರಿ ಪಡೆಯಿರಿ - ಕಡಿಮೆ ಬೆಲೆಗೆ ಮನೆ ಬಾಗಿಲಿಗೆ ಬರುತ್ತೆ ತರಕಾರಿ...

3. ಜಸ್ಟ್​ ಎಳನೀರು ಎಂದು ಮೂಗು ಮುರಿಯಬೇಡಿ.. ಒಂದ್ಸಾರಿ ಟೇಸ್ಟ್​ ಮಾಡಿ ನೋಡಿ..!