ಸೈನಿಕರಿಗೆ 1 ಲಕ್ಷ ರಾಖಿ ಕಳುಹಿಸುವ ಮೂಲಕ ಕುಶಲಕರ್ಮಿಗಳಿಗೆ ನೆರವಾಗುತ್ತಿರುವ ರಾಖಿ 'ಹಬ್ಬ'

ರಕ್ಷಾ ಬಂಧನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಹೊತ್ತಿನಲ್ಲಿ, 'ಜೈ ಜವಾನ್‌, ಜೈ ಆರ್ಟಿಸನ್‌' ಎಂಬ ಉಪಕ್ರಮವು ಸಾರ್ವಜನಿಕರು ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೆ ರಾಖಿಯನ್ನು ಉಡುಗೊರೆಯಾಗಿ ಕಳುಹಿಸುವ ಅವಕಾಶ ಕಲ್ಪಿಸಿರುವುದಲ್ಲದೆ, ರಾಖಿ ತಯಾರಿಸುವ ದೇಶದ ಕುಶಲಕರ್ಮಿಗಳಿಗೂ ಆರ್ಥಿಕ ಪುನಶ್ಚೇತನ ಒದಗಿಸುತ್ತಿದೆ.

ಸೈನಿಕರಿಗೆ 1 ಲಕ್ಷ ರಾಖಿ ಕಳುಹಿಸುವ ಮೂಲಕ ಕುಶಲಕರ್ಮಿಗಳಿಗೆ ನೆರವಾಗುತ್ತಿರುವ ರಾಖಿ 'ಹಬ್ಬ'

Monday July 20, 2020,

2 min Read

ಮಾರ್ಚ್‌ 25 ರಂದು ಭಾರತ ಸರ್ಕಾರವು ದೇಶದೆಲ್ಲೆಡೆ ಹೇರಿದ ಲಾಕ್‌ಡೌನ್‌, ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಿದೆ. ಅಷ್ಟೇಅಲ್ಲದೆ, ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು, ದಿನಗೂಲಿ ಕೆಲಸಗಾರರು ಹಾಗೂ ಹಳ್ಳಿಗಾಡುಗಳು ಮತ್ತ ಅತ್ಯಲ್ಪ ಜನಸಂಪರ್ಕವಿರುವ ಪ್ರದೇಶದ ಜನರೂ ಸಹ ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸಿದ್ದಾರೆ.


ಮತ್ತೊಂದೆಡೆ, ತಮ್ಮ ಕರಕುಶಲ ವಸ್ತುಗಳ ಮಾರಾಟದ ಮೇಲೆಯೇ ನಿಂತಿದ್ದ ಕುಶಲಕರ್ಮಿಗಳ ಆದಾಯವೂ ವಿತರಕರಿಲ್ಲದೆ, ಸಮರ್ಪಕ ಬೇಡಿಕೆಯಿಲ್ಲದೆ ಕುಸಿದಿದೆ.


ಸೈನಿಕರಿಗೆ ರಾಖಿ ತಲುಪಿಸಲು “ಹಬ್ಬ” ನಡೆಸುತ್ತಿರುವ ಉಪಕ್ರಮ

ಕುಶಲಕರ್ಮಿಗಳ ಅವಸ್ಥೆಯನ್ನು ಅರಿತ ರಂಗ್‌ದೇಯ, ʻಹಬ್ಬʼ ಎಂಬ ಸಂಘಟಿತ ಯೋಜನೆಯೊಂದು ಕುಶಲಕರ್ಮಿಗಳ ಆದಾಯ ಪುನಶ್ಚೇತನಗೊಳಿಸುವುದರ ಜೊತೆಗೆ, ಸೈನಿಕರ ಮೌಲ್ಯವನ್ನು ರಾಷ್ಟ್ರದ ಜನತೆಗೆ ತಿಳಿಸುವಂತಹ ಉಪಕ್ರಮವೊಂದನ್ನು ಆರಂಭಿಸಿದೆ.


ವಿಶ್ವವ್ಯಾಪಿ ಹರಡಿರುವ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ತಮ್ಮ ಬದುಕನ್ನು ಕಳೆದುಕೊಂಡಿರುವ, ಆದಾಯವಿಲ್ಲದ ಕುಶಲಕರ್ಮಿಗಳಿಗೆ ಸಹಾಯ ಮಾಡಲು


ʻಜೈ ಜವಾನ್‌, ಜೈ ಆರ್ಟಿಸನ್‌ʼ ಉಪಕ್ರಮವು ಅವರನ್ನು ರಾಖಿ ಹಬ್ಬದ ಪ್ರಯುಕ್ತ ರಾಷ್ಟ್ರದ ಸೈನಿಕರಿಗಾಗಿ ರಾಖಿ ತಯಾರಿಸಲು ಪ್ರೇರೇಪಿಸಿದೆ.


“ಈ ಉಪಕ್ರಮವು ಸಂಪೂರ್ಣವಾಗಿ, ಲಾಭೋದ್ದೇಶವಿಲ್ಲದ್ದಾಗಿದೆ ಹಾಗೂ ಪ್ರಾಮಾಣಿಕ ಬೆಲೆಯನ್ನು ಇದಕ್ಕೆ ನಿಗದಿಪಡಿಸಲಾಗಿದೆ. ನಮ್ಮ ಕೆಲಸಕ್ಕೆ ಗಾಂಧೀಜಿಯವರ ಸತ್ಯಾಗ್ರಹ ತತ್ವಗಳೆ ಆಧಾರ ಹಾಗೂ ಕುಶಲಕರ್ಮಿಗಳ ಜೀವನವನ್ನು ಮತ್ತೆ ಸರಿಯಾದ ಹಾದಿಗೆ ತರಲು ನಾವು ಸಂಪೂರ್ಣ ಪ್ರಯತ್ನ ಮಾಡುತ್ತೇವೆ,” ಎಂದು ರಂಗ್‌ದೇ ಹಾಗೂ ಹಬ್ಬದ ಸಹ-ಸಂಸ್ಥಾಪಕ ರಾಮಕೃಷ್ಣ ತಿಳಿಸಿದರು.


2008ರಲ್ಲಿ ಆರಂಭವಾದ ರಂಗ್‌ದೇ ವ್ಯಕ್ತಿಯಿಂದ ವ್ಯಕ್ತಿಗೆ ಕಿರುಸಾಲ ಕೊಡಿಸುವ ಜಾಲತಾಣವಾಗಿದ್ದು, ರೈತರು, ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಗಳಿಗೆ ತಮ್ಮ ವೇದಿಕೆಯ ಮೂಲಕ ಕಡಿಮೆ-ಬಡ್ಡಿಯ ಸಾಲವನ್ನು ಸಾಮಾಜಿಕ ಹೂಡಿಕೆಗಳ ಮೂಲಕ ನೀಡಿ ಸಹಾಯ ಮಾಡುತ್ತಿದೆ.



ಕೊರೊನಾ ಕಾಲದಲ್ಲಿ


ಕೈಮಗ್ಗದವರು ಹಾಗೂ ಕುಶಲಕರ್ಮಿಗಳ ಆದಾಯವು ದಿನೇ ದಿನೇ ಕುಸಿಯುತ್ತಿರುವ ಬೇಡಿಕೆಯಿಂದಾಗಿ ನಿಂತುಹೋಗಿದೆ. ಅದರ ಪರಿಣಾಮವಾಗಿ ಹಲವರು ನರೇಗಾದಡಿಯಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ.


“ಕಳೆದ ವರ್ಷ ಬಹಳಷ್ಟು ರಾಖಿಗಳನ್ನು ಮಾರಾಟ ಮಾಡಿದ್ದ ಉತ್ತರಾಖಾಂಡದ ಕುಶಲಕರ್ಮಿಗಳು ನಮ್ಮನ್ನು ಸಂಪರ್ಕಿಸಿ ಈ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವಂತೆ ಕೋರಿದರು. ಅವರ ಕೋರಿಕೆಯನ್ನು ನಾವು ಪರಿಗಣಿಸಲು ಸಾಧ್ಯವಿಲ್ಲವಾದರೂ, ಭಾರತೀಯ ಸೈನಿಕ ಕೇಂದ್ರಗಳಿಗೆ ರಾಖಿ ತಲುಪಿಸುವ ಉಪಕ್ರಮವೊಂದು ಹೊಳೆಯಿತು. ಇದರಿಂದ ಕುಶಲಕರ್ಮಿಗಳಿಗೂ ಸಹಾಯವಾಗುತ್ತದೆ ಹಾಗೂ ಸೈನಿಕರಿಗೂ ಹೃತ್ಪೂರ್ವಕ ಸಂದೇಶವನ್ನು ರಾಖಿಯೊಂದಿಗೆ ಕಳುಹಿಸಿದಂತಾಗುತ್ತದೆ," ಎನ್ನುತ್ತಾರೆ ರಾಮ್‌.


ಜೈ ಜವಾನ್‌ ಜೈ ಆರ್ಟಿಸನ್‌ ಗಡಿಗಳನ್ನು ರಕ್ಷಿಸುವ ನಮ್ಮ ಸೈನಿಕರಿಗೆ ಕೃತಜ್ಞತೆಯ ಸಂದೇಶದೊಂದಿಗೆ ನಾಗರಿಕರು ರಾಖಿಗಳನ್ನು ಖರೀದಿಸಿ, ಉಡುಗೊರೆಯಾಗಿ ನೀಡಲು ಅವಕಾಶ ಒದಗಿಸುತ್ತದೆ. ಒಂದು ರಾಖಿಗೆ 100 ರೂ. ಬೆಲೆ ನಿಗದಿಪಡಿಸಲಾಗಿದ್ದು, ದೇಶದಲ್ಲಿರುವ ಎಲ್ಲಾ ಸೈನಿಕ ನೆಲೆಗಳಿಗೆ ಒಟ್ಟೂ 1 ಲಕ್ಷ ರಾಖಿಗಳನ್ನು ಕಳುಹಿಸಲು ತಂಡವು ನಿರ್ಧರಿಸಿದೆ.


ಈ ರಾಖಿಗಳನ್ನು ಉತ್ತರಾಖಂಡದ ಪಿಥೋರಗರ್ ಮತ್ತು ಚಂಪಾವತ್, ತಮಿಳುನಾಡಿನ ಧರ್ಮಪುರಿ, ಗುಜರಾತ್‌ನ ಕಚ್, ಬಿಹಾರದ ಪಾಟ್ನಾ ಮತ್ತು ಜಾರ್ಖಂಡ್‌ನ ಜಮ್‌ಶೆದ್ಪುರ್‌ನ ವಿವಿಧ ಕುಶಲಕರ್ಮಿ ಸಮುದಾಯಗಳು ತಯಾರಿಸುತ್ತವೆ.


ಹಬ್ಬ ಕುಶಲಕರ್ಮಿ-ಕೇಂದ್ರಿತ ಉಪಕ್ರಮವಾಗಿದ್ದು, ಅವರ ಆದಾಯ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.