ಜಾರ್ಖಂಡ್‌ನಲ್ಲಿ ಶಿಕ್ಷಣ ಕ್ರಾಂತಿಯನ್ನುಂಟು ಮಾಡುತ್ತಿರುವ ಐಎಎಸ್ ಅಧಿಕಾರಿ

ಸಾಮಾಜಿಕ ಅಭಿವೃದ್ಧಿ ಮತ್ತು ಬದಲಾವಣೆಯ ಕುರಿತು ಕೆಲವೇ ಜನರು ಮಾತನಾಡಬಹುದು. ಐಎಎಸ್ ಅಧಿಕಾರಿ ಆದಿತ್ಯ ರಂಜನ್ ಅಂತಹ ವ್ಯಕ್ತಿಗಳಲ್ಲಿ ಒಬ್ಬರು, ಇವರು ಜಾರ್ಖಂಡ್‌ನ ಶಿಂಗ್‌ಭೂಮ್ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದ ಸ್ಥಿತಿಯನ್ನು ಬದಲಾಯಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಜಾರ್ಖಂಡ್‌ನಲ್ಲಿ ಶಿಕ್ಷಣ ಕ್ರಾಂತಿಯನ್ನುಂಟು ಮಾಡುತ್ತಿರುವ ಐಎಎಸ್ ಅಧಿಕಾರಿ

Saturday March 07, 2020,

4 min Read

ಜಾರ್ಖಂಡ್‌ನ ಶಿಂಗ್‌ಭೂಮ್ ಜಿಲ್ಲೆಯಾದ್ಯಂತ 650 ಅಂಗನವಾಡಿಗಳ (ಗ್ರಾಮೀಣ ಶಿಶುಪಾಲನಾ ಕೇಂದ್ರಗಳು) ಗೋಡೆಗಳ ಮೇಲೆ ಸಂಖ್ಯೆಗಳು ಮತ್ತು ವರ್ಣಮಾಲೆಗಳನ್ನು ಚಿತ್ರಿಸಲಾಗಿದೆ. ಬಿಲ್ಡಿಂಗ್ ಆಸ್ ಲರ್ನಿಂಗ್ ಏಡ್ (ಬಿಎಎಲ್‌ಎ – ಕಟ್ಟಡವನ್ನು ಕಲಿಕೆಗೆ ಸಹಾಯವಾಗುವಂತೆ ಬಳಸುವುದು) ಎಂದು ಕರೆಯಲ್ಪಡುವ ಇದು ಜಿಲ್ಲೆಯ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಅನೇಕ ತಂತ್ರಗಳಲ್ಲಿ ಒಂದಾಗಿದೆ. ಈ ಪ್ರದೇಶ ಭಾರತದ ಬಡ ಕ್ಷೇತ್ರಗಳಲ್ಲಿ ಒಂದಾಗಿದ್ದು ಇಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯ ಮಟ್ಟ ಹೆಚ್ಚಿದೆ.


ಇದು ಮತ್ತು ಇತರ ಸೌಲಭ್ಯಗಳಾದ ಸ್ವಚ್ಛತೆ ಕಾಪಡುವುದು, ಮೂಲಭೂತ ಶಿಕ್ಷಣವನ್ನು ಪ್ರಾರಂಭಿಸುವುದು ಮತ್ತು ಪೌಷ್ಠಿಕ ಆಹಾರವನ್ನು ಒದಗಿಸುವುದು ಇವೆಲ್ಲವೂ ಐಎಎಸ್ ಅಧಿಕಾರಿ ಆದಿತ್ಯ ರಂಜನ್ ಅವರ ಮತ್ತು ಅವರ ಯೋಜನೆಯಾದ ಮಾದರಿ ಅಂಗನವಾಡಿಯ ಪ್ರಯತ್ನಗಳ ಫಲಿತಾಂಶವಾಗಿದೆ.


Y

ಐಎಎಸ್ ಅಧಿಕಾರಿ ಆದಿತ್ಯ ರಂಜನ್

“ಈ ಮೊದಲು, ಮೂಲಸೌಕರ್ಯಗಳ ಕೊರತೆಯಿರುವುದು ಒಂದೆಡೆಯಾದರೆ, ಸೇವಕರು (ಕೆಲಸಗಾರರು) ಖಿಚ್ಡಿ ಬೇಯಿಸಿ, ಮಕ್ಕಳಿಗೆ ಆಹಾರ ನೀಡಿ ಮನೆಗೆ ಕಳುಹಿಸುತ್ತಿದ್ದರು. ಅಲ್ಲಿ ಮಕ್ಕಳಿಗೆ ಪಾಠವನ್ನು ಬೋಧನೆ ಮಾಡಬೇಕೆಂಬ ಪರಿಕಲ್ಪನೆಯೆ ಇರಲಿಲ್ಲ,” ಎಂದು ಅವರು ಹೇಳುತ್ತಾರೆ.


ಆದ್ದರಿಂದ, ಅಧಿಕಾರಿಯು ಶಾಲೆಯ ವೇಳಾಪಟ್ಟಿಯನ್ನು ರಚಿಸುವ ಮೂಲಕ, ಪ್ರತಿದಿನ ಪಾಠಗಳನ್ನು ನಿಗದಿಪಡಿಸಿ, ಸಂಖ್ಯೆಗಳನ್ನು, ವರ್ಣಮಾಲೆಗಳನ್ನು ವರ್ಣಚಿತ್ರವಾಗಿ ಗೋಡೆಯ ಮೇಲೆ ಬರೆಸುವ ಮೂಲಕ ಶಾಲೆಯ ಅಭಿವೃದ್ಧಿಯನ್ನು ತಮ್ಮ ಕೈಗೆ ತೆಗೆದುಕೊಂಡರು.


“ಮಗುವಿನ ಮೊದಲ 1,000 ದಿಂದ 2,000 ದಿನಗಳು ಅವರ ಮಾನಸಿಕ ಬೆಳವಣಿಗೆಗೆ ಬಹಳ ಮುಖ್ಯ ಎಂದು ಹೇಳಲಾಗುತ್ತದೆ,” ಇದು ಈ ಯೋಜನೆಯ ಹಿಂದಿನ ಆಲೋಚನೆ ಎನ್ನುತ್ತಾರೆ ಆದಿತ್ಯ.


ಸ್ಫೂರ್ತಿ

ಒರಾಕಲ್‌ನಲ್ಲಿ ಕೆಲಸ ತ್ಯಜಿಸಿದ ನಂತರ, ಆದಿತ್ಯ ಅವರು 2015 ರಲ್ಲಿ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ಪಾಸ್ ಆದರು. ಡಿಯೊಘರ್ ಜಿಲ್ಲೆಯಲ್ಲಿ ಅವರ ಆರಂಭಿಕ ವರ್ಷಗಳ ಕೆಲಸದ ಸಮಯದಲ್ಲಿ, ಮಾದರಿ ಅಂಗನವಾಡಿಗಳ ಕಲ್ಪನೆಯು ಅವರ ತಲೆಯಲ್ಲಿ ಸುಳಿಯಿತು.


ಒಬ್ಬಂಟಿಯಾಗಿ ವಾಸಿಸುತ್ತಿದ್ದ ವಿಧವೆ ಕೆಲಸಗಾರ್ತಿಯೊಬ್ಬಳು ತನಗೆ ಬರುತ್ತಿದ್ದ ಮಾಸಿಕ 4,500 ರೂ ಸಂಬಳವನ್ನು ಬಳಸಿಯೇ ಒಂದು ಅಂಗನವಾಡಿಯನ್ನು ಸುಧಾರಿಸಿದ್ದನ್ನು ನೋಡಿ ಆದಿತ್ಯಾ ಸ್ಫೂರ್ತಿ ಪಡೆದರು.


“ಅಂಗನವಾಡಿಯ ಉಸ್ತುವಾರಿಯನ್ನು ನೋಡಿಕೊಳ್ಳುವ ಕೆಲಸಗಾರ್ತಿ ಅದನ್ನು ಅಂತಹ ಸುಂದರವಾದ ಸ್ಥಳವಾಗಿ ಪರಿವರ್ತಿಸುವುದನ್ನು ನೋಡುವುದು ನನಗೆ ಒಂದು ಅದ್ಭುತ ಕ್ಷಣವಾಗಿತ್ತು. ಆ ಅಂಗನವಾಡಿ ನಾನು ನೋಡಿರುವ ಯಾವುದೇ ಪ್ಲೇಸ್ಕೂಲ್‌ಗಿಂತ ಕಡಿಮೆಯಿಲ್ಲ. ಅವರು ತಮ್ಮ ಜೇಬಿನಿಂದ ಕೊಡುಗೆ ನೀಡಬಹುದಾದರೆ, ಸರ್ಕಾರವು ಏಕೆ ಹಾಗೆ ಮಾಡಲು ಸಾಧ್ಯವಿಲ್ಲ?” ಅವರು ನೆನಪಿಸಿಕೊಳ್ಳುತ್ತಾರೆ.


ಇದರ ಫಲವಾಗಿ, ಡಿಸೆಂಬರ್ 2018 ರಲ್ಲಿ, ಅವರು ಇದೇ ಮಾದರಿಯನ್ನು ಶಿಂಗ್‌ಭೂಮ್‌ನಲ್ಲಿ “ಹೆಚ್ಚು ಸುಧಾರಿತ ತಂತ್ರಜ್ಞಾನದೊಂದಿಗೆ,” ಪುನರಾವರ್ತಿಸಲು ಪ್ರಾರಂಭಿಸಿದರು ಎಂದು ಆದಿತ್ಯ ಹೇಳುತ್ತಾರೆ.


ಮಾದರಿ ಅಂಗನವಾಡಿಗಳಲ್ಲಿ ಅಧಿಕಾರಿ ಆದಿತ್ಯ ರಂಜನ್


2011 ರ ಜನಗಣತಿಯ ಪ್ರಕಾರ, ರಾಷ್ಟ್ರೀಯ ಸಾಕ್ಷರತಾ ಸರಾಸರಿ 74.04 ಪ್ರತಿಶತವಿದ್ದರೆ ಜಾರ್ಖಂಡ್‌ನ ಸಾಕ್ಷರತಾ ಪ್ರಮಾಣವು ಶೇಕಡಾ 67 ರಷ್ಟಿದೆ.


ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ಪೋಷಣೆಯನ್ನು ನೀಡುವಲ್ಲಿ ಅಂಗನವಾಡಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಒಂದು ವರ್ಷದ ಹಿಂದಿನ ಮಕ್ಕಳ ಎತ್ತರ ಮತ್ತು ತೂಕದ ಸಮೀಕ್ಷೆಯು ಸುಧಾರಣೆಯನ್ನು ತೋರಿಸುತ್ತಿದೆ ಎಂದು ಆದಿತ್ಯ ಹೇಳಿದ್ದಾರೆ.


ಹೆಚ್ಚಿನ ಮಕ್ಕಳು ನಿಯಮಿತವಾಗಿ ಅಂಗನವಾಡಿ ಕೇಂದ್ರಕ್ಕೆ ಬರಲು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಅವರು ಹೇಳುತ್ತಾರೆ. ಅದೇ ಸಮಯದಲ್ಲಿ, ಆದಿತ್ಯ, ಮಕ್ಕಳ ಹೆತ್ತವರಲ್ಲಿ ವರ್ತನೆಯ ಬದಲಾವಣೆಯು ಅಷ್ಟೇ ಮುಖ್ಯ ಎಂದು ಒತ್ತಿಹೇಳುತ್ತಾರೆ ಏಕೆಂದರೆ ಮಗುವು ದಿನದ ಪ್ರಮುಖ ಭಾಗವನ್ನು ಅವರೊಂದಿಗೆ ಕಳೆಯುತ್ತದೆ.


ಸವಾಲುಗಳು

ಜಿಲ್ಲೆಯ 2,330 ಅಂಗನವಾಡಿ ಕೇಂದ್ರಗಳಲ್ಲಿ 1,000 ಕೇಂದ್ರಗಳನ್ನು ಈ ಮಾರ್ಚ್ ಅಂತ್ಯದ ವೇಳೆಗೆ ಮಾದರಿ ಅಂಗನವಾಡಿಗಳಾಗಿ ಪರಿವರ್ತಿಸುವ ಉದ್ದೇಶವನ್ನು ಆದಿತ್ಯ ಹೊಂದಿದ್ದಾರೆ. ಪ್ರಗತಿಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಮಾತನಾಡಿದ ಅವರು, ಭೂಮಿ, ಕಟ್ಟಡ ಮತ್ತು ಮೂಲಸೌಕರ್ಯಗಳ ಸಮಸ್ಯೆಯಿದೆ ಎನ್ನುತ್ತಾರೆ.


"ಆದ್ದರಿಂದ, ನಾವು ಸ್ವಲ್ಪ ಉತ್ತಮ ಸ್ಥಿತಿಯಲ್ಲಿರುವ ಅಂಗನವಾಡಿಯೊಂದಿಗೆ ಪ್ರಾರಂಭಿಸಿದ್ದೇವೆ," ಎಂದು ಅಧಿಕಾರಿ ಹೇಳುತ್ತಾರೆ.


ಆದಾಗ್ಯೂ, ಕೆಲವು ಬದಲಾವಣೆಗಳನ್ನು ವಿರೋಧಿಸಿದ ಕಾರ್ಮಿಕರೇ ಈ ಯೋಜನೆಗೆ ದೊಡ್ಡ ಸವಾಲು ಎಂದು ಅವರು ಹೇಳುತ್ತಾರೆ. “ಅವರು ಮೂಲಸೌಕರ್ಯ ಸುಧಾರಣೆಗಳನ್ನು ಶ್ಲಾಘಿಸಿದ್ದರೂ, ಬಿಎಎಲ್‌ಎ ಬಳಕೆ, ಬೋಧನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲಿ ಸಾಕಷ್ಟು ಪ್ರತಿರೋಧವಿತ್ತು,” ಎಂದು ಆದಿತ್ಯ ಹೇಳುತ್ತಾರೆ.


ಇದರ ಫಲವಾಗಿ, ಯೋಜನೆಯ ಮಹತ್ವ ಮತ್ತು ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಉಸ್ತುವಾರಿಗಳಿಗೆ ವಸತಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಪ್ರಾರಂಭಿಸಿದರು.


ಇದಲ್ಲದೆ, ಸಂಪನ್ಮೂಲಗಳನ್ನು ಸರಿಯಾಗಿ ಬಳಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಕೇಂದ್ರಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ದಾಖಲಿಸಲು ಇ-ಸಮಿತ್ ಆ್ಯಪ್ ಅನ್ನು ಪರಿಚಯಿಸಿದರು. ಆದಿತ್ಯ ಪ್ರತಿ ತಿಂಗಳ ಕೊನೆಯಲ್ಲಿ ಎಷ್ಟು ಕೇಂದ್ರಗಳನ್ನು ನಿಯಮಿತವಾಗಿ ತೆರೆಯುತ್ತಿದ್ದಾರೆ ಮತ್ತು ತರಗತಿಗಳನ್ನು ನಡೆಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುತ್ತಾರೆ.


ಶಿಕ್ಷಣದ ಮೂಲಕ ಸಬಲೀಕರಣ

ಮೀಸಲಾತಿ ಆಧಾರಿತ ಜಿಲ್ಲೆಯಾಗಿರುವುದರಿಂದ, ಶಿಂಗ್‌ಭೂಮ್ ನಿವಾಸಿಗಳು ಕೌಶಲ್ಯದ ಕೊರತೆಯನ್ನು ಮತ್ತು ಹೊರಗಿನವರೊಂದಿಗೆ ಜ್ಞಾನವನ್ನು ಹಂಚಿಕೊಳ್ಳುವ ಸವಾಲುಗಳನ್ನು ಎದುರಿಸುತ್ತಾರೆ.


“ಜಿಲ್ಲೆಯ ಜನರ ದೀರ್ಘಾಯುಷ್ಯವು ತುಂಬಾ ಕಡಿಮೆಯಾಗಿದೆ ಮತ್ತು ನಿವೃತ್ತಿಯಾಗುವ ಮೊದಲು ಸರ್ಕಾರಿ ಅಧಿಕಾರಿಗಳು ನಿಧನವಾದರೆ, ಅವರ ಕುಟುಂಬದ ಸದಸ್ಯರಿಗೆ ಅವರ ಶೈಕ್ಷಣಿಕ ಹಿನ್ನೆಲೆಯನ್ನು ಲೆಕ್ಕಿಸದೆ ಸರ್ಕಾರದಲ್ಲಿ ಕೆಲಸ ನೀಡಲಾಗುತ್ತದೆ. ಇಲ್ಲಿ ಅಸಮರ್ಥತೆಯು ಶಾಶ್ವತವಾಗಿದೆ,” ಎಂದು ಅವರು ವಿವರಿಸುತ್ತಾರೆ.




ಆದ್ದರಿಂದ, ಅವರು ಕಂಪ್ಯೂಟರ್ ಸಾಕ್ಷರತೆ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಜಿಲ್ಲಾ ಇ-ಗವರ್ನನ್ಸ್ ಸೊಸೈಟಿ (ಡಿಜಿ) ಕಾರ್ಯಕ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಹೊರಟರು, ಇದರಲ್ಲಿ ವೃತ್ತಿಪರವಾಗಿ ಹೇಗೆ ನಡೆಯುವುದು ಮತ್ತು ಮಾತನಾಡುವುದು, ಸಂದರ್ಶನಗಳಲ್ಲಿ ಮತ್ತು ಗುಂಪು ಚರ್ಚೆಗಳಲ್ಲಿ ಮಾತನಾಡುವುದು ಮತ್ತು ಮೊಬೈಲ್ ಫೋನ್ ಬಳಸುವ ವಿಧಾನಗಳನ್ನು ತಿಳಿಸುತ್ತಾರೆ.


ಇಲ್ಲಿಯವರೆಗೆ 2,100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದೆ ಎಂದು ಆದಿತ್ಯ ಹೇಳುತ್ತಾರೆ, “ಕಂಪ್ಯೂಟರ್‌ಗಳನ್ನು ನೋಡಿರದ ಮಕ್ಕಳು ಮೌಸ್ ಅನ್ನು ದಿಟ್ಟಿಸಿ ನೋಡುತ್ತಾರೆ ಮತ್ತು ಅದನ್ನು ಏನು ಮಾಡಬೇಕೆಂದು ಕೇಳುತ್ತಾರೆ. ಬಳಸುವಾಗ ಅದು ಮುರಿಯಬಹುದು ಎಂದು ಹಲವರು ಹೆದರುತ್ತಾರೆ. ಮತ್ತು ಎಲ್ಲರೂ ಈ ಕಾರ್ಯಕ್ರಮದ ಅಡಿಯಲ್ಲಿ ಕಲಿಯುತ್ತಾರೆ,” ಎನ್ನುತ್ತಾರೆ ಆದಿತ್ಯ.


ಕಳೆದ ವರ್ಷದ ಶಿಕ್ಷಕರ ದಿನವು ಮರೆಯಲಾಗದ ದಿನಗಳಲ್ಲಿ ಒಂದಾಗಿದೆ ಎಂದು ಆದಿತ್ಯ ಹೇಳುತ್ತಾರೆ. ಅವರ ವಿದ್ಯಾರ್ಥಿಗಳು, ಕೆಲವರು ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಗಳಿಸಿದ್ದಾರೆ, ಕೆಲವರು ಸ್ವತಃ ಶಿಕ್ಷಕರಾಗಿದ್ದರು, ಹಾಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅವರ ಕಚೇರಿಗೆ ಬಂದಿದ್ದರು.


“ಅವರಿಗೆ ಏನು ಬೇಕು ಎಂದು ನಾನು ಅವರನ್ನು ಕೇಳಿದೆ, ಮತ್ತು ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಕೋಚಿಂಗ್ ಕೇಂದ್ರಗಳು ಬೇಕು ಎಂದು ಹೇಳಿದರು,” ಎಂದು ಆದಿತ್ಯ ಹೇಳುತ್ತಾರೆ.


ಇದರ ಫಲವಾಗಿ, ಈ ಫೆಬ್ರುವರಿಯಲ್ಲಿ, ಆದಿತ್ಯ ತಮ್ಮ ಮೊದಲ ತರಬೇತಿ ಕೇಂದ್ರವನ್ನು ಶಿಂಗ್‌ಭೂಮ್‌ನಲ್ಲಿ ತೆರೆದರು, ಅಲ್ಲಿ 1,200 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ತಲಾ 400 ವಿದ್ಯಾರ್ಥಿಗಳ ಮೂರು ಬ್ಯಾಚ್‌ಗಳಿವೆ, ಅವರು ಇಂಗ್ಲೀಷ್, ಗಣಿತ, ವ್ಯವಹಾರ ಮತ್ತು ಸಾಮಾನ್ಯ ಅಧ್ಯಯನವನ್ನು ಕಲಿಯುತ್ತಾರೆ.


“ನಾನು ಅವರಿಗೆ ಈ ಕ್ಷೇತ್ರಗಳಲ್ಲಿ ಆರು ತಿಂಗಳು ತರಬೇತಿ ನೀಡಲು ಬಯಸುತ್ತೇನೆ, ಇದರಿಂದ ಅವರಿಗೆ ಸರಳ ಪದಗಳು ಮತ್ತು ವಾಕ್ಯ ರಚನೆಯ ಬಗ್ಗೆ ತಿಳಿಯುತ್ತದೆ," ಎಂದು ಅವರು ವಿವರಿಸುತ್ತಾರೆ. ಈ ತರಬೇತಿ ಕೇಂದ್ರದಲ್ಲಿ ಆದಿತ್ಯ ಸಾಮಾನ್ಯ ಅಧ್ಯಯನ ವಿಷಯದ ತರಗತಿಯನ್ನು ತೆಗೆದುಕೊಳ್ಳುತ್ತಾರೆ.

ಆರು ತಿಂಗಳ ಅವಧಿಯ ಕೋರ್ಸ್ ಮುಗಿದ ನಂತರ, ಆದಿತ್ಯ ಆಯ್ಕೆ ಮತ್ತು ಅರ್ಹತೆಯನ್ನು ಆಧರಿಸಿ ಅವುಗಳನ್ನು ವರ್ಗೀಕರಿಸಲು ಯೋಜಿಸಿದ್ದಾರೆ ಮತ್ತು ವಿವಿಧ ಪರೀಕ್ಷೆಗಳ ಮೇಲೆ ಕೇಂದ್ರೀಕರಿಸಿದ 10 ರಿಂದ 20 ಬ್ಯಾಚ್‌ಗಳನ್ನು ರಚಿಸುವ ಯೋಜನೆಯಲ್ಲಿದ್ದಾರೆ.


ಜಾರ್ಖಂಡ್‌ನ ಬಕೋರಾದ ಉಪನಗರಗಳಲ್ಲಿ ಬೆಳೆದ ಐಎಎಸ್ ಅಧಿಕಾರಿ ಆದಿತ್ಯ ರಂಜನ್ ಅವರ ಕಥೆ ಬದಲಾವಣೆಯು ಮನೆಯಲ್ಲಿಯೇ ಪ್ರಾರಂಭವಾಗುತ್ತದೆ ಎಂಬುದನ್ನು ತೋರಿಸುತ್ತದೆ.