ಕಾಳಿ ದೇವಸ್ಥಾನ ಮರು ನಿರ್ಮಾಣ ಮಾಡುವ ಮೂಲಕ ಎಲ್ಲಾ ಜಾತಿಯೂ ಒಂದೆ ಎಂದಿದ್ದಾರೆ ಮುಸ್ಲಿಂ ಬಾಂಧವರು

ರಸ್ತೆ ಅಗಲೀಕರಣಕ್ಕೆ ತುತ್ತಾಗಿದ್ದ ಕಾಳಿ ದೇವಸ್ಥಾನವನ್ನು ಮರು ನಿರ್ಮಾಣ ಮಾಡಿ ಭಾವೈಕ್ಯತೆ ಸಾರಿದ್ದಾರೆ ಪಶ್ಮಿಮ ಬಂಗಾಳದ ಮುಸ್ಲಿಂ ಭಾಂದವರು.

ಕಾಳಿ ದೇವಸ್ಥಾನ ಮರು ನಿರ್ಮಾಣ ಮಾಡುವ ಮೂಲಕ ಎಲ್ಲಾ ಜಾತಿಯೂ ಒಂದೆ ಎಂದಿದ್ದಾರೆ ಮುಸ್ಲಿಂ ಬಾಂಧವರು

Tuesday November 12, 2019,

2 min Read

ತುಂಬಾ ವರ್ಷಗಳಿಂದಲೂ ಕೆಲವೊಂದು ಭಾಗದಲ್ಲಿ ಕೋಮುಗಲಭೆಗಳು ಇದ್ದೇ ಇವೆ. ಇಂದಿಗೂ ಮುಸ್ಲಿಂ ಹಿಂದೂ ಜಗಳಗಳು ನಡೆಯುತ್ತಲೇ ಇವೆ. ಈ ಜಗಳಗಳಲ್ಲಿ ಸಾಕಷ್ಟು ಮಂದಿ ಪ್ರಾಣ ತೆತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದಿಷ್ಟು ಸ್ಥಳಗಳಲ್ಲಿ ಹಿಂದೂ ಮುಸ್ಲಿಮರು ಸಹೋದರರ ರೀತಿಯಲ್ಲಿರುವುದನ್ನು ನೋಡಿದ್ದೇವೆ. ಇದೀಗ ಈ ಜಾತಿಯನ್ನು ತೊಡೆದು ಹಾಕಿ ಹಿಂದೂ ದೇವಸ್ಥಾನ ಮರು ನಿರ್ಮಾಣ ಮೂಲಕ ಭಾವೈಕ್ಯತೆ ಸಾರಿದ್ದಾರೆ ಪಶ್ಮಿಮ ಬಂಗಾಳದ ಮುಸ್ಲೀಂರು.


ಎರಡು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ನ್ಯಾನೂರ್ ಪ್ರದೇಶದ ಬಸಾಪುರ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾರ್ಯ ಮಾಡುವ ವೇಳೆ ರಸ್ತೆ ಪಕ್ಕದಲ್ಲಿದ್ದ 30 ವರ್ಷ ಹಳೆಯ ಕಾಳಿ ದೇವಸ್ಥಾನವನ್ನು ನೆಲಸಮ ಮಾಡಲಾಗುತ್ತದೆ. ಈ ವೇಳೆ ದೇವಸ್ಥಾನ ಮರು ನಿರ್ಮಾಣ ಮಾಡಲು ಹಿಂದು ಬಾಂಧವರ ಜೊತೆ ಮುಸ್ಲಿಂ ಬಾಂಧವರು ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ, ವರದಿ ಹಿಂದುಸ್ಥಾನ್ ಟೈಮ್ಸ್.


(ಚಿತ್ರ ಕೃಪೆ: ಪಿಕ್ಸಾಬೆಯ್)


ದೇವಸ್ಥಾನಕ್ಕಾಗಿ ಜಮೀನು ಖರೀದಿ ಮಾಡಿ, ದೇವಸ್ಥಾನ ನಿರ್ಮಾಣ ಮಾಡಲು ಬೇಕಾದ ಹಣವನ್ನು ಇಮಾಮಾ ನಾಸಿರುದ್ದೀನ್ ಮಂಡಲ್ ಹಾಗೂ ಅಲ್ಲಿನ ಸ್ಥಳೀಯ ಮುಸ್ಲೀಂರು ಸೇರಿ ಸುಮಾರು 10 ಲಕ್ಷ ಹಣವನ್ನು ಸಂಗ್ರಹ ಮಾಡಿ ಕಾಳಿ ದೇವಸ್ಥಾನವನ್ನು ಮರು ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವನ್ನು ದೀಪಾವಳಿ ಪ್ರಯುಕ್ತ ಉದ್ಘಾಟನೆ ಮಾಡಲಾಯ್ತು. ಈ ದೇವಸ್ಥಾನವನ್ನು ಸ್ಥಳೀಯ ಮಸೀದಿಯೊಂದರೆ ಮೌಲ್ವಿ ಉದ್ಘಾಟನೆ ಮಾಡಿರುವುದು ವಿಶೇಷ.


ಹಿಂದುಸ್ಥಾನ್ ಟೈಮ್ಸ್ ಜೊತೆ ಮಾತನಾಡುತ್ತಾ ನಾಸಿರುದ್ದೀನ್,


“ನಾನು ಅನೇಕ ಮಸೀದಿ ಹಾಗೂ ಮದರಸಾಗಳನ್ನು ಉದ್ಘಾಟನೆ ಮಾಡಿದ್ದೇನೆ. ಆದರೆ ಮೊದಲ ಬಾರಿಗೆ ಹಿಂದೂ ದೇವಸ್ಥಾನ ಉದ್ಘಾಟನೆ ಮಾಡಿದೆ. ಇದೊಂದು ವಿಭಿನ್ನ ಭಾವನೆ ಎನ್ನುತ್ತಾರೆ. ಇನ್ನೊಂದು ವಿಶೇಷ ಅಂದರೆ ಮೊಹಮ್ಮದ್ ಫರೂಕ್ ಎಂಬ ವ್ಯಕ್ತಿ ಈ ದೇವಸ್ಥಾನ ನಿರ್ಮಿಸಲು ಸುಮರು 10 ಲಕ್ಷ ಬೆಲೆ ಬಾಳುವ ಜಮೀನನ್ನು ನೀಡಿದ್ದಾರೆ,” ಎಂದರು.


ಸ್ಥಳೀಯರಾದ ನಿಖಿಲ್ ಭಟ್ಟಾಚಾರ್ಯ ಮಾತನಾಡುತ್ತಾ, ನಾವು ದೇವಸ್ಥಾನ ಮರು ನಿರ್ಮಾಣ ಮಾಡಬೇಕೆಂದು ಅಂದುಕೊಂಡಿದ್ದೆವು. ಇದಕ್ಕೆ ಮುಸ್ಲಿಂ ಬಾಂಧವರು ಕೈ ಜೋಡಿಸಿದರು. ದೇವಾಲಯಕ್ಕಾಗಿ ಖರ್ಚು ಮಾಡಿದ 10 ಲಕ್ಷ ರೂ. ಗಳಲ್ಲಿ 7 ಲಕ್ಷ ರೂ.ಗಳನ್ನು ಮುಸ್ಲಿಮರು ಸಂಗ್ರಹಿಸಿದ್ದಾರೆ ಎಂದರು.


ಇನ್ನು ಸ್ಥಳಿಯರಾದ ಹೇಳುವಂತೆ, ರಸ್ತೆ ಅಗತ್ಯತೆ ಇದ್ದಿದ್ದರಿಂದ ಅಗಲೀಕರಣಕ್ಕೆ ದೇವಸ್ಥಾನ ನೆಲಸಮವಾಯ್ತು. ನಾವು ಮತ್ತೆ ಪುನರ್ ನಿರ್ಮಾಣ ಮಾಡಬೇಕು ಎಂದುಕೊಂಡೆವು. ಸ್ನೇಹಿತರಲ್ಲಿ ಚರ್ಚೆ ಮಾಡಿದೇವು. ಅಲ್ಲಿ ಮುಸ್ಲಿಂ ಬಾಂಧವರೇ ಹೆಚ್ವಿನ ಸಂಖ್ಯೆಯಲ್ಲಿದ್ದರು. ಇವರು ಸಹಾಯ ಮಾಡದಿದ್ದರೆ ನಾವು ದೇವಸ್ಥಾನ ಮರು ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ ಭಾನುವಾರ ಸಂಜೆ ನಾಸಿರುದ್ದೀನ್ ಅವರ ಕೈಯಿಂದ ದೇವಸ್ಥಾನ ಉದ್ಘಾಟನೆ ಮಾಡಿದೆವು ಅಂತಾರೆ ದೇವಸ್ಥಾನ ಪೂಜಾ ಸಮಿತಿ ಅಧ್ಯಕ್ಷ ಸುನೀಲ್, ವರದಿ, ದಿ ಲಾಜಿಕಲ್ ಇಂಡಿಯನ್.


ಈ ಪ್ರದೇಶದಲ್ಲಿ ಮೊದಲಿನಿಂದಲೂ ಕೋಮು ಸೌಹಾರ್ಧತೆ ಇದೆ ಎನ್ನುವುದು ವರದಿಗಳಿಂದ ತಿಳಿದಿದೆ. ಈ ಹಿಂದೆ ಕೂಡ ಹಿಂದುಗಳು ಮುಸ್ಲಿಂರಿಗೆ ಹಾಗೂ ಮುಸ್ಲಿಮರು ಹಿಂದುಗಳಿಗೆ ಸಹಾಯ ಮಾಡುತ್ತಾ ಒಬ್ಬರಿಗೊಬ್ಬರು ಆಸರೆಯಾಗುತ್ತಿದ್ದಾರೆ. ಮುಸ್ಲೀಂ ಬಾಂಧವರು ಮಾಡಿದ್ದ ಈ ಕೆಲಸ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಜಾತಿ ಜಾತಿ ಎಂದು ಹೊಡೆದಾಡಿಕೊಳ್ಳುವವರಿಗೆ ಈ ನೈಜ ಕಥೆ ಸ್ಪೂರ್ತಿಯೇ ಸರಿ.