ಮಾನಸಿಕ ಅಸ್ವಸ್ಥತೆಯಿಂದ ಚೇಂಜ್‌ ಮೇಕರ್‌: ಸ್ವಪ್ನಿಲ್‌ ತಿವಾರಿಯವರು ವೈಕಲ್ಯವನ್ನು ಮೆಟ್ಟಿ ನಿಂತು ಇತತರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ

ಸ್ವಪ್ನಿಲ್‌ ತಿವಾರಿಯವರು ಸಮಸ್ಯೆಯಲ್ಲಿರುವ ತನ್ನ ಕುಟುಂಬದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ, ಕುಶಲಕರ್ಮಿಗಳಿಗೆ ಜೀವನೋಪಾಯವನ್ನು ಹುಡುಕಿಕೊಟ್ಟಿದ್ದಾರೆ, ಹಲವರನ್ನು ಖಿನ್ನತೆಯಿಂದ ಹೊರತಂದಿದ್ದಾರೆ ಮತ್ತು ದುರ್ಬಲ ವರ್ಗದವರಿಗೆ ಸಕಾರಾತ್ಮಕ ಮನೋಭಾವ ಬೆಳೆಸುವ ಮತ್ತು ಭರವಸೆ ತುಂಬುವ ಕೆಲಸ ಮಾಡುತ್ತಿದ್ದಾರೆ.

ಮಾನಸಿಕ ಅಸ್ವಸ್ಥತೆಯಿಂದ ಚೇಂಜ್‌ ಮೇಕರ್‌: ಸ್ವಪ್ನಿಲ್‌ ತಿವಾರಿಯವರು ವೈಕಲ್ಯವನ್ನು ಮೆಟ್ಟಿ ನಿಂತು ಇತತರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ

Friday July 26, 2019,

4 min Read

ಹುಟ್ಟುವಾಗಲೇ ಡಿಸ್ಲೆಕ್ಸಿಕ್ ಮತ್ತು ಸೈನಸ್ಥೆಟಿಕ್‌ (ಈ ಖಾಯಿಲೆಯಲ್ಲಿ 5 ಇಂದ್ರಿಯಗಳಲ್ಲಿ ಯಾವುದಾದರೂ ಒಂದು ಇಂದ್ರಿಯ ಇನ್ನೊಂದನ್ನು ಉತ್ತೇಜಿಸುತ್ತದೆ) ಕಾಯಿಲೆಯಿಂದ ಬಳಲುತ್ತಿರುವ ಸ್ವಪ್ನಿಲ್‌ ತಿವಾರಿಯವರ ಜೀವನವು ರೋಲರ್ ಕೋಸ್ಟರ್ ಸವಾರಿಯಂತಾಗಿದೆ. ಅವರ ಈ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗಿ ಕಲಿಯುವುದು ಕಷ್ಟವಾಗಿತ್ತು, ಕಾರು ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡ ಇವರು 12ನೇ ವಯಸ್ಸಿನಲ್ಲಿರುವಾಗ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರು. ಆದರೆ ತಮ್ಮ ಜೀವನಕ್ಕೆ ಇನ್ನೊಂದು ಅವಕಾಶವನ್ನು ಕೊಡಲು ನಿರ್ಧರಿಸಿದರು. ತಮ್ಮ ಸಮಸ್ಯೆಗಳಿಂದ ಕಲಿತ ಪಾಠ ಮತ್ತು ಅನುಭವಿಸಿದ ಕಷ್ಟಗಳು ಅವರನ್ನು ಇನ್ನಷ್ಟು ಬಲಶಾಲಿಯನ್ನಾಗಿಸಿತು.


ಕ

ದೇಶದಲ್ಲಿರುವ ದುರ್ಬಲರಿಗೆ ಪ್ರೀತಿ ಮತ್ತು ಭರವಸೆ ತುಂಬುವ ಸಲುವಾಗಿ ಸ್ಯಾಪ್ನಿಲ್‌ ತಿವಾರಿಯವರು ಲಿವ್ ಮ್ಯಾಡ್‌ ಎನ್ನುವ ಆಂದೋಲನವನ್ನು ಪ್ರಾರಂಭಿಸಿದರು.


ಸ್ವಪ್ನಿಲ್‌ರವರು ತಮ್ಮ ಜೀವನದಲ್ಲಿ ಸಂತೋಷವಾಗಿರುವುದಲ್ಲದೇ ತನ್ನ ಸುತ್ತ ಮುತ್ತಲಿನವರನ್ನೂ ಆ ಸಂತೋಷವನ್ನು ಹಂಚುವ ಪ್ರಯತ್ನ ಮಾಡಿದರು. 31 ರ ಹರೆಯದ ಇವರು ಇಂದು ದೇಶದ ಕಿರಿಯ ವಿಕಲಚೇತನ ಸಾಮಾಜಿಕ ಸುಧಾರಕರಲ್ಲಿ ಒಬ್ಬರು. ಬ್ಯಾಂಕಿಂಗ್‌ ಕ್ಷೇತ್ರದ ಕೆಲಸವನ್ನು ತೊರೆದ ನಂತರ, ಲಿವ್ ಮ್ಯಾಡ್‌ ಆಂದೋಲನ ಆರಂಭಿಸಿ ಸಾಮಾಜಿಕ ಸಂಶೋದನೆ ಮತ್ತು ಉದ್ಯಮಶೀಲತೆಯ ಮೂಲಕ ದುರ್ಬಲ ವರ್ಗದವರಿಗೆ ಭರವಸೆ ಮೂಡಿಸುವ ಮತ್ತು ಸಹಾಯ ಮಾಡುವ ಕೆಲಸಕ್ಕೆ ಮುಂದಾದರು.


ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಮುಂದಾದ ಸ್ವಪ್ನಿಲ್‌ರವರು, ದುರ್ಬಲ ವರ್ಗದವರ ಮತ್ತು ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸುವ ಕೆಲಸದಲ್ಲಿ ತೊಡಗಿಕೊಂಡರು. ತೊಂದರೆಗೀಡಾದ ಕುಟುಂಬಗಳಿಗೆ ಆಸರೆಯಾಗುವುದರಿಂದ ಹಿಡಿದು ಬುಡಕಟ್ಟು ಕುಶಲಕರ್ಮಿಗಳಿಗೆ ಉತ್ತಮ ಸಂಪಾದನೆ ಮಾಡಲು ಸಹಾಯ ಮಾಡುವುದು ಮತ್ತು ಮಹಿಳೆಯರ ಸುರಕ್ಷಾ ಪರಿಕರಗಳನ್ನು ಒದಗಿಸುವುದು, ಹೀಗೆ ಇವೆಲ್ಲ ಕೆಲಸವನ್ನು ಅವರು ಮಾಡಿದ್ದಾರೆ.


ಸ್ಪೂರ್ತಿದಾಯಕ ಪಯಣ


ಜೈಪುರ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಮುಗಿಸಿದ ಸ್ವಪ್ನಿಲ್‌ರವರು ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿಕೊಂಡರು ನಂತರ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾಗೆ ಹೋದರು. ಆದರೆ ಅವರಿಗೆ ಹೆಚ್ಚಿನ ಮಟ್ಟದಲ್ಲಿ ಸೃಜನಶೀಲವಾದುದನ್ನೇನಾದರು ಮಾಡುವ ಮತ್ತು ಜನರಿಗೆ ಸಹಾಯ ಮಾಡುವ ಬಯಕೆಯಿತ್ತು.


ಕುಶಲಕರ್ಮಿಯೊಬ್ಬರ ಮಗಳೊಂದಿಗೆ ಫೋನ್‌ ಕರೆಯ ಮೂಲಕ ಮಾತನಾಡುವಾಗ ಸ್ವಪ್ನಿಲ್‌ರವರಿಗೆ ಸಾಮಾಜಿಕ ಕಾರಣಗಳಿಗೆ ಸ್ಪಂದಿಸುವ ಅವಕಾಶ ದೊರೆಯಿತು.


“ದೇಶದಲ್ಲಿ ಕುಶಲಕರ್ಮಿಗಳು ತಮ್ಮ ಕಲೆಯನ್ನು ಉಳಿಸಿಕೊಂಡು ಹೋಗಬೇಕೆಂದು ನಾನು ಯೋಚಿಸುತ್ತಿದ್ದ ಸಮಯವದು. ಆದ್ದರಿಂದ ನನ್ನ ಪಟ್ಟಿಯಲ್ಲಿರುವ ಕೆಲವು ಸಂಪರ್ಕಗಳನ್ನು ಹುಡುಕಿದೆ ಮತ್ತು ಅದರಿಂದ ಬಿಹಾರದ ಮಧುಬಾನಿಯ ಕುಶಲಕರ್ಮಿಯೊಬ್ಬರ ಕುಟುಂಬದ ಸಂಖ್ಯೆಯನ್ನು ಆರಿಸಿ ಕರೆ ಮಾಡಿದೆ. ಸಣ್ಣ ಹುಡುಗಿಯೊಬ್ಬಳು ಕರೆಯನ್ನು ಸ್ವೀಕರಿಸಿ ತನ್ನ ತಂದೆ ಕಾಯಿಲೆಯಿಂದಾಗಿ ಇತ್ತೀಚೆಗೆ ತೀರಿಕೊಂಡರು ಎಂದು ಹೇಳುತ್ತಾಳೆ”. ಎನ್ನುವುದನ್ನ ಸ್ವಪ್ನಿಲ್‌ರವರು ನೆನಪಿಸಿಕೊಳ್ಳುತ್ತಾರೆ.


“ನನ್ನ ತಂದೆ ತೀರಿಕೊಂಡ ಬಳಿಕ, ಊರಿನ ಹಿರಿಯರೊಬ್ಬರು ನನ್ನ ತಾಯಿಯನ್ನು ರಾತ್ರಿ ಕರೆದುಕೊಂಡು ಹೋಗಿ ಬೆಳಿಗ್ಗೆ ಬಿಟ್ಟು ಹೋಗುತ್ತಿದ್ದರು. ಆವಾಗಿಂದ ನನ್ನ ತಾಯಿ ಬರೀ ಅಳುತ್ತಲಿದ್ದಾಳೆ” ಎಂದು ಆ ಹುಡುಗಿ ಹೇಳಿದಳು.


ಕ

ಕೋಲ್ಕತ್ತಾದ ಯುಎಸ್‌ ಕಾನ್ಸುಲೇಟ್‌ ಜನರಲ್‌ನಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡ ಸ್ವಪ್ನಿಲ್‌ರವರು.

ಈ ಸಂಬಾಷಣೆಯು ಸ್ವಪ್ನಿಲ್‌ರವರಲ್ಲಿಯೇ ಉಳಿಯಿತು ಮತ್ತು ಅಪಘಾತದಿಂದ ಸಮಸ್ಯೆಯನ್ನು ಎದುರಿಸುತ್ತಿರುವ ಕುಶಲಕರ್ಮಿಗಳ ಕುಟುಂಬದವರನ್ನು ಸಮಾಧಾನಪಡಿಸಲು ವಿಫಲರಾದರು. ಕೆಲವು ದಿನಗಳ ನಂತರ, ಇದರ ಕುರಿತು ಏನಾದರೂ ಮಾಡಲು ನಿರ್ಧರಿಸಿದರು ಮತ್ತು ಅಂತಹ ಕುಟುಂಬಗಳನ್ನು ಹುಡುಕಿ ಸಹಾಯ ಮಾಡಲು ಹೊರಟರು. ಕಿಸೆಯಲ್ಲಿ 60,000 ರೂ. ಇಟ್ಟುಕೊಂಡು ಮೋಟಾರ್‌ ಸೈಕಲ್‌ ಮೂಲಕ ಮಧುಬಾನಿಗೆ ಹೊರಟರು. ಹಳ್ಳಿಯಲ್ಲಿರುವ ಅನೇಕ ಡಕಾಯಿತರಿಂದ ತಪ್ಪಿಸಿಕೊಂಡು ಹಲವಾರು ಕಠಿಣ ಪರಿಸ್ಥಿತಿಯನ್ನು ಎದುರಿಸಿ ಕುಶಲಕರ್ಮಿಯ ಕುಟುಂಬದವರನ್ನು ಭೇಟಿಯಾಗಿ ಅವರನ್ನು ದೆಹಲಿಗೆ ಸ್ಥಳಾಂತರಿಸುತ್ತಾರೆ.


“ಕುಟುಂಬದ ಸುಸ್ಥಿರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ, ಸಾಂಪ್ರದಾಯಿಕ ಕಲೆಯನ್ನು ಮುಂದುವರೆಸಲು ಅವರಿಗೆ ಹೇಳಿದೆ, ಮತ್ತು ನೇಕೆಡ್‌ ಕಲರ್ಸ್‌ ಎಂಬ ಹೆಸರಿನ ಉದ್ಯಮವನ್ನು ಆರಂಭಿಸಿದೆ. ಅವರು ತಯಾರಿಸಿದ ಕರಕುಶಲ ವಸ್ತುಗಳನ್ನು ಕಾರ್ಪೋರೇಟ್‌ ಗಿಪ್ಟಿಂಗ್‌ ಮಾರುಕಟ್ಟೆಗೆ ಲಿಂಕ್‌ ಮಾಡುವ ಮೂಲಕ ಮಾರಾಟ ಮಾಡುವುದು ಈ ಕಂಪೆನಿಯ ಉದ್ದೇಶವಾಗಿದೆ. ಈ ವ್ಯವಹಾರದ ಮಾದರಿ ಏನೆಂದರೆ – ಒಟ್ಟೂ ಲಾಭದಲ್ಲಿ ಮೂರರಲ್ಲಿ ಒಂದರಷ್ಟನ್ನು ಕುಶಲಕರ್ಮಿಗಳಿಗೆ ನೀಡಲಾಗುತ್ತಿದೆ, ಮತ್ತು ಮೂರರಲ್ಲಿ ಒಂದರಷ್ಟನ್ನು ಕಂಪೆನಿಯ ಸುಸ್ಥಿರತೆಗಾಗಿ ಬಳಸಲಾಗುತ್ತಿದೆ. ಇನ್ನುಳಿದ ಭಾಗವನ್ನು ಅನಾಥ ಮಕ್ಕಳಿಗೆ ಮತ್ತು ವಿಕಲಚೇತನರಿಗೆ ದಾನ ಮಾಡಲಾಗುತ್ತಿದೆ” ಎಂದು ಸ್ವಪ್ನಿಲ್‌ರವರು ಯುವರ್‌ಸ್ಟೋರಿಗೆ ಹೇಳುತ್ತಾರೆ.


ಸ್ವಪ್ನಿಲ್‌ರವರ ಈ ಸಾಹಸೋದ್ಯಮದ ಲಾಭವನ್ನ ಮಧುಬಾನಿಯ ಕುಶಲಕರ್ಮಿಗಳಷ್ಟೇ ಪಡೆಯದೇ ತಂಜಾವೂರು ಮತ್ತು ಗೊಂಡದ ಕುಶಲಕಮರ್ಮಿಗಳೂ ಸಹ ಇದರ ಲಾಭ ಪಡೆಯುತ್ತಿದ್ದಾರೆ.


ರೋಲರ್‌ ಕೋಸ್ಟರ್‌ ಸವಾರಿ


ಲಕ್ನೋದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸ್ವಪ್ನಿಲ್‌ರವರು ಏಳನೇ ವಯಸ್ಸಿನಲ್ಲಿರುವಾಗಲೇ ಡಿಸ್ಲೆಕ್ಸಿಯಾ ಖಾಯಿಲೆಗೆ ತುತ್ತಾದರು. ಇವರ ಬಾಲ್ಯ ಜೀವನ ಸಂತೋಷಕರವಾಗಿರಲಿಲ್ಲ, ಮೈದಾನದಲ್ಲಿ ಆಟವಾಡಲು ಅಥವಾ ಶಿಕ್ಷಣದತ್ತ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ.


“ನನ್ನ ಬಾಲ್ಯವು ಅತ್ಯಂತ ಅವಿಶ್ರಾಂತವಾಗಿತ್ತು. ಕ್ರಿಕೆಟ್‌ ಆಡುವಾಗ ಸರಿಯಾದ ದಿಕ್ಕಿಗೆ ಬಾಲ್‌ ಎಸೆಯುವುದು ಕಠಿಣ ಕೆಲಸವಾಗಿತ್ತು. ಅಕ್ಷರಗಳನ್ನು ಜೋಡಿಸುವುದು ಮತ್ತು ವಾಕ್ಯವನ್ನು ಸಂಪೂರ್ಣವಾಗಿ ಓದುವುದೆಂದರೆ ದುಃಸ್ವಪ್ನವಾಗಿತ್ತು. ನನ್ನ ಸಂಕಟವನ್ನು ಹೆಚ್ಚಿಸಲು, ನನ್ನ ಸಹಪಾಠಿಗಳು ನನ್ನನ್ನು ಕೆಣಕಲು ಮತ್ತು ಹುಚ್ಚ ಎಂದು ಕರೆಯಲು ಪ್ರಾರಂಭಿಸಿದರು. ಅಂದಿನಿಂದ ನನ್ನನ್ನು ನಾನು “ದಿ ಮ್ಯಾಡ್‌ಮೆನ್‌” ಎಂದು ಕರೆದುಕೊಳ್ಳಲು ಪ್ರಾರಂಭಿಸಿದೆ. ನಾನು ವಾಸ್ತವದಿಂದ ಓಡಿ ಹೋಗುವುದನ್ನು ಇಷ್ಟಪಡಲಿಲ್ಲ, ಆದರೆ ಅದನ್ನು ಸ್ವೀಕರಿಸಿದೆ” ಎಂದು ಸ್ವಪ್ನಿಲ್‌ರವರು ಹೇಳುತ್ತಾರೆ.


ಈ ಕಠಿಣ ಪರಿಸ್ಥಿತಿಯನ್ನ ದಾಟಿ ಬರುವ ವೇಳೆಗೆ, ಇನ್ನೊಂದು ದೊಡ್ಡ ಅಘಾತವು ಅವರ ಜೀವನದಲ್ಲಿ ಉಂಟಾಗುತ್ತದೆ, ಕೇಲವ 12ನೇ ವಯಸ್ಸಿನಲ್ಲಿರುವಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾರೆ. ಈ ಘಟನೆಯು ಅವರ ಮೇಲೆ ಗಂಭೀರ ಪರಿಣಾಮ ಬೀರಿ ನಿದ್ರಾಹೀನ ಸ್ಥಿತಿಗೆ ಜಾರುವಂತಾಗುತ್ತದೆ. ಅತಿಯಾದ ಪ್ರಮಾಣದ ನಿದ್ರೆಯ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದರು, ಆದರೆ ತಮ್ಮ ಮನಸ್ಸನ್ನು ಬದಲಾಯಿಸಿ ತಮಗೆ ತಾವೇ ಒಂದು ಅವಕಾಶವನ್ನು ಕೊಟ್ಟುಕೊಂಡರು.


ಕ

ಟೆಡ್‌ಎಕ್ಸ್‌ ವೇದಿಕೆಯಲ್ಲಿ ಭಾಷಣ ಮಾಡುತ್ತಿರುವ ಸ್ವಪ್ನಿಲ್‌ ತಿವಾರಿ


ಎಲ್ಲ ವಿಷಯಗಳು ಸರಿಯಾದ ದಾರಿಗೆ ಬರುತ್ತಿದ್ದವು, ಆ ವೇಳೆ ಗೈನೆಕೊಮಾಸ್ಟಿಯಾ ಕಾಯಿಲೆಗೆ ಗುರಿಯಾಗುತ್ತಾರೆ, ಈ ವೈದ್ಯಕೀಯ ಸ್ಥಿತಿಯು ಸ್ತನಗಳ ಹಿಗ್ಗುವಿಕೆಯಿಂದ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆಯಾಗಿದ್ದು ಹಾರ್ಮೋನುಗಳ ಅಸಮತೋಲನದಿಂದ ಇದು ಬಾಧಿಸುತ್ತದೆ. ಆದಾಗ್ಯೂ, ಇದು ಅವರಿಗೆ ತಡೆಯೊಡ್ಡಲಿಲ್ಲ.



ಪ್ರತಿಯೊಬ್ಬರದೂ ಒಂದು ಅದ್ಭುತ ಜನನವಾಗಿದೆ – ಅವರು ಅದನ್ನು ಪ್ರೀತಿಸುತ್ತಾರೋ ಅಥವಾ ದ್ಬೇಷಿಸುತ್ತಾರೋ ಎನ್ನುವುದು ಅವರಗೆ ಬಿಟ್ಟಿದ್ದು. ನಾನಿದನ್ನು ಪ್ರೀತಿಸಲು ನಿರ್ಧರಿಸಿದೆ,” ಎಂದು ಹಾಸ್ಯ ಮಾಡುತ್ತಾರೆ.



ನಿಜವಾದ ಅರ್ಥದಲ್ಲಿ ಬದಲಾವಣೆಕಾರ (ಚೇಂಜ್‌ ಮೇಕರ್‌)


ಸಮುದಾಯದ ಜನರಲ್ಲಿ ಧನಾತ್ಮಕ ಬದಲಾವಣೆ ತರಲು ಸ್ವಪ್ನಿಲ್‌ರವರು ನಿರ್ಧರಿಸಿದರು. ಇದು ಅವರನ್ನು ಮಧ್ಯ ಬಾರತದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಸಾತ್ಪುರದ ಒಂದು ಕಾಡಿಗೆ ಹೋಗಲು ಪ್ರೇರೇಪಿಸಿತು. ಆದಾಗ್ಯೂ ಜನರನ್ನು ಬಡತನ ಮತ್ತು ಹಿಂಸಾಚಾರದ ಚಕ್ರದಿಂದ ಹೊರಗೆ ತರುವ ಉದ್ದೇಶದಿಂದ ಅಲ್ಲಿಗೆ ಹೋದರು, ಗೂಡಾಚಾರ ಎಂಬ ಕಾರಣಕ್ಕೆ ಇವರನ್ನು ಅಪಹರಿಸಿ ಹಿಂಸಾಚಾರವನ್ನು ಮಾಡಲಾಯಿತು.


“ಅವರು ನನ್ನನ್ನು ಉಪವಾಸ ಇಡುತ್ತಿದ್ದರು ಮತ್ತು ಪ್ರತಿದಿನ ಹೊಡೆಯುತ್ತಿದ್ದರು. ಕೊನೆಗೆ ನನ್ನ ನಿಜವಾದ ಉದ್ದೇಶವೇನೆಂದು ಅರಿತು ನನ್ನನ್ನು ಬಿಟ್ಟರು. ಕಾಡಿನ ಹೆಚ್ಚಿನ ಜನರು ಸಮಾಜದ ಮುಖ್ಯವಾಹಿನಿಯಿಂದ ಹೊರಗಿದ್ದಾರೆ, ಕೆಲವು ಮೂಲಭೂತ ಜೀವನ ಕೌಶಲ್ಯಗಳಾದ ಆರೋಗ್ಯ, ನೈರ್ಮಲ್ಯ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ನಾನು ಪ್ರಾರಂಭಿಸಿದೆ” ಎಂದು ಸ್ವಪ್ನಿಲ್ ವಿವರಿಸುತ್ತಾರೆ.


ಸಾತ್ಪುರದಿಂದ ದೆಹಲಿಗೆ ಮರಳಿದ ಬಳಿಕ, ಸ್ವಪ್ನಿಲ್‌ರವರು ತಾವು ಪ್ರಾರಂಭಿಸಿರುವ ಹಲವಾರು ಸಾಮಾಜಿಕ ಕಾರ್ಯ್ರಮದ ಭಾಗವಾಗಿ 2015 ರಲ್ಲಿ ಲಿವ್ ಮ್ಯಾಡ್‌ ಆಂದೋಲನವನ್ನು ಪ್ರಾರಂಭಿಸುತ್ತಾರೆ. ಅವರ ಮೊದಲ ಯೋಜನೆಯು ಮಹಿಳೆಯರ ಸುರಕ್ಷತೆಯ ಕುರಿತಾಗಿತ್ತು. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ವಿನ್ಯಾಸಗೊಳಿಸಿರುವ ವಿಷಲ್‌ಶಕ್ತಿಯಡಿ ‘ಪಿಂಕ್‌ ವಿಷಲ್‌ ಯೋಜನೆ’ಯನ್ನು ಪ್ರಾರಂಭಿಸುತ್ತಾರೆ. ಈ ವಿಷಲ್‌ಗಳನ್ನು ಬ್ರಾಸ್ಲೆಟ್‌ ರೀತಿಯಲ್ಲಿ ಧರಿಸಬಹುದು, ಯಾವುದೇ ಅಪಾಯದ ಸಂದರ್ಭದಲ್ಲಿ ಇದರ ಗುಂಡಿಯನ್ನು ಒತ್ತಿದರೆ ಇದು ಎರಡು ಇಂಚು ಉದ್ದದ ಚಾಕುವಾಗಿ ಬದಲಾಗುತ್ತದೆ.


ಕ

ತ್ರಿಚಿಯ ಐಐಎಂನಲ್ಲಿ ಪ್ರೇರಣಾದಾಯಕ ಭಾಷಣ ಮಾಡುತ್ತಿರುವ ಸ್ವಪ್ನಿಲ್‌ರವರು


ತಮ್ಮದೇ ಆದ ಹೋರಾಟದ ಹೊರತಾಗಿಯೂ, ತಾವಿದ್ದ ಬಲೆಯಿಂದ ಹೊರಬಂದ ಸ್ವಪ್ನಿಲ್‌ರವರು ಧನಾತ್ಮಕ ಚಿಂತನೆ ಕುರಿತು ಕಾರ್ಯಾಗಾರ ನಡೆಸುವ ಮೂಲಕ ಸಲಹೆಗಳನ್ನು ನೀಡಿ ಸಾವಿರಾರು ಜನರು ಖಿನ್ನತೆ ಮತ್ತು ಆತ್ಮಹತ್ಯಾ ಪ್ರಯತ್ನಗಳಿಂದ ಹೊರಬರಲು ಅನುವಾದರು. ಇದರ ಜತೆಗೆ, ಏಡ್ಸ್‌ ತಡೆಗಟ್ಟುವಿಕೆಗಾಗಿ ಬಿಲ್‌ ಎಂಡ್ ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ ಜತೆ ಸೇರಿ ಕೆಲಸ ಮಾಡುತ್ತಿದ್ದಾರೆ.


ತನ್ನೆಲ್ಲ ವೈಕಲ್ಯವನ್ನ ಮೆಟ್ಟಿನಿಂತು ಇತರರಿಗೆ ಸಹಾಯ ಮಾಡಲು ಉತ್ಸಾಹ ತೋರಿದರು, ಇವರ ಕೊಡುಗೆಯನ್ನು ಗುರುತಿ ಫೋರ್ಬ್ಸ್‌ ಬಿಡುಗಡೆ ಮಾಡಿದ “1000 ವರ್ಲ್ಡ್‌ ಲೀಡರ್ಸ್‌ ಫಾರ್ ಹೋಪ್‌” ಪಟ್ಟಿಯಲ್ಲಿ ಇವರ ಹೆಸರನ್ನು ಸೇರಸಲಾಗಿದೆ. 2018 ರಲ್ಲಿ ಯುನೆಸ್ಕೋದ ಅಂತರ್ಗತ ಶಿಕ್ಷಣಕ್ಕೆ ರಾಯಭಾರಿಯಾಗಿ ಇವರನ್ನು ಆಯ್ಕೆ ಮಾಡಲಾಗಿತ್ತು. ಉತ್ತರ ಪ್ರದೇಶ ಮತ್ತು ಓಡಿಸ್ಸಾ ಸರ್ಕಾರಗಳು 2018 ರಲ್ಲಿ ರಾಜ್ಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿದೆ.


ಇವರ ಜೀವನ ಪಯಣವನ್ನು ಸಾಕ್ಷ್ಯ ಚಿತ್ರ ಮತ್ತು ಜೀವನ ಚರಿತ್ರೆಯ ಚಲನ ಚಿತ್ರವನ್ನಾಗಿಸುವ ಕಾರ್ಯ ಪ್ರಗತಿಯಲ್ಲಿದೆ. ದೇಶದಲ್ಲಿರುವ ಅನೇಕರಿಗೆ ಸ್ಪೂರ್ತಿ ಮತ್ತು ಭರವಸೆ ತುಂಬುವ ಸಾಗರವಾಗಿದ್ದಾರೆ.

“ನನ್ನ ಜೀವನದ ಪ್ರತಿಯೊಂದು ಕ್ಷಣವೂ ಕೊನೆ ಎಂಬಂತೆ ಬದುಕಲು ನಾನು ಬಯಸುತ್ತೇನೆ. ನಾನು ಹಂಚಿಕೊಂಡಿರುವ ಪ್ರೀತಿಗಾಗಿ, ಹರಡಿರುವ ಭರವಸೆಗಾಗಿ ಮತ್ತು ನಾನು ತಂದಿರುವ ಬದಲಾವಣೆಗಾಗಿ ಎಲ್ಲರೂ ನನ್ನನ್ನು ನೆನಪಿಸಿಕೊಳ್ಳಬೇಕೆಂದು ನನ್ನ ಬಯಕೆ, ಎಂದು ಅವರು ಹೇಳುತ್ತಾರೆ.