ಕೆಎಎಸ್ ಪರೀಕ್ಷೆಯನ್ನು ಪಾಸ್‌ ಮಾಡಿದ ತರಕಾರಿ ಮಾರುವವರ ಮಗಳು

ವಿನೋದಮ್ಮ ಎಲ್ಲ ಆರ್ಥಿಕ ಕಷ್ಟಗಳನ್ನೂ ಮೀರಿ ಕೆಎಎಸ್‌ ಪರೀಕ್ಷೆಯನ್ನು ತಮ್ಮ 33ನೇ ವಯಸ್ಸಿನಲ್ಲಿ ಬರೆದು, ಉತ್ತೀರ್ಣರಾಗಿ, ಈಗ ಖಜಾನೆ ಅಧಿಕಾರಿಯಾಗಿದ್ದಾರೆ.

ಕೆಎಎಸ್ ಪರೀಕ್ಷೆಯನ್ನು ಪಾಸ್‌ ಮಾಡಿದ ತರಕಾರಿ ಮಾರುವವರ ಮಗಳು

Thursday December 26, 2019,

2 min Read

ಕುಟುಂಬದ ಬಡತನವು ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದಿಗೂ ತೊಡಕಾಗಬಾರದು ಎಂಬ ಆಶಯದೊಂದಿಗೆ ಭಾರತ ಸರಕಾರವು ಎಲ್ಲ ಮಕ್ಕಳಿಗೂ 14ನೇ ವಯಸ್ಸಿನವರೆಗೂ ಉಚಿತ ಶಿಕ್ಷಣ ನೀಡಬೇಕೆಂದು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಸರಕಾರಿ ಶಾಲೆಗಳಲ್ಲಿ ಈ ಅಭಿಯಾನವನ್ನು ಜಾರಿಗೆ ತಂದಿದೆ. ಪದವಿಪೂರ್ವ, ಉನ್ನತ ಶಿಕ್ಷಣಕ್ಕಾಗಿ ಹಲವು ಸ್ಕಾಲರ್‌ಶಿಪ್‌ಗಳಿದ್ದರೂ ಅವು ಪೂರ್ತಿ ಶುಲ್ಕವನ್ನು ತುಂಬಲಾರವು. ಇದು ಬಡ ವಿದ್ಯಾರ್ಥಿಗಳಿಗೆ ಕನಿಷ್ಟ ಶಿಕ್ಷಣ ಪಡೆಯುವುದಕ್ಕಿರುವ ಸೌಲಭ್ಯಗಳಾಗಿವೆ. ಆದರೆ, ಐಎಎಸ್‌, ಕೆಎಎಸ್‌ ರೀತಿಯ ತರಬೇತಿಗೆ ಹಲವಾರು ವಿದ್ಯಾರ್ಥಿಗಳಿಗೆ ಹೋಗಲು ಅವರ ಆರ್ಥಿಕ ಬಡತನ ಅಡ್ಡಿಯಾಗುತ್ತದೆ.


ಆದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರದ ಮಂಜುನಾಥಪ್ಪ ಮತ್ತು ಜಯಮ್ಮರ ದ್ವಿತೀಯ ಪುತ್ರಿ ವಿನೋದಮ್ಮ, ಈ ಎಲ್ಲ ಆರ್ಥಿಕ ಕಷ್ಟಗಳನ್ನೂ ಮೀರಿ ಕೆಎಎಸ್‌ ಪರೀಕ್ಷೆಯನ್ನು ತಮ್ಮ 33ನೇ ವಯಸ್ಸಿನಲ್ಲಿ ಬರೆದು, ಉತ್ತೀರ್ಣರಾಗಿ, ಈಗ ಖಜಾನೆ ಅಧಿಕಾರಿಯಾಗಿದ್ದಾರೆ.


ವರದಿಯ ಪ್ರಕಾರ ವಿನೋದಮ್ಮನವರ ಪೋಷಕರು 25 ವರ್ಷಗಳ ಹಿಂದೆ ಹಿರಿಯೂರು ತಾಲೂಕಿನ ಧರ್ಮಪುರಕ್ಕೆ ಜೀವನೋಪಾಯಕ್ಕಾಗಿ ಸ್ಥಳಾಂತರಗೊಂಡರು ಅದಕ್ಕೂ ಮುಂಚೆ ಅವರು ಶಿರಾ ತಾಲೂಕಿನ ಬೆಜ್ಜಿಹಳ್ಳಿಯಲ್ಲಿ ಎಂಬ ಗ್ರಾಮದಲ್ಲಿ ವಾಸವಾಗಿದ್ದರು. ಹವಾಮಾನ ವೈಪರಿತ್ಯವನ್ನು ಲೆಕ್ಕಸದೆ, ಬಿಸಿಲು-ಮಳೆ-ಚಳಿಯಲ್ಲಿ ದೂರದ ತೋಟಗಳಿಗೆ, ಮಾರುಕಟ್ಟೆಗಳಿಗೆ ತೆರಳಿ ತರಕಾರಿ ಖರೀದಿಸಿ ಅವುಗಳನ್ನು ಮಾರಾಟ ಮಾಡುತ್ತಾ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿರುವ ವಿನೋದಮ್ಮನವರ ಪೋಷಕರು ಇಂದು ಮಗಳ ಸಾಧನೆ ಕಂಡು ಹೆಮ್ಮೆಯ ಉತ್ತುಂಗವನ್ನೇರಿದ್ದಾರೆ.


ತಂದೆ ಮಂಜುನಾಥಪ್ಪ ತಾಯಿ ಜಯಮ್ಮ ಅವರೊಂದಿಗೆ ವಿನೋದಮ್ಮ (ಚಿತ್ರಕೃಪೆ: ಪ್ರಜಾವಾಣಿ)



ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೆಡ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ವಿನೋದಮ್ಮ, ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಪೂರೈಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಸ್ಸಿ ನರ್ಸಿಂಗ್‌ ಪದವಿ ಪಡೆದು, ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕೆಲಸ ಮಾಡುತ್ತ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಇದೀಗ, 33ನೇ ವಯಸ್ಸಿನಲ್ಲಿ ಕೆಎಎಸ್‌ ಪರೀಕ್ಷೆ ಬರೆದು ಯಶಸ್ಸು ಕಂಡಿದ್ದಾರೆ.


ಪಿ.ಯು. ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮವಾಗಿ ಅಂಕಗಳಿಸಿ ವೈದ್ಯೆಯಾಗುವ ಕನಸನ್ನು ಕಂಡಿದ್ದ ವಿನೋದಮ್ಮ ತಮ್ಮ ಅಸಹಾಯಕ ಆರ್ಥಿಕ ಪರಿಸ್ಥಿತಿಯಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿಯೇ ಮುಂದುವರೆದು, ನರ್ಸ್‌ಆಗಿ ಕಾರ್ಯನಿರ್ವಹಿಸುತ್ತ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.


2011 ಹಾಗೂ 2014ರಲ್ಲಿ ಕೆಪಿಎಸ್‍ಸಿ ಪರೀಕ್ಷೆ ಬರೆದಿದ್ದ ವಿನೋದಮ್ಮ ಮುಖ್ಯ ಪರೀಕ್ಷೆ ಬರೆದರೂ ಸಂದರ್ಶನದ ಅವಕಾಶ ಕೈತಪ್ಪಿತ್ತು. ಹೀಗಾಗಿ ಸ್ನೇಹಿತರ ಸಲಹೆ ಕೇಳಿ ತರಬೇತಿ ಪಡೆದರು. ಕಾರ್ಮಿಕ ಇಲಾಖೆ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯಾಗಬೇಕೆಂಬ ಹಂಬಲವನ್ನುಹೊಂದಿದ್ದ ಅವರು ತಮ್ಮ ಅವಿರತ ಪ್ರಯತ್ನದ ನಂತರ ಇದೀಗ ಯಶಸ್ವಿಯಾಗಿದ್ದಾರೆ. ವಿನೋದಮ್ಮನವರ ಸಾಧನೆಗೆ ಕುಟುಂಬ ಹಾಗೂ ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದಾರೆ, ಪಬ್ಲಿಕ್‌ ಟಿವಿ.


ವಿನೋದಮ್ಮ, ತಮ್ಮ ಶಿಕ್ಷಕರ ಕುರಿತು ಮಾತನಾಡುತ್ತ,


‘ಶಿಕ್ಷಕ ಸ್ವಾಮಿ ಅವರ ಸ್ಫೂರ್ತಿದಾಯಕ ಮಾತುಗಳು ಸಾಧನೆಗೆ ನೆರವಾದವು. ವೈದ್ಯ, ಎಂಜಿನಿಯರ್‌ ಆಗುವುದಕ್ಕಿಂತ ಆಡಳಿತಾತ್ಮಕ ಸೇವೆಗೆ ತೆರಳುವಂತೆ ಒತ್ತಿ ಹೇಳುತ್ತಿದ್ದರು. ಹೀಗಾಗಿ, ಆರಂಭದಿಂದಲೂ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಮೂಡಿತ್ತು’ ಎಂದು ಸಂತಸ ಹಂಚಿಕೊಂಡಿದ್ದಾರೆ.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.