ಜಾನಪದ ಕಲೆಯ ರಾಯಭಾರಿ ದೀಪಶ್ರೀ...

ಟೀಮ್​ ವೈ.ಎಸ್​. ಕನ್ನಡ

ಜಾನಪದ ಕಲೆಯ ರಾಯಭಾರಿ ದೀಪಶ್ರೀ...

Monday March 27, 2017,

2 min Read

ನಾವು ಪಡೆದಿರೋ ಶಿಕ್ಷಣಕ್ಕೂ ಮಾಡ್ತಾ ಇರೋ ಉದ್ಯೋಗಕ್ಕೂ ಸಂಬಂಧ ಇರಬೇಕಿಲ್ಲ. ಯಾಕಂದ್ರೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರ ನಿದರ್ಶನ ನಮ್ಮ ಮುಂದಿದೆ. ಖ್ಯಾತ ಕಲಾವಿದೆ ದೀಪಶ್ರೀ ಕೂಡ ಅವರಲ್ಲೊಬ್ಬರು. ಈ ಕಲಾವಿದೆಯ ಬದುಕೇ ನಮಗೆಲ್ಲ ಮಾದರಿ. ದೀಪಶ್ರೀ ಅವರಿಗೆ ಕಲೆಯೇ ಉಸಿರು. ಕಲೆಗಾಗಿಯೇ ಜೀವನವನ್ನು ಅವರು ಮುಡಿಪಾಗಿಟ್ಟಿದ್ದಾರೆ. ಅಂದ್ಹಾಗೆ ದೀಪಶ್ರೀ ಓದಿದ್ದು ಎಂಬಿಎ, ಆದ್ರೆ ಬದುಕು ಕಟ್ಟಿಕೊಂಡಿದ್ದು ಮಾತ್ರ ಒಬ್ಬ ಗಾಯಕಿಯಾಗಿ. ಅವರ ಸುಮಧುರ ಕಂಠಕ್ಕೆ ಮರುಳಾಗದವರೇ ಇಲ್ಲ. ಹಿನ್ನೆಲೆ ಧ್ವನಿಗೆ ಕೂಡ ದೀಪಶ್ರೀ ಅವರದ್ದು ಹೇಳಿ ಮಾಡಿಸಿದಂತ ಕಂಠ. 

image


ದೀಪಶ್ರೀ ಅವರಿಗೆ ತಂದೆಯೇ ಪ್ರೇರಣೆ. ಹಾಡುಗಾರಿಕೆಯಲ್ಲಿ ಹೆಚ್ಚು ಹೆಸರು ಮಾಡಿರುವ ದೀಪಶ್ರೀ ತಮ್ಮ ತಂದೆಯವರೇ ಬರೆದ ಮುಕ್ತಕಗಳನ್ನು ಸೇರಸಿ 'ಸಿರಿಮುಖ' ಅನ್ನೋ ಆಲ್ಬಮ್ ಹೊರ ತಂದಿದ್ದಾರೆ. 'ಅಮವಾಸ್ಯೆ' ಅನ್ನೋ ಸಿನಿಮಾಕ್ಕೆ ಹಿನ್ನೆಲೆ ಗಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ವಚನಗಳನ್ನು ಹಾಡುವುದರಲ್ಲಿ ದೀಪಶ್ರೀ ಸೈ ಎನಿಸಿಕೊಂಡಿದ್ದಾರೆ. ನಮ್ಮ ಮೂಲ ಜಾನಪದವನ್ನು ಸೊಗಸಾಗಿ ಹಾಡುವ ಕೆಲವೇ ಕೆಲವು ಗಾಯಕರಲ್ಲಿ ದೀಪಶ್ರೀ ಕೂಡ ಒಬ್ಬರು. ಇವರ "ಕಾಯದೊಳು ನೀನೀರಲು ಕಾಯಕಕ್ಕೆ ಕಡು ನಂಟು" ಮುಕ್ತಕವಂತೂ ಇಂದಿನ ಯುವ ಮನಸನ್ನು ಇನ್ನಿಲ್ಲದಂತೆ ಸೆಳೆದಿದೆ.

ಇನ್ನು ದೂರದರ್ಶನದ ಕೃಷಿ ಕಾರ್ಯಕ್ರಮಕ್ಕೆ ಇವರ ಧ್ವನಿ ಹೇಳಿಮಾಡಿಸಿದಂತಿತ್ತು. ಇದೇ ಹಿನ್ನೆಲೆಯಲ್ಲಿ ಹಲವಾರು ಕಾರ್ಪೋರೇಟ್ ಪ್ರಾಜೆಕ್ಟ್​​ಗಳಿಗೆ, ಡಾಕ್ಯುಮೆಂಟರಿಗಳಿಗೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿಯೂ ಕೆಲಸ ನಿರ್ವಹಿಸಿದ್ದಾರೆ. ರೇಡಿಯೋ ಜಿಂಗಲ್ಸ್​​ಗಳಲ್ಲೂ ಇವರ ಧ್ವನಿ ರಾರಾಜಿಸಿದೆ. ಇನ್ನು ಯೂಟ್ಯೂಬ್​​ನಲ್ಲಿ ಕೂಡ ಇವರ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ. 

ಇದನ್ನು ಓದಿ: 115 ವರ್ಷಗಳ ಸಂಪ್ರದಾಯ ಹೊಂದಿರುವ "ಮದರ್ಸ್ ರೆಸೆಪಿ"ಯ ಕಥೆ ಕೇಳಿ

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಸರಿಗಮಪ ಲಿಟಲ್ ಚಾಂಪ್ಸ್' ಕಾರ್ಯಕ್ರಮದ ಗೌರವ ತೀರ್ಪುಗಾರರಲ್ಲಿ ದೀಪಶ್ರೀ ಕೂಡ ಒಬ್ಬರಾಗಿದ್ರು. ಅಲ್ಲಿನ ಅನುಭವ ತಮ್ಮ ಜೀವನದಲ್ಲೇ ಮರೆಯಲಾಗದ್ದು, ಸಾಕಷ್ಟು ಕಲಿತೆ, ಮಕ್ಕಳಿಂದ ಕಲಿಯುವುದು ತುಂಬಾ ಇದೆ ಅಂತಾರೆ ದೀಪಶ್ರೀ. ಇನ್ನು ಇನ್ಫೋಬೆಲ್ಸ್​​ನ ಕಾರ್ಟೂನ್​ಗಳಿಗೆ ಹಲವಾರು ಕನ್ನಡ ಪದ್ಯ ಮತ್ತು ಕಥೆಗಳಿಗೆ ಹಿನ್ನೆಲೆ ಧ್ವನಿಯನ್ನು ಕೂಡ ನೀಡಿದ್ದಾರೆ. 

image


ಉದಯ ಮ್ಯೂಸಿಕ್​ ವಾಹಿನಿಯಲ್ಲಿ ಫೇಮಸ್ ಆಗಿರುವ "ಸಮ್ ಗೀತ"ದಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಧನೆಗೆ ಬೆನ್ನೆಲುಬಾಗಿರುವ ಪೋಷಕರು, ಪತಿ ಪ್ರಣವ್ ಮತ್ತು ಕುಟುಂಬದವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ಓದಿದ ಸಂಸ್ಥೆ ಬಗ್ಗೆ ಕೂಡ ಗೌರವ ಇಟ್ಟುಕೊಂಡಿದ್ದಾರೆ.   

" ನಮ್ಮ ದೇಸಿ ಪರಂಪರೆಯನ್ನು ಸದಾ ಕಾಲ ಹಸಿರಾಗಿಡಬೇಕು. ಈ ಮೂಲಕ ನಾವು ಜೀವಿಸಿದ ಪರಂಪರೆಯ ಬದುಕನ್ನು ಮುಂದಿನ ಪೀಳಿಗೆಗೂ ಬಳುವಳಿಯಾಗಿ ನೀಡಬೇಕು ಅನ್ನೋ ಹಂಬಲ ತುಡಿತ ಈ ಕ್ಷೇತ್ರದಲ್ಲಿನ ಎಲ್ಲಾ ಸವಾಲುಗಳನ್ನು ಗೆಲ್ಲುವಂತೆ ಮಾಡಿದೆ"
- ದೀಪಶ್ರೀ

ಅತ್ಯಂತ ಸವಾಲಿನಿಂದ ಕೂಡಿದ ಆಧುನಿಕ ಜಗತ್ತಿನಲ್ಲಿ ಕಲೆಯಿಂದ ಕೂಡ ಬದುಕು ಕಟ್ಟಿಕೊಳ್ಳಬಹುದು ಅನ್ನೋದನ್ನು ದೀಪಶ್ರೀ ಸಾಧಿಸಿ ತೋರಿಸಿದ್ದಾರೆ. ಉದ್ಯಮದಂತೆ ಕಲೆ ಕೂಡ ಜೀವನದ ಹಾದಿಯಾಗಬಹುದು ಅನ್ನೋದಕ್ಕೆ ಇವರೇ ಎಕ್ಸಾಂಪಲ್. ನಮ್ಮ ಸಂಸ್ಕೃತಿ, ಪರಂಪರೆಯನ್ನು ಪಸರಿಸುವಲ್ಲಿ ದೀಪಶ್ರೀ ಅವರ ಕೊಡುಗೆ ದೊಡ್ಡದು. 

ಇದನ್ನೂ ಓದಿ:

1. ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ

2. ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​

3. ನಿಮ್ಮ ಸ್ಟಾರ್ಟ್​ಅಪ್​ ಗೆಲುವಿಗೆ ಇವಿಷ್ಟೇ ಮೂಲ ಕಾರಣ..!