ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರಿಗೆ ಕನ್ನಡಿ ಹಿಡಿದ ಬಿಬಿಎಂಪಿ

ಬಯಲು ಮೂತ್ರ ವಿಸರ್ಜನೆಯನ್ನು ತಡೆಗಟ್ಟಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ನಗರದ ಪ್ರಮುಖ ಸ್ಥಳಗಳಲ್ಲಿ ಕನ್ನಡಿಗಳನ್ನು ಅಳವಡಿಸಿ ಅದನ್ನು ತಡೆಗಟ್ಟುವಂತಹ ವಿನೂತನ ಯೋಜನೆ ಹಮ್ಮಿಕೊಂಡಿದೆ.

ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರಿಗೆ ಕನ್ನಡಿ ಹಿಡಿದ ಬಿಬಿಎಂಪಿ

Thursday January 16, 2020,

2 min Read

ಸ್ಚಚ್ಛತೆ ಎನ್ನುವುದು ನಿರ್ಮಲತೆಯ ಸಂಕೇತ. ಕೇವಲ ಮನೆಯನ್ನು ಮಾತ್ರ ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರವಲ್ಲದೆ, ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸಹ ಶುಚಿಯಾಗಿಟ್ಟುಕೊಳ್ಳಬೇಕೆಂಬ ಮನೋಭಾವ ಎಲ್ಲರಲ್ಲಿಯೂ ಮೂಡಬೇಕಿದೆ.


ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತಾಗಿ ಅರಿವು ಮೂಡಿಸುವುದಕ್ಕಾಗಿ ಸ್ವಚ್ಛ ಭಾರತ ಅಭಿಯಾನ,‌ ಸ್ವಚ್ಛ ಸರ್ವೇಕ್ಷಣ್ ಮುಂತಾದ ಯೋಜನೆಗಳು‌ ಬಂದಿವೆ.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ಮೊದಲಿನಿಂದಲೂ ಸಾರ್ವಜನಿಕರಿಗಾಗಿ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿಭಿನ್ನ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ‌‌ ಸಕ್ರಿಯರಾಗಿದ್ದಾರೆ. ಹಿಂದೆ, ‌ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸದಂತೆ 200 ಜೀವಗಾತ್ರದಂತಹ ಮನುಷ್ಯಾಕೃತಿಗಳನ್ನು ಸ್ಥಾಪಿಸಿದ್ದರು.


ಈಗ ಬಿಬಿಎಂಪಿಯು ಸಾರ್ವಜನಿಕ ಬಯಲು ವಿಸರ್ಜನೆಯನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ 8*4 ಅಡಿ ಅಳತೆಯ ಕನ್ನಡಿಗಳನ್ನು ಅಳವಡಿಸುವ ಮೂಲಕ ವಿಭಿನ್ನ ಯೋಜನೆಯೊಂದನ್ನು ಜಾರಿಗೆ ತರಲು ಯೋಜಿಸಿದೆ.


ಟ

ಚರ್ಚ್ ಸ್ಟ್ರೀಟ್ ಬಳಿಯಲ್ಲಿ ಸ್ಥಾಪಿಸಲಾದ ಕನ್ನಡಿ (ಚಿತ್ರಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌)




ಸ್ಬಚ್ಛ ಸರ್ವೇಕ್ಷಣ್ 2020 ಅಭಿಯಾನದ ಭಾಗವಾಗಿ ಜಾರಿಗೆ ತರುತ್ತಿರುವ ಈ ಉಪಕ್ರಮವು, ಜನರು ತಮ್ಮನ್ನು ಕನ್ನಡಿಯಲ್ಲಿ ನೋಡಿದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸುವುದನ್ನು ನಿಲ್ಲಿಸುತ್ತಾರೆ ಎಂಬ ಭರವಸೆಯಿದೆ, ವರದಿ ದಿ ಲಾಜಿಕಲ್ ಇಂಡಿಯನ್.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ನಗರದ ಪ್ರಮುಖ ಸ್ಥಳಗಳಾದ ಕೆ.ಆರ್.ಮಾರುಕಟ್ಟೆ, ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜ್, ಚರ್ಚ್ ಸ್ಟ್ರೀಟ್, ಕ್ವೀನ್ಸ್ ರೋಡ್‌ನಲ್ಲಿರುವ ಇಂಡಿಯನ್ ಎಕ್ಸ್‌ಪ್ರೆಸ್‌ ಸರ್ಕಲ್ ಮತ್ತು ಇಂದಿರಾನಗರದ ಇಎಸ್‌ಐ ಆಸ್ಪತ್ರೆ ಬಳಿ ಪ್ರಯೋಗಾರ್ಥವಾಗಿ ಈ ಐದು ಸ್ಥಳಗಳಲ್ಲಿ ಎಂಟು*ನಾಲ್ಕು ಅಡಿ ಅಳತೆಯ ಕನ್ನಡಿಗಳನ್ನು ಗೋಡೆಯ ಮೇಲೆ ಅಳವಡಿಸಿದೆ.


"ಕನ್ನಡಿಯನ್ನು ಅಳವಡಿಸುವ ಈ ಪರಿಕಲ್ಪನೆಯು ನಾಗರಿಕ ಪ್ರಜ್ಞೆಯನ್ನು ನೀಡುತ್ತದೆ ಮತ್ತು ನಗರದಲ್ಲಿ ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಗಟ್ಟುತ್ತದೆ. ಸಮೀಕ್ಷೆ ನಡೆಸಿದ ನಂತರ ಐದು ಪ್ರಮುಖ ಸ್ಥಳಗಳಲ್ಲಿ ಕನ್ನಡಿಗಳನ್ನು ಅಳವಡಿಸಿದ್ದೇವೆ," ಎಂದು ಘನತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯೂಎಂ) ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಡಿ ಅವರು ಇಂಡಿಯನ್ ಎಕ್ಸ್‌ಪ್ರೆಸ್‌‌ಗೆ ತಿಳಿಸಿದ್ದಾರೆ.


ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕನ್ನಡಿಯ ಮೇಲೆ – ‘ಸಾವರ್ವಜನಿಕ ಮೂತ್ರ ವಿಸರ್ಜನೆ ತಪ್ಪಿಸಿ',‌ ‘ಸಾರ್ವಜನಿಕ ಶೌಚಾಲಯಗಳನ್ನು ಬಳಸಿ', ‘ಕಸವನ್ನು ಬಿಸಾಡಬೇಡಿ, ಡಸ್ಟ್‌ಬಿನ್‌ಗಳನ್ನು ಬಳಸಿ', ‘ಏಕ-ಬಳಕೆಯ ಪ್ಲ್ಯಾಸ್ಟಿಕ್ ಬೇಡವೆಂದು ಹೇಳಿ, ನಿಮ್ಮ ಸ್ವಂತ ಕೈಚೀಲವನ್ನು ಬಳಸಿ' ಎಂಬ ಮುಂತಾದ ಸಂದೇಶಗಳಿವೆ. ಅಲ್ಲದೇ ಕ್ಯೂಆರ್‌ ಸ್ಕ್ಯಾನ‌ರ್ ಇದ್ದು, ಇದರ ಮೂಲಕ ಹತ್ತಿರದಲ್ಲಿ ಶೌಚಾಲಯಗಳು ಎಲ್ಲಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.


"ಸ್ವಚ್ಛ ಸರ್ವೇಕ್ಷಣ್ 2020 ಅಭಿಯಾನದ ಭಾಗವಾಗಿ ಮತ್ತು ಬೆಂಗಳೂರನ್ನು ಮಲವಿಸರ್ಜನೆಯಿಂದ ಮುಕ್ತ‌ ಗೊಳಿಸಬೇಕೆನ್ನುವ (ಒಡಿಎಫ್) ಗುರಿಯನ್ನು ಬಲಪಡಿಸಲು, ಮತ್ತು ಸಾರ್ವಜನಿಕ ಸ್ಥಳಗಳನ್ನು ಶೌಚಾಲಯವೆಂದು ಪರಿಗಣಿಸುವವರಿಗೆ ನಾವು ಕನ್ನಡಿ ಹಿಡಿದಿದ್ದೇವೆ," ಎಂದು ಬೆಂಗಳೂರು ಮೇಯರ್ ಎಂ ಗೌತಮ್ ಕುಮಾರ ಟ್ವೀಟ್ ಮಾಡಿದ್ದಾರೆ. ವರದಿ ದಿ ಲಾಜಿಕಲ್ ಇಂಡಿಯನ್


ಸುಮಾರು 30,000 ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿದ್ದು, ನಿಯಮ ಉಲ್ಲಂಘಿಸುವವರನ್ನು ಕಂಡು ಹಿಡಿಯಲು ಹತ್ತಿರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.


2019ರಲ್ಲಿ ಸಾರ್ವಜನಿಕ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ನೂರಕ್ಕೂ ಹೆಚ್ಚು ಜನರಿಗೆ ದಂಡವನ್ನು ವಿಧಿಸಲಾಗಿದೆ.


ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕಿದೆ. ಮನೆಯ ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಯ್ದುಕೊಳ್ಳೊಣ ಎಂಬ ನಿರ್ಣಯವನ್ನು ಮಾಡೋಣ. ಮನೆ, ‌ಮನ ಎಲ್ಲವನ್ನು ಪರಿಶುದ್ಧವಾಗಿಟ್ಟುಕೊಳ್ಳೊಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.