'ಗೂಗ್ಲಿ' ಸೂರ್ತಿಯಿಂದ 11 ಚಿನ್ನದ ಪದಕ ಗೆದ್ದ ಯುವಕ

ಟೀಮ್ ವೈ.ಎಸ್.ಕನ್ನಡ 

'ಗೂಗ್ಲಿ' ಸೂರ್ತಿಯಿಂದ 11 ಚಿನ್ನದ ಪದಕ ಗೆದ್ದ ಯುವಕ

Monday May 08, 2017,

2 min Read

ಎಷ್ಟೋ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಮಾತ್ರವಲ್ಲ, ನಮ್ಮ ಬದುಕನ್ನೇ ಬದಲಾಯಿಸುತ್ತವೆ. 'ಬಂಗಾರದ ಮನುಷ್ಯ' ಸಿನೆಮಾ ನೋಡಿ ಪದವೀಧರರು ಬೇಸಾಯ ಮಾಡಿದ್ದು ಗೊತ್ತು. ಇದೀಗ 'ಗೂಗ್ಲಿ' ಸಿನೆಮಾ ನೋಡಿದ ಚಾಮರಾಜನಗರದ ಯುವಕ ಹನ್ನೊಂದು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. 

image


ಚಾಮರಾಜನಗರದ ರಘುವೀರ್ ಗೆ ನಟ ಯಶ್ ಅಂದ್ರೆ ಅಚ್ಚುಮೆಚ್ಚು. ಅವರ ಚಿತ್ರಗಳನ್ನೆಲ್ಲ ತಪ್ಪದೇ ನೋಡ್ತಾರೆ. ಯಶ್ ನಟನೆಯ ಗೂಗ್ಲಿ ಸಿನಿಮಾದಿಂದ ಪ್ರೇರಿತರಾದ ಈ ಅಭಿಮಾನಿ, ಬಿಎಸ್ಸಿಯಲ್ಲಿ ಹನ್ನೊಂದು ಬಂಗಾರದ ಪದಕಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ರಾಜ್ಯ ಮೆಚ್ಚುಮವಂತಹ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 25ರಂದು ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ರಘುವೀರ್ ಗೆ 11 ಸ್ವರ್ಣ ಪದಕಗಳನ್ನು ನೀಡಿ ಸನ್ಮಾನಿಸಲಾಯ್ತು. ಈ ವೇಳೆ ಮಾತನಾಡಿದ ರಘುವೀರ್ ತಮ್ಮ ಯಶಸ್ಸಿಗೆ ನಟ ಯಶ್ ಅವರ ಗೂಗ್ಲಿ ಸಿನಿಮಾ ಪ್ರೇರಣೆ ಎಂದಿದ್ದಾರೆ.''ನಾನು ಯಶ್ ಅವರ ಅಪ್ಪಟ ಅಭಿಮಾನಿ. ಅವರ ಚಿತ್ರಗಳನ್ನು ನೋಡುತ್ತಿದ್ದೆ. ನಾನೂ ಏನಾದರೂ ಸಾಧಿಸಿ ತೋರಿಸಬೇಕು ಅನ್ನಿಸಿತು. ಇನ್ನೆರಡು ವರ್ಷಗಳಲ್ಲಿ ಪ್ರಪಂಚವೇ ನನ್ನ ಕಡೆಗೆ ನೋಡುವಂತೆ ಮಾಡಬೇಕು ಎಂದು ನಿರ್ಧರಿಸಿದೆ. ಅದರ ಫಲವಾಗಿ 11 ಚಿನ್ನದ ಪದಕಗಳನ್ನು ಪಡೆದಿದ್ದೇನೆ'' ಎಂದಿದ್ದಾರೆ ರಘುವೀರ್.

image


ಆದ್ರೆ ಪದಕ ಪಡೆಯಬೇಕು ಅನ್ನೋದು ಅವರ ಗುರಿತಾಗಿರಲಿಲ್ಲ. ವಿದ್ಯಾರ್ಥಿವೇತನ ಪಡೆಯಬೇಕೆಂದು ಚೆನ್ನಾಗಿ ಓದುತ್ತಿದ್ರು. ಕಷ್ಟಪಟ್ಟು ಓದಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳುವ ಮಹದಾಸೆ ಮನಸ್ಸಿನಲ್ಲಿತ್ತು. ರಘುವೀರ್ ತಂದೆ ಚಾಮರಾಜನಗರದ ಒಬ್ಬ ಬಡ ರೈತ. ಅನಾರೋಗ್ಯದಿಂದ ಕಳೆದ ಜನವರಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮಗನನ್ನು ಓದಿಸುವ ಜವಾಬ್ಧಾರಿ ತಾಯಿಯ ಹೆಗಲೇರಿದೆ. ಪದವಿ ಪ್ರದಾನ ಸಮಾರಂಭದಲ್ಲಿ ಅವರ ತಾಯಿ ಭಾಗ್ಯಮ್ಮ ಕೂಡ ಜೊತೆಯಲ್ಲಿದ್ದರು. ''ನನ್ನ ಸಾಧನೆ ನೋಡಲು ನನ್ನಪ್ಪ ಸಮಾರಂಭದಲ್ಲಿ ಇರಬೇಕಿತ್ತು'' ಎಂದು ರಘುವೀರ್ ಬೇಸರದಿಂದ ನುಡಿಯುತ್ತಾರೆ.

image


ಗೂಗ್ಲಿ, ಪವನ್ ಒಡೆಯರ್ ನಿರ್ದೇಶನದ ಚಿತ್ರ. ಯಶ್ ಮತ್ತು ಕೃತಿ ಕರಬಂದ ಜೋಡಿಯಾಗಿ ನಟಿಸಿದ್ದಾರೆ. ಪ್ರೀತಿಸಿದ ಹುಡುಗಿ ತಿರಸ್ಕರಿಸಿದಾಗ ನಾಯಕ ಅದನ್ನು ಚಾಲೆಂಚ್ ಆಗಿ ತೆಗೆದುಕೊಂಡು ಮುಂದೆ ದೇಶವೇ ತಿರುಗಿ ನೋಡುವಂತಹ ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಾನೆ. ಈ ಕತೆ ರಘವೀರ್ ಸಾಧನೆಗೂ ದಾರಿಯಾಗಿದೆ ಎಂದರೆ ನಾವು ಮೆಚ್ಚಲೇಬೇಕು.

ಪವನ್ ಒಡೆಯರ್ ಸಂತಸ

ಗೂಗ್ಲಿ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದವರು ಕನ್ನಡದ ಸ್ಟಾರ್‌ ನಿರ್ದೇಶಕ ಪವನ್ ಒಡೆಯರ್. ಅವರ ಸಿನಿಮಾವನ್ನು ನೋಡಿ ಯುವಕನೊಬ್ಬ ಚಿನ್ನದ ಪದಕ ಪಡೆದಿರುವುದನ್ನು ಕೇಳಿದ ಪವನ್ ಬಹಳ ಸಂತೋಷಗೊಂಡಿದ್ದಾರೆ. ''ಒಂದು ಸಿನಿಮಾ ಜನರ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತೆ ಎನ್ನುವುದಕ್ಕೆ ಇದು ಉದಾಹರಣೆ. ಈ ಹಿಂದೆಯೂ ಬಂಗಾರದ ಮನುಷ್ಯ ಚಿತ್ರದಿಂದ ಪ್ರಭಾವಿತರಾದವರು ಇದ್ದಾರೆ. ಹೀಗಾಗಿ ನಾವು ಸಿನಿಮಾ ಮಾಡುವಾಗ ಜನ ಮೆಚ್ಚುವಂತಹ ಸಿನಿಮಾ ಜತೆಗೆ ಇಂತಹ ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಸಿನಿಮಾಗಳನ್ನು ಮಾಡಬೇಕು. ರುಣಾತ್ಮಕ ಸಂದೇಶವಿದ್ರೆ ಅದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ'' ಅಂತಾ ಹೇಳಿದ್ದಾರೆ. ಯುವಕ ರಘುವೀರ್ ಸಾಧನೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮಂತಹ ನಿರ್ದೇಶಕರಿಗೆ ಇನ್ಮುಂದೆ ಕೂಡ ಒಳ್ಳೊಳ್ಳೆ ಚಿತ್ರ ಮಾಡಲು ರಘುವೀರ್ ಸ್ಪೂರ್ತಿ ಅಂತಾ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ...

ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​ನಲ್ಲೂ ಅಡಕವಾದ ಚಿಂತನೆ

ವೈಜ್ಞಾನಿಕ ಸಂಶೋಧನೆಗೆ ಆಸ್ತಿ ದಾನ ಮಾಡಿದ IAS ಅಧಿಕಾರಿ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರ್ವರಿ