ಮುಳ್ಳಿನ ಗಿಡದಲ್ಲಿ ಗುಲಾಬಿ ಅರಳಿತು..!

ಟೀಮ್​ ವೈ.ಎಸ್. ಕನ್ನಡ

ಮುಳ್ಳಿನ ಗಿಡದಲ್ಲಿ ಗುಲಾಬಿ ಅರಳಿತು..!

Wednesday March 08, 2017,

2 min Read

ಭಾರತ ಅಭಿವೃದ್ಧಿಯ ಕಡೆಗೆ ಮುಖ ಮಾಡಿದ್ದರೂ, ಕೋಮು ಸಂಘರ್ಷಗಳು ಇನ್ನೂ ಕಡಿಮೆ ಆಗಿಲ್ಲ. ಧರ್ಮಗಳ ನಡುವಿನ ಸಂಘರ್ಷಕ್ಕೆ ತೆರೆಬಿದ್ದು, ಸಹೋದರರಂತೆ ಜೀವಿಸಲು ಸಾಧ್ಯವೇ ಅನ್ನುವ ಪ್ರಶ್ನೆ ಉತ್ತರವಿಲ್ಲದೆ ಉಳಿಯುತ್ತದೆ. ನಾವು ಜಾತ್ಯಾತೀತ ರಾಷ್ಟ್ರದಲ್ಲಿದ್ದರೂ, ಇವತ್ತಿಗೂ ಜಾತಿಗಳ ನಡುವೆ ದ್ವೇಷ ಮಾಯವಾಗಿಲ್ಲ. ಧರ್ಮಗಳ ನಡುವೆ ಯುದ್ಧವೇ ನಡೆಯುತ್ತಿದೆ. ಪ್ರತಿದಿನವೂ ಕೋಮು ದಳ್ಳುರಿಗಳು ಸುದ್ದಿಯಾಗುತ್ತವೆ. ಇದರ ಮಧ್ಯೆ ಅಲ್ಲೊಂದು, ಇಲ್ಲೊಂದು ಸಾಮರಸ್ಯ ಮತ್ತು ಪ್ರೀತಿಯಿಂದ ಜೀವಿಸುವ ಕಥೆಗಳು ಸಿಕ್ಕರೂ ಅವುಗಳ ಸಂಖ್ಯೆ ಕಡಿಮೆ ಇದೆ. ಧರ್ಮಗಳ ಮಧ್ಯೆ ಪ್ರೀತಿಯ ಕಥೆಗಳನ್ನು ಕೇಳಿದಾಗ ಹೊಸ ಆಲೋಚನೆಗಳು ಮತ್ತು ಆಸೆಗಳು ಹುಟ್ಟಿಕೊಳ್ಳುತ್ತವೆ.

image


ಉತ್ತರಪ್ರದೇಶದಲ್ಲಿರುವ ರಾವತ್​ಪುರ್​ ಒಂದು ಚಿಕ್ಕ ಗ್ರಾಮ. ಕೋಮು ಗಲಾಟೆಗಳು ಇಲ್ಲಿ ಸಾಮಾನ್ಯ. ಆದ್ರೆ ಇಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಮುಳ್ಳಿನ ಗಿಡದಲ್ಲಿ ಗುಲಾಬಿ ಅರಳಿದಂತೆ ಎರಡು ಬೇರೆ ಬೇರೆ ಧರ್ಮಗಳ ಮದುವೆ ನಡೆದಿದೆ. ಅಂದಹಾಗೇ ಇದು ಕೇವಲ ಮದುವೆ ಮಾತ್ರ ಅಲ್ಲ. ಅದ್ದೂರಿಯ ಸಾರ್ವಜನಿಕ ವಿವಾಹ ಸಮಾರಂಭ. ಹಿಂದೂಗಳಿಗೆ ಮತ್ತು ಮುಸ್ಲಿಂ ಮದುವೆಯನ್ನು ರಾವತ್​ಪುರ ಗ್ರಾಮದ ಒಂದೇ ಛತ್ರದಲ್ಲಿ ಮಾಡಲಾಗಿದೆ.

ಈ ಸಾರ್ವಜನಿಕ ವಿವಾಹ ಸಮಾರಂಭದ ಆಯೋಜಕ ಮತ್ತು ರೂವಾರಿ ಮೊಹಮ್ಮದ್ ಶಕೀನ್. ಈತನ ಯೋಜನೆಯಂತೆ ಹಿಂದೂ ಹುಡುಗ-ಹುಡುಗಿ ಮತ್ತು ಮುಸ್ಲಿಂ ಹುಡುಗ-ಹುಡುಗಿ ನಡುವೆ ಮದವೆಗಳು ನಡೆದಿವೆ. ಈ ಮದುವೆಯಲ್ಲಿ ಒಟ್ಟು 10 ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗ್ರಾಮದ ಸುಮಾರು 8000 ಜನರು ಅತಿಥಿಗಳಾಗಿ ಆಗಮಿಸಿ ನವವಧುವರರಿಗೆ ಶುಭಹಾರೈಸಿದ್ರು.

“ ನಾವು ಆಯೋಜಿಸಿದ ಮದುವೆ ಕಾರ್ಯಕ್ರಮಕ್ಕೆ ಇಷ್ಟೊಂದು ಪ್ರೋತ್ಸಾಹ ಸಿಗುತ್ತದೆ ಅನ್ನುವುದನ್ನು ಕನಸಿನಲ್ಲೂ ಊಹೆ ಮಾಡಿರಲಿಲ್ಲ. ಈ ಯೋಜನೆಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದರು. ಮದುವೆ ಸಮಾರಂಭದಲ್ಲಿ ಗ್ರಾಮಸ್ಥರು ಮನೆಯವರಂತೆ ಭಾಗವಹಿಸಿದರು. ಮದುವೆ ದಿನ ಗ್ರಾಮದ ಮಾರ್ಕೆಟ್ ಕೂಡ ಬಂದ್ ಆಗಿತ್ತು ಅನ್ನೋದು ಸಂತೋಷವಲ್ಲದೆ ಇನ್ನೇನು”
- ಮೊಹಮ್ಮದ್ ಶಕೀಲ್, ಮದುವೆ ಆಯೋಜಕ

ಅಂದಹಾಗೇ ಈ ಮದುವೆಯಲ್ಲಿ ಭಾಗವಹಿಸಿದ ನವ ಜೋಡಿಗಳಿಗೂ ಈ ಕಾರ್ಯದಿಂದ ಖುಷಿಯಾಗಿದೆ. ಸದಾ ಕೋಮು ಗಲಾಟೆಗಳಿಂದ ಬೇಯುತ್ತಿದ್ದ ಗ್ರಾಮ ಇನ್ನಾದರೂ ಬದಲಾಗುತ್ತದೆ ಅನ್ನುವ ಕನಸು ಕೂಡ ಕಟ್ಟಿಕೊಂಡಿದ್ದಾರೆ.

ಹಿಂದೂಗಳ ಮದುವೆ ಹಿಂದೂ ಶಾಸ್ತ್ರದಂತೆ ಮಂತ್ರೋಕ್ತ ಮತ್ತು ಶಾಸ್ತ್ರೋಕ್ತವಾಗಿ ನಡೆದ್ರೆ, ಮುಸ್ಲಿಂ ವಧು-ವರರ ಶಾಸ್ತ್ರದ ವೇಳೆ ಕುರಾನ್ ಪಠಣ ಮಾಡಲಾಗಿತ್ತು. ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಪೇಶ್ ಇಮಾಮ್​ಗಳು ಮದುವೆಯನ್ನು ಸುಗಮವಾಗಿ ನಡೆಸಿಕೊಟ್ರು. ಎರಡೂ ಧರ್ಮಗಳ ವಧುವರರು ಪರಸ್ಪರ ಕೈಕುಲುಕಿ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು. ಒಟ್ಟಿನಲ್ಲಿ ರಾವತ್​ಪುರ್ ಗ್ರಾಮ ಈಗ ಬದಲಾವಣೆಯ ಹಾದಿ ತುಳಿದಿದೆ. ನವದಂಪತಿಗಳಿಗೆ ಒಳ್ಳೆಯದಾಗಲಿ. 

ಇದನ್ನು ಓದಿ:

1. ಓಲಾ, ಉಬರ್​ಗಳಿಗೆ ಟಾಂಗ್ ನೀಡಲು ಸಿದ್ಧತೆ- ಸದ್ದಿಲ್ಲದೆ ರೆಡಿಯಾಗುತ್ತಿದೆ ಹೊಸ ಆ್ಯಪ್..!

2. ಹಸಿದವರ ಹೊಟ್ಟೆ ತುಂಬಿಸಲು ನೆರವು ಕೇಳಿದ ಆಸ್ಕರ್ ವಿಜೇತ ನಟಿ

3. ಮಹಿಳಾ ಕ್ರಿಕೆಟ್​​ನಲ್ಲಿ ಹೊಸ ಸಂಚಲನ- ಅಂತರಾಷ್ಟ್ರೀಯ ಮಹಿಳಾ ದಿನದಂದು ಹೊಸ ಲೀಗ್ ಆರಂಭ