ದುರ್ಬಲ ಮಕ್ಕಳನ್ನು ನೃತ್ಯ ತರಬೇತಿಯ ಮೂಲಕ ಸಶಕ್ತರನ್ನಾಗಿಸುತ್ತಿರುವ 32 ವರ್ಷದ ನೃತ್ಯ ಸಂಯೋಜಕ

ವಿನಯ್ ಶರ್ಮಾ ಅವರ ಡ್ಯಾನ್ಸ್ ಔಟ್ ಆಫ್ ಪಾವರ್ಟಿ ಉಪಕ್ರಮವು ದೆಹಲಿ ಮತ್ತು ಮುಂಬೈನಾದ್ಯಂತ ಕೊಳೆಗೇರಿಗಳಲ್ಲಿರುವ 2,500 ಮಕ್ಕಳು ಹಾಗೂ ಹದಿಹರೆಯದವರಿಗೆ ನೃತ್ಯ ತರಬೇತಿ ನೀಡಿದೆ. ಇವರಲ್ಲಿ 80 ವಿದ್ಯಾರ್ಥಿಗಳು ನೃತ್ಯಕಲೆ ಬೋಧಕರಾಗಿ ಉದ್ಯೋಗ ಪಡೆದು ಜೀವನಕಂಡುಕೊಂಡಿದ್ದಾರೆ.

ದುರ್ಬಲ ಮಕ್ಕಳನ್ನು ನೃತ್ಯ ತರಬೇತಿಯ ಮೂಲಕ ಸಶಕ್ತರನ್ನಾಗಿಸುತ್ತಿರುವ 32 ವರ್ಷದ ನೃತ್ಯ ಸಂಯೋಜಕ

Saturday December 07, 2019,

3 min Read

ಇಪ್ಪತ್ತು ವರ್ಷದ ಕೌಶಲ್ ಡೂಪ್‌ರವರ‌ ಹಿಂದಿನ ಜೀವನವು ಅವ್ಯವಸ್ಥೆಯಿಂದ ಕೂಡಿತ್ತು. ವಿಪರೀತ ಮಾದಕ ವ್ಯಸನದಿಂದ ಬಳಲುತ್ತಿರುವ ಅವರು ಪ್ರತಿದಿನ ಡ್ರಗ್ಸ್‌ಗಾಗಿ ಹಣಹೊಂದಿಸುವ ಚಟಕ್ಕೆ ಬಲಿಯಾಗಿದ್ದರು. ಅವರ ಕಡುಬಯಕೆಗಳ‌ನ್ನು ಪೂರೈಸಿಕೊಳ್ಳಲು ದಿನನಿತ್ಯ ಕದಿಯುವುದು ಹಾಗೂ ಜೇಬುಗಳ್ಳತನವನ್ನು ಅವಲಂಬಿಸಿದ್ದರು.


ಆದರೆ 2017ರ ನಂತರದಲ್ಲಿ ಸಿಂಹಾಯನ ಫೌಂಡೇಶನ್‌ರವರ ಡ್ಯಾನ್ಸ್ ಔಟ್ ಆಫ್ ಪಾವರ್ಟಿ (DOOP) ಉಪಕ್ರಮವು ಇವರ ಜೀವನವನ್ನು ಸುಧಾರಣೆಗೊಳಿಸಿತು.


ಕೆಲ ಮಕ್ಕಳಿಗೆ ನೃತ್ಯ ಕಲಿಸುತ್ತಿರುವ ಕೌಶಲ್ ಡೂಪ್.

ಕೌಶಲ್ ತನ್ನ ಮಾದಕ ದ್ರವ್ಯ ವ್ಯಸನವು ಕಗ್ಗತ್ತಲು ಹಾಗೂ ಮಂದ ಜಗತ್ತಿನಲ್ಲಿ ಮುಳುಗಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಿಂದಲೇ ನೃತ್ಯ ಕಲಿಯುವ ಆಸಕ್ತಿ ಹೊಂದಿದ್ದರು‌. ಆದರೆ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಪೂರ್ಣ ಪ್ರಮಾಣದ ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ.


ನನ್ನ ತಂದೆ ಕಾರ್ಖಾನೆಯಲ್ಲಿ ವೆಲ್ಡರ್ ಆಗಿದ್ದರಿಂದ, ತರಬೇತಿಗಾಗಿ ಪಾವತಿಸಲು ಸಾಕಷ್ಟು ಹಣ ಇರಲಿಲ್ಲ. ಹಾಗಾಗಿ ಕಲಾ ಪ್ರಕಾರದ ತರಬೇತಿ ತೆಗೆದುಕೊಳ್ಳುವ ನನ್ನ ಆಸೆ ಮರೆಯಾಯಿತು. ಅದಲ್ಲದೇ ನಾನು ಮಾದಕ ವ್ಯಸನಿಯಾಗಿದ್ದೆ. 2017 ರಲ್ಲಿ ನಾನು ಡ್ಯಾನ್ಸ್ ಔಟ್ ಆಫ್ ಪಾವರ್ಟಿ ಆಂದೋಲನಕ್ಕೆ ಸೇರಿದಾಗ ನಾನು ಒಂದು ಬದಲಾವಣೆಯನ್ನು ಅನುಭವಿಸಿದೆ. ಈ ಉಪಕ್ರಮದ ಭಾಗವಾಗಿ ನನ್ನಿಂದ ಒಂದು ರೂಪಾಯಿಯನ್ನೂ ಪಡೆಯದೇ ನೃತ್ಯ ನಿರ್ದೇಶಕರು ನನ್ನ‌ ಪ್ರದೇಶಕ್ಕೆ ಬಂದು ನನಗೆ ಫ್ರೀಸ್ಟೈಲ್ ಮೂವ್‌ಗಳನ್ನು ಕಲಿಸಿದರು" ಎಂದು ಕೌಶಲ್ ಹೇಳುತ್ತಾರೆ.


ನೃತ್ಯದ ಬಗ್ಗೆ ಮಾತನಾಡಿದ ಕೌಶಲ್ ನೃತ್ಯವೆಂಬುದು ನನ್ನಲ್ಲಿ ಸಾಕಷ್ಟು ಪಾಸಿಟಿವ್ ಶಕ್ತಿಯನ್ನು ಹೊರತಂದಿದೆ. ಅಲ್ಲದೇ ಅವರಿಗೆ ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸ್ಥಿರತೆಯನ್ನು ನೀಡಿದ್ದು, ಇದರಿಂದಾಗಿ ಅವರು ಒಳ್ಳೆಯದಕ್ಕಾಗಿ ತನ್ನ ಕೆಟ್ಟ ಅಭ್ಯಾಸಗಳನ್ನು ತೊರೆಯುವಲ್ಲಿ ಸಹಾಯಕಾರಿಯಾಗಿದೆ ಎಂದರು.


ಡೂಪ್‌ನ ಹೊಂಗಿರಣಗಳು

ಪರ್ಫೆಕ್ಟ್ ಸಿಂಕ್, ಆರ್ಮ್ ರೈಸ್ಡ್ ಇನ್ ದ ಏರ್ ಹಾಗೂ ಸರಾಗವಾದ ಚಲನೆಗಳು ಡೂಪ್‌ನ ಮುಖ್ಯ ಅಂಶಗಳಾಗಿವೆ. ಇಂದು ಕೌಶಲ್ ದೆಹಲಿಯ ಉತ್ತಮ್ ನಗರದ ಮ್ಯೂಸಿಕಾನಿಕ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ಅರೆಕಾಲಿಕ ನೃತ್ಯ ಬೋಧಕರಾಗಿ ಕೆಲಸ ಮಾಡುತ್ತಾ ತಿಂಗಳಿಗೆ 5,000 ರೂ ಗಳಿಸುತ್ತಿದ್ದಾರೆ. ಜೊತೆಗೆ ಅವರ ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್‌ನಿಂದ ಪದವಿ ಸಹ ಪಡೆಯುತ್ತಿದ್ದಾರೆ.


ಡಾನ್ಸ್ ಆಫ್ ಔಟ್ ಪಾವರ್ಟಿ ಭಾಗವಾಗಿ ನೃತ್ಯ ತರಬೇತಿ ಪಡೆಯುತ್ತಿರುವ ಮಕ್ಕಳು.


ವಿನಾಪ್ ಶರ್ಮಾ (32) ಅವರು 2016 ರಲ್ಲಿ ಈ ಡೂಪ್ ಉಪಕ್ರಮವನ್ನು ಪ್ರಾರಂಭಿಸಿದರು. ಸಿಂಹಾಯನ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಇವರು ದೀನದಲಿತ ಮಕ್ಕಳ ಜೀವನವನ್ನು ನೃತ್ಯದ ಮೂಲಕ ಪರಿವರ್ತಿಸುವ ಉದ್ದೇಶದಿಂದಾಗಿ ಚಲನಚಿತ್ರ ನಿರ್ದೇಶಕರಾದ ರಾಜ್‌ಕುಮಾರ್ ಸಂತೋಶಿಗೆ ಸಹಾಯಕ ನಿರ್ದೇಶಕ-ಕಮ್-ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುವ ಅವಕಾಶವನ್ನು ತ್ಯಜಿಸಲು ನಿರ್ಧರಿಸಿದರು.


ಸೋಶಿಯಲ್ ಸ್ಟೋರಿಯೊಂದಿಗೆ ಮಾತನಾಡಿದ ವಿನಯ್, ನೃತ್ಯವನ್ನು ಭಾರತ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಒಂದು ಭಾಗವೆಂದು ಪರಿಗಣಿಸಲಾಗಿಲ್ಲವಾದರೂ, ಜನರಲ್ಲಿ ಉತ್ತಮವಾದದ್ದನ್ನು ಹೊರತರುವ ಮತ್ತು ಅವರ ಕನಸುಗಳಿಗೆ ರೆಕ್ಕೆಗಳನ್ನು ನೀಡುವಲ್ಲಿ ನೃತ್ಯಕ್ಕೆ ಅಪಾರ ಸಾಮರ್ಥ್ಯವಿದೆ.


ವಿನಯ್ ಶರ್ಮಾ ಮತ್ತು ಹೃತಿಕ್ ರೋಷನ್ ಜೊತೆಗೆ ಡ್ಯಾನ್ಸ್ ಔಟ್ ಆಫ್ ಪಾವರ್ಟಿ ತಂಡ.


ನೃತ್ಯವನ್ನು ಕಲಿತ ನಂತರ, ಅದನ್ನು ಹವ್ಯಾಸವಾಗಿ ಅಥವಾ ವೃತ್ತಿಯಾಗಿ ಮುಂದುವರಿಸಬಹುದು. ಇಲ್ಲಿ ಹಲವಾರು ಮಕ್ಕಳು ಮತ್ತು ಹದಿಹರೆಯದವರು ಹಾಡಿಗೆ ಕಾಲು ಕುಣಿಸುವ ಹಂಬಲವನ್ನು ಹೊಂದಿದ್ದಾರೆ, ಆದರೆ ಅದರಲ್ಲಿ ಮುಂದೆ ಹೋಗಲು ಎಷ್ಟೋ ಮಂದಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕಲಾ ಪ್ರಕಾರವನ್ನು ಉಚಿತವಾಗಿ ಕಲಿಸುವ ಉದ್ದೇಶದಿಂದ ನಾನು ಡ್ಯಾನ್ಸ್ ಔಟ್ ಆಫ್ ಪಾವರ್ಟಿ ಉಪಕ್ರಮಕ್ಕೆ ಅಡಿಪಾಯ ಹಾಕಿದೆ," ಎಂದು ಅವರು ಹೇಳುತ್ತಾರೆ.


ಆರಂಭಿಕ ಹಂತಗಳು

ವಿನಯ್ ಅವರು 2009 ರಲ್ಲಿ ಚಲನಚಿತ್ರ ತಯಾರಿಕೆ ಮತ್ತು ನೃತ್ಯ ಸಂಯೋಜನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು‌. ತದನಂತರ ಸಹಾಯಕ ನಿರ್ದೇಶಕರ ಜವಾಬ್ದಾರಿಯನ್ನು ನಿರ್ವಹಿಸಿಕೊಂಡರು. ಸಿನಿಮಾರಂಗದಲ್ಲಿ ಸುಮಾರು ಎಂಟು ವರ್ಷಗಳು ಕಾರ್ಯನಿರ್ವಹಿಸಿದ ನಂತರ ವಿರಾಮ ತೆಗೆದುಕೊಂಡರು.


ಸಾಮಾಜಿಕ ಉದ್ಯಮಿಯಾಗಿ ಆರ್ಥಿಕವಾಗಿ ಸವಾಲಿನ ನಡುವೆಯು 200 ಕ್ಕೂ ಹೆಚ್ಚು ಮಕ್ಕಳಿಗೆ ನೃತ್ಯ ಕಾರ್ಯಾಗಾರವನ್ನು ನಡೆಸಿದರು. ಅದರಿಂದ ಹೊರಹೊಮ್ಮಿದ ಉತ್ಸಾಹ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ನಂತರ, ನೃತ್ಯದ ಸುತ್ತ ಒಂದು ವಿಶೇಷ ಉಪಕ್ರಮವನ್ನು ಪ್ರಾರಂಭಿಸುವ ಆಲೋಚನೆ ಅವರ ತಲೆಯಲ್ಲಿ ಮೂಡಿತು.


ಸ್ಲಮ್ ಮಕ್ಕಳಿಗೆ ನೃತ್ಯ ತರಬೇತಿ ಶಿಬಿರ.


"ಮಕ್ಕಳಿಗೆ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸಲು ಕೆಲಸ ಮಾಡುವ ಹಲವಾರು ಸಂಘಟನೆಗಳು ಇದ್ದವು. ಆದರೆ ನೃತ್ಯದಂತಹ ಪ್ರದರ್ಶನ ಕಲೆಗಳಲ್ಲಿ ಅವರಿಗೆ ತರಬೇತಿ ನೀಡುವುದರ ಬಗ್ಗೆ ಹೆಚ್ಚಾಗಿ ಗಮನಹರಿಸಲಿಲ್ಲ. ಆದ್ದರಿಂದ ನನ್ನ ಎನ್‌ಜಿಓ ಸಿಂಹಾಯನ ಫೌಂಡೇಶನ್ ಅನ್ನು ಸ್ಥಾಪಿಸಲು ನಾನು ನಿರ್ಧರಿಸಿದೆ ಹಾಗೂ ಯುವ ಮನಸ್ಸುಗಳಿಗೆ ನೃತ್ಯದಲ್ಲಿ ಉಚಿತ ತರಬೇತಿ ನೀಡುವ ಉಪಕ್ರಮವನ್ನು ಪ್ರಾರಂಭಿಸಿದೆ,” ಎಂದು ವಿನಯ್ ಹೇಳುತ್ತಾರೆ.


ಹೆಚ್ಚಿನ ಸಂಬಳ ಪಡೆಯುವ ಕೆಲಸವನ್ನು ತ್ಯಜಿಸಿ ಸಾಮಾಜಿಕ ವಲಯಕ್ಕೆ ಕಾಲಿಟ್ಟಿದ್ದಕ್ಕಾಗಿ ಸಾಮಾನ್ಯ ಅಸಮ್ಮತಿ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದರೂ ಅವುಗಳು ವಿನಯ್ ಅವರನ್ನು ತಡೆಯಲಾಗಲಿಲ್ಲ. ನೃತ್ಯದ ಮೂಲಕ ಜನರನ್ನು ಸಬಲೀಕರಣಗೊಳಿಸುವ ಭರವಸೆಯನ್ನು ಜೀವಂತವಾಗಿರಿಸಿಕೊಂಡ ಅವರು ತಮ್ಮ ಎಲ್ಲಾ ಉಳಿತಾಯಗಳಿಂದ ಈ ಉಪಕ್ರಮವನ್ನು ಬೆಳೆಸಿದರು.


ನೃತ್ಯದಲ್ಲಿನ‌ ಅವರ ಭವಿಷ್ಯ

ಡೂಪ್ ಕಾರ್ಯಕ್ರಮದ ಧ್ಯೇಯವಾಕ್ಯವೆಂದರೆ ಮಕ್ಕಳ ಶಕ್ತಿಯನ್ನು ನೃತ್ಯದ ಮೂಲಕ ಪೋಷಿಸುವುದು ಮತ್ತು ಚಾನಲೈಸ್ ಮಾಡುವುದು ಹಾಗೂ ಅದೇ ಸಮಯದಲ್ಲಿ ಅವರು ನೃತ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅವರಿಗೆ ತರಬೇತಿ ನೀಡುವುದು.


ತಮ್ಮ ಉದ್ದೇಶವನ್ನು ವಿಸ್ತರಿಸಲು, ಈ ಕಾರ್ಯಕ್ರಮವು ದೆಹಲಿ ಮತ್ತು ಮುಂಬೈನಾದ್ಯಂತ ಕೊಳೆಗೇರಿಗಳಿಗೆ ಪ್ರಯಾಣಿಸುವ‌ ಮಕ್ಕಳಲ್ಲಿ ನೃತ್ಯ ಕಲಿಯಲು ಆಸಕ್ತಿ ಹೊಂದಿರುವ ಪ್ರದೇಶದ ಮಕ್ಕಳನ್ನು ಒಟ್ಟುಗೂಡಿಸಿ ಉಚಿತವಾಗಿ ಕಲಿಸುವ 12 ನೃತ್ಯ ನಿರ್ದೇಶಕರನ್ನು ಹೊಂದಿದೆ.


ತರಬೇತಿ ಪಡೆದ ಮಕ್ಕಳ ವೇದಿಕೆ ಪ್ರದರ್ಶನ.


ಈ ನೃತ್ಯ ನಿರ್ದೇಶಕರು ವಾರಕ್ಕೆ ಮೂರು ಬಾರಿ ಆಯೋಜಿಸಿರುವ 90 ನಿಮಿಷಗಳ ಸೆಷನ್‌ಗಳ ಮೂಲಕ ವಿಭಿನ್ನ ಫ್ರೀಸ್ಟೈಲ್ ಚಲನೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾರೆ.


ಪ್ರತಿಯೊಂದು ಕೊಳೆಗೇರಿಗಳಲ್ಲಿನ ಸಂಪೂರ್ಣ ಕಾರ್ಯಕ್ರಮವು ಸುಮಾರು ಆರು ತಿಂಗಳಿಂದ ಒಂದು ವರ್ಷದವರೆಗೆ ನಡೆಯುತ್ತದೆ ಎಂದು ವಿನಯ್ ವಿವರಿಸುತ್ತಾರೆ. ಮುನ್ಸಿ ರಾಮ್ ಕಾಲೋನಿ, ಸಾಗರಪುರ, ಸರಿತಾ ವಿಹಾರ್, ಇಂದ್ರಪುರಂ ಗಾಜಿಯಾಬಾದ್ ಹಾಗೂ ದೆಹಲಿಯ ಆರ್. ಕೆ. ಪುರಂ ಮತ್ತು ಮುಂಬೈನ ಜುಹು ಇವು ಇಲ್ಲಿಯವರೆಗಿನ ಈ ಯೋಜನೆಯ ಭಾಗವಾಗಿವೆ.


ನೃತ್ಯದ ಮೂಲಭೂತ ಅಂಶಗಳು, ಮುಖದ ಅಭಿವ್ಯಕ್ತಿಗಳು, ದೇಹದ ಚಲನೆಗಳು, ಸೈದ್ಧಾಂತಿಕ ಪರಿಕಲ್ಪನೆಗಳು, ಫಿಟ್‌ನೆಸ್ ಮತ್ತು ಪೋಷಣೆಯಂತಹ ವಿವಿಧ ಅಂಶಗಳನ್ನು ಈ ನೃತ್ಯ ತರಬೇತಿಯಲ್ಲಿ ಕೇಂದ್ರೀಕರಿಸಲಾಗಿದೆ. ಇದಲ್ಲದೆ, ಪ್ರತಿವರ್ಷ, ನಾವು ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಅಪಾರ ಪ್ರೇಕ್ಷಕರು ಸೇರಿರುವ ವೇದಿಕೆಯಲ್ಲಿ ಪ್ರದರ್ಶನ ನೀಡುವ ಅವಕಾಶ ಕಲ್ಪಿಸುವ ಕಾರ್ಯಕ್ರಮವನ್ನು ಸಹ ಆಯೋಜಿಸುತ್ತೇವೆ” ಎಂದು ಅವರು ಹೇಳುತ್ತಾರೆ.


ವಿನಯ್ ಶರ್ಮ, ಸಂಸ್ಥಾಪಕರು, ಸಿಂಹಾಯನ‌ ಫೌಂಡೇಶನ್.


ಇಲ್ಲಿಯವರೆಗೆ, ವಿನಯ್ ಮತ್ತು ಅವರ ತಂಡವು 2,500 ಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರಿಗೆ ನೃತ್ಯದಲ್ಲಿ ತರಬೇತಿ ನೀಡಿದೆ. ಅವರಲ್ಲಿ 80 ಮಂದಿ ನೃತ್ಯ ಬೋಧಕರಾಗಿ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ.


ಪ್ರಸ್ತುತ ವಿನಯ್ 2020 ರ ವೇಳೆಗೆ ಇನ್ನೂ ಕನಿಷ್ಠ ಮೂರರಿಂದ ನಾಲ್ಕು ನಗರಗಳಿಗೆ ತಮ್ಮ ಉಪಕ್ರಮವನ್ನು ವಿಸ್ತರಿಸಿ, 10,000 ಮಕ್ಕಳಿಗೆ ತರಬೇತಿ ನೀಡಲು ಯೋಜಿಸಿದ್ದಾರೆ.