ಕೊರೊನಾವೈರಸ್‌: ಬೆಂಗಳೂರಿನ ಈ ವೈದ್ಯೆಗೆ ಸಿಕ್ಕಿತು ಹೃದಯಸ್ಪರ್ಶಿ ಸ್ವಾಗತ

ಎಮ್‌ ಎಸ್‌ ರಾಮಯ್ಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಾದ ಡಾ. ವಿದ್ಯಾಶ್ರೀ ಅವರು ಕೊರೊನಾವೈರಸ್‌ ಮಹಾಮಾರಿಯ ವಿರುದ್ಧ ದನಿವರಿಯದೆ ಹೋರಾಡುತ್ತಿರುವುದಕ್ಕಾಗಿ ತಮ್ಮ ನೆರೆಹೊರೆಯವರಿಂದ ಚಪ್ಪಾಳೆಗಳ ಭಾರೀ ಸ್ವಾಗತವನ್ನು ಪಡೆದಿದ್ದಾರೆ.

ಕೊರೊನಾವೈರಸ್‌: ಬೆಂಗಳೂರಿನ ಈ ವೈದ್ಯೆಗೆ ಸಿಕ್ಕಿತು ಹೃದಯಸ್ಪರ್ಶಿ ಸ್ವಾಗತ

Wednesday May 06, 2020,

2 min Read

ಕಳೆದ ಕೆಲವು ತಿಂಗಳಿನಿಂದ ವಿಶ್ವವು ಕೊರೊನಾವೈರಸ್‌ ಏಕಾಏಕಿಯಾಗಿ ಹರಡುತ್ತಿರುವುದರಿಂದ ಸಂಕಷ್ಟಕ್ಕೆ ಗುರಿಯಾಗಿದೆ. ಇಲ್ಲಯವರೆಗೂ ವಿಶ್ವದಾದ್ಯಂತ 2.5 ಲಕ್ಷ ಜನರು ಈ ಸೋಂಕಿನಿಂದ ಪ್ರಾಣಕಳೆದುಕೊಂಡಿದ್ದಾರೆ ಮತ್ತು 3.6 ಮಿಲಿಯನ್‌ ಪ್ರಕರಣಗಳು ದೃಢಪಟ್ಟಿವೆ.


ಹಲವು ಆರೋಗ್ಯ ಕಾರ್ಯಕರ್ತರು ವೈರಸ್‌ ಅನ್ನು ತಡೆಯಲು ಶ್ರಮಿಸುತ್ತಿದ್ದಾರೆ. ತಮ್ಮ ಜೀವವನ್ನೆ ಅಪಾಯಕ್ಕೆ ಒಡ್ಡಿ ರೋಗಿಗಳನ್ನು ಉಳಿಸಲು ಈ ಕೊರೊನಾ ಯೋಧರು ಕೆಲಸಮಾಡುತ್ತಿದ್ದಾರೆ.


ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಮ್‌ ಎಸ್‌ ರಾಮಯ್ಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಓರ್ವ ವೈದ್ಯೆಗೆ ಕೆಲಸದಿಂದ ಮನೆಗೆ ಮರಳಿದಾಗ ಅಚ್ಚರಿಯ ಸ್ವಾಗತ ದೊರಕಿದೆ. ಕೋವಿಡ್‌-19 ವಿರುದ್ಧದ ಹೋರಾಟಕ್ಕಾಗಿ ಡಾ. ವಿಜಯಶ್ರೀ ಅವರಿಗೆ ತಮ್ಮ ಅಪಾರ್ಟ್ಮೆಂಟ್‌ನ ಜನರು ಚಪ್ಪಾಳೆಗಳ ಸುರಿಮಳೆಗೈದು ಬರಮಾಡಿಕೊಂಡಿದ್ದಾರೆ.


“ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಮರಳಿದ ಡಾ. ವಿಜಯಶ್ರೀ ಅವರಿಗೆ ನಮ್ಮ ಬೆಂಗಳೂರಿನ ಅಪಾರ್ಟಮೆಂಟ್‌ ಸ್ವಾಗತಿಸಿದ ಪರಿ ಇದು. ವೈದ್ಯರ ಮಹತ್ತರವಾದ ಸೇವೆಯನ್ನು ಗೌರವಿಸೋಣ ಮತ್ತು ಪ್ರಶಂಸಿಸೋಣ,” ಎಂದು ಬಿಜೆಪಿ ಕರ್ನಾಟಕ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ.


ಆ ಕ್ಷಣವನ್ನು ಸೆರೆಹಿಡಿದ ವಿಡಿಯೋದಲ್ಲಿ, ವೈದ್ಯೆಯ ಖುಷಿಯನ್ನು ಕಾಣಬಹುದು. ‘ಜನತಾ ಕರ್ಫ್ಯೂ’ ದಿನದಂತೆಯೇ, ಅವರ ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಬಾಲ್ಕನಿಗಳಿಗೆ ಬಂದು ವೈದ್ಯರ ಸೇವೆಯನ್ನು ಗೌರವಿಸಿ, ಹುರಿದುಂಬಿಸಿದರು.


"ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆಯಲ್ಲಿ ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಮರಳಿದ ಬೆಂಗಳೂರಿನ ಡಾ.ವಿಜಯಶ್ರೀ ಅವರು ಭಾರೀ ಸ್ವಾಗತ ಪಡೆದರು. ಈ ಸಾಂಕ್ರಾಮಿಕ ರೋಗದ ವಿರುದ್ಧ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಕೊರೋನಾ ವಾರಿಯರ್ಸ್‌ಗೆ ದೊಡ್ಡ ಧನ್ಯವಾದಗಳು. ನಾವು ನಿಮಗೆ ನಮಸ್ಕರಿಸುತ್ತೇವೆ,” ಎಂದು ಬೆಂಗಳೂರು ಮೇಯರ್ ಎಂ ಗೌತಮ್ ಕುಮಾರ್ ಟ್ವೀಟ್ ಮಾಡಿದ್ದಾರೆ, ವರದಿ ದಿ ಇಂಡಿಯನ್ ಎಕ್ಸ್‌ಪ್ರೆಸ್.

ವಿಡಿಯೋ ವಿಕ್ಷಿಸಿದ ಹಲವರು ವೈದೈರನ್ನು ಮತ್ತು ನೆರೆಹೊರೆಯವರನ್ನು ಪ್ರಶಂಸಿದ್ದಾರೆ. ಆದಾಗ್ಯೂ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಇತರ ವೈದ್ಯರು ಇದೇ ರೀತಿ ಸ್ವಾಗತವನ್ನು, ತಮ್ಮ ಕೆಲಸಕ್ಕೆ ಪ್ರಶಂಸೆಯನ್ನು ಪಡೆಯದಿರಬಹುದು.


ಕಳೆದ ತಿಂಗಳು, ಗುಜರಾತ್‌ ನ ವೈದ್ಯರೊಬ್ಬರು ತಮ್ಮ ಪಕ್ಕದ ಮನೆಯವರಿಂದ ಹಲ್ಲೆಗೆ ಒಳಗಾಗಿದ್ದರು. ಸುರತ್‌ನ ಹೊಸ ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಡಾ. ಸಂಜಿಬನಿ ಪಾನಿಗ್ರಾಹಿಯವರು ಕೆಲಸದಿಂದ ಮನೆಗೆ ಮರಳಿದಾಗ ನೆರೆಯರಾದ ಚೇತನ್‌ ಮೆಹ್ತಾ ಮತ್ತು ಅವರ ಪತ್ನಿಯಿಂದ ನಿಂದನೆಗೆ ಒಳಗಾಗಿದ್ದರು. ಅಂತಿಮವಾಗಿ ಪೋಲಿಸರು ಅವರನ್ನು ಬಂಧಿಸಿ, ಕ್ಷಮಾಪಣಾ ಪತ್ರ ನೀಡುವವರೆಗೂ ಹಿಡಿದಿಟ್ಟುಕೊಂಡಿದ್ದರು.


ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯುಶ್‌ ಘೋಯಲ್‌ ಭಾನುವಾರದಂದು ಕುಟುಂಬ ಮತ್ತು ನೆರೆಹೊರೆಯವರಿಂದ ಭಾರೀ ಸ್ವಾಗತ ಪಡೆದ ಇನ್ನೊಬ್ಬ ವೈದ್ಯರ ವಿಡಿಯೋವನ್ನು ಟ್ವೀಟಿಸಿದ್ದರು. ಅದೇ ರೀತಿ, ಈ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆಯ ಸಂಕೇತವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೋವಿಡ್‌-19 ಆಸ್ಪತ್ರೆಗಳಲ್ಲಿ ಹೂವಿನ ದಳಗಳನ್ನು ಸುರಿಸುವುದು, ಮಿಲಿಟರಿ ಬ್ಯಾಂಡ್ ಪ್ರದರ್ಶನಗಳು ಮತ್ತು ಫ್ಲೈಪಾಸ್ಟ್‌ಗಳು ಸೇರಿದಂತೆ ಚಟುವಟಿಕೆಗಳನ್ನು ಏರ್ಪಡಿಸಿದ್ದವು.