ಕರೋನವೈರಸ್: ಮಣಿಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು 500 ಹ್ಯಾಂಡ್‌ ಸ್ಯಾನಿಟೈಜರ್ ಬಾಟಲಿಗಳನ್ನು ತಯಾರಿಸಿದೆ

ಮಣಿಪುರ ವಿಶ್ವವಿದ್ಯಾಲಯ ತನ್ನ ಸಮುದಾಯಕ್ಕಾಗಿ ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸಲು ಈಥೈಲ್ ಮದ್ಯಸಾರ-ಆಧರಿತ 1,000 ಕ್ಕೂ ಹೆಚ್ಚಿನ ಸ್ಯಾನಿಟೈಜರ್ ಬಾಟಲಿಗಳನ್ನು ತಯಾರಿಸಲಿದೆ.

ಕರೋನವೈರಸ್: ಮಣಿಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು 500 ಹ್ಯಾಂಡ್‌ ಸ್ಯಾನಿಟೈಜರ್ ಬಾಟಲಿಗಳನ್ನು ತಯಾರಿಸಿದೆ

Tuesday March 24, 2020,

2 min Read

ಹೊಸ ವರ್ಷದ ಆರಂಭದಿಂದಲೂ, ನಾವೆಲ್ಲರೂ ನಮ್ಮ ಸಮಾಜದಲ್ಲಿ ಪ್ರವೇಶಿಸಿದ ಕರೋನವೈರಸ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇವೆ. ಸೋಮವಾರದ ವೇಳೆಗೆ, ಭಾರತದಲ್ಲಿ ಸುಮಾರು 499+ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ, ಜೊತೆಗೆ 10 ಸಾವುಗಳು ಸಂಭವಿಸಿವೆ ಎಂದು ವೋಲ್ಡೋಮೀಟರ್ ತಿಳಿಸಿದೆ.


ಕರೋನವೈರಸ್ ನ ಮೊದಲ ಕೆಲವು ಪ್ರಕರಣಗಳು ಭಾರತದಲ್ಲಿ ವರದಿಯಾದಾಗಿನಿಂದ, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್‌ಗಳ ಬೇಡಿಕೆಯಲ್ಲಿ ಬಹಳ ಏರಿಕೆ ಕಂಡುಬಂದಿದೆ, ಮತ್ತು ಅಂತಹ ಸರಕುಗಳನ್ನು ಕೊಂಡುಕೊಳ್ಳುವುದು ಕಷ್ಟಕರವಾಗಿತ್ತು. ಈ ಕೊರತೆಯನ್ನೆ ಲಾಭ ಮಾಡಿಕೊಂಡು ನಕಲಿ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಉತ್ಪಾದಿಸಿದ ಕೆಲವು ಉದಾಹರಣೆಗಳಿವೆ, ಮತ್ತು ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ.


ಇದರ ಮಧ್ಯೆ, ಇಂಫಾಲ್‌ನ ಮಣಿಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ತನ್ನ ಸುತ್ತಲಿನ ಸಮುದಾಯದ ಬೇಡಿಕೆಯನ್ನು ಪೂರೈಸಲು ನಿರ್ಧರಿಸಿ ಮತ್ತು 500 ಬಾಟಲಿಗಳ ಈಥೈಲ್ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ಗಳನ್ನು ತಯಾರಿಸಿ ವಿತರಿಸಿದೆ.


"ಆರಂಭದಲ್ಲಿ, ನಾವು ತಲಾ 200 ಮಿಲಿ ತೂಕವಿರುವ 200 ಬಾಟಲಿಗಳ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ತಯಾರಿಸಿದ್ದೇವೆ. ಪ್ರಯೋಗಾಲಯದಲ್ಲಿ ಸ್ಯಾನಿಟೈಜರ್ ತಯಾರಿಸಲು ಈಥೈಲ್ ಆಲ್ಕೋಹಾಲ್ (80 ರಿಂದ 90 ಪ್ರತಿಶತ), ಹೈಡ್ರೋಜನ್ ಪೆರಾಕ್ಸೈಡ್, ಗ್ಲಿಸರಾಲ್ ಮತ್ತು ಬಟ್ಟಿ ಇಳಿಸಿದ ನೀರನ್ನು ಬಳಸಲಾಗುತ್ತಿತ್ತು," ಎಂದು ಮುಖ್ಯಸ್ಥ ಓಖ್ಲಾಮ್ ಮುಖರ್ಜಿ ಇಂಡಿಯಾ ಟುಡೆ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


ಮಾರ್ಚ್ 19 ರಂದು, ಈ ಸ್ಯಾನಿಟೈಜರ್‌ಗಳ ವಿತರಣೆಯ ಮೊದಲ ಹಂತದಲ್ಲಿ, ಉತ್ಪಾದನೆಯಲ್ಲಿ ಇಲಾಖೆಗೆ ನೆರವಾಗಲು ಸ್ಥಳೀಯ ಕಂಪನಿಯೊಂದರಿಂದ 200 ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಪಡೆಯಿತು.


(ಚಿತ್ರಕೃಪೆ: ಇ-ಪಾವೊ)




ಇದಲ್ಲದೆ, ಮಾರ್ಚ್ 21 ರಂದು ಹೆಚ್ಚುವರಿ 300 ಬಾಟಲಿಗಳನ್ನು ತಯಾರಿಸಲಾಯಿತು ಮತ್ತು ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಿದ ಸಮುದಾಯದ ಜನರಿಗೆ ಅವುಗಳನ್ನು ವಿತರಿಸಲಾಯಿತು. ಈ ಕ್ರಿಯೆಯಲ್ಲಿ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು ಎಂದು ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.


"ನಾವು ಇನ್ನೂ 1,000 ಬಾಟಲಿಗಳನ್ನು ತಯಾರಿಸುವ ಸ್ಥಿತಿಯಲ್ಲಿದ್ದೇವೆ. ನಮ್ಮ ಉತ್ಪನ್ನವು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ," ಎಂದು ಮುಖರ್ಜಿ ದಿ ಔಟ್ ಲುಕ್‌ಗೆ ತಿಳಿಸಿದರು.


ಇದಲ್ಲದೆ, ಸ್ಯಾನಿಟೈಸರ್‌ಗಳಿಗಾಗಿ ಕೋರಿಕೆ ಇಟ್ಟ ಅಖಿಲ ಭಾರತ ರೇಡಿಯೊ ಕೇಂದ್ರದ ನೌಕರರಿಗೆ ಕೆಲವು ಬಾಟಲಿಗಳನ್ನು ಸಹ ನೀಡಲಾಗಿದೆ.


ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಭಾನುವಾರ ಸ್ವಯಂಪ್ರೇರಿತ ಕರ್ಫ್ಯೂ ಆಚರಿಸುವಂತೆ ಕರೆ ನೀಡಿದ್ದರು, ಇದನ್ನು ವೈರಸ್ ಹರಡುವುದನ್ನು ಕಡಿಮೆ ಮಾಡಲು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಇದ್ದ ‘ಜನತಾ ಕರ್ಫ್ಯೂ’ ಎಂದು ಪರಿಗಣಿಸಲಾಗಿದೆ. ಇಲ್ಲಿಯವರೆಗೆ, ಮಹಾರಾಷ್ಟ್ರ ರಾಜ್ಯದಲ್ಲಿ 60 ಪ್ರಕರಣಗಳು ದಾಖಲಾಗಿವೆ, ಇದು ಭಾರತದಲ್ಲೆ ಅತೀ ಹೆಚ್ಚು ಮತ್ತು ಒಂದು ಸಾವು ವರದಿಯಾಗಿದೆ.


ಇದಲ್ಲದೆ, ಕೇರಳವು 45 ಪ್ರಕರಣಗಳನ್ನು ವರದಿ ಮಾಡಿದೆ, ಇದು ಭಾರತದಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಉತ್ತರಾಖಂಡ್ ಮತ್ತು ಗುಜರಾತ್ ಕೋವಿಡ್‌ 19 ಸೋಂಕಿತ ಪ್ರಕರಣಗಳು ವರದಿಯಾಗಿವೆ.