ಕೋರ್ಟ್ ಪ್ಯೂನ್ ಮಗಳು ಈಗ ನ್ಯಾಯಾಧೀಶೆ

ಐದು ವರ್ಷದ ಮಗುವಿನ ತಾಯಿಯಾದ ಅರ್ಚನಾರವರು ಬಿಹಾರದ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ‌.

ಕೋರ್ಟ್ ಪ್ಯೂನ್ ಮಗಳು ಈಗ ನ್ಯಾಯಾಧೀಶೆ

Thursday December 05, 2019,

2 min Read

ಸಾಧಿಸುವ ಮನಸ್ಸು ಹಾಗೂ ಹುಮ್ಮಸ್ಸೊಂದಿದ್ದರೆ ಸಾಕು ಸಾಧನೆಗೆ ಯಾವುದೇ ಅಡಚಣೆ ಬಂದರು ಮುನ್ನುಗ್ಗಬಹುದು. ಗೆಲುವು ಎನ್ನುವುದು ಕಠಿಣ ಪರಿಶ್ರಮದ ಮೇಲೆ‌ ಅವಲಂಬಣೆಯಾಗಿರುತ್ತದೆ ಹಾಗೂ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ‌ ಎಂಬುದನ್ನು ಬಿಹಾರ ರಾಜ್ಯದಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾದ ಅರ್ಚನಾ ಅವರು ಸಾಬೀತುಪಡಿಸಿದ್ದಾರೆ. ಐದು ವರ್ಷದ ಮಗುವಿನ ತಾಯಿಯಾದ ಅರ್ಚನಾ, ಸಾಧನೆ ಮಾಡುವ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎಂದು ನಿರೂಪಿಸಿದ್ದಾರೆ.


ಬಿಹಾರ ರಾಜ್ಯದ ಕಂಕರ್‌ಬಾಗ್ ಎಂಬಲ್ಲಿ ಜನಿಸಿದ ಅರ್ಚನಾರವರು ಸರನ್ ಜಿಲ್ಲೆಯ ಸೋನೆಪುರ ನ್ಯಾಯಯದಲ್ಲಿ ಪ್ಯೂನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೌರಿನಂದನ್ ಅವರ ಮಗಳಾಗಿದ್ದಾರೆ. ನ್ಯಾಯಾಲಯದ ಪ್ಯೂನ್ ಮಗಳು ಈಗ ನ್ಯಾಯಾಧೀಶರಾಗಲು ಸಜ್ಜಾಗಿದ್ದಾರೆ‌.


ನ್ಯಾಯಾಧೀಶೆಯಾಗಿ ಆಯ್ಕೆಯಾದ ಅರ್ಚನಾರವರು (ಚಿತ್ರಕೃಪೆ: ಈನಾಡು)




"ನನ್ನ ತಂದೆ ನ್ಯಾಯಾಲಯದಲ್ಲಿ ಪ್ಯೂನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಬಾಲ್ಯದ ದಿನಗಳಲ್ಲಿ ಅದು ನನಗೆ ಇಷ್ಟವಾಗಿರಲಿಲ್ಲ. ಆಗ ನಾನು ನನ್ನ ತಂದೆಗೆ ನಾನು ಒಂದು ದಿನ ನ್ಯಾಯಾಧೀಶಳಾಗುತ್ತೇನೆ‌ ಎಂದು ಹೇಳಿದ್ದೆ" ಎಂದು ಅರ್ಚನಾ ಹೇಳುತ್ತಾರೆ. ತಮ್ಮ ಎರಡನೇ ಪ್ರಯತ್ನದಲ್ಲಿ ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅರ್ಚನಾ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ‌, ವರದಿ ನ್ಯಾಷನಲ್ ಹೆರಾಲ್ಡ್.


ಆದರೆ, ನಿಧನರಾದ ತಮ್ಮ‌ ತಂದೆ ಗೌರಿನಂದನ್ ಈಗ ತಮ್ಮ ಯಶಸ್ಸನ್ನು ಆಚರಿಸುವ ಸಂದರ್ಭದಲ್ಲಿ ಇಲ್ಲವೆಂದು ವಿಷಾದಿಸುತ್ತಾರೆ‌.


ತಂದೆಯ ಮರಣಾನಂತರ‌ ಅಧ್ಯಯನವನ್ನು ಮುಂದುವರೆಸುವುದು ಸುಲಭವಾಗಿರಲಿಲ್ಲ, ಆಗ ನನ್ನ ತಾಯಿಯು ನನ್ನೊಂದಿಗೆ ಗಟ್ಟಿಯಾಗಿ ನಿಂತರು. ಜೊತೆಗೆ ಕೆಲವು ಸಂಬಂಧಿಕರು ಕೂಡ ಸಹಾಯವನ್ನು ಮಾಡಿದರು ಎಂದೆನ್ನುತ್ತಾರೆ.


ಅರ್ಚನಾರವರು ಶಾಸ್ತ್ರೀನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ 12 ತರಗತಿಯ ವ್ಯಾಸಂಗದ ನಂತರ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿ ತಾವು ಕಲಿತಿರುವ ಶಾಲೆಗೆ ಕಂಪ್ಯೂಟರ್ ಶಿಕ್ಷಕಿಯಾಗಿ ಸೇರಿದರು.


ಮದುವೆಯ ನಂತರ, ತಮ್ಮ ಕನಸು ನನಸಾಗುವುದು ಕಠಿಣ ಎಂದು ಅರ್ಚನಾರವರು ಭಾವಿಸಿದ್ದರು. ಪಾಟ್ನಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರ್ಚನಾ ಅವರ ಪತಿ ರಾಜೀವ್ ರಂಜನ್ ಅವರು ತಮ್ಮ ಪತ್ನಿಯ ಕನಸನ್ನು ಅರಿತು ಅರ್ಚನಾರಿಗೆ ಅಧ್ಯಯನವನ್ನು ಮುಂದುವರೆಸಲು ಪ್ರೋತ್ಸಾಹ ಕೊಟ್ಟರು, ವರದಿ ಹಿಂದೂಸ್ಥಾನ್ ಟೈಮ್ಸ್.


ಅದಕ್ಕಾಗಿ ನಾನು ತುಂಬಾ ಕಷ್ಟಪಡಬೇಕಾಯಿತು, "ನನ್ನ ಪತಿಯು ನನ್ನ ಕನಸಿನ ಬಗ್ಗೆ ತಿಳಿದಿದ್ದರಿಂದ ಅದನ್ನು ಮುಂದುವರೆಸಲು ಪ್ರೋತ್ಸಾಹಿಸಿದರು" ಎಂದು ಅವರು ಹೇಳುತ್ತಾರೆ.


ಇದಕ್ಕೆ ಅರ್ಚನಾರವರ ಮಾವಂದಿರ ಬೆಂಬಲವು ಒತ್ತಾಸೆಯಾಗಿತ್ತು. ಪುಣೆಯಲ್ಲಿ ಎಲ್ ಎಲ್ ಬಿ ಪೂರ್ಣಗೊಳಿಸಿದ ನಂತರ, 2014ರಲ್ಲಿ ಪೂರ್ಣಿಯಾದ ಬಿಎಂಟಿ ಕಾನೂನು ವಿದ್ಯಾಲಯದಿಂದ ಎಲ್ಎಲ್ಎಂ ಪದವಿ ಪಡೆದರು. ನಂತರ, ಅವರು ಕೋಚಿಂಗ್ ತರಗತಿಗಳಿಗೆ ಹಾಜರಾಗಲು ದೆಹಲಿಗೆ ಬಂದರು.


"ಅಧ್ಯಯನವನ್ನು ಮುಂದುವರೆಸುವುದು ತುಂಬಾ ಕಷ್ಟ ಅದರಲ್ಲಿಯೂ ಮದುವೆಯ ನಂತರ, ಮಗುವಾದ ನಂತರ ಕಷ್ಟ. ಆದರೆ ನನ್ನ ಪತಿ ಹಾಗೂ ಮಾವ ನನ್ನನ್ನು ಬೆಂಬಲಿಸಿದರು‌." ಎಂದು ಅರ್ಚನಾ ಹೇಳುತ್ತಾರೆ.


ಕನಸು ಕಾಣುವುದಷ್ಟೇ ಅಲ್ಲ ಅದನ್ನು ಸಾಕಾರ ಮಾಡಿಕೊಳ್ಳಲು ಕೂಡ ಪರಿಶ್ರಮ ಪಡೆಬೇಕು.‌ ಸಾಧಿಸುವ ಮನಸ್ಸು ಇರಬೇಕು. ಅರ್ಚನಾ ಅವರಿಗೆ ನಮ್ಮ ಕಡೆಯಿಂದ ಒಂದು ಸಲಾಮ್.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.