ಹುತಾತ್ಮ ಯೋಧರ ಕುಟುಂಬದ ಸ್ಥಿತಿಗತಿಯನ್ನು ವಿಚಾರಿಸಲು ಹೊರಟ ಸೈಕಲ್‌ ಯಾತ್ರೆ

ಹುತಾತ್ಮ ಯೋಧರ ಕುಟುಂಬದ ಸ್ಥಿತಿಗತಿಯನ್ನು ಅರಿಯಲು ಮತ್ತು ಯುವ ಜನಾಂಗದಲ್ಲಿ ಸೇನೆಯ ಕುರಿತು ಒಲವು ಮೂಡಿಸಲು ದೇಶದ 5 ರಾಜ್ಯದಲ್ಲಿ ಯುವ ಯೋಧರ ತಂಡ ಜನವರಿ 23 ರಂದು ಜೈಸಲ್ಮೇರ್ ಮಿಲಿಟರಿ ಕೇಂದ್ರದಿಂದ ಬ್ಯಾಟಲ್ ಏಕ್ಸ್ ಸ್ಯಾಪ್ಪರ್ಸ್ ವಿಭಾಗದ ಆಶ್ರಯದಲ್ಲಿ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದಾರೆ.

ಹುತಾತ್ಮ ಯೋಧರ ಕುಟುಂಬದ ಸ್ಥಿತಿಗತಿಯನ್ನು ವಿಚಾರಿಸಲು ಹೊರಟ ಸೈಕಲ್‌ ಯಾತ್ರೆ

Thursday February 13, 2020,

2 min Read

ಯುದ್ಧ ಒಂದು ದೇಶದ ಸರ್ವಭೌಮತ್ವದ ಪ್ರಶ್ನೆ. ಸೋಲು ಗೆಲುವು ಇಲ್ಲಿ ಸಾಮಾನ್ಯ. ಆದರೆ ದೇಶವಾಸಿಗಳ ನೆಮ್ಮದಿಯ ನಾಳೆಗೆ ಬಲಿತೆತ್ತ ಅದೆಷ್ಟೋ ಸೈನಿಕರು ಮತ್ತು ಅವರನ್ನು ಕಳೆದುಕೊಂಡ ಅವರ ಕುಟುಂಬದ ತ್ಯಾಗಕ್ಕೆ ಸರಿಸಾಟಿ ಯಾವುದು ಇಲ್ಲಾ.


ಮನೆಗೆ ಆಧಾರವಾಗಿರುವ, ತಂದೆಯನ್ನೋ, ಗಂಡನನ್ನೋ, ಅಣ್ಣನನ್ನೋ ಮಗನನ್ನೋ ಕಳೆದುಕೊಂಡ ಅವರ ಕುಟುಂಬ ಸದಸ್ಯರ ನೋವಿಗೆ ಧನಿಯಾಗಲು, ರಾಜಸ್ಥಾನದ ಜೈಸಲ್ಮೇರ್ ನಲ್ಲಿರುವ ಬ್ಯಾಟಲ್ ಆಕ್ಸ್ ಸ್ಯಾಪ್ಪರ್ಸ್ ತಂಡವು ಈಗಾಗಲೇ ಜೋಧ್‌ಪುರ, ಬೆಳಗಾವಿ, ಬಾಗಲ್‌ಕೋಟ್, ಸಿಕಂದರಾಬಾದ್, ವಾರಂಗಲ್, ವಿಶಾಖಪಟ್ಟಣಂ ಮತ್ತು ಕಾಕಿನಾಡವನ್ನು ಒಳಗೊಂಡಿದ್ದು, ಹುತಾತ್ಮರಾದ ಸೈನಿಕರ ಕುಟುಂಬವನ್ನು ಮತ್ತು ವಿವಿಧ ಶಾಲಾ ಕಾಲೇಜುಗಳನ್ನು ಭೇಟಿ ಮಾಡಿದೆ, ವರದಿ ದ ಹಿಂದೂ.


ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದ ಜಿಲ್ಲೆಗಳನ್ನು ಒಳಗೊಂಡು 1,401 ಕಿ.ಮೀ ದೂರವನ್ನು ವ್ಯಾಪಿಸುವ ಯೋಜನೆ ಇವರಿದ್ದಾಗಿದೆ. ಇದು ಜೈಸಲ್ಮೇರ್ ರೆಜಿಮೆಂಟ್‌ನ ಮೊದಲ ಕಮಾಂಡೆಂಟ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಒ.ಪಿ.ಬಾಹಿ ಅವರ ಸುವರ್ಣ ಮಹೋತ್ಸವದ ಭಾಗವಾಗಿದ್ದು ತಮ್ಮ ಯಾತ್ರೆಯ ಉದ್ದಕ್ಕೂ ಸೈನಿಕರು ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ, ಸೈನ್ಯದ ಕುರಿತು, ದೇಶದ, ಸಂವಿಧಾನದ ಕುರಿತು, ಸೈನ್ಯದಲ್ಲಿರುವ ಅವಕಾಶಗಳ ಕುರಿತು ಮಾಹಿತಿಯನ್ನು ನೀಡುತ್ತಾರೆ ಮತ್ತು ಕೈಪಿಡಿಯನ್ನು ವಿತರಿಸುತ್ತಾರೆ.


ಯೋಧರ ತಂಡ (ಚಿತ್ರ ಕೃಪೆ: ದ ಹಿಂದೂ)


ಯುದ್ಧದಲ್ಲಿ ತಮ್ಮವರನ್ನು ಕಳೆದುಕೊಂಡ ಹುತಾತ್ಮ ಯೋಧರ ಕುಟುಂಬಕ್ಕೆ ತೆರಳಿ ಅವರ ಯೋಗ ಕ್ಷೇಮವನ್ನು ವಿಚಾರಿಸುತ್ತಾರೆ. ಸಾಂತ್ವನದ ಧೈರ್ಯದ ಮಾತುಗಳನ್ನಾಡುತ್ತಾರೆ. ಎಳೆಯರಲ್ಲಿ ಸೈನ್ಯದ ಕುರಿತು ಒಲವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.


ಈ ಯಾತ್ರೆಯ ನಾಯಕ ಕ್ಯಾಪ್ಟನ್ ನರೇಂದ್ರ ಪಾಂಚಲ್ ಮಾತನಾಡಿ,


"ಯಾವುದೇ ಗ್ರಾಮಕ್ಕೆ ಅಥವಾ ಪ್ರದೇಶಕ್ಕೆ ಭೇಟಿಕೊಟ್ಟಾಗ, ಎಲ್ಲರೂ ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ನಾವು ಅವರ ಸಮಸ್ಯೆಗಳನ್ನು ಆಲಿಸುತ್ತೇವೆ ಮತ್ತು ಅಂತಿಮವಾಗಿ ವರದಿ ಸಿದ್ಧಪಡಿಸಿ ನಮ್ಮ ಮೇಲಧಿಕಾರಿಗಳಿಗೆ ತಲುಪಿಸುತ್ತೇವೆ," ಎಂದರು, ವರದಿ ವಿಜಯವಾಣಿ.


ದೇಶಸೇವೆಗೆ ಕಾತರರಾಗಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ಮತ್ತು ಅವರಲ್ಲಿ ದೇಶಪ್ರೇಮವನ್ನು ಬೆಳೆಸುವ ಜೊತೆಗೆ ದೇಶಕ್ಕಾಗಿ ದುಡಿದ ಹುತಾತ್ಮರಾದ ಯೋಧರ ಕುಟುಂಬದ ಸ್ಥಿತಿಗತಿಯನ್ನು ಪರಿಶೀಲಿಸುವ ಈ ಯಾತ್ರೆ ಹಲವಾರು ನಿವೃತ್ತ ಯೋಧರು, ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಜನವರಿ 23 ರಂದು ಪ್ರಾರಂಭವಾದ ಈ ಯಾತ್ರೆ 25 ದಿನಗಳನ್ನು ಪೂರೈಸಿ ಫೆಬ್ರವರಿ 17 ರಂದು ಜಸಲ್ಮೇರ್‌ಗೆ ವಾಪಾಸಾಗಲಿದೆ.