ಗಾನ ನೃತ್ಯದ "ಆರಾಧನ" ಅಪರ್ಣಾ

ಟೀಮ್​ ವೈ.ಎಸ್​. ಕನ್ನಡ

ಗಾನ ನೃತ್ಯದ "ಆರಾಧನ" ಅಪರ್ಣಾ

Sunday March 12, 2017,

2 min Read

ಎಲ್ಲರೊಳಗೊಂದು ಕಲೆ ಇರುತ್ತೆ. ಕಾಲೇಜು ದಿನಗಳು ಮುಗಿದ ನಂತರ ಕೆಲಸ ಅನ್ನೋ ಒಂದು ಅನಿವಾರ್ಯತೆ ಅದನ್ನು ನಮ್ಮಿಂದ ದೂರ ಮಾಡಿಬಿಡುತ್ತೆ. ಕೆಲವರು ಅದೆಲ್ಲವನ್ನೂ ಮೀರಿ ತಮ್ಮ ಪ್ರತಿಭೆಯನ್ನ ಉಳಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಅದನ್ನು ಮರೆತೆ ಬಿಡುತ್ತಾರೆ. ಆದ್ರೆ ನಿಜವಾಗಲೂ ಅದರ ಬಗ್ಗೆ ಪ್ರೀತಿ ಇರುವವರು ಅದರಲ್ಲೇ ಬದುಕನ್ನು ಕಟ್ಟಿಕೊಳ್ಳುತ್ತಾರೆ ಅನ್ನೊದಕ್ಕೆ ಅಪರ್ಣಾ ಆನಂದ್ ಉತ್ತಮ ಉದಾಹರಣೆ.

image


ಹಾಡುಗಾರಿಕೆ ಅನ್ನೋದು ಆತ್ಮ ತೃಪ್ತಿ

ನಾವು ಮಾಡೋ ಕೆಲಸದ ಬಗ್ಗೆ ನಮಗೆ ಆತ್ಮ ತೃಪ್ತಿ ಇದ್ದಾಗಷ್ಟೇ ಅಲ್ಲಿ ಯಶಸ್ಸು ಸಾಧಿಸೋದಕ್ಕೆ ಸಾಧ್ಯ. ಇದನ್ನು ಅರಿತುಕೊಂಡ ಅಪರ್ಣಾ ತಮಗೆ ಆತ್ಮತೃಪ್ತಿ ನೀಡುವ ಹಾಡುಗಾರಿಕೆ ಮತ್ತು ನೃತ್ಯದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವತ್ತಿನ ಯುವ ಸಮುದಾಯ ಡಿಗ್ರಿ ಮುಗಿಸುತ್ತಲೇ ಸಂಬಳದ ಕಡೆಗೆ ಜಾರುತ್ತಾರೆ. ಅದಕ್ಕಾಗಿಯೇ ಸಾಕಷ್ಟು ಕೋರ್ಸ್​ಗಳನ್ನು ಮಾಡಿಕೊಂಡು ಮುಂದುವರೆಯುತ್ತಾರೆ. ಈ ಹಂತದಲ್ಲೇ ತಮ್ಮೊಳಗಿರುವ ಒಬ್ಬ ಹಾಡುಗಾರ , ನೃತ್ಯ, ಕ್ರೀಡಾ ಪಟುವನ್ನು ಕಳೆದುಕೊಳ್ಳುತ್ತಾರೆ. ಆದ್ರೆ ಅಪರ್ಣಾ ಅವರದ್ದು ಮಾತ್ರ ವಿಭಿನ್ನ ಹಾದಿ.

ಇದನ್ನು ಓದಿ: ನಿಮ್ಮ ಮುದ್ದು ಮುದ್ದಾದ ಸಾಕು ಪ್ರಾಣಿಗೆ ಇಲ್ಲಿ ಸಿಗುತ್ತೆ ನ್ಯೂ ಗೆಟಪ್ 

ಬಾಲ್ಯ ಬರೆದಿತ್ತು ಡೆಸ್ಟಿನಿ

ಹಾಡು ಮತ್ತು ನೃತ್ಯವನ್ನೇ ಜೀವವೆಂದುಕೊಂಡಿದ್ದ ಹುಡುಗಿ ಅಪರ್ಣಾ. ಅದಕ್ಕಾಗಿಯೇ ತಮ್ಮ 5 ನೇ ವಯಸ್ಸಿನಲ್ಲಿಯೇ ಹಾಡುಗಾರಿಕೆ ಆರಂಭಿಸಿದ್ರು. 7 ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ವೇದಿಕೆ ಹತ್ತಿದರು. ಆ ನಂತರ ನೃತ್ಯವನ್ನು ಜೊತೆ ಜೊತೆಯಲ್ಲೇ ಅಭ್ಯಾಸ ಮಾಡಿದರು. ಮೂಲತಃ ಮೈಸೂರಿನವರಾದ ಅಪರ್ಣಾ ಅವರ ಕಲೆಗೆ ಕಾಲೇಜಿನಲ್ಲೂ ಒಳ್ಳೆಯ ಪ್ರೋತ್ಸಾಹ ದಕ್ಕಿತು. ಕಾಲೇಜು ದಿನಗಳಲ್ಲಿ ಸಿಕ್ಕ ಈ ಪ್ರೋತ್ಸಾಹಕ್ಕೆ ಭರತನಾಟ್ಯದಲ್ಲೆ ಎಂ.ಎ. ಮುಗಿಸಿದರು. ಈ ಹಂತದಲ್ಲೇ ಸಾಕಷ್ಟು ಸಂಗೀತ ಮತ್ತು ನೃತ್ಯ ಕಛೇರಿಯನ್ನು ನೀಡುತ್ತಿದ್ದರು. ತಾವೂ ಸೀರೀಕ್ಷಿಸದಿದ್ದರೂ, ಸಂಭಾವನೆ ಬಗ್ಗೆ ತಲೆ ಕೆಡಿಸಕೊಳ್ಳದಿದ್ದರೂ ಆ ಹಣ ಕೀರ್ತಿ ಗೌರವ ಒಟ್ಟೊಟ್ಟಿಗೆ ಅವರನ್ನು ಹಿಂಬಾಲಿಸಿತು.

image


ಆರಾಧನದ ಆರಾಧನೆ

ತಮ್ಮ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಬಂದ ಅಪರ್ಣ ಎದೆ ತುಂಬಿ ಹಾಡುವೆನು ಸ್ಪರ್ಧೆಯಲ್ಲೂ ಹೆಸರು ಗಳಿಸಿದರು. ನಂತರ ಬೆಂಗಳುರಿನಲ್ಲಿಯೇ ತಮ್ಮ ಪತಿ ಆನಂದ್​ ಜೊತೆಗೆ ನೆಲೆ ನಿಂತ ಅಪರ್ಣಾಗೆ ಸುಮ್ಮನೇ ಮನೆಯಲ್ಲಿ ಕೂರುವುದು ಇಷ್ಟವಿರಲಿಲ್ಲ. ಬದುಕಿನ ಎಲ್ಲ ಹಂತದಂತೆ ಮದುವೆ ಮಗುವಿನ ಜೊತೆಯಲ್ಲೇ ಕಲೆಯನ್ನು ಆರಾಧಿಸೋ ತವಕ ಮುಂದುವರೆದಿತ್ತು. ಇದೇ ಇಚ್ಚಾ ಶಕ್ತಿಯನ್ನು ಪ್ರಬಲವಾಗಿಸಿಕೊಂಡು ತಾವು ನೆಲೆಸಿದ್ದ ಮನೆಯಲ್ಲೇ ಆರಾಧನ ಪರ್ಫಾಮಿಂಗ್ ಆರ್ಟ್ಸ್​ ​ ಸ್ಕೂಲ್​ ಆರಂಭಿಸಿದ್ರು. ಮೊದಲು ಸಣ್ಣ ಮಟ್ಟದಲ್ಲೇ ಆರಂಭವಾದ ಸಂಸ್ಥೆ ಇಂದು ದೊಟ್ಟ ಮಟ್ಟದಲ್ಲಿ ಬೆಳೆಯುತ್ತಿದೆ.

ಗುರು ಶಿಷ್ಯ ಪರಂಪರೆಯ ರಾಯಭಾರಿ

ತಾವು ಗುರುಶಿಷ್ಯ ಪರಂಪರೆಯಲ್ಲಿ ಕಲಿತಿದ್ದ ಅಪರ್ಣಾ ಅದನ್ನೇ ತಮ್ಮ ಕಲಾಸೇವೆಗೆ ಮೀಸಲಿಟ್ಟರು. ಇಂದಿನ ಯುವ ಜನತೆಗೆ ಕಲೆಯ ಪರಿಚಯ, ಸ್ಟೇಜ್, ಕೋ ಆರ್ಡಿನೇಷನ್​, ಥಿಯೇಟರ್​, ಪರ್ಫಾಮೆನ್ಸ್​ ಬಗ್ಗೆ ಹೆಚ್ಚು ಜ್ಞಾನ ನೀಡುವುದು ಮುಖ್ಯ ಉದ್ದೇಶವಾಗಿತ್ತು. ಆ ಹಿನ್ನೆಲೆಯಲ್ಲಿ ಆರಂಭವಾದ ಆರಾಧನ ಇಂದು 30 ಜನ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಇಲ್ಲಿ ಬರಲು ಯಾವುದೇ ವಯಸ್ಸಿನ ಮಿತಿಇಲ್ಲ. ನಿಮಗೆ ಕಲಿಯೋ ಹುಮ್ಮಸಿದ್ದರೇ ಸಾಕು ಅಂತಾರೆ ಅಪರ್ಣಾ. ಇದನ್ನು ಇನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸೋ ಕನಸು ಹೊಂದಿದ್ದಾರೆ. ಆ ಮೂಲಕ ತಮ್ಮ ಕನಸು ಮತ್ತು ಬದುಕು ಎರಡನ್ನು ನೃತ್ಯದಲ್ಲಿ ಕಟ್ಟುಕೊಂಡಿದ್ದಾರೆ.

image


ಇವತ್ತು ಕಲೆ ಅನ್ನೋದು ಕೇವಲ ಮನರಂಜನೆಯಾಗಿ ಮಾತ್ರ ಉಳಿದಿಲ್ಲ. ದೇಶದ ಆರ್ಥಿಕ ಪ್ರಗತಿಯಲ್ಲಿ ಇದು ದೊಡ್ಡ ಸ್ಥಾನ ಗಳಿಸಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಇವತ್ತು ಎಷ್ಟೋ ಜನರು ತಮ್ಮ ಉದ್ಯೋಗಗಳನ್ನು ತೊರೆದು ತಮ್ಮ ಆತ್ಮದ ಕರೆಗೆ ಓಗೊಟ್ಟು ತಮ್ಮ ನ್ನು ಕೈಹಿಡಿದಿದ್ದ ಕಲಾ ಸೇವೆಗೆ ಮರಳುತ್ತಿದ್ದಾರೆ. ಇನ್ನೂ ಕೆಲವರು ಕಲೆಯನ್ನೆ ಉಸಿರಾಗಿಸಿಕೊಂಡ ಅಪರ್ಣಾರಂಥ ಯುವ ಮನಸು ಅದರಲ್ಲೇ ತೊಡಗಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದಕ್ಕೆ ಹೇಳೋದು ಮನಸಿಗೆ ಇಷ್ಟವಾದುದನ್ನು ಮಾಡುತ್ತಾ ಹೋದರೆ, ಕೀರ್ತಿ, ಹಣ ಮತ್ತು ಯಶಸ್ಸು ನಮ್ಮದಾಗುತ್ತೆ ಅಂತಾ! 

ಇದನ್ನು ಓದಿ:

1. ನಮ್ಮ ಮೆಟ್ರೋದ ಪಿಲ್ಲರ್​ಗಳಿಗೆ ಹೊಸ ಜೀವ- ಹೊಸ ತಂತ್ರಜ್ಞಾನದ ಮೂಲಕ ಪರಿಸರ ಕಾಯುವ ಕೆಲಸ

2. ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ! 

3. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..