ನಗರ ಕೃಷಿ ತಂತ್ರಗಳನ್ನು ಮರು ವ್ಯಾಖ್ಯಾನಿಸುತ್ತಿದೆ ಈ ಹೈದರಾಬಾದ್ ಮೂಲದ ದಂಪತಿಗಳ ತಾರಸಿ ಉದ್ಯಾನ

ತಮ್ಮ ತಾರಸಿ ಉದ್ಯಾನದಲ್ಲಿ, ಪದ್ಮಾ ಮತ್ತು ಶ್ರೀನಿವಾಸ್ಮ್ ಪಿನ್ನಕ ಅವರು 22 ಬಗೆಯ ಹಣ್ಣುಗಳನ್ನು, 18 ಬಗೆಯ ತರಕಾರಿಗಳನ್ನು, ಮತ್ತು 500 ಬಗೆಯ ಹೂವುಗಳನ್ನು ಬೆಳೆಯುತ್ತಿದ್ದಾರೆ.

ನಗರ ಕೃಷಿ ತಂತ್ರಗಳನ್ನು ಮರು ವ್ಯಾಖ್ಯಾನಿಸುತ್ತಿದೆ ಈ ಹೈದರಾಬಾದ್ ಮೂಲದ ದಂಪತಿಗಳ ತಾರಸಿ ಉದ್ಯಾನ

Sunday January 05, 2020,

2 min Read

ಸಾವಯವ ಕೃಷಿಯ ಜನಪ್ರಿಯತೆಯು ಈಗ ನಗರ ಪ್ರದೇಶಗಳಿಗೂ ವಿಸ್ತರಿಸಿದೆ. ಅನೇಕ ಜನರು ತಮ್ಮ ಮನೆಗಳ ಸುತ್ತಲಿನ ಸಣ್ಣ ಸ್ಥಳಗಳಲ್ಲಿ ಅಥವಾ ಮೇಲ್ಛಾವಣಿಯಲ್ಲಿ ಕೃಷಿ ಮಾಡಲು ಪ್ರಾರಂಭಿಸಿದ್ದಾರೆ. ಹೈದರಾಬಾದ್‌ನ ಮದಿನಗುಡದಲ್ಲಿರುವ ದೀಪ್ತಿ ಶ್ರೀನಗರ ಕಾಲೋನಿಯ ನಿವಾಸಿಗಳಾದ ಪದ್ಮ ಮತ್ತು ಶ್ರೀನಿವಾಸ್ಮ್ ಪಿನ್ನಕಾ ಅವರು ಮೇಲ್ ಛಾವಣಿಯ ತೋಟದಲ್ಲಿ, ಐದು ವರ್ಷಗಳಲ್ಲಿ 600 ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಿದ್ದಾರೆ.


ಹ್ಯಾನ್ಸ್ ಇಂಡಿಯಾ ಜೊತೆ ಮಾತನಾಡಿದ ಪದ್ಮಾ,


"ನಾವು 22 ಬಗೆಯ ಹಣ್ಣುಗಳನ್ನು, 18 ಬಗೆಯ ತರಕಾರಿಗಳನ್ನು ಮತ್ತು ಅನೇಕ ಬಗೆಯ ಹೂವುಗಳನ್ನು ಬೆಳೆಯುತ್ತೇವೆ. ನಾವು 500 ಕ್ಕೂ ಹೆಚ್ಚು ಗಿಡಗಳನ್ನು ನೆಡಲು ಯಶಸ್ವಿಯಾಗಿದ್ದೇವೆ, ಅದರಲ್ಲಿ ನಾವು ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತೇವೆ. ನಮ್ಮ ಉದ್ಯಾನವು 850 ಚದರ ಅಡಿಗಳಲ್ಲಿ ಇದೆ. ನಮ್ಮಲ್ಲಿ ಕಡಿಮೆ ಸ್ಥಳಾವಕಾಶವಿದ್ದರೂ, ನನ್ನ ಪತಿ ಮತ್ತು ನಾನು ಸಸ್ಯಗಳ ಬಗೆಗಿನ ನಮ್ಮ ಉತ್ಸಾಹವನ್ನು ಕೃಷಿ ಕ್ಷೇತ್ರದ ಒಂದು ಅದ್ಭುತವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ನಮ್ಮ ನೆರೆಹೊರೆಯ ಪ್ರತಿಯೊಬ್ಬರಿಗೂ ಮತ್ತು ಅನೇಕ ನಗರ ಕೃಷಿ ಪ್ರಿಯರಿಗೆ ಸ್ಫೂರ್ತಿ ನೀಡಿದ್ದೇವೆ. ನಗರದಾದ್ಯಂತದ ಕೃಷಿ ಪ್ರಿಯರು ಈ ಕೃಷಿ ಕ್ಷೇತ್ರದ ಅದ್ಭುತವನ್ನು ನೋಡಲು ನಮ್ಮ ತೋಟಕ್ಕೆ ಭೇಟಿ ನೀಡುತ್ತಾರೆ,” ಎಂದು ಹೇಳಿದರು.


ಪದ್ಮ ಪಿನ್ನಕ ತನ್ನ ತಾರಸಿ ಉದ್ಯಾನದ ಮಧ್ಯದಲ್ಲಿ (ಚಿತ್ರಕೃಪೆ: ತೆಲಂಗಾಣ ಟುಡೇ)




ಪದ್ಮಾ 500 ಗಿಡಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಅದಕ್ಕೆ ದಿನಕ್ಕೆ ಮೂರು ಬಾರಿ ನೀರುಣಿಸುತ್ತಾರೆ. ಹಾಗೂ ಅವರ ಪತಿ ಶ್ರೀನಿವಾಸ್ ಗಿಡಗಳಿಗೆ ಕೀಟಗಳಿಂದ ಮತ್ತು ಕೋತಿಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಕೃಷಿಗಾಗಿ ದಂಪತಿಗಳು ನೀರನ್ನು ಸಂಗ್ರಹಿಸಲು 150 ಲೀಟರ್ ಡ್ರಮ್ ಹೊಂದಿದ್ದಾರೆ. ಅವರು ಸಾವಯವ ಗೊಬ್ಬರವನ್ನು ಮಾತ್ರ ಬಳಸುತ್ತಾರೆ.


ಈ ಉದ್ಯಾನದಲ್ಲಿ 15 ರಿಂದ 30 ವರ್ಷ ಹಳೆಯ ಸಸ್ಯಗಳಿವೆ, ಮತ್ತು ಅವರ ಪ್ರಯತ್ನಕ್ಕಾಗಿ, ರಾಜ್ಯ ಸರ್ಕಾರವು ಪದ್ಮಾಗೆ 2018 ರಲ್ಲಿ ಅತ್ಯುತ್ತಮ ತಾರಸಿ ತೋಟಗಾರಿಕಾ ತಜ್ಞೆ ಪ್ರಶಸ್ತಿ ನೀಡಿ ಗೌರವಿಸಿದೆ.


ಆಶ್ಚರ್ಯಕರ ಸಂಗತಿಯೆಂದರೆ, ದಂಪತಿಗಳು ಉದ್ಯಾನದ ಮೇಲೆ ಬಹಳ ಕಡಿಮೆ ಖರ್ಚು ಮಾಡುತ್ತಾರೆ, ಹಾಗೂ ಅವರ ಪ್ರಯತ್ನಗಳ ಒಂದು ದೊಡ್ಡ ಭಾಗವನ್ನು ಮರುಬಳಕೆ ಮಾಡುತ್ತಾರೆ. ಕ್ಯಾನ್ ಬಳಸುವ ಬದಲು, ಪದ್ಮಾ ಸಸ್ಯಗಳಿಗೆ ನೀರುಣಿಸಲು ಸ್ಪ್ರೇ ಬಾಟಲಿಯನ್ನು ಬಳಸುತ್ತಾರೆ, ಇದರಿಂದಾಗಿ ಅವರು ನೀರನ್ನು ಸಂರಕ್ಷಿಸುತ್ತಾರೆ.


ತೆಲಂಗಾಣ ಟುಡೇ ಯೊಂದಿಗೆ ಮಾತನಾಡಿದ ಪದ್ಮಾ,


“ಬೊನ್ಸಾಯ್ ಮರಕ್ಕೂ ಸಹ, ನಾನು ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ. ನಾನು 2004 ರಲ್ಲಿ ನಾಂಪಲ್ಲಿ ಪಬ್ಲಿಕ್ ಗಾರ್ಡನ್‌ನಲ್ಲಿ ತರಗತಿಗಳಿಗೆ ಹಾಜರಾಗುವ ಮೂಲಕ ತೋಟಗಾರಿಕೆ ಕುರಿತು ತಿಳಿದುಕೊಂಡೆ. ನನಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ, ಆದರೂ ಸಹ ಗೂಗಲ್‌ನಲ್ಲಿ ಹುಡುಕುವ ಮೂಲಕ ತಿಳಿದುಕೊಂಡೆ. ಸಾವಯವ ತೋಟಗಾರಿಕೆ ಬಗ್ಗೆ ತಿಳಿದುಕೊಳ್ಳಲು ಕೃಷಿಗೆ ಸಂಬಂಧಿಸಿದ ಪುಸ್ತಕಗಳು ಸಹ ನನಗೆ ಸಾಕಷ್ಟು ಸಹಾಯ ಮಾಡಿದವು ಎಂದರು.”


ಹೆಚ್ಚಿನ ಸಮಯ, ಪದ್ಮಾ ತನ್ನ ತೋಟಕ್ಕೆ ಅಡಿಗೆ ತ್ಯಾಜ್ಯವನ್ನು ಬಳಸುತ್ತಾರೆ, ಮೊಟ್ಟೆಯ ಸಿಪ್ಪೆಗಳು ಮತ್ತು ಅಡುಗೆ ಎಣ್ಣೆಗಳಿಂದ ಕೀಟಗಳನ್ನು ದೂರವಿಡುತ್ತಾರೆ. ಅವರ ಹೊಸ ಕೃಷಿ ವಿಧಾನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದರೆ, ನೀವು ‘ಪಟ್ನಮ್ ಲೋ ಪಲ್ಲೆತುರು’ ಬೈ ಪಿನ್ನಕ ಪದ್ಮಾ ಎಂಬ ಅವರ ಯೂಟ್ಯೂಬ್ ಚಾನೆಲ್ ಅನ್ನು ನೋಡಬಹುದು.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.