ಹಳೆಯ ದೆಹಲಿಯನ್ನು ಹಸಿರು, ಸ್ವಚ್ಛ ಮತ್ತು ಉತ್ತಮವಾಗಿಸಲು ಮರ್ಹಾಮ್ ಯುವಕರ ತಂಡವೊಂದು ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ

ತ್ಯಾಜ್ಯ ಬೇರ್ಪಡಿಸುವಿಕೆಯಿಂದ ಹಿಡಿದು ಕಾಲೋನಿಗಳನ್ನು ಸುಂದರಗೊಳಿಸುವವರೆಗೆ, ಮರ್ಹಾಮ್ ತಂಡವು ಯುವಕರಿಗೆ ಹಳೆಯ ದೆಹಲಿಗೆ ಹೊಸತನವನ್ನು ಸೇರಿಸಲು ಸ್ವಚ್ಛತಾ ಆಂದೋಲನದ ಮೂಲಕ ತರಬೇತಿ ನೀಡುತ್ತಿದ್ದಾರೆ.

ಹಳೆಯ ದೆಹಲಿಯನ್ನು ಹಸಿರು, ಸ್ವಚ್ಛ ಮತ್ತು ಉತ್ತಮವಾಗಿಸಲು ಮರ್ಹಾಮ್ ಯುವಕರ ತಂಡವೊಂದು ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ

Wednesday August 21, 2019,

2 min Read

ನೀವು ಹಳೆಯ ದೆಹಲಿಯ ಬೀದಿಗಳೊಂದಿಗೆ ಪರಿಚಿತರಾಗಿದ್ದರೆ, ಆ ಪ್ರದೇಶದ ವ್ಯವಹಾರಗಳ ಬಗ್ಗೆ ನಿಮಗೆ ಹೆಚ್ಚಾಗಿ ತಿಳಿದಿರುತ್ತದೆ. ಕಸದ ರಾಶಿಗಳು, ತುಂಬಿ ಹರಿಯುವ ಚರಂಡಿಗಳು, ಗೋಡೆಗಳ ಮೇಲೆ ಪಾನ್ ತಿಂದು ಉಗುಳಿದ ಕಲೆಗಳು ಮತ್ತು ಆಕಾಶದ ನೋಟವನ್ನು ತಡೆಯುವ ವಿದ್ಯುತ್ ತಂತಿಗಳು ತುಂಬಿದ ರಸ್ತೆಗಳು ಸಾಮಾನ್ಯ ದೃಶ್ಯವಾಗಿದೆ.


ಮರ್ಹಾಮ್ ಮಾಡಿರುವ ಗೀಚುಬರಹ, ಚಿತ್ರ ಕೃಪೆ: ಎಫರ್ಟ್ಸ್‌ ಫಾರ್‌ ಗುಡ್


ಹಳೆಯ ದೆಹಲಿಯು ಬಹುತೇಕ ಹೊಲಸು ಕಾಲೋನಿಗಳು ಮತ್ತು ಕಿಕ್ಕಿರಿದ ಹಾದಿಗಳಿಂದ ಕುಡಿದ್ದರು, ಸರ್ಕಾರವು ಹಲವು ದಶಕಗಳಿಂದ ಬೀದಿಗಳನ್ನು ಅಭಿವೃದ್ಧಿಪಡಿಸಲು ಅಥವಾ ಕಟ್ಟಡಗಳನ್ನು ನಿರ್ವಹಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.


ಇದೆಲ್ಲದರ ಹೊರತಾಗಿಯೂ, ಈ ಕಾಲೋನಿಗಳಿಗೆ ಹೊಸ ನೋಟವನ್ನು ನೀಡುತ್ತಿರುವ ಯುವಕ-ಯುವತಿಯರ ಗುಂಪಾದ ಮರ್ಹಾಮ್ (ಮುಸ್ಲಿಂ ಅಸೋಸಿಯೇಷನ್ ​​ರೀಹೆಬಿಲಿಟೆಟಿಂಗ ಹೊಮಲೆಸ್ಸ್ & ಮಿಸ್ಸ್ ಟ್ರಿಟೆಡ) ಕೈಗೊಂಡ ಸ್ವಚ್ಛತೆಯ ಕಾರ್ಯಗಳಿಂದ ವಿಷಯಗಳು ಬದಲಾಗುತ್ತಿವೆ.


ಈ ಉಪಕ್ರಮದ ಹಿಂದಿರುವ ವ್ಯಕ್ತಿ, ಇರ್ತಿಜಾ(ಎಡಕ್ಕೆ) ಚಿತ್ರಕೃಪೆ: ಎಫರ್ಟ್ಸ್‌ ಫಾರ್‌ ಗುಡ್


ಇರ್ತಿಜಾ ಖುರೇಷಿ ಅವರು 2016 ರಲ್ಲಿ ಪ್ರಾರಂಭಿಸಿದ ಈ ಸಂಸ್ಥೆ ದೆಹಲಿಯಲ್ಲಿ ನಿರಾಶ್ರಿತ ಯುವಕರ ಪುನರ್ವಸತಿಗಾಗಿ ಕೆಲಸ ಮಾಡುತ್ತದೆ. ಇಲ್ಲಿಯವರೆಗೆ ಇದು 16 ಮಕ್ಕಳನ್ನು ರಕ್ಷಿಸಿದೆ ಮತ್ತು ವಿಭಿನ್ನ ಜೀವನ ಕೌಶಲ್ಯಗಳಿಗಾಗಿ ಅವರಿಗೆ ತರಬೇತಿ ನೀಡಿದೆ.


ಎಫರ್ಟ್ಸ್‌ ಫಾರ್‌ ಗುಡ್ ಗೆ ಮಾತನಾಡುತ್ತ ಖುರೇಷಿ ಅವರು ಹೇಳಿದ್ದು,


"ನಾವು ಮೊದಲು ಅವರಿಗೆ ವಿದ್ಯುತ್ ದುರಸ್ತಿ ಮತ್ತು ಕೊಳಾಯಿಗಳಲ್ಲಿ ತರಬೇತಿ ನೀಡುತ್ತಿದ್ದೆವು. ಆದರೆ ಉಸಿರುಗಟ್ಟಿಸುವ ಸ್ಪರ್ಧೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಸೆಯಿಂದಾಗಿ ಅವರಿಗೆ ಉದ್ಯೋಗ ಸಿಗುವುದು ಸುಲಭವಲ್ಲ ಎಂದು ಶೀಘ್ರದಲ್ಲೇ ನಾವು ಗಮನಿಸಿದೆವು".


ಮತ್ತಷ್ಟು ಹೇಳುತ್ತಾ,


"ನಾನು ಹಳೆಯ ದೆಹಲಿಯಲ್ಲಿ ಬೆಳೆದಿರುವೆ ಮತ್ತು ಜನರಲ್ಲಿ ಪರಿಸರ ಜಾಗೃತಿಯ ಕೊರತೆಗೆ ನಾನು ಸಾಕ್ಷಿಯಾಗಿದ್ದೇನೆ. ಹೆಚ್ಚಿನ ಜನರಿಗೆ, ಜಾಗತಿಕ ತಾಪಮಾನ ಅಥವಾ ಹವಾಮಾನ ಬದಲಾವಣೆ ಅನ್ಯಗ್ರಹದ ಪದಗಳಾಗಿವೆ".


ಖುರೇಷಿ ಸೇರಿದಂತೆ ನಾಲ್ಕು ದುಡಿಯುವ ವೃತ್ತಿಪರರನ್ನು ಒಳಗೊಂಡಿರುವ ಮರ್ಹಾಮ್ ತಂಡವು ಮನೆಯಿಲ್ಲದ ಐದು ಜನರಿಗೆ ಕಸ ಬೇರ್ಪಡಿಸುವಿಕೆ, ತ್ಯಾಜ್ಯ ನಿರ್ವಹಣೆ, ಮಿಶ್ರಗೊಬ್ಬರ ತಯಾರಿಕೆ ಮತ್ತು ಲಂಬವಾದ(ವರ್ಟಿಕಲ್) ಉದ್ಯಾನವನ್ನು ಬೆಳೆಸುವಲ್ಲಿ ತರಬೇತಿ ನೀಡಿದೆ. ಖುರೇಷಿ ಅವರ ಪ್ರಕಾರ ತಂಡವು ಯೂಟ್ಯೂಬ್‌ನಿಂದ ಇದೆಲ್ಲವನ್ನೂ ಕಲಿತಿದೆ.


ಗೊಡೆಯ ಮೇಲಿನ ಲಂಬವಾದ ಉದ್ಯಾನವನ, ಚಿತ್ರಕೃಪೆ: ಎಫರ್ಟ್ಸ್‌ ಫಾರ್‌ ಗುಡ್


ತಂಡವು ತ್ಯಾಜ್ಯ ಬೇರ್ಪಡಿಸುವ ಪ್ರಕ್ರಿಯೆಗೆ ಇಬ್ಬರು ಮಹಿಳೆಯರನ್ನು ನಿಯೋಜಿಸಿದ್ದು, ಅವರು ಪ್ರತಿ ಮನೆಗೆ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ನಿವಾಸಿಗಳಿಗೆ ತಿಳಿಸುತ್ತಾರೆ. ತ್ಯಾಜ್ಯವನ್ನು ಬೇರ್ಪಡಿಸಲು ಅವರು ಎರಡು ಪ್ರತ್ಯೇಕ ತೊಟ್ಟಿಗಳನ್ನು ಸಹ ನೀಡಿದ್ದಾರೆ, ಒಂದು ಒಣ ತ್ಯಾಜ್ಯ ಮತ್ತು ಇನ್ನೊಂದು ಹಸಿ ತ್ಯಾಜ್ಯ.


ಅಷ್ಟೆ ಅಲ್ಲದೇ, ಅಡಿಗೆ ತ್ಯಾಜ್ಯವನ್ನು ತಂಡವು ಹತ್ತಿರದ ಉದ್ಯಾನವನಗಳಿಗೆ ಒಯ್ಯುತ್ತದೆ, ಅಲ್ಲಿ ಅದನ್ನು ಸಾವಯವ ಮಿಶ್ರಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ನಂತರ, ಲಂಬವಾದ ತೋಟಗಳಿಗೆ ಮಣ್ಣು ಮತ್ತು ಮಿಶ್ರಗೊಬ್ಬರವನ್ನಾಗಿ ಬಳಸಲಾಗುತ್ತದೆ.


ಸ್ವಚ್ಛತಾ ಆಂದೋಲನದ ಬಗ್ಗೆ ವಿವರಿಸಿಸುತ್ತಾ ಖುರೇಷಿ ಅವರು ಹೇಳಿದ್ದು,


“ನಾವು ಪ್ರತಿ 10 ಮೀಟರ್‌ ಅಂತರದಲ್ಲಿ ಮತ್ತು ಮನೆಗಳ, ಅಂಗಡಿಗಳ ಮುಂದೆ ಕಸದ ತೊಟ್ಟಿಗಳನ್ನು ಇಡುತ್ತೇವೆ. ಇದರ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡಲಾಗುತ್ತದೆ ಮತ್ತು ಪುರಸಭೆಯ ಕಸ ಸಂಗ್ರಹಕಾರರು ಬರುವ ಮೊದಲು ಪ್ರತಿದಿನ ಬೆಳಿಗ್ಗೆ 10 ಗಂಟೆಯ ಮೊದಲು ಈ ಕಸದ ಚೀಲಗಳನ್ನು ಈ ತೊಟ್ಟಿಗಳಲ್ಲಿ ಹಾಕುವಂತೆ ಕೇಳಿಕೊಳ್ಳುತ್ತೇವೆ”.


ಬೀದಿಗಳು ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ತಂಡವು ಇತರ ಹೊಸ ಆಲೋಚನೆಗಳನ್ನು ಹುಡುಕಿದೆ. ಈಗ, ಬಳಕೆಯಲ್ಲಿಲ್ಲದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಸ್ಯಗಳಿಂದ ಆವೃತವಾದ ಗೋಡೆಗಳನ್ನು ನೋಡಬಹುದು. ಗೋಡೆಗಳಿಗೆ ಹಳದಿ ಬಣ್ಣ ಬಳಿಯಲಾಗಿದ್ದು, ಇದು ಪ್ರಕಾಶಮಾನವಾದ ನೋಟವನ್ನು ನೀಡುತ್ತದೆ ಎಂದು ಆಜ್ ತಕ್ ವರದಿ ಮಾಡಿದೆ. ಇದರ ಜೊತೆಗೆ ತಂಡವು ಗೋಡೆಗಳ ಮೇಲೆ ಗೀಚುಬರಹವನ್ನು ಚಿತ್ರಿಸಲು ಪ್ರಾರಂಭಿಸಿದೆ.


ಆರ್ಥಿಕ ನೆರವಿನ ವಿಷಯದಲ್ಲಿ ಖುರೇಷಿ ಅವರು ಹೇಳಿದ್ದು,


“ಈ ಹಣವು ಮುಖ್ಯವಾಗಿ ನಾಲ್ಕು ಪ್ರಮುಖ ತಂಡದ ಸದಸ್ಯರ ಕೊಡುಗೆಗಳಾಗಿ ಬರುತ್ತದೆ, ಮತ್ತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕ್ರೌಡ್‌ಫಂಡಿಂಗ್ ಮೂಲಕ ಸಂಗ್ರಹಿಸಲ್ಪಟ್ಟಿದೆ. ಮುಂದಿನ ದಿನಗಳಲ್ಲಿ, ದೆಹಲಿಯ ಹೆಚ್ಚಿನ ಬೀದಿಗಳಿಗೆ 'ಸ್ವಚ್ಛ ಮತ್ತು ಹಸಿರು' ಗೊಳಿಸುವ ಉದ್ದೇಶವನ್ನು ಮರ್ಹಾಮ್ ತಂಡವು ಹೊಂದಿದೆ”.


"ಇದು ನಿಧಾನ ಬದಲಾವಣೆಯಾದರು, ಹೆಚ್ಚು ಅಗತ್ಯವಿರುವ ಬದಲಾವಣೆ" ಎಂದು ಅವರು ಒತ್ತಿ ಹೇಳುತ್ತಾರೆ.