ಮರ ಮುಕ್ತ ಮತ್ತು ಶೂನ್ಯ-ತ್ಯಾಜ್ಯ ಕಾಗದದೊಂದಿಗೆ ಸುಸ್ಥಿರ ಭವಿಷ್ಯ ನಿರ್ಮಾಣದತ್ತ ಹೆಜ್ಜೆಯಿಡುತ್ತಿರುವ ಬೆಂಗಳೂರು ಮೂಲದ ನೂತನ ಸ್ಟಾರ್ಟ್‌ ಅಪ್

ಬ್ಲೂಕ್ಯಾಟ್ ಪೇಪರ್ ಸ್ಟಾರ್ಟ್‌ ಅಪ್ ಹತ್ತಿ, ಕಾಫಿ, ಲೆಮೊನ್ಗ್ರಾಸ್, ಮಲ್ಬೆರಿ ಮತ್ತು ಮುಂತಾದವುಗಳಿಂದ ತಯಾರಿಸಿದ ಸುಸ್ಥಿರ ಕಾಗದ ಮತ್ತು ಕಾಗದದ ಉತ್ಪನ್ನಗಳನ್ನು ವಿನ್ಯಾಸಗೊಳಿಸಿ, ಮಾರಾಟ ಮಾಡುತ್ತದೆ. ಈ ಸ್ಟಾರ್ಟ್‌ ಅಪ್ ಬಳಸಿದ ಎಲ್ಲಾ ನೀರನ್ನು ಮರುಬಳಕೆ ಮಾಡಿ ಕೈಯಿಂದ ತಯಾರಿಸಿದ ವಸ್ತುಗಳು ಅತ್ಯಂತ ಪರಿಸರ ಸ್ನೇಹಿಯನ್ನಾಗಿಸುತ್ತದೆ.

ಮರ ಮುಕ್ತ ಮತ್ತು ಶೂನ್ಯ-ತ್ಯಾಜ್ಯ ಕಾಗದದೊಂದಿಗೆ ಸುಸ್ಥಿರ ಭವಿಷ್ಯ ನಿರ್ಮಾಣದತ್ತ ಹೆಜ್ಜೆಯಿಡುತ್ತಿರುವ ಬೆಂಗಳೂರು ಮೂಲದ ನೂತನ ಸ್ಟಾರ್ಟ್‌ ಅಪ್

Wednesday September 25, 2019,

3 min Read

ಹವಾಮಾನ ಬದಲಾವಣೆಯು ಸರ್ವೇಸಾಮಾನ್ಯ ಮತ್ತು ಸುಸ್ಥಿರ ಜೀವನವು ಅನಿವಾರ್ಯವೆನಿಸಿರುವ ಈ ಸಮಯದಲ್ಲಿ, ಬೆಂಗಳೂರು ಮೂಲದ ನೂತನ ಬ್ಲೂಕ್ಯಾಟ್ ಪೇಪರ್ ಸ್ಟಾರ್ಟ್‌ ಅಪ್ ನಮಗೆ ಹೊಸ ಆಯಾಮವನ್ನು ನೀಡುತ್ತಿದೆ. 2018 ರಲ್ಲಿ ಕಾವ್ಯ ಮಾದಪ್ಪ ಅವರು ಸ್ಥಾಪಿಸಿದ ಈ ಸ್ಟಾರ್ಟ್‌ ಅಪ್ ಹತ್ತಿ, ಕಾಫಿ, ಲೆಮೊನ್ಗ್ರಾಸ್ ಮತ್ತು ಮುಂತಾದವುಗಳಿಂದ ತಯಾರಿಸಿದ ಸುಸ್ಥಿರ ಕಾಗದ ಮತ್ತು ಕಾಗದದ ಉತ್ಪನ್ನಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುತ್ತಿದೆ.


ಕಾವ್ಯ ಮಾದಪ್ಪ ತಮ್ಮ ತಂಡದವರೊಂದಿಗೆ

ಭಾರತದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ ಹೊಸ ಹೆಜ್ಜೆಯ ಅವಶ್ಯಕತೆ ಇದೆ. ಸರ್ಕಾರ ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ, ಪ್ರತಿಯೊಬ್ಬ ನಾಗರೀಕನು ಜಲ ಸಂರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ವಿಶ್ವದ ಅಗ್ರ ಐದು ತ್ಯಾಜ್ಯ ಉತ್ಪಾದಕ ದೇಶಗಳಲ್ಲಿ ಭಾರತವು ಕೂಡ ಒಂದು, ಈ ನಿರಂತರ ಸಮಸ್ಯೆಗೆ ಪರಿಹಾರಗಳನ್ನು ಒದಗಿಸಲು ಹೆಚ್ಚಿನ ಉದ್ಯಮಿಗಳು ಹೆಜ್ಜೆ ಹಾಕಬೇಕಿದೆ.


ಮತ್ತು ಕಾವ್ಯಾ ಮಾದಪ್ಪ ತಮ್ಮ “ಮರ-ಮುಕ್ತ ಕಾಗದ” ಎಂಬ ವಿನೂತನ ವಿಧಾನದೊಂದಿಗೆ ಅದನ್ನು ಮಾಡುತ್ತಿದ್ದಾರೆ. ಸೃಜನಶೀಲತೆಗೆ ಧಕ್ಕೆಯಾಗದಂತೆ ಮರುಬಳಕೆ ಮಾಡಲು ಉತ್ಸುಕರಾಗಿರುವ ಪರಿಸರ ಪ್ರಜ್ಞೆ ಹೊಂದಿರುವ ಕಾವ್ಯ ಉತ್ಪಾದನೆಯ ಸಮಯದಲ್ಲಿ ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಕೈಯಿಂದ ತಯಾರಿಸಿದ ಕಾಗದಗಳು ನಿಜವಾಗಿಯೂ ಪರಿಸರ ಸ್ನೇಹಿಯಾಗಿದೆ.


ಆದರೆ ಇಂತಹ ಅಸಾಧಾರಣ, ಅದ್ಭುತ ಮತ್ತು ಸ್ಥಿತಿಸ್ಥಾಪಕ ಉತ್ಪನ್ನಗಳನ್ನು ಅವರು ಹೇಗೆ ತಯಾರಿಸುತ್ತಾರೆ?


ಯುವರ್‌ಸ್ಟೋರಿ ಸಂಸ್ಥಾಪಕಿ ಶ್ರದ್ಧಾ ಶರ್ಮಾ ಅವರೊಂದಿಗಿನ ಮಾತುಕತೆಯಲ್ಲಿ ಉದ್ಯಮದ ಸಂಸ್ಥಾಪಕಿ, ಬ್ಲೂಕ್ಯಾಟ್ ಪೇಪರ್‌ನ ಆರಂಭ ಮತ್ತು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದ್ದಾರೆ.


"ಪ್ರಸ್ತುತ ಎಲ್ಲಾ ಕಾಗದಗಳನ್ನು ಮರಗಳಿಂದಲೇ ತಯಾರಿಸಲಾಗುತ್ತದೆ. ಆದರೆ ಸೆಲ್ಯುಲೋಸ್ ಹೊಂದಿರುವ ಯಾವುದೇ ವಸ್ತುವಿನಿಂದಾದರು ಕಾಗದವನ್ನು ತಯಾರಿಸಬಹುದು ಮರವನ್ನು ಬಳಸುವ ಅವಶ್ಯಕತೆ ಇಲ್ಲ. ಬ್ಲೂಕ್ಯಾಟ್ ಪೇಪರ್‌ ನಲ್ಲಿ, ನಾವು ಮರ-ಮುಕ್ತ ಕಾಗದವನ್ನು ತಯಾರಿಸುತ್ತೇವೆ; ನಾವು ಯಾವುದೇ ಮರದ ಉತ್ಪನ್ನಗಳನ್ನು ಬಳಸುವುದಿಲ್ಲ. ನಮ್ಮ ನಗರಗಳಲ್ಲಿ ರಾಶಿಯಾಗಿರುವ ತ್ಯಾಜ್ಯದಿಂದ ನಾವು ಇದನ್ನು ತಯಾರಿಸುತ್ತೇವೆ. ಉದಾಹರಣೆಗೆ, ಕಾಗದವನ್ನು ತಯಾರಿಸುವ ನಾವು ಕಾಫಿ ಹೊಟ್ಟು ಬಳಸುತ್ತೇವೆ (ಅದು ಸಂಪೂರ್ಣವಾಗಿ ಕೈಯಿಂದ ಮಾಡಲ್ಪಟ್ಟಿದೆ). ನಾವು ತ್ಯಾಜ್ಯಕ್ಕೆ ರಾಸಾಯನಿಕಗಳನ್ನು ಸೇರಿಸದ ಕಾರಣ, ಕಾಗದವು ಸಹ ನೈಸರ್ಗಿಕ ಬಣ್ಣದ್ದಾಗಿರುತ್ತದೆ” ಎಂದು ಕಾವ್ಯಾ ಹೇಳುತ್ತಾರೆ.


ಬ್ಲೂಕ್ಯಾಟ್ ಪೇಪರ್ ನಿಂದ ಸಂಗ್ರಹಿಸಲ್ಪಟ್ಟ ತ್ಯಾಜ್ಯದಿಂದ ತಯಾರಿಸಿದ ಗೃಹಲಂಕಾರಿ ವಸ್ತುಗಳು

ಬ್ಲೂಕ್ಯಾಟ್ ಪೇಪರ್ ಕಾರ್ಖಾನೆಯು ಬೆಂಗಳೂರಿನ ಪೀಣ್ಯದ ಕೈಗಾರಿಕಾ ಪ್ರದೇಶದಲ್ಲಿದೆ. ಈ ವಿಶಿಷ್ಟ ಕಟ್ಟಡದಲ್ಲಿ ಅಗಸೆಬೀಜಗಳು, ಹಿಪ್ಪುನೇರಳೆ ಮತ್ತು ಲಿನಿನ್ ಸೇರಿದಂತೆ ಹಲವು ಕಚ್ಚಾ ವಸ್ತುಗಳಿವೆ. ಅಲ್ಲದೆ ಮರು ಬಳಕೆ ಮಾಡುವ ನೀರಿನಿಂದ ಕಾಗದ ಸೇರಿದಂತೆ ಲ್ಯಾಂಪ್‌ಶೇಡ್‌ಗಳು, ನೋಟ್‌ಬುಕ್‌ಗಳು ಮತ್ತು ಉಡುಗೊರೆಗಳನ್ನು ತಯಾರಿಸಲಾಗುತ್ತದೆ. ಸುಸ್ಥಿರತೆ-ಕೇಂದ್ರಿತ ಸ್ಟಾರ್ಟ್‌ ಅಪ್ ಪೇಪಿಯರ್ ಮಾಚೆ ಶ್ರೇಣಿಯನ್ನು ಸಹ ನೀಡುತ್ತದೆ, ಇದರಲ್ಲಿ ಕೋಸ್ಟರ್‌ಗಳು, ಪ್ಲೇಸ್ ಮ್ಯಾಟ್ಸ್, ಬೌಲ್‌ಗಳು ಮತ್ತು ಚಮತ್ಕಾರಿ ಆಯಸ್ಕಾಂತಗಳು ಸೇರಿದಂತೆ ಕಸ್ಟಮ್ ಪ್ಯಾಕೇಜಿಂಗ್, ಸ್ಕ್ರೀನ್ ಪ್ರಿಂಟಿಂಗ್ ಮತ್ತು ಈವೆಂಟ್ ಡೆಕೋರ್‌ನಂತಹ ಕೆಲ ಸಂಬಂಧಿತ ಸೇವೆಗಳನ್ನು ಒಳಗೊಂಡಿದೆ.


ಈ ಸ್ಟಾರ್ಟ್‌ ಅಪ್ ಕಾಗದ ಮತ್ತು ಮುಂತಾದವುಗಳನ್ನು ತಯಾರಿಸಲು ಹತ್ತಿ ಚಿಂದಿ ಮತ್ತು ಇತರ ಕಚ್ಚಾ ವಸ್ತುಗಳನ್ನು ಸುಲಭವಾಗಿ ಲಭ್ಯವಿರುವ ಪೀಣ್ಯ ಸುತ್ತಮುತ್ತಲಿನ ಜವಳಿ ಉದ್ಯಮಗಳ ಕಾರ್ಖಾನೆಗಳಿಂದ ಸಂಗ್ರಹಿಸುತ್ತದೆ.


ಕಾವ್ಯಾ ಹೇಳುತ್ತಾರೆ ಅವರ ತಂಡವು ರೈತರನ್ನು ಸಂಪರ್ಕಿಸಿ, ಅವರಿಗೆ ತ್ಯಾಜ್ಯ ವಸ್ತುಗಳನ್ನು ಕಳುಹಿಸಲು ಹೇಳುತ್ತಾರೆ. "ನಮ್ಮ ತ್ಯಾಜ್ಯದ ಮುಖ್ಯ ಮೂಲಗಳು ಭಾರತದ ಜವಳಿ ಕಂಪನಿಗಳು. ಕೈಯಿಂದ ಮಾಡಿದ ಕಾಗದದ ಹಾಳೆಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಉಪಯೋಗಿಸಿದ ಬಟ್ಟೆಯನ್ನು ಬಳಸಲಾಗುತ್ತದೆ,” ಎಂದು ಅವರು ಹೇಳುತ್ತಾರೆ.


ಕಾರ್ಖಾನೆಯ ಬಳಿಯ 40 ಕಿ.ಮೀ ವ್ಯಾಪ್ತಿಯಲ್ಲಿ ಬಾಳೆ ತೋಟಗಳು ಮತ್ತು ಹಿಪ್ಪುನೇರಳೆ ಬೆಳೆಯಲಾಗುತ್ತದೆ. “ಇದು ರೈತರು ಒದಗಿಸುವ ಉಳಿದ ತ್ಯಾಜ್ಯವನ್ನು ಗೋದಾಮಿಗೆ ಸಾಗಿಸಲು ಸಹಾಯವಾಗುತ್ತದೆ. ಅಲ್ಲದೆ, ಇದು ಬ್ಲೂಕ್ಯಾಟ್ ಗೆ ಸಂಚಾರಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.


ಬ್ಲೂಕ್ಯಾಟ್ ಪೇಪರ್ ಉತ್ಪನ್ನಗಳಲ್ಲಿ ಬಳಸಲಾಗುವ ಬಾಳೆ ನಾರು

ಈ ತೆರನಾದ ಕಾಗದದ ಉತ್ಪಾದನೆಯ ಮತ್ತೊಂದು ಪ್ರಮುಖ ಅಂಶವೆಂದರೆ ನೀರನ್ನು ಸಂರಕ್ಷಿಸುವುದು. ಈ ಕಾರ್ಖಾನೆಯು ಆವರಣದಲ್ಲಿ ಹೊರಸೂಸುವ ಸಂಸ್ಕರಣಾ ಘಟಕವನ್ನು (ಇಟಿಪಿ) ಹೊಂದಿದೆ, ಇದು ನೀರನ್ನು ಮರುಬಳಕೆ ಮಾಡುತ್ತದೆ ಮತ್ತು ಅದನ್ನು ಉತ್ಪಾದನೆಯಲ್ಲಿ ಮತ್ತೆ ಬಳಸಿಕೊಳ್ಳಬಹುದು.


“ಹೆಚ್ಚಿನ ಕಾಗದ ಗಿರಣಿಗಳು ಸಾಮಾನ್ಯವಾಗಿ ಬಳಸುವ ರಾಸಾಯನಿಕಗಳನ್ನು ನಾವು ಸೇರಿಸದ ಕಾರಣ, ನಾವು ನೀರನ್ನು ಸುಲಭವಾಗಿ ಮರುಬಳಕೆ ಮಾಡಲು ಮತ್ತು ಪ್ರತಿದಿನ 1,00,000 ಲೀಟರ್ ನೀರನ್ನು ಉಳಿಸಲು ಸಾಧ್ಯವಾಗುತ್ತದೆ. ಇದು ನಮ್ಮ ಕಾಗದವನ್ನು ಸುಸ್ಥಿರ ಮತ್ತು ಪರಿಸರ-ಸ್ನೇಹಿಯನ್ನಾಗಿ ಮಾಡುತ್ತದೆ. ಹಾಗೂ ನಾವು ಎಷ್ಟು ಕಾರ್ಖಾನೆಗಳನ್ನು ಸ್ಥಾಪಿಸುತ್ತೇವೋ, ಅಷ್ಟು ಮರಗಳನ್ನು ಉಳಿಸಬಹುದು ಎಂದು ನಾನು ನಂಬುತ್ತೇನೆ” ಎಂದು ಕಾವ್ಯಾ ಹೇಳುತ್ತಾರೆ.


ಕಾಗದ ತಯಾರಿಸುವ ವಿಧಾನ

ಆದರೆ ಕಾವ್ಯ ವ್ಯವಹಾರವನ್ನು ಹೇಗೆ ನಿಭಾಯಿಸುತ್ತಿದ್ದಾರೆ ಮತ್ತು ಆದಾಯ ಹೇಗಿದೆ? ಸಾಮಾನ್ಯ ಕಾಗದಕ್ಕಿಂತ ಈ ಕಾಗದ ಕಡಿಮೆ ಬೆಲೆ ಎಂದು ಗ್ರಾಹಕರು ಭಾವಿಸುತ್ತಾರೆಯೇ?


ನಮ್ಮಲ್ಲಿ ಹೆಚ್ಚಿನವರು ಕಾಗದವು ಅಗ್ಗವಾಗಿದೆ ಎಂದು ಭಾವಿಸುತ್ತಾರೆ, ಆದರೆ ಇದು ಇಡೀ ಭೂಮಿಗೆ ದುಬಾರಿಯಾಗಿದೆ ಎಂದು ಕಾವ್ಯಾ ಹೇಳುತ್ತಾರೆ. “ನೀವು ಕಾಗದಕ್ಕಾಗಿ ಕತ್ತರಿಸಿದ ಮರಗಳು ನಾಶವಾಗುತ್ತಿದೆ. ಹೀಗಾಗಿ, ನಮ್ಮ ಮೂರು ಮುಖ್ಯ ಉದ್ದೇಶಗಳೆಂದರೆ ಮರಗಳನ್ನು ಉಳಿಸುವುದು, ನೀರನ್ನು ಸಂರಕ್ಷಿಸುವುದು ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವುದು. ನಾವು ತ್ಯಾಜ್ಯದಿಂದ ಸುಂದರವಾದ ಉತ್ಪನ್ನಗಳನ್ನು ತಯಾರಿಸುತ್ತೇವೆ” ಎಂದು ಅವರು ಹೇಳುತ್ತಾರೆ.


ಬ್ಲೂಕ್ಯಾಟ್ನ ಭವಿಷ್ಯದ ವಿಸ್ತರಣೆಯ ವಿಷಯಕ್ಕೆ ಬಂದಾಗ, ಸಂಸ್ಥಾಪಕಿಯು ಸಕಾರಾತ್ಮಕ ಯೋಜನೆಯನ್ನು ಹೊಂದಿದ್ದಾರೆ. ಸುಸ್ಥಿರತೆಯನ್ನು ಉತ್ತೇಜಿಸುವ ಇತರರೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತು ಚರ್ಚಿಸಲು ತಯಾರಿದ್ದೇವೆ ಎಂದು ಕಾವ್ಯ ಹೇಳುತ್ತಾರೆ.


"ಜನರು ಪರಿಸರವನ್ನು ಉಳಿಸಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮುಂದುವರೆಸುತ್ತಾರೆ ಮತ್ತು ಮರ-ಮುಕ್ತ ಕಾಗದವನ್ನು ಬಳಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಬಹುಶಃ, ಅವರು ಬ್ಲೂಕ್ಯಾಟ್ನಂತಹ ಸ್ಟಾರ್ಟ್‌ ಅಪ್ಯನ್ನು ಸಹ ಪ್ರಾರಂಭಿಸಬಹುದು,” ಎಂದು ಕಾವ್ಯ ಹೇಳುತ್ತಾರೆ. "ನಾವು ಹೆಚ್ಚು ಬೆಳೆಯಲು ಪ್ರಾರಂಭಿಸಿದರೆ ನಾವು (ನಮ್ಮ ವ್ಯವಹಾರ) ಅಳೆಯುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳುತ್ತಾರೆ.


ನಮ್ಮ ದೇಶವು ಅಂತರ್ಜಲವನ್ನು ಉಳಿಸಲು ಹೆಣಗಾಡುತ್ತಿರುವ ಈ ಸಮಯದಲ್ಲಿ, ಇಂತಹ ಸ್ಟಾರ್ಟ್‌ ಅಪ್ಗಳು ಒಬ್ಬರು ಹೇಗೆ ಶಾಶ್ವತವಾದ ಬದಲಾವಣೆಯನ್ನು ಸೃಷ್ಟಿಸಲು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ, ಅದು ನೀರನ್ನು ಮರುಬಳಕೆ ಮಾಡುವುದು ಮತ್ತು ಸಂರಕ್ಷಿಸುವುದರಿಂದ ಹಿಡಿದು ಪರಿಸರಕ್ಕೆ ಹಾನಿಯಾಗದ ಕಾಗದ ಮತ್ತು ಉತ್ಪನ್ನಗಳನ್ನು ತಯಾರಿಸುವುದು, ಮತ್ತು ಮನೆಯಲ್ಲಿನ ವಸ್ತುಗಳಿಗೆ ಇನ್ನೂ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ ಎಂದು ಕಾವ್ಯ ಹೇಳುತ್ತಾರೆ.