ಚಮ್ಮಾರನ ಮಗ 500 ಕೋಟಿಯ ಉದ್ಯಮ ಸ್ಥಾಪಿಸಿದ ಕಥೆ

ಚಮ್ಮಾರನ ಮಗ 500 ಕೋಟಿಯ ಉದ್ಯಮ ಸ್ಥಾಪಿಸಿದ ಕಥೆ

Thursday September 12, 2019,

2 min Read

ಅಶೋಕ್‌ ಕಡೆ ಅವರ ತಂದೆ ಚಮ್ಮಾರರಾಗಿದ್ದರು. ಅವರು ಮುಂಬೈ ನಗರದ ಗದ್ದಲದ ನಡುವೆ ಮರವೊಂದರ ಅಡಿಯಲ್ಲಿ ಕೂರುತ್ತಿದ್ದರು. ಎಲ್ಲ ವಿಲಕ್ಷಣಗಳ ಹೊರತಾಗಿಯೂ ಅಶೋಕ ಕಾಲೇಜಿಗೆ ಹೋಗುತ್ತಾ ಸರಕಾರದ ನೌಕಾಂಗಣದಲ್ಲಿ ಕೆಲಸ ಮಾಡುತ್ತಿದ್ದರು. ಕಡಲತಡಿಯಲ್ಲಿ ನಿರ್ಮಾಣ ಮತ್ತು ನಿರ್ವಹಣೆ ಬಗೆಗಿನ ಕೌಶಲ್ಯಗಳನ್ನು ಕಲಿತ ನಂತರ ಅವರು ತಮ್ಮದೇ ಸ್ವಂತ ಕಂಪನಿ ಆರಂಭಿಸಿದರು, ಅದು ಈಗ 4,500 ಜನರಿಗೆ ಉದ್ಯೋಗ ನೀಡಿ ವಾರ್ಷಿಕ 500 ಕೋಟಿ ರೂಪಾಯಿಗಳ ವಹಿವಾಟು ಹೊಂದಿದೆ.


(ಚಿತ್ರ ಕೃಪೆ : ಯುಟ್ಯೂಬ್)




ಅಶೋಕ್‌ ಸಾಂಗಲಿ ಜಿಲ್ಲೆಯ ಪೆಡ್‌ ಎಂಬ ಊರಿನಲ್ಲಿ ಜನಿಸಿದರು. ಅದು ಆರು ಜನ ಮಕ್ಕಳ ತುಂಬು ಕುಟುಂಬ, ಅವರಿಗೆ ಬೆಂಬಲ ತುಂಬ ಕಡಿಮೆ ಇತ್ತು ಹಾಗೂ ಹಲವು ಬಾರಿ ಅವರೆಲ್ಲ ರಾತ್ರಿಯ ಊಟವಿಲ್ಲದೆ ಮಲಗುವ ಪರಿಸ್ಥಿತಿ ಇತ್ತು. ಚಮ್ಮಾರರೆಂಬ ದಲಿತ ಸಮುದಾಯದ ಕೆಲಸ ಸತ್ತ ಪ್ರಾಣಿಗಳ ಚರ್ಮ ತಗೆಯುವುದಾಗಿತ್ತು. ಅವರ ತಾಯಿ ಕೃಷಿಭೂಮಿಯೊಂದರಲ್ಲಿ ಕೂಲಿ ಮಾಡುತ್ತಿದ್ದರು. ಸಾಮಾಜಿಕ ಬಹಿಷ್ಕಾರದಿಂದ ಅವಕಾಶ ವಂಚಿತರಾಗುವವರೆಗೆ ಪ್ರತಿ ಹೆಜ್ಜೆಯಲ್ಲೂ ಅವರು ತಾರತಮ್ಯವನ್ನು ಎದುರಿಸಬೇಕಾಯಿತು.


ಅಂತಿಮವಾಗಿ ಅವರ ತಂದೆ ಕೆಲಸ ಹುಡುಕಿಕೊಂಡು ಮುಂಬೈಗೆ ಬರಲು ನಿರ್ಧರಿಸಿದರು. “ನಮ್ಮ ತಂದೆ ಮುಂಬೈನಲ್ಲಿ ಚಮ್ಮಾರರಾಗಿ ಕೆಲಸ ಮಾಡುತ್ತಿದ್ದರು. ನೀವು ಈಗಲೂ ಅವರು ನೆಟ್ಟ ಮರವನ್ನು, ಅದರಡಿಯಲ್ಲಿ ಅವರು ನಡೆಸಿದ ವ್ಯಾಪಾರವನ್ನು ಚಿತ್ರ ಟಾಕೀಸಿನ ಬಳಿ ಕಾಣಬಹುದು.” ಎಂದು ಅಶೋಕ್‌ ಸಂದರ್ಶನವೊಂದರಲ್ಲಿ ದಿ ಎಕನಾಮಿಕ್‌ ಟೈಮ್ಸ್‌ಗೆ ಹೇಳಿದರು.


ಅಶೋಕ್‌ ಶಿಕ್ಷಣದ ಪ್ರಾಮುಖ್ಯತೆಯನ್ನು ಚಿಕ್ಕ ವಯಸ್ಸಿನಲ್ಲೇ ಅರಿತರು. ಅವರು ವಿವಿಧ ಸರಕಾರಿ ಶಾಲೆಗಳಲ್ಲಿ ಓದಿದರು. 10ನೇ ತರಗತಿ ಮುಗಿದ ಕೂಡಲೆ ತಮ್ಮ ತಂದೆ ಹಾಗೂ ಅಣ್ಣನೊಂದಿಗೆ ಸೇರಿಕೊಳ್ಳಲು ಮುಂಬೈಗೆ ಬಂದರು. ಅವರ ಅಣ್ಣ ಆಗ ಸರಕಾರಿ ಸ್ವಾಮ್ಯದ ಹಡಗು ನಿರ್ಮಾಣ ಸಂಸ್ಥೆಯಾದ ಮಜ್ಗಾಂವ್ ಡಾಕ್ ಯಾರ್ಡ್ನಲ್ಲಿ ವೆಲ್ಡರ್‌ ಆಗಿ ಕೆಲಸಮಾಡುತ್ತಿದ್ದರು. ಅಶೋಕ್‌ ಇತ್ತ ಕಾಲೇಜಿಗೂ ಹೋಗುತ್ತಾ, ಅದೇ ಕಂಪನಿಗೆ ಕಲಿಕೆಯವನಾಗಿ ಕೆಲಸಕ್ಕೆ ಸೇರಿದರು.


ಮಜ್ಗಾಂವ್ ಡಾಕ್ ಯಾರ್ಡ್ನಲ್ಲಿ 1975-1992ರ ವರೆಗೆ ಕೆಲಸ ಮಾಡಿದ ನಂತರ, ಅಶೋಕ್‌ ಸ್ವಂತ ಕಂಪನಿ ಸ್ಥಾಪಿಸಲು ಸಾಕಷ್ಟು ಸಂಪರ್ಕಗಳನ್ನು ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದರು. 1983ರಲ್ಲಿ ಅವರಿಗೆ ಜರ್ಮನಿಗೆ ಹೋಗುವ ಅವಕಾಶ ಸಿಕ್ಕಿತು. ಆ ಅವಕಾಶವೇ ಅವರಲ್ಲಿ ಉದ್ಯಮ ಸ್ಥಾಪಿಸುವ ಬೀಜ ಬಿತ್ತಿದ್ದು. ಎಲ್ಲ ಸವಾಲುಗಳನ್ನು ಎದುರಿಸಿ, 1995ರಲ್ಲಿ ಅಶೋಕ್‌, ತಮ್ಮ ಅಣ್ಣ ದತ್ತ ಹಾಗೂ ಸುರೇಶ್‌ರೊಂದಿಗೆ ಸೇರಿ ಡಿಎಎಸ್‌ ಆಫ್‌ಶೋರ್ ಎಂಬ ಸಂಸ್ಥೆ ಸ್ಥಾಪಿಸಿದರು.


1991ರ ಉದಾರೀಕರಣದಿಂದ ಆಯಿಲ್‌ ಸರ್ವೀಸ್‌ ವಲಯದಲ್ಲಿ ಹಲವಾರು ಅವಕಾಶಗಳು ತೆರೆದುಕೊಂಡವು. ಸಣ್ಣ ಸಣ್ಣ ಉಪಗುತ್ತಿಗೆಗಳನ್ನು ನಿರ್ವಹಿಸಿದ ನಂತರ ಅವರಿಗೆ ಅವರ ಹಿಂದಿನ ಉದ್ದಿಮೆದಾರರಾದ‌ ಮಜ್ಗಾಂವ್ ಡಾಕ್ ಯಾರ್ಡ್ನವರು ಒಂದು ದೊಡ್ಡ ಯೋಜನೆಯ ಜವಾಬ್ದಾರಿ ನೀಡಿದರು. ಅವರ ಎಲ್ಲ ಸರಬರಾಜುಗಳು ತಾವು ಕೆಲಸ ಮಾಡಿದ ಕಂಪನಿಯ ವಿಶ್ವಾಸದಿಂದಲೇ ಬಂದಿದ್ದವು. ಅವರು ಕಡಲಾಚೆಯ ತೈಲ ರಿಗ್‌ಗಳನ್ನು ನಿರ್ಮಿಸಲು ಮತ್ತು ನವೀಕರಿಸಲು ಪ್ರಾರಂಭಿಸಿದರು ಮತ್ತು ಶೀಘ್ರದಲ್ಲೇ ತಮ್ಮ ಗ್ರಾಹಕ ವಲಯವನ್ನು ವಿಸ್ತರಿಸಿದರು. ಎನ್‌ಡಿಟಿವಿಯ ಪ್ರಕಾರ, ಅವರ ಗ್ರಾಹಕರು ಓಎನ್‌ಜಿಸಿ, ಎಸ್ಸಾರ್‌, ಹ್ಯೂಂಡೈ ಹಾಗೂ ಇತರ ಕಂಪನಿಗಳು.


ಪ್ರಸ್ತುತದಲ್ಲಿ ಡಿಎಎಸ್‌ ಆಫ್‌ಶೋರ್ 4,500 ಉದ್ಯೋಗಿಗಳನ್ನು ಹೊಂದಿದ್ದು ವಾರ್ಷಿಕ 500 ಕೋಟಿಯ ವಹಿವಾಟನ್ನು ಹೊಂದಿದೆ. ಅಶೋಕ್‌, ಅವರ ತಾಯಿಯ ಆಸೆಯಂತೆ ತಮ್ಮ ಹಳ್ಳಿಯ ಒಂದು ದೇವಸ್ಥಾನವನ್ನು ಪುನರುತ್ಥಾನಗೊಳಿಸಿದ್ದಾರೆ, ಹಿಂದೊಮ್ಮೆ ಅದೇ ದೇವಸ್ಥಾನದಲ್ಲಿ ಜಾತಿಯ ಕಾರಣಕ್ಕಾಗಿ ಅವರಿಗೆ ಪ್ರವೇಶವಿರಲಿಲ್ಲ. ಭವಿಷ್ಯದಲ್ಲಿ ಅವರ ಹಳ್ಳಿಯಲ್ಲಿ ಆಸ್ಪತ್ರೆ, ಶಾಲೆ ಹಾಗೂ ಇಂಜಿನಿಯರಿಂಗ್‌ ಕಾಲೇಜೊಂದನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.