ಉದ್ಯಮದ ಡಿಜಿಟಲ್‌ ರೂಪಾಂತರದ ಬಗ್ಗೆ ಬೆಳಕು ಚೆಲ್ಲಿದ ಬಿಟಿಎಸ್‌2020

ಬಿಟಿಎಸ್‌2020ಯ ಉದ್ಯಮ ಡಿಜಟಲೀರಣದ ಕುರಿತಾದ ಚರ್ಚಾಕೂಟದಲ್ಲಿ ಉದ್ಯಮ ಮತ್ತು ತಂತ್ರಜ್ಞಾನದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡರು.

ಉದ್ಯಮದ ಡಿಜಿಟಲ್‌ ರೂಪಾಂತರದ ಬಗ್ಗೆ ಬೆಳಕು ಚೆಲ್ಲಿದ ಬಿಟಿಎಸ್‌2020

Friday November 20, 2020,

2 min Read

ಉದ್ಯಮವೀಗ ಡಿಜಿಟಲ್‌ ರೂಪ ತಾಳಿದೆ. ಜಗತ್ತಿನ ಯಾವುದೇ ಪ್ರದೇಶದಿಂದಲೂ ಈಗ ವ್ಯಾಪಾರ ವಹಿವಾಟು ನಡೆಸಲು ಹಲವು ಸೌಲಭ್ಯಗಳಿವೆ. ಈ ಬದಲಾವಣೆ ಒಂದೆ ದಿನದಲ್ಲಿ ಆದದ್ದಲ್ಲ. ಆದರೆ ಕೊರೊನಾದಂತಹ ಸಾಂಕ್ರಾಮಿಕದ ನಡುವೆ ಡಿಜಿಟಲ್‌ನಿಂದಾದ ಪ್ರಯೋಜನವನ್ನು ಅಲ್ಲಗಳೆಯುವಂತಿಲ್ಲ. ಡಿಜಿಟಲ್‌ ನಮ್ಮ ನಡುವೆ ಭದ್ರ ಸ್ಥಾನ ಪಡೆದುಕೊಂಡಿದೆ ಅಲ್ಲದೆ ಅದರ ಪಾತ್ರ ಹಿರಿದು. ನವೆಂಬರ್‌ 19 ರಂದು ಚಾಲನೆಗೊಂಡ ಬೆಂಗಳೂರು ಟೆಕ್‌ ಸಮ್ಮಿಟ್‌2020ನಲ್ಲಿ ಉದ್ಯಮದ ಡಿಜಿಟಲ್‌ ರೂಪಾಂತರದ ಬಗ್ಗೆ ಚರ್ಚಾಕೂಟದಲ್ಲಿ ಡಿಜಿಟಲ್‌ದೇಶ್‌ನ ಜಸ್ಮಿಂದರ್‌ ಸಿಂಗ್‌ ಗುಲಾಟಿ, ಇಂಟ್ಯೂಟ್‌ನ ಸಂಕೇತ ಮತ್ತು ಹನಿವೆಲ್‌ನ ಆಶಿಶ್‌ ಪಾಲ್ಗೊಂಡು ಉದ್ಯಮದ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದರು.


“ಕೊನೆಗೂ ಭಾರತದಲ್ಲಿ ಸಣ್ಣ ಉದ್ಯಮಿಗಳು ‘ನನಗೆ ಮಾಡಿಕೊಡಿʼ ಎಂಬ ಮನೋಭಾವದಿಂದ ‘ನಾವೇ ಮಾಡಿಕೊಳ್ಳುತ್ತೇವೆ’ ಎಂಬ ಮನೋಭಾವವನ್ನು ತಾಳಿದ್ದಾರೆ, ಇದು ತುಂಬಾ ದೊಡ್ಡ ಬದಲಾವಣೆ ಎಂದು ತಮ್ಮ ಮಾತನ್ನು ಆರಂಭಿಸಿದರು ಡಿಜಿಟಲ್‌ದೇಶ್‌ನ ಸಹ ಸಂಸ್ಥಾಪಕರಾದ ಜಸ್ಮಿಂದರ್‌ ಸಿಂಗ್‌ ಗುಲಾಟಿ.


ಇತ್ತೀಚೆಗೆ ನಮ್ಮ ತಂಡವೊಂದು ಉತ್ತರಾಖಂಡದಿಂದ ಒಂದು ವರದಿಯನ್ನು ತಂದಿತು. ಅದರಲ್ಲಿ ಸಣ್ಣ ಉದ್ಯಮಿಗಳು ಕ್ಯಾನ್ವಾ ಬಳಸಿ ತಮ್ಮ ಲೋಗೊವನ್ನು ತಾವೇ ಸಿದ್ಧಪಡಿಸಿಕೊಂಡು ಇನ್ಸ್ಟಾಗ್ರಾಂನಲ್ಲಿ ಪೊಸ್ಟ್‌ ಮಾಡುತ್ತಿರುವುದು ಕಂಡು ಬಂದಿದೆ. ಕೋವಿಡ್‌-19 ಸಾಂಕ್ರಾಮಿಕದ ನಡುವೆ ಈ ಬೆಳವಣಿಗೆ ಆಶಾದಾಯಕವಾಗಿದೆ ಎಂದರು ಅವರು.


ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಕೋವಿಡ್‌-19 ಎಲ್ಲರಿಗೂ ಹೊಡೆತ ನೀಡಿದೆ. ಆದರೆ ಇದೆಲ್ಲದರ ನಡುವಿರುವ ಸಾಮಾನ್ಯ ಸಂಗತಿಯೆಂದರೆ ಜನರ ಭರವಸೆ ಕುಗ್ಗಿರುವುದು. ಇದೇ ಮೂಲ ಸಮಸ್ಯೆ. ನಾವೀಗ ಹಲವು ರಂಗಗಳಲ್ಲಿ ಈ ಭರವಸೆಯನ್ನು ಮತ್ತೆ ಹುಟ್ಟಿಸುವ ಕೆಲಸ ಮಾಡಬೇಕು ಎಂದರು ಹನಿವೆಲ್‌ನ ನಿರ್ವಾಹಕ ನಿರ್ದೇಶಕ ಆಶಿಶ್.‌


ಕೋವಿಡ್‌-19 ಹಲವು ತೊಂದರೆಗಳನ್ನು ತಂದೊಡ್ಡಿದ್ದರು ಅದರಿಂದ ಉದ್ಯಮದ ಡಿಜಿಟಲೀಕರಣಕ್ಕೆ ಸಿಕ್ಕಿರುವ ವೇಗ ಅಪಾರ. ಮುಂದಿನ 5, 6 ವರ್ಷಗಳಲ್ಲಿ ಆಗಬಹುದಿದ್ದ ಬದಲಾವಣೆಯನ್ನು ಕೆಲವೆ ದಿನಗಳಲ್ಲಿ ಅದು ಸಾಧ್ಯವಾಗಿಸಿದೆ. ಇದು ಕೊರೊನಾದಿಂದಾದ ಸಕಾರಾತ್ಮಕ ಬದಲಾವಣೆ ಎಂದು ಅವರು ತಿಳಿಸಿದರು.


ಆದರೆ ಉದ್ಯಮಗಳು ಡಿಜಿಟಲ್‌ ರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೆ ಸೈಬರ್‌ ಅಪರಾಧಗಳ ಭಯ ಹೆಚ್ಚುತ್ತಿದೆ. ಅದಕ್ಕಾಗಿ ಸುರಕ್ಷಿತವಾದ ಡಿಜಿಟಲ್‌ ವಾತಾವರಣ ನಿರ್ಮಿಸಬೇಕು. ಎಲ್ಲರೂ ಯಾವುದೇ ರೀತಿಯ ಭಯವಿಲ್ಲದೆ ಎಲ್ಲ ಆ್ಯಪ್ಗಳನ್ನು ಸುರಕ್ಷಿತವಾಗಿ ಬಳಸುವಂತಾಗಬೇಕು ಎಂದರು ಇಂಟ್ಯೂಟ್‌ನ ನಿರ್ವಾಹಕ ನಿರ್ದೇಶಕ ಸಂಕೇತ್.


130 ಕೋಟಿ ಜನರು, ಎಷ್ಟೊಂದು ವೈವಿಧ್ಯತೆ, ಎಷ್ಟೊಂದು ವಿವಿಧತೆ, ಇಷ್ಟೆಲ್ಲವನ್ನು ತಂತ್ರಜ್ಞಾನ ಸೆಳೆದು ಹಿಡಿದುಕೊಂಡಿದೆ ಎಂದರು ಜಸ್ಮಿಂದರ್‌ ಸಿಂಗ್‌ ಗುಲಾಟಿ.