ಈ 5 ಸಾಮಾಜಿಕ ಕಾರ್ಯಕರ್ತರು ಎಲ್ಲರೂ ಪುಟ್ಟ ಹೆಜ್ಜೆ ಇಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದೆಂದು ತೊರಿಸಿದ್ದಾರೆ

ಮನೋವ್ಯಾಧಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪುನರ್ವಸತಿ ನೀಡುವುದರಿಂದ ಹಿಡಿದು ಲೈಂಗಿಕ ಆರೋಗ್ಯದ ಮಹತ್ವದ ಬಗ್ಗೆ ಯುವತಿಯರಿಗೆ ಮಾಹಿತಿ ನೀಡುವುದು ಮತ್ತು ಬಾಲ್ಯ ವಿವಾಹವನ್ನು ರದ್ದುಪಡಿಸುವುದು, ಬದಲಾವಣೆಯನ್ನು ತರಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ.

ಈ 5 ಸಾಮಾಜಿಕ ಕಾರ್ಯಕರ್ತರು ಎಲ್ಲರೂ ಪುಟ್ಟ ಹೆಜ್ಜೆ ಇಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದೆಂದು ತೊರಿಸಿದ್ದಾರೆ

Wednesday September 18, 2019,

4 min Read

ಬದಲಾವಣೆಯ ರಹಸ್ಯವೆಂದರೆ, ನಿಮ್ಮ ಎಲ್ಲಾ ಶಕ್ತಿಯನ್ನು ಹಳೆಯದರೊಂದಿಗೆ ಹೋರಾಡುವುದರ ಮೇಲೆ ಕೇಂದ್ರೀಕರಿಸದೆ, ಹೊಸದನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸುವುದು. ಸಾಮಾಜಿಕ ಬದಲಾವಣೆಯು ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗುತ್ತದೆ ಮತ್ತದು ಸಮಾಜದ ಪದರವನ್ನು ನಿಧಾನವಾಗಿ ಪರಿವರ್ತಿಸುತ್ತದೆ. ನಾವು ಭಾರತದಲ್ಲಿ ಅನೇಕ ಕ್ರೂರ ವಾಸ್ತವಗಳನ್ನು ತೆಗಳಿದರೂ, ಹಲವಾರು ವ್ಯಕ್ತಿಗಳು ಅವರು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಿದ್ದಾರೆ ಎಂಬುದಂತು ಸತ್ಯ.


ಮತ್ತು ನಿಧಾನವಾಗಿ, ಕಾಲಾನಂತರದಲ್ಲಿ, ಅವರು ರೂಪಾಂತರದ ಪರಿಣಾಮ ಬೀರುತ್ತಿದ್ದಾರೆ. ಯುವಕರು ಪ್ರೀತಿ, ಸಂಬಂಧಗಳು ಮತ್ತು ಲೈಂಗಿಕತೆಯನ್ನು ನೋಡುವ ವಿಧಾನವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವಿತಿಕಾ ಯಾದವ್ ಅವರಿಂದ ಮೊದಲ್ಗೊಂಡು, ಭಾರತದ ಮೊದಲ ಸ್ಕಿಜೋಫ್ರೇನಿಯಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ಶಾರದಾ ಮೆನನ್ ಮತ್ತು ಏಳು ವರ್ಷದ ಹವಾಮಾನ ಕಾರ್ಯಕರ್ತ ಲಿಸಿಪ್ರಿಯಾ ಕಂಗುಜಮ್ ರನ್ನೂ ಸೇರಿದಂತೆ, ಸಮಾಜ ಬದಲಾವಣೆಯಲ್ಲಿ ತೊಡಗಿರುವ ಐದು ಜನರ ಪರಿಚಯ ಇಲ್ಲಿದೆ.


ವಿತಿಕಾ ಯಾದವ್, ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಲವ್ ಮ್ಯಾಟರ್ಸ್ ಸ್ಥಾಪಕಿ. ಚಿತ್ರ ಕೃಪೆ: indiawomenblog.org


ಜಗತ್ತಿನ ಎಲ್ಲ ಯುವಕರಿಗೆ ಪ್ರೀತಿ, ಲೈಂಗಿಕತೆ ಮತ್ತು ಸಂಬಂಧಗಳ ವಿಷಯಗಳ ಬಗ್ಗೆ ಸಂಭಾಷಣೆಗಳನ್ನು ಪ್ರಾರಂಭಿಸುವುದು ಅಗತ್ಯ ಎಂದು ಮಾನವ ಹಕ್ಕುಗಳ ಕಾರ್ಯಕರ್ತೆ ವಿತಿಕಾ ಯಾದವ್ ಬಲವಾಗಿ ನಂಬಿದ್ದಾರೆ. ಲೈಂಗಿಕ ಶಿಕ್ಷಣವು ಆರೋಗ್ಯಕರವಾದುದು ಮಾತ್ರವಲ್ಲ, ಲೈಂಗಿಕ ಹತಾಶೆಯನ್ನು ನಿಗ್ರಹಿಸುತ್ತದೆ ಮತ್ತು ಲೈಂಗಿಕ ಹಿಂಸೆ ಮತ್ತು ಕಿರುಕುಳದಿಂದ ಉಂಟಾಗುವ ಬಹಳಷ್ಟು ದುಃಖಗಳನ್ನು ಕೊನೆಗೊಳಿಸುತ್ತದೆ.


ವಿತಿಕಾ ಪ್ರಾರಂಭಿಸಿದ ಆನ್‌ಲೈನ್ ಮಲ್ಟಿಮೀಡಿಯಾ ಪ್ಲಾಟ್‌ಫಾರ್ಮ್ ಲವ್ ಮ್ಯಾಟರ್ಸ್ ಈ ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇದು ಭಾರತದಲ್ಲಿ ಬೆಳೆದ ತಮ್ಮ ವೈಯಕ್ತಿಕ ಅನುಭವದಿಂದ ಸ್ಥಾಪಿತವಾಗಿದೆ. ಲೈಂಗಿಕ ಆರೋಗ್ಯದ ಬಗ್ಗೆ ಮಾಹಿತಿಯನ್ನು ಬಯಸುವ ಮತ್ತು ಅದನ್ನು ಗೌಪ್ಯವಾಗಿರಲು ಬಯಸುವ ಬಹಳಷ್ಟು ಯುವ ಜನತೆಯನ್ನು ಅವರು ನೋಡಿದ್ದರು. ಆ ಕಾರಣಕ್ಕಾಗಿ ಆನ್‌ಲೈನ್ ವೇದಿಕೆಗಳು ಅತ್ಯುತ್ತಮ ಮಾರ್ಗವೆಂದು ತೋರುತ್ತಿದೆ.


ಈ ವೆಬ್‌ಸೈಟ್ ʼನಿರ್ಣಯಿಸದ ಮನೋಭಾವದಿಂದ ಲೈಂಗಿಕತೆʼಯನ್ನು ಬೆಳೆಸಲು ಸೂಚಿಸುತ್ತದೆ. ಮತ್ತು ಜನರಿಗೆ ಅಪರಾಧ ಮನೋಭಾವ ಬರದಂತೆ ಮಾಡದ ವಿಷಯವನ್ನು ಒದಗಿಸುತ್ತದೆ. ಕೀನ್ಯಾ, ಚೀನಾ, ಲ್ಯಾಟಿನ್ ಅಮೆರಿಕ ಮತ್ತು ಈಜಿಪ್ಟ್‌ನಲ್ಲಿ ಇದು ತನ್ನ ಜಾಗತಿಕ ಉಪಸ್ಥಿತಿಯನ್ನು ಹೊಂದಿದೆ.


2013 ರಲ್ಲಿ ವೇದಿಕೆಯು ವಿಶ್ವದ ಅತ್ಯಂತ ನವೀನ ಲೈಂಗಿಕ ಆರೋಗ್ಯ ಯೋಜನೆ ಎಂಬ ಕಾರಣಕ್ಕಾಗಿ ವಿಶ್ವ ಲೈಂಗಿಕ ಆರೋಗ್ಯ ಸಂಘದಿಂದ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿಯ ಅಂಗವಾಗಿ 2016 ರಲ್ಲಿ ಇದು ವಿಶ್ವದ ಅಗ್ರ ಐದು ಡಿಜಿಟಲ್ ಕ್ರಿಯಾಶೀಲತೆ ಯೋಜನೆಗಳಲ್ಲಿ ಒಂದು ಎಂಬ ಬಿರಿದು ಪಡೆಯಿತು.


ಕೃತಿ ಭಾರತಿ, ಸಾರ್ತಿ ಟ್ರಸ್ಟ್ ಸ್ಥಾಪಕ. ಚಿತ್ರ ಕೃಪೆ : indiawomenblog.org


ಭಾರತದಲ್ಲಿ ಬಾಲ್ಯ ವಿವಾಹವನ್ನು ರದ್ದುಗೊಳಿಸಲು ಮತ್ತು ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕೃತಿ ಭಾರತಿ 2011 ರ ಆರಂಭದಲ್ಲಿ ಸಾರ್ಥಿ ಟ್ರಸ್ಟ್ ಅನ್ನು ಸ್ಥಾಪಿಸಿದರು. ಬಾಲ್ಯ ವಿವಾಹಗಳನ್ನು ಕೊನೆಗೊಳಿಸಲು ಈ ಸಂಸ್ಥೆ ಸಹಾಯ ಮಾಡುತ್ತದೆ, ಜೊತೆಗೆ ಮಕ್ಕಳು ಮತ್ತು ಕುಟುಂಬಗಳಿಗೆ ಸಮಾಲೋಚನೆ ನೀಡುತ್ತದೆ, ಮತ್ತು ಈ ಮಕ್ಕಳಿಗೆ ಪುನರ್ವಸತಿ ಕಲ್ಪಿಸುತ್ತದೆ.


ಟ್ರಸ್ಟ್ ಎರಡು-ಹಂತದ ವಿಧಾನವನ್ನು ಅನುಸರಿಸುತ್ತದೆ. ಸ್ವಯಂಸೇವಕರ ಒಂದು ತಂಡವು ವಿವಾಹವನ್ನು ನಿಲ್ಲಿಸಲು ಕಾನೂನು ವ್ಯವಸ್ಥೆಯೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ, ಇನ್ನೊಂದು ಮಗುವನ್ನು ಪುನರ್ವಸತಿಗೊಳಿಸುವ ಮತ್ತು ಅವರಿಗೆ ಉತ್ತಮ ಭವಿಷ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕೆಲಸವನ್ನು ಮಗುವಿಗೆ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಬೆಂಬಲಿಸುವ ಮೂಲಕ ಸಾಧಿಸುತ್ತದೆ. ಜಾಗೃತಿ ಮೂಡಿಸಲು ಟ್ರಸ್ಟ್ ಶೈಕ್ಷಣಿಕ ಮತ್ತು ತಿಳಿವಳಿಕೆ ಶಿಬಿರಗಳನ್ನು ಆಯೋಜಿಸುತ್ತದೆ ಮತ್ತು ಬಾಲ್ಯ ವಿವಾಹಗಳನ್ನು ವರದಿ ಮಾಡಲು ಜನರಿಗೆ ಆನ್‌ಲೈನ್ ಸಹಾಯವಾಣಿ ನಡೆಸುತ್ತದೆ.


ಲೆನಿನ್ ರಘುವಂಶಿ, ದಲಿತರ ಹಕ್ಕುಗಳ ಕಾರ್ಯಕರ್ತ. ಚಿತ್ರ ಕೃಪೆ: leninraghuvamshi.com


ಲೆನಿನ್ ರಘುವಂಶಿ ದಲಿತ ಹಕ್ಕುಗಳ ಕಾರ್ಯಕರ್ತರಾಗಿದ್ದು, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಹಾಗೂ ಎಲ್ಲರಿಗೂ ಸಮಾನವಾದ ಸಮಾಜವನ್ನು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ನವ ದಲಿತ ಚಳವಳಿಯ ಸ್ಥಾಪನೆಗೆ ಕರೆ ನೀಡಿದರು. ಜಸ್ಟಿಸ್‌, ಲಿಬರ್ಟಿ, ಇಕ್ವಾಲಿಟಿ, ದಲಿತ್ಸ್‌ ಇನ್‌ ಇಂಡಿಪೆಂಡೆಂಟ್‌ ಇಂಡಿಯಾ ಎಂಬ ಪುಸ್ತಕದ ಲೇಖಕರಾಗಿದ್ದಾರೆ, ಇದು ದೇಶದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳನ್ನು ಎತ್ತಿ ತೋರಿಸುತ್ತದೆ ಮತ್ತು ನಮ್ಮ ಸಮಾಜದಲ್ಲಿನ ಬಡವರು ಮತ್ತು ದುರ್ಬಲರನ್ನು ರಕ್ಷಿಸಲು ಆಡಳಿತ ವ್ಯವಸ್ಥೆಯ ಅಸಮರ್ಥತೆಯ ಬಗ್ಗೆ ಬೆಳಕು ಚೆಲ್ಲುತ್ತದೆ.


ಪಿವಿಸಿಎಚ್‌ಆರ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಲೆನಿನ್ ರಘುವಂಶಿ ಅವರು ಸಮಾಜದ ಅಂಚಿನಲ್ಲಿರುವ ವರ್ಗಗಳ ವ್ಯಕ್ತಿಗಳ ಉನ್ನತಿಗೆ ಕೆಲಸ ಮಾಡುತ್ತಾರೆ


ಅವರು ಅಶೋಕ ಫೆಲೋ ಆಗಿದ್ದು, ದೇಶದಲ್ಲಿ ಚಿತ್ರಹಿಂಸೆಯ ಘಟನೆಗಳ ಬಗ್ಗೆ ಪಿವಿಸಿಎಚ್‌ಆರ್ ಪ್ರಕಟಿಸಿದ ವರದಿಗಳಿಗೆ ಮಾನ್ಯತೆ ಪಡೆದ ನಂತರ 2006 ರಲ್ಲಿ ಯುರೋಪಿಯನ್ ಯೂನಿಯನ್-ಫಂಡೆಡ್ ನ್ಯಾಷನಲ್ ಪ್ರಾಜೆಕ್ಟ್ : ಚಿತ್ರಹಿಂಸೆ ತಡೆಗಟ್ಟುವಿಕೆಗೆ ರಾಜ್ಯ ನಿರ್ದೇಶಕರಾಗಿ ನೇಮಕಗೊಂಡರು. ಸಾಮಾಜಿಕ ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟಕ್ಕಾಗಿ ಅವರು ಗುರುತಿಸಲ್ಪಟ್ಟರು ಮತ್ತು 2007 ರಲ್ಲಿ ಇರೋಮ್ ಶರ್ಮಿಳಾ ಅವರೊಂದಿಗೆ ಗ್ವಾಂಗ್ಜು ಮಾನವ ಹಕ್ಕುಗಳ ಪ್ರಶಸ್ತಿಯನ್ನು ಪಡೆದರು.




ಎಸ್‌ಸಿಎಆರ್‌ಎಫ್ ಭಾರತದ ಸ್ಥಾಪಕಿ ಶಾರದಾ ಮೆನನ್. ಚಿತ್ರ ಕೃಪೆ: ಎಡೆಕ್ಸ್‌ ಲೈವ್


ಮಾಂಬಲಿಕಾಲಾಥಿಲ್ ಶಾರದಾ ಮೆನನ್ ಓರ್ವ ಸಾಮಾಜಿಕ ಕಾರ್ಯಕರ್ತೆ ಮತ್ತು ಮನೋವೈದ್ಯರಾಗಿದ್ದು, ಅವರು ಸ್ಕಿಜೋಫ್ರೇನಿಯಾ ರಿಸರ್ಚ್ ಫೌಂಡೇಶನ್ (ಎಸ್‌ಸಿಎಆರ್ಎಫ್ ಇಂಡಿಯಾ.) ಅನ್ನು ಸ್ಥಾಪಿಸಿದರು. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಶಾರದಾ ಮೆನನ್‌ಗೆ 1992 ರಲ್ಲಿ ಪದ್ಮಭೂಷಣ್ ಪ್ರಶಸ್ತಿ ನೀಡಲಾಯಿತು.


ಚೆನ್ನೈ ಮೂಲದ ಮಾನಸಿಕ ಆರೋಗ್ಯ ಕೇಂದ್ರವಾದ ಎಸ್‌ಸಿಎಆರ್ಎಫ್ ಬಹುಶಿಸ್ತಿನ, ಸಮಗ್ರ ಶ್ರೇಣಿಯ ಮನೋವೈದ್ಯಕೀಯ ಆರೈಕೆ ಮತ್ತು ಪುನರ್ವಸತಿ ಸೇವೆಗಳನ್ನು ನೀಡುತ್ತದೆ. ತೀವ್ರವಾದ ಸ್ಕಿಜೋಫ್ರೇನಿಕ್ ಪ್ರಸಂಗವನ್ನು ಅನುಭವಿಸಿದ ವ್ಯಕ್ತಿಗಳಿಗೆ ಪುನರ್ವಸತಿ ಕಲ್ಪಿಸಲು ಮತ್ತು ಇತರ ಮಾನಸಿಕ ಆರೋಗ್ಯ ಅಸ್ವಸ್ಥತೆ ಹೊಂದಿರುವವರನ್ನು ಬೆಂಬಲಿಸುವುದು ಈ ಫೌಂಡೇಶನ್‌ನ ಉದ್ದೇಶವಾಗಿದೆ.


ಈ ಸಂಸ್ಥೆ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಹಲವಾರು ಸಮುದಾಯ ಆಧಾರಿತ ಚಿಕಿತ್ಸಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಅಲ್ಲಿ ಅವರು ಮಾನಸಿಕ ಆರೋಗ್ಯಕ್ಕಾಗಿ ಲಾಬಿ ಮಾಡುತ್ತಿದ್ದಾರೆ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಕೇಂದ್ರವು ಹೊರ ರೋಗಿಗಳ ವಿಭಾಗ (ಒಪಿಡಿ), ದಿನದ ಆರೈಕೆ ಕೇಂದ್ರ ಮತ್ತು ರೋಗಿಗಳ ವಿಭಾಗವನ್ನು ಹೊಂದಿದೆ. ಇದು ಇಲ್ಲಿಯವರೆಗೆ ಮಾನಸಿಕ ಅಸ್ವಸ್ಥತೆ ಹೊಂದಿರುವ 25,000 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದೆ ಮತ್ತು ಈ ಎನ್‌ಜಿಒ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಸಹಯೋಗ ಕೇಂದ್ರವಾಗಿ ನೇಮಕಗೊಂಡಿದೆ.


ಲಿಸಿಪ್ರಿಯಾ ಕಂಗುಜಮ್, ಹವಾಮಾನ ಸಂರಕ್ಷಣಾ ಕಾರ್ಯಕರ್ತೆ. ಚಿತ್ರಕೃಪೆ: ರೋವಿಂಗ್‌ ರಿಪೊರ್ಟ್


ಲಿಸಿಪ್ರಿಯಾ ಕಂಗುಜಮ್, ಈ ಪಟ್ಟಿಯಲ್ಲಿ ಅತ್ಯಂತ ಕಿರಿಯ ಸದಸ್ಯೆ. ನೈಸರ್ಗಿಕ ವಿಪತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಣಿಪುರದ ಈ ಹವಾಮಾನ ಕಾರ್ಯಕರ್ತೆ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ. ಅವರು ಪ್ರಸ್ತುತ ಅಂತರರಾಷ್ಟ್ರೀಯ ಯುವ ಸಮಿತಿಯಲ್ಲಿ (ಐವೈಸಿ) ಮಕ್ಕಳ ವಿಪತ್ತು ಅಪಾಯಗಳನ್ನು ಕಡಿಮೆ ಮಾಡುವ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಮಣಿಪುರದಲ್ಲಿ, ಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡಲು ಜನರು ಕೈಜೋಡಿಸುವಂತೆ ಲಿಸಿಪ್ರಿಯಾ ಒತ್ತಾಯಿಸುತ್ತಾರೆ. ನಾರ್ತ್ ಈಸ್ಟ್ ನೌ ಜೊತೆ ಮಾತನಾಡುತ್ತಾ, ಅವರು :


“ನಾನು ದೂರದರ್ಶನದಲ್ಲಿ ಭೂಕಂಪಗಳು, ಪ್ರವಾಹಗಳು ಮತ್ತು ಸುನಾಮಿಗಳ ಕಾರಣದಿಂದಾಗಿ ಜನರು ಬಳಲುತ್ತಿರುವುದನ್ನು ಮತ್ತು ಸಾಯುತ್ತಿರೋದನ್ನು, ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಳ್ಳುವುದನ್ನು ಅಥವಾ ವಿಪತ್ತುಗಳ ಅಪಾಯಗಳಿಂದ ಜನರು ನಿರಾಶ್ರಿತರಾಗುವುದನ್ನು ನೋಡಿದಾಗ ನಾನು ಅಳುತ್ತೇನೆ. ನಮ್ಮೆಲ್ಲರಿಗೂ ಉತ್ತಮ ಜಗತ್ತನ್ನು ಸೃಷ್ಟಿಸಲು ಪ್ರತಿಯೊಬ್ಬರೂ ತಮ್ಮ ಕೈ ಜೋಡಿಸಬೇಕೆಂದು ನಾನು ವಿನಂತಿಸುತ್ತೇನೆ. ”


ವಿಪತ್ತು ಅಪಾಯಗಳ ಕಡಿತದ ಏಷ್ಯಾದ ಮಂತ್ರಿಮಂಡಲದ ಸಮ್ಮೇಳನಕ್ಕೆ ಅವರನ್ನು 2018 ರಲ್ಲಿ ಮಂಗೋಲಿಯನ್ ರಾಜಧಾನಿ ಉಲಾನ್‌ಬತಾರ್‌ಗೆ ಆಹ್ವಾನಿಸಲಾಯಿತು. 2019 ರ ಆರಂಭದಲ್ಲಿ, ವಿಶ್ವಸಂಸ್ಥೆಯು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಜಾಗತಿಕ ವೇದಿಕೆಯ ಆರನೇ ಅಧಿವೇಶನಕ್ಕೆ ಹಾಜರಾಗುವಂತೆ ಕೇಳಿಕೊಂಡಿತು. ಸಮ್ಮೇಳನದಲ್ಲಿ 140 ಕ್ಕೂ ಹೆಚ್ಚು ದೇಶಗಳಿಂದ 3,000 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಭಾಗವಹಿಸುವವರು ಇದ್ದರು ಎಂದು ಥಿಂಕ್ ಚೇಂಜ್ ಇಂಡಿಯಾ ವರದಿ ಮಾಡಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.