ಸೊರಗುತ್ತಿರುವ ಸೋರೆಕಾಯಿಗೆ ಹೊಸ ಕಳೆಕೊಟ್ಟ ಮೈಸೂರಿನ ಸೀಮಾಪ್ರಸಾದ್

ಸೀಮಾ ಪ್ರಸಾದ್ ಮೈಸೂರು ಮತ್ತು ಸುತ್ತಮುತ್ತಲಿನ ಮಹಿಳೆಯರಿಗೆ, ರೈತರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ಸೋರೆಕಾಯಿಯಿಂದ ಕಲಾತ್ಮಕ ಬುಟ್ಟಿ ಮತ್ತು ಉಪಯುಕ್ತ ವಸ್ತುಗಳನ್ನು ರಚಿಸುವ ಮೂಲಕ ಜೀವನೋಪಾಯಕ್ಕೆ ಹೊಸ ದಾರಿ ಕಲ್ಪಿಸಿಕೊಡುತ್ತಿದ್ದಾರೆ.

ಸೊರಗುತ್ತಿರುವ ಸೋರೆಕಾಯಿಗೆ ಹೊಸ ಕಳೆಕೊಟ್ಟ ಮೈಸೂರಿನ ಸೀಮಾಪ್ರಸಾದ್

Tuesday December 17, 2019,

2 min Read

ನಾವು ಉಪಯೋಗಿಸಿ ತ್ಯಜಿಸಿದ ಪ್ಲಾಸ್ಟಿಕ್ ಗಳು ಒಳಚರಂಡಿಗೆ ಸೇರಿ, ಜಲಮೂಲವನ್ನು ಮಲೀನ ಗೊಳಿಸುವುದಲ್ಲದೆ, ಪ್ರಾಣಿಗಳಿಗೆ ಹಾಗೂ ಇತರ ಜೀವಿಗಳಿಗೆ ಕಂಕಟಪ್ರಾಯವಾಗಿದೆ.


ಕರ್ನಾಟಕದ ಮೈಸೂರು ನಿವಾಸಿ ಸೀಮಾ ಪ್ರಸಾದ್, ಪ್ಲಾಸ್ಟಿಕ್ ಬದಲಿಗೆ ಸೋರೆಕಾಯಿಯನ್ನು ಸೂಕ್ತವಾದ ಪರ್ಯಾಯವಾಗಿ ಕಂಡುಕೊಂಡಿದ್ದಾರೆ. ಅವರು ಸೋರೆಕಾಯಿಯನ್ನು ಪ್ಲಾಸ್ಟಿಕ್ ಬದಲಿಗೆ ಬಳಸುವು ರೀತಿಯನ್ನು ನೀವು ಈ ಚಿತ್ರಪಟದಲ್ಲಿ ನೋಡಬಹುದು.


ತಾವು ತಯಾರಿಸಿದ ಸೋರೆಕಾಯಿಯ ಹೂದಾನಿಯೊಂದಿಗೆ


ತರಕಾರಿಗಳ ದಪ್ಪ ತೊಗಟೆಯನ್ನು ಬಳಸುವುದರ ಮೂಲಕ ಸೀಮಾ ಕಂಟೇನರ್‌ಗಳು, ಹೂದಾನಿಗಳು, ಪೆನ್ ಸ್ಟ್ಯಾಂಡ್‌ಗಳು ಮತ್ತು ಅಲಂಕಾರಿಕ ಲ್ಯಾಂಪ್‌ಶೇಡ್‌ಗಳಂತಹ ಹಲವಾರು ವಸ್ತುಗಳನ್ನು ತಯಾರಿಸುತ್ತಿದ್ದಾರೆ. 2017 ರಲ್ಲಿ, ಪತಿ ಕೃಷ್ಣ ಪ್ರಸಾದ್ ಅವರೊಂದಿಗೆ ‘ಕೃಷಿಕಲಾʼ ಪ್ರಾರಂಭಿಸುವುದರೊಂದಿಗೆ ಕಲಾ ಪ್ರಕಾರವನ್ನು ಉತ್ತೇಜಿಸುವ ಮೂಲಕ ತಮ್ಮ ಪ್ರಯತ್ನಗಳನ್ನು ವಿಸ್ತರಿಸಲು ನಿರ್ಧರಿಸಿದರು.


ಈ ಉದ್ಯಮವು ಗ್ರಾಮೀಣ ಜನರಿಗೆ ಸೋರೆಕಾಯಿಯಿಂದ ಕಲಾತ್ಮಕ ಸೃಷ್ಟಿಗಳನ್ನು ಮಾಡಲು ಸಹಾಯ ಮಾಡುತ್ತದೆ, ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಆದಾಯವನ್ನು ಒದಗಿಸುವ ಉದ್ದೇಶದಿಂದ ರೈತರು, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರಿಗೆ ತರಬೇತಿ ನೀಡಲು ಸೀಮಾ ಮುಂದಾಗಿದ್ದಾರೆ.


“ರುಚಿಯಿರದ ಸೋರೆಕಾಯಿಯನ್ನು ಖರೀದಿಸುವ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ಸೋರೆಕಾಯಿ ಬೆಳೆಯುವುದರಿಂದ ಯಾವುದೇ ಲಾಭವಿಲ್ಲ ಎಂದು ರೈತರು ನಂಬಿದ್ದರು. ಆದರೆ ಸೀಮಾ ಅವರ ಈ ಕೆಲಸದಿಂದ ಈಗ ಅವರು ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಮತ್ತು ಅದನ್ನು ಹೆಚ್ಚುವರಿ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ," ಎಂದು ಸೀಮಾ ಪ್ರಸಾದ್ ಎಡೆಕ್ಸ ಲೈವ್ ಗೆ ತಿಳಿಸಿದರು.


ಸೋರೆಕಾಯಿಗಳನ್ನು ಕಲಾಕೃತಿಯನ್ನಾಗಿ ಪರಿವರ್ತಿಸುವ ಕಲೆಯನ್ನು ಸೀಮಾ ಅವರು ಟಾಂಜಾನಿಯಾ ಮತ್ತು ಕೀನ್ಯಾದಲ್ಲಿ ಸರ್ಕಾರೇತರ ಸಂಸ್ಥೆಯೊಂದರ ಕೆಲಸದಿಂದ ಪ್ರಭಾವಿತರಾಗಿ ಕಲಿತಿದ್ದಾರೆ.


ಸೀಮಾ ಅವರ ನೇತೃತ್ವದಲ್ಲಿ ಕರಕುಶಲ ಕಲೆಯ ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರು.




"ಆಫ್ರಿಕಾದ ಅನೇಕ ಸ್ಥಳೀಯ ಸಮುದಾಯಗಳು ಈ ಕರಕುಶಲತೆಯನ್ನು ಚೆನ್ನಾಗಿ ತಿಳಿದಿವೆ. ಒಮ್ಮೆ ನಾನು ಪ್ರಕ್ರಿಯೆ ಮತ್ತು ಪರಿಕರಗಳ ಬಗ್ಗೆ ಜ್ಞಾನವನ್ನು ಪಡೆದ ನಂತರ, ತರಕಾರಿ ಪ್ರಭೇದಗಳನ್ನು ಉಳಿಸಲು ಈ ಕಲೆಯನ್ನು ಬಳಸುವ ಸಾಧ್ಯತೆಯನ್ನು ಕಂಡುಕೊಂಡಿದ್ದೇನೆ


ಎಂದು ಸೀಮಾ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದರು.


‘ಕೃಷಿಕಾಲʼದ ಭಾಗವಾಗಿ ರೈತರು ಮತ್ತು ಗ್ರಾಮೀಣ ಮಹಿಳೆಯರು ಸೋರೆಕಾಯಿ ಬಳಸಿ ತಯಾರಿಸುತ್ತಿರುವ ಹೆಚ್ಚಿನ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಸುಮಾರು 500 ರೂಪಾಯಿಗಳ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ಹೆಚ್ಚಿನ ಹಣವನ್ನು ಸಂಪಾದಿಸಲು ಮತ್ತು ಅವರ ಜೀವನೋಪಾಯವನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತಿದೆ.


ಸೀಮಾ ಅವರು ತಾವು ತರಬೇತಿ ನೀಡಿದ ಮಹಿಳೆಯರು ಹಾಗೂ ಬುಡಕಟ್ಟು ಸಮುದಾಯದವರೊಂದಿಗೆ.


‘ಕೃಷಿಕಾಲʼದ ಉದ್ಯೋಗಿಯಾಗಿರುವ ನಂದಿನಿ ಅವರು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ನೊಂದಿಗೆ ಮಾತನಾಡುತ್ತಾ, ಪೂರ್ಣ ಪ್ರಕ್ರಿಯೆಯನ್ನು ವಿವರಿಸಿದರು,


"ಸೋರೆಕಾಯಿಗಳನ್ನು ಕೊಯ್ಲು ಮಾಡಿದ ನಂತರ, ಅವುಗಳನ್ನು 45 ದಿನಗಳವರೆಗೆ ಒಣಗಲು ಬಿಡಲಾಗುತ್ತದೆ. ನಂತರ, ಒಂದು ಸಣ್ಣ ರಂಧ್ರವನ್ನು ಕೊರೆದು, ಬೀಜಗಳನ್ನು ತೆಗೆದುಹಾಕಲಾಗುತ್ತದೆ. ಸೋರೆಕಾಯಿಯನ್ನು ರಾತ್ರಿಯಿಡೀ ನೆನೆಸಿದ ನಂತರ ಅದರ ಹೊರಚರ್ಮ ಮತ್ತು ಒಳಭಾಗದ ವಸ್ತುಗಳನ್ನು ತೆಗೆಯಲಾಗುತ್ತದೆ. ನಂತರ ಇದನ್ನೆ ಕಲಾಕೃತಿಗಳನ್ನು ರಚಿಸಲು ಬಳಸಲಾಗುತ್ತದೆ. ಪ್ರಸ್ತುತ, ನಾವು ಕಲಾಕೃತಿ ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿರಲಿ ಎಂದು ಸಾವಯವ ಬಣ್ಣಗಳನ್ನು ಬಳಸುತ್ತಿದ್ದೇವೆ.”


ಸೀಮಾ ಈಗಾಗಲೇ ಮುಂದಿನ ಭವಿಷ್ಯಕ್ಕಾಗಿ ಹಲವು ಯೋಜನೆಗಳನ್ನು ಹೊಂದಿದ್ದಾರೆ, ಕರ್ನಾಟಕದ ಹಳ್ಳಿಗಳಲ್ಲಿ ಸೋರೆಕಾಯಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ (ಇದಕ್ಕೆ ಸುಮಾರು 20,000 ರೂ. ಹೂಡಿಕೆಯ ಅಗತ್ಯವಿದೆ), ಇದರಿಂದ ಜನರು ಉತ್ಪನ್ನಗಳನ್ನು ನೇರವಾಗಿ ಉತ್ಪಾದಿಸಬಹುದು ಮತ್ತು ಮಾರಾಟ ಮಾಡಬಹುದು. ಪರಿಸರ ಸ್ನೇಹಿ ಕಲಾತ್ಮಕ ಕರಕುಶಲತೆಯನ್ನು ರಚಿಸಲು ಭತ್ತ, ಬಿದಿರು ಮತ್ತು ಹುಲ್ಲಿನಂತಹ ಇತರ ಉತ್ಪನ್ನಗಳನ್ನು ಸಹ ಬಳಸಲು ಅವರು ಯೋಚಿಸುತ್ತಿದ್ದಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.