ಪಂಚಾಯಿತಿ ಚುನಾವಣೆ ಗೆದ್ದ ಅಂಗವಿಕಲ ಮಹಿಳೆ

ತಮ್ಮ ಅಂಗವಿಕಲತೆಯನ್ನು ಬದಿಗೊತ್ತಿ ತಮಿಳುನಾಡಿನ ಆತು ಪೊಲ್ಲಾಚಿ ಎಂಬ ಪಂಚಾಯಿತಿಯ ಸದಸ್ಯೆಯಾಗಿ ಗೆದ್ದಿರುವ 22 ವರ್ಷದ ಸರಣ್ಯಾ ಕುಮಾರಿ ತಮ್ಮ ಜನ ಸೇವೆಯ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ.

ಪಂಚಾಯಿತಿ ಚುನಾವಣೆ ಗೆದ್ದ ಅಂಗವಿಕಲ ಮಹಿಳೆ

Saturday January 11, 2020,

2 min Read

ಇಪ್ಪತ್ತೊಂದನೇ ಶತಮಾನದ ಮೂರನೇ ದಶಕಕ್ಕೆ ಪ್ರಪಂಚ ದಾಪುಗಾಲಿಟ್ಟು ಮುನ್ನಡೆಯುತ್ತಿದೆ. ಆದರೊಟ್ಟಿಗೇ ರಾಜಕೀಯದ ಜಗಳಗಳು, ನಿರುಪಯುಕ್ತ, ಭ್ರಷ್ಟ ರಾಜಕಾರಣಿಗಳು ಕ್ಷೇತ್ರದ ಅಭಿವೃದ್ಧಿಯನ್ನು ಬದಿಗೆ ಸರಿಸಿ, ತಮ್ಮ ಅಭಿವೃದ್ಧಿ ಮಾಡಿಕೊಳ್ಳುವುದರಲ್ಲೇ ಕಾಲಕಳೆಯುತ್ತಿದ್ದಾರೆ. ಇದೆಲ್ಲದರ ನಡುವೆ, ರಾಜಕೀಯಕ್ಕೆ ಮಾದರಿಯಾಗಬಲ್ಲ, ಅಂಗವೈಕಲ್ಯವಿರುವ ಓರ್ವ ಮಹಿಳೆ ಪಂಚಾಯಿತಿ ಚುನಾವಣೆಯನ್ನು ಗೆದ್ದಿದ್ದಾರೆ.


ತಮಿಳುನಾಡಿನ ಆತು ಪೊಲ್ಲಾಚಿ ಎಂಬ ಪಂಚಾಯಿತಿಯ ಸದಸ್ಯೆಯಾಗಿ ಗೆದ್ದಿರುವ 22 ವರ್ಷದ ಸರಣ್ಯಾ ಕುಮಾರಿ ಕೇವಲ 37 ಮತಗಳ ಅಂತರದಿಂದ ಗೆಲುವು ಸಾಧಸಿ, ತಮ್ಮ ಜನ ಸೇವೆಯ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ.


ಸರಣ್ಯಾ ಕುಮಾರಿ (ಚಿತ್ರಕೃಪೆ: ಎಡೆಕ್ಸ್ ಲೈವ್)


ಕೊಯಮತ್ತೂರು ಜಿಲ್ಲೆಯ ಅನೈಮಲೈ ಒಕ್ಕೂಟದ ಅಡಿಯಲ್ಲಿ ಬರುವ ಆತು ಪೊಲ್ಲಾಚಿ ಪಂಚಾಯತ್‌ನ ಹೊಸದಾಗಿ ಚುನಾಯಿತರಾದ ಸರಣ್ಯಾಕುಮಾರಿ ಅಂಗವೈಕಲ್ಯವಿದ್ದರೂ ವಿಭಿನ್ನ ಸಾಮರ್ಥ್ಯ ಹೊಂದಿರುವವರಾಗಿದ್ದಾರೆ.


"ಮೂರನೆಯ ವಯಸ್ಸಿನಲ್ಲಿ, ನನಗೆ ವೈರಲ್ ಜ್ವರ ಬಂದಿತ್ತು, ಅದು ನನ್ನ ನರಗಳ ಮೇಲೆ ಪರಿಣಾಮ ಬೀರಿತು, ಇದರಿಂದಾಗಿ ನನ್ನ ಕಾಲುಗಳನ್ನು ಬಳಸಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ, ನನಗೆ ಬೆಂಬಲವಿಲ್ಲದೆ ನಡೆಯಲು ಸಾಧ್ಯವಾಗಿರಲಿಲ್ಲ. ಆದರೆ ನಿರಂತರ ವ್ಯಾಯಾಮದ ನಂತರ, ನಾನು ಈಗ ಸ್ವತಂತ್ರವಾಗಿ ನಡೆಯಬಲ್ಲೆ, ಆದರೆ ನಾನು ಸಾಮಾನ್ಯ ವ್ಯಕ್ತಿಯಂತೆ ನಡೆಯಲು ಸಾಧ್ಯವಿಲ್ಲ," ಎಂದು ಅವರು ತಮ್ಮ ಕುರಿತು ಎಡೆಕ್ಸ್ ಲೈವ್‌ ಗೆ ಮಾಹಿತಿ ನೀಡಿದರು.


ಅವರ ಸಾಮಾಜಿಕ ಕಾರ್ಯಗಳನ್ನು ಕಂಡಿರುವ ಗ್ರಾಮಸ್ಥರು, ರಾಷ್ಟ್ರೀಯ ಹಾಗೂ ಇತರೆ ಪಕ್ಷಗಳನ್ನ ಹೊರತುಪಡಿಸಿ, ಯಾವ ಸ್ವತಂತ್ರ ಅಭ್ಯರ್ಥಿಯೂ ಅವರ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲ. 22 ವರ್ಷದ ಸರಣ್ಯಾ ಈಗ ತಮಿಳು ಸಾಹಿತ್ಯದ ವಿಷಯದಲ್ಲಿ ಎಂ ಎ ಓದುತ್ತಿದ್ದಾರೆ.


ತಮ್ಮ ಕಾಲಿನ ಸಮಸ್ಯೆ ಇದ್ದಾಗಿಯೂ ಅವರು 7 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಿದ್ದರು. ಅದರ ಕುರಿತು ಮಾತನಾಡುತ್ತ ಅವರು "ಅಂಗವೈಕಲ್ಯವಿರುವುದರಿಂದ ನಿರಂತರವಾಗಿ ನಡೆಯುವುದು ಅಷ್ಟು ಸುಲಭವಲ್ಲವಾದ್ದರಿಂದ ನಾನು ತುಂಬಾ ನೋವನ್ನು ಅನುಭವಿಸಬೇಕಾಗಿತ್ತು. ಆದರೆ ಇದು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶವಾದ್ದರಿಂದ ನಾನು ಅದನ್ನು ಮಾಡಬೇಕಾಗಿತ್ತು," ಎಂದು ಅವರು ಹೇಳಿದರು.


ಮುಂದುವರೆದು ಅವರು,


"ನಾನು ಪ್ರತಿ ಮನೆಗೆ ಮತ ಕೇಳುತ್ತಾ ಹೋದಾಗ, ಅವರಲ್ಲಿ ಹೆಚ್ಚಿನವರು ನಾನು ಅವರನ್ನು ಭೇಟಿ ಮಾಡಿದರೂ ಇಲ್ಲದಿದ್ದರೂ ಅವರ ಮತ ನನಗೆ ಎಂದು ಹೇಳಿದ್ದರು. ನನ್ನ ಕಾಲುಗಳನ್ನು ನೋಯಿಸಿದ್ದಕ್ಕಾಗಿ ಅವರು ನನ್ನನ್ನು ಗದರಿಸಿದರು," ಎಂದು ಹೇಳಿದರು.


ಸರಣ್ಯಾರವರ ತಂದೆ ತಾಯಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಅವರ ಮಗಳು ಚುನಾವಣೆ ಗೆದ್ದಿರುವುದು ಅವರಿಗೆ ಸಂತಸದ ವಿಷಯವಾಗಿದೆ.


470 ಮತಗಳಲ್ಲಿ 137 ಮತಗಳನ್ನು ಪಡೆದು ಪಂಚಾಯಿತಿಯ ಸದಸ್ಯರಾದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.


ಸರಣ್ಯ ಕುಮಾರಿ ಸ್ವಚ್ಛಗೊಳಿಸಿ ಸುಂದರಗೊಳಿಸಿರುವ ಬಸ್‌ ನಿಲ್ದಾಣ (ಚಿತ್ರಕೃಪೆ: ಎಡೆಕ್ಸ್ ಲೈವ್)


ಟಿಎನ್‌ಐಇಯೊಂದಿಗೆ ಮಾತನಾಡಿದ ಸರಣ್ಯ ಕುಮಾರಿ, "ಜನರು ನನ್ನನ್ನು ಬೆಂಬಲಿಸಿದಂತೆ ನಾನು ಚುನಾಯಿತಳಾಗಿದ್ದೇನೆ ಎಂದು ನನಗೆ 100 ಪ್ರತಿಶತ ವಿಶ್ವಾಸವಿದೆ. ವಾರ್ಡ್‌ನಲ್ಲಿರುವ ಜನರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಅನುಕೂಲವಾಗುವಂತೆ ನಾನು ಪ್ರಯತ್ನಿಸುತ್ತೇನೆ. ಏಕೆಂದರೆ ನಮ್ಮ ಹಳ್ಳಿಯ ಇತರ ಬೀದಿಗಳಿಗೆ ಹೋಲಿಸಿದರೆ ನನ್ನ ರಸ್ತೆ ಬೀದಿ ದೀಪಗಳು, ಒಳಚರಂಡಿ ಪೈಪ್‌ಲೈನ್‌ಗಳು ಅಥವಾ ಕುಡಿಯುವ ನೀರಿನ ಸೌಲಭ್ಯವನ್ನು ಸಹ ಹೊಂದಿಲ್ಲ," ಎಂದರು.


ಕಳೆದ ಮೂರು ವರ್ಷಗಳಲ್ಲಿ ಎಂಜಿಆರ್ ನಗರದ ಜನರು ಸರನ್ಯಾ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ನೋಡಿ ಬೇರೆ ಯಾವುದೇ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ನಿರಂತರ ಸಂದರ್ಶಕರಾಗಿದ್ದರು ಮತ್ತು ಸಾರ್ವಜನಿಕ ಕುಂದುಕೊರತೆ ಸಭೆಗಳಲ್ಲಿ ಭಾಗವಹಿಸುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.