ಕೇರಳದ ಎಲೆಕ್ಟ್ರಿಷಿಯನ್ ಸಾವಯವ ಕೃಷಿಕರಾಗಿ,‌‌‌ ದೇಶದ ಮೊದಲ ರೈಸ್ ಪಾರ್ಕ್‌ನ್ನು ತೆರೆದಿದ್ದಾರೆ

ಜಯಕೃಷ್ಣನ್ ಎಂಬ ಎಲೆಕ್ಟ್ರಿಷಿಯನ್ ಪ್ರಕೃತಿಗೆ ಮರಳಿ‌ ಸಾವಯವ ಕೃಷಿಯ ಮೂಲಕ‌ 118ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ ಹಾಗೂ ರೈಸ್ ಪಾರ್ಕ್‌ನ್ನು ತೆರೆದಿದ್ದಾರೆ.

ಕೇರಳದ ಎಲೆಕ್ಟ್ರಿಷಿಯನ್ ಸಾವಯವ ಕೃಷಿಕರಾಗಿ,‌‌‌ ದೇಶದ ಮೊದಲ ರೈಸ್ ಪಾರ್ಕ್‌ನ್ನು ತೆರೆದಿದ್ದಾರೆ

Friday January 24, 2020,

2 min Read

ಇಂದು ಮನುಷ್ಯ ಬದುಕಿನ ಜಂಜಾಟದಲ್ಲಿ ಕಳೆದು ಹೋಗುತ್ತಿದ್ದು, ಆರೋಗ್ಯಕರವಾದಂತಹ ಬದುಕನ್ನು ನಡೆಸುವಲ್ಲಿ ವಿಫಲನಾಗುತ್ತಿದ್ದಾನೆ. ಆಹಾರ ಪದಾರ್ಥಗಳಲ್ಲಿ ರಾಸಾಯಿನಿಕ ಅಂಶವೇ ಹೆಚ್ಚಾಗುತ್ತಿದೆ. ಅದರಲ್ಲಿಯೂ ಇಂದು ಸಾವಯವ ಕೃಷಿಯ ಕಡೆ ಗಮನ ಕೊಡುವವರು ಕಡಿಮೆಯಾಗುತ್ತಿದ್ದಾರೆ.


ತಮ್ಮ ಕೃಷಿಭೂಮಿಯಲ್ಲಿ ಜಯಕೃಷ್ಣನ್‌ರವರು ತಮ್ಮ ಮಕ್ಕಳೊಂದಿಗೆ (ಚಿತ್ರಕೃಪೆ: ಫ್ಯೂಷನ್.ವೇರಿಂಡಿಯಾ)


ಇಂದು ಜನರು ಕೃಷಿಯನ್ನು ನಿರ್ಲಕ್ಷಿಸುತ್ತಿರುವ ಸಂದರ್ಭದಲ್ಲಿ ಕೇರಳದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜಯಕೃಷ್ಣನ್ ಪ್ರಕೃತಿಯೆಡೆಗೆ ಮರಳಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡು, ದೇಶದ ಮೊದಲ ರೈಸ್ ಪಾರ್ಕ್ ಅನ್ನು ತೆರೆದಿದ್ದಾರೆ.


ಪಯಣದ ಹಾದಿ

ಜಯಕೃಷ್ಣನ್ ಅವರು ಮೂಲತಃ ಕೃಷಿಕರಲ್ಲ, ಎಲೆಕ್ಟ್ರಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹದಿಮೂರು ವರ್ಷಗಳ ಹಿಂದೆ ಅವರ ಮಗ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದ, ಯಾವುದೇ ಜೌಷಧಿಗಳು ಕಾಯಿಲೆಯಿಂದ ಗುಣಪಡಿಸುವಲ್ಲಿ ವಿಫಲವಾದವು. ಆ ಸಮಯದಲ್ಲಿ ಜಯಕೃಷ್ಣನ್ ತಮ್ಮ ಮಗನ ಆರೋಗ್ಯ ಸಮಸ್ಯೆಗೆ ರಾಸಾಯಿನಿಕದಿಂದ ತುಂಬಿದ ಆಹಾರವೇ ಕಾರಣ ಎಂಬುದನ್ನು ಅರಿತುಕೊಂಡರು. ನಂತರ ಕೃಷಿಯನ್ನು ಮಾಡಲು ನಿರ್ಧರಿಸಿ, ತಮ್ಮ ಪೂರ್ವಜರ ಜಮೀನಿನಲ್ಲಿ ಇತರರಿಗಿಂತ ಭಿನ್ನವಾಗಿ, ಸಾವಯವ ಕೃಷಿಯನ್ನು ಆಯ್ದುಕೊಂಡು ಭತ್ತವನ್ನು ಬೆಳೆಸಿದರು‌.


ತಮ್ಮ ಮಗನ ಆರೋಗ್ಯ ಸಮಸ್ಯೆ ಬಗೆಹರಿದ ನಂತರ, ಅವರ ಸಂಪೂರ್ಣ ಕುಟುಂಬವು ಟೂತಪೇಸ್ಟ್, ಸಾಬೂನು, ಸಂಸ್ಕರಿಸಿದ ಸಕ್ಕರೆ,‌ ಅಕ್ಕಿ ಮುಂತಾದ ಪದಾರ್ಥಗಳನ್ನು ಬಳಸುವುದನ್ನು ನಿಲ್ಲಿಸಿ, ಸಂಪೂರ್ಣ ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತಿದೆ.


ವೈವಿಧ್ಯಮಯ ಭತ್ತದ ತಳಿಗಳು

ಇಂದು ಜಯಕೃಷ್ಣನ್ ಅವರು ಸಾಂಪ್ರದಾಯಿಕ, ಅಪರೂಪದ ಮತ್ತು ವಿಲಕ್ಷಣವಾದ 118ಕ್ಕೂ ಹೆಚ್ಚು ಬಗೆಯ ಭತ್ತವನ್ನು ಬೆಳಯುತ್ತಿದ್ದಾರೆ. ರಾಸಾಯಿನಿಕ ಗೊಬ್ಬರ ಹಾಗೂ ಯಾವುದೇ ಕೀಟನಾಶಕವನ್ನು ಬಳಸದೆ ಕೃಷಿ ಮಾಡುತ್ತಿರುವುದು ವಿಶೇಷ‌.‌ ಈ ಬೀಜಗಳಿಗಾಗಿ ಅವರು‌ ದೇಶಾದ್ಯಂತ ಸಂಚರಿಸಿದ್ದಾರೆ.


ಪಾಕಿಸ್ತಾನ ಮತ್ತು ಥೈಲ್ಯಾಂಡ್‌ನಿಂದ ಸಂಗ್ರಹಿಸಿದ ಕೆಲವು ಬಗೆಯ ಭತ್ತಗಳನ್ನು ಸಹ ಅವರು ಹೊಂದಿದ್ದಾರೆ.


ಭತ್ತದ ವಿವಿಧ ತಳಿಗಳು (ಚಿತ್ರಕೃಪೆ: ಮಾತೃಭೂಮಿ)




ಇದರಲ್ಲಿ ಹೆಚ್ಚಿನ ಭತ್ತದ ತಳಿಗಳು ಜೌಷಧೀಯ ಅಂಶಗಳನ್ನು ಹೊಂದಿದವುಗಳಾಗಿವೆ. ಇದರಲ್ಲಿ ಕಪ್ಪು ಅಥವಾ ನೇರಳೆ ಬಣ್ಣದ ಭತ್ತವು ಉತ್ಕರ್ಷಣ ನಿರೋಧಕ ಗುಣಲಕ್ಷಣವನ್ನು ಹೊಂದಿದೆ. ಕ್ಯಾಲ್ಸಿಯಂ, ಐರನ್, ಮೆಗ್ನೀಸಿಯಂ, ಪ್ರೋಟೀನ್, ವಿಟಮಿನ್ ಬಿ ಮತ್ತು ಈ ಮತ್ತು ಸತುವಿನಂತ ಅಂಶದಿಂದ‌ ಕೂಡಿವೆ. ಹೆಚ್ಚಿನ ಧಾನ್ಯಗಳು ರಕ್ತವನ್ನು ಶುದ್ಧಿಕರಿಸುವಂತಹ ಗುಣವನ್ನು ಹೊಂದಿವೆ, ವರದಿ ಮಾತೃಭೂಮಿ.


ಅಪರೂಪದ ಕೆಂಪು ಅಕ್ಕಿ ಪ್ರಭೇದಗಳಲ್ಲಿ ಒಂದಾದ ಮುಸುಕಾದ‌ ಹಸಿರು ರಕ್ತಶಾಲಿಯ ಕಾಂಡಗಳಿವೆ. ಕ್ಯಾನ್ಸರ್‌‌ನಿಂದ ಬಳಲುತ್ತಿರುವವರಿಗೆ ಇವು ರಾಮಬಾಣವಿದ್ದಂತೆ. ಕನಕಚೂರ್ಣ, ಕಣ್ಣಿ ಕೆಂಪು ಅಕ್ಕಿ, ಆರೋಮ್ಯಾಟಿಕ್ ಜೀರಕಶಾಲ, ತಮಿಳುನಾಡಿನ ಮಾಪ್ಪಿಲೈ ಚೆಂಬಾ ಮತ್ತು ದೊಡ್ಡ ಕೆಂಪು ಅಕ್ಕಿ ಸೇರಿದಂತೆ ಹಲವಾರು ಭತ್ತದ ತಳಿಗಳನ್ನು ಇವರು ಬೆಳೆಯುತ್ತಿದ್ದಾರೆ.


ಸಾವಯವ ಕೃಷಿ ಹಾಗೂ ತಮ್ಮದೇ ಆದಂತಹ ಕೃಷಿ ವಿಧಾನಗಳ ಮೂಲಕ 100ಕ್ಕೂ ಹೆಚ್ಚು ಭತ್ತ, ‌50 ಬಗೆಯ ಸಾಂಪ್ರದಾಯಿಕ ಗೆಡ್ಡೆಗಳು ಮತ್ತು 20 ಬಗೆಯ ಸ್ಥಳೀಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.


ಜಯಕೃಷ್ಣನ್‌ರವರು ತಮ್ಮ ಸ್ನೇಹಿತರಾದ ಲೆನೀಶ್ ಕೆ ಅವರೊಂದಿಗೆ ಸಹಭಾಗಿತ್ವದಲ್ಲಿ ಜಾನಪದ ಅಕ್ಕಿ ಕೇಂದ್ರ ಮತ್ತು ಜ್ಞಾನ ಕೇಂದ್ರ ಎಂಬ ಭತ್ತದ ಉದ್ಯಾನವನವನ್ನು ತೆರೆದಿದ್ದಾರೆ.


13 ಎಕರೆ ವಿಸ್ತೀರ್ಣದ ಈ ಭತ್ತದ ಕೃಷಿ ಕೇಂದ್ರವು ದೇಶದಲ್ಲಿಯೇ ಮೊದಲನೆಯದಾಗಿದೆ. ಇವರಿಬ್ಬರೂ ಸಾವಯವ ಕೃಷಿಯ ಬಗ್ಗೆ ಜಾಗೃತಿ ಅಭಿಯಾನ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಾರೆ.


ಪತ್ನಿ ರೇಷ್ಮಾ, ಮಗ ಭಗತ್ ಮತ್ತು ಮಗಳು ರುದ್ರ ಅವರೊಂದಿಗೆ ಜಯಕೃಷ್ಣನ್ ನೆಮ್ಮದಿ ಹಾಗೂ ಆರೋಗ್ಯಕರವಾದ ಜೀವನವನ್ನು ನಡೆಸುತ್ತಿದ್ದಾರೆ. ಇಂದು‌ ಉಳಿದ ಕೆಲಸಗಳೊಂದಿಗೆ ಕೃಷಿಯು ಅಷ್ಟೇ ಮುಖ್ಯವಾಗಿದೆ. ಅದರಲ್ಲಿಯೂ ಸಾವಯವ ಕೃಷಿಯ ಅಗತ್ಯತೆ ಇಂದಿನ ದಿನಮಾನಗಳಲ್ಲಿ‌ ಇನ್ನೂ ಹೆಚ್ಚಿದೆ. ಇಂತಹ ಕೃಷಿಕರು ದೇಶದೆಲ್ಲೆಡೆ ಹರಡಬೇಕು. ಇವರ ಸಾವಯವ ಕೃಷಿಯ ಸೌಗಂಧ ಎಲ್ಲೆಡೆ ಪಸರಿಸಲಿ. ಆರೋಗ್ಯಕರ ಜೀವನ ಎಲ್ಲರದಾಗಲಿ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.