ಅರಣ್ಯ ಪ್ರದೇಶದಲ್ಲಿ ಅನವಶ್ಯಕವಾಗಿ ಬೆಳೆಯುವ ಕಳೆ ಲಂಟಾನಾದಿಂದ ಪೀಠೋಪಕರಣಗಳನ್ನು ತಯಾರಿಸಿದ ಮಾಯಾ ಮಾಹಾಜನ್

ಮಾಯಾ ಮಹಾಜನ್ ನೀಲಗಿರಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಳೆದ ಹಾನಿಕಾರಕ ಕಳೆಯಾದ ಲಂಟಾನಾ ಕಮರಾವನ್ನು ಬಳಸಿ ಪರಿಸರ ಸ್ನೇಹಿ ಪೀಠೋಪಕರಣಗಳನ್ನು ತಯಾರಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಅನವಶ್ಯಕವಾಗಿ ಬೆಳೆಯುವ ಕಳೆ ಲಂಟಾನಾದಿಂದ ಪೀಠೋಪಕರಣಗಳನ್ನು ತಯಾರಿಸಿದ ಮಾಯಾ ಮಾಹಾಜನ್

Saturday September 21, 2019,

3 min Read

ಕಾಡುಗಳು ಮರೆಯಾಗಲು ಕೇವಲ ಅರಣ್ಯನಾಶ ಮಾತ್ರ ಕಾರಣವಲ್ಲ. ಕಾಡುಗಳಲ್ಲಿ ಬೆಳೆಯುವ ವಿಲಕ್ಷಣ ಕಳೆಗಳು ಇದರ ಭಾಗಿಯಾಗಿವೆ ಇವು ಎಲ್ಲಾ ಪೋಷಕಾಂಶಗಳನ್ನು ಮತ್ತು ಅಂತರ್ಜಲವನ್ನು ಹೀರಿಕೊಳ್ಳುತ್ತದೆ ಮತ್ತು ಅಂತಿಮವಾಗಿ ಅಮೂಲ್ಯವಾದ ಸಸ್ಯಗಳನ್ನು ಕೊಲ್ಲುತ್ತದೆ.


ಅಂತದ್ದೊಂದು ಕಳೆ ಲಂಟಾನಾ ಕಮರಾ. ಇದು ನೀಲಗಿರಿ ಜೀವಗೋಳದಲ್ಲಿ ಕಂಡುಬರುತ್ತದೆ. ಪರಿಸರವ್ಯವಸ್ಥೆಗೆ ಮಾರಕವಾಗಿದ್ದ ಇವು ಈಗ ಪರಿಸರ ಸ್ನೇಹಿ ಪೀಠೋಪಕರಣಗಳ ರೂಪದಲ್ಲಿ ಅನೇಕರ ಮನೆಗಳಿಗೆ ಪ್ರವೇಶಿಸಿವೆ.


ಲಂಟಾನಾ ಮರದಿಂದ ಮಾಡಿದ ಪೀಠೋಪಕರಣಗಳೊಂದಿಗೆ ಮಾಯಾ ಮಹಾಜನ್ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಪಿಎಚ್‌ಡಿ ಮಾಡಿದ ಮಾಯಾ ಮಹಾಜನ್‌ ಕೊಯಮತ್ತೂರಿನ ವಿದ್ವಾಂಸರಾಗಿದ್ದಾರೆ. ಚೆನ್ನೈನಲ್ಲಿ ನಡೆದ 2018 ರ ಅಂತರರಾಷ್ಟ್ರೀಯ ಮಹಿಳಾ ಸಭೆಯಲ್ಲಿ ಅವರಿಗೆ ಅಂತರರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ನೀಡಲಾಗಿದೆ.


ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ನ ಅರಣ್ಯ ಭೂಮಿಯಲ್ಲಿ ನಡೆಸಿದ ಸಂಶೋಧನೆಯ ಸಮಯದಲ್ಲಿ, ಕೊಯಮತ್ತೂರಿನ ಪಿಎಚ್‌ಡಿ ಪದವೀಧರೆ ಮಾಯಾ ಮಹಾಜನ್ ಅವರು ಲಂಟಾನಾ ಕಳೆಯ ಬಗ್ಗೆ ತಿಳಿದರು. ಕೊಯಮತ್ತೂರಿನ ಸಿರುವಾನಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟದ ಸ್ಥಳೀಯ ಸಸ್ಯವರ್ಗದ ಮೇಲೆ ಈ ಕಳೆಯು ಹಾನಿಕಾರಕ ಪರಿಣಾಮ ಬೀರುತ್ತಿತ್ತು.


ರಾಸಾಯನಿಕಗಳನ್ನು ಬಳಸಿ ಕಳೆ ತೆಗೆಯುವುದು ಪರಿಸರದ ಮೇಲೂ ಪರಿಣಾಮ ಬೀರಬಹುದಾಗಿತ್ತು. ಕಳೆಗಳನ್ನು ತೆಗೆದುಹಾಕಲು ಆನೆಗಳನ್ನು ಬಳಸುವುದು ಒಂದೇ ವಿಧಾನವಾಗಿತ್ತು, ಆದರೆ ಅದು ಆರ್ಥಿಕವಾಗಿ ಅಥವಾ ಸಮಯದ ಲೆಕ್ಕದಲ್ಲಿ ತುಂಬಾ ದುಬಾರಿಯಾಗಿತ್ತು.

ಪರಿಹಾರ

ಪರಿಸರ ಸ್ನೇಹಿ ಪೀಠೋಪಕರಣಗಳ ಹೆಚ್ಚುತ್ತಿರುವ ಬೇಡಿಕೆಗಳ ಬಗ್ಗೆ ಮಾಯಾ ಮಹಾಜನ್ ಅವರಿಗೆ ತಿಳಿದಿತ್ತು. ಅವರ ವಿವರವಾದ ಸಂಶೋಧನೆಯು ಲಂಟಾನಾ ಕಳೆ ಹೊಂದಿರುವ ಪೀಠೋಪಕರಣಗಳ ತಯಾರಿಕೆಗೆ ಯಾವುದೇ ರಾಸಾಯನಿಕಗಳ ಅಗತ್ಯವಿಲ್ಲ ಎಂದು ತೀರ್ಮಾನಿಸಿತು. ಅಲ್ಲದೆ, ಇದರಲ್ಲಿ ಕೀಟಗಳನ್ನು ಹಿಮ್ಮೆಟ್ಟಿಸುವ ನೈಸರ್ಗಿಕ ರಾಸಾಯನಿಕಗಳಿವೆ. ಮರ ಅಥವಾ ಬಿದಿರುಗಿಂತ ಲ್ಯಾಂಟಾನಾ ಪೀಠೋಪಕರಣಗಳು ಹೆಚ್ಚು ಬಾಳಿಕೆ ಬರುವವು ಮತ್ತು ಟರ್ಮೈಟ್‌ನಿಂದ ಕಡಿಮೆ ತೊಂದರೆ ಅನುಭವಿಸುವುದೆಂದು ಸಂಶೋಧನೆಯು ಸಾಬೀತುಪಡಿಸಿತು.


ಸಮುದಾಯದ ಸದಸ್ಯರೊಂದಿಗೆ ಮಧ್ಯದಲ್ಲಿ ಮಾಯಾ ಮಹಾಜನ್ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)



ಲಂಟಾನಾ ಪೀಠೋಪಕರಣಗಳನ್ನು ಹೆಚ್ಚು ಜನಪ್ರಿಯಗೊಳಿಸುವ ಒಂದು ಅಂಶವೆಂದರೆ ಉಚಿತ ಕಚ್ಚಾ ವಸ್ತು.

ಸ್ಥಳೀಯ ಸಮುದಾಯದ ಮೇಲೆ ಪರಿಣಾಮ

ಪೀಠೋಪಕರಣಗಳಾಗಿ ತಯಾರಾಗುವುದರ ಜೊತೆಗೆ, ಇದು ತಮಿಳುನಾಡಿನ ಕೊಯಮತ್ತೂರಿನ ಸಿರುವಣಿ, ಬುಡಕಟ್ಟು ಮಹಿಳೆಯರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.


ಸಮುದಾಯದ ಜನರೊಂದಿಗೆ ಮಾಯಾ ಮಹಾಜನ್‌ (ಚಿತ್ರಕೃಪೆ: ದಿ ಬೆಟರ್‌ ಇಂಡಿಯಾ)

ಬುಡಕಟ್ಟು ಜನಾಂಗದವರ ಮೇಲೆ ಆನೆ ದಾಳಿ ಸಾಮಾನ್ಯವಾಗಿದ್ದರೂ, ವೆಲ್ಲಾಚಿ ನಂತರ ಏಳು ಮಹಿಳೆಯರು ಕಳೆ ತೆಗೆಯಲು ಸ್ವಯಂಪ್ರೇರಿತರಾಗಿ ಮುಂದೆ ಬಂದರು.


ತೊಂಬತ್ತೈದು ಪ್ರತಿಶತದಷ್ಟು ಬುಡಕಟ್ಟು ಮಹಿಳೆಯರು ಈಗ ನಿಯಮಿತ ಆದಾಯದ ಮೂಲವನ್ನು ಹೊಂದಿದ್ದಾರೆ. ಕಳೆ ತೆಗೆಯುವುದು ಅರಣ್ಯ ಇಲಾಖೆಗೆ ಒಂದು ಸಮಸ್ಯೆಯಾಗಿತ್ತು, ಆದ್ದರಿಂದ ಕಳೆ ಕತ್ತರಿಸಲು ಮಾಯಾ ಅವರಿಗೆ ಅನುಮತಿ ನೀಡುವುದು ಒಂದು ಪರಿಹಾರದಂತೆ ಕಂಡುಬಂತು.

ಕಳೆಯನ್ನು ಪರಿಸರ ಸ್ನೇಹಿ ಪೀಠೋಪಕರಣಗಳಾಗಿ ಪರಿವರ್ತಿಸುವುದು

ದಿ ಬೆಟರ್ ಇಂಡಿಯಾ ಜೊತೆ ಮಾತನಾಡಿದ ಮಾಯಾ,


"ಪೀಠೋಪಕರಣ ತಯಾರಿಕೆಯಲ್ಲಿ ಗ್ರಾಮಸ್ಥರಿಗೆ ತರಬೇತಿ ನೀಡಲು ನಾವು ಬೆಂಗಳೂರು ಮೂಲದ ಎಟಿಆರ್‌ಈಈ ಎಂಬ ಸಂಘಟನೆಯೊಂದಿಗೆ ಕೈ ಜೋಡಿಸಿದ್ದೇವೆ. ಮೂರು ಗ್ರಾಮಗಳ ಸುಮಾರು 40 ನಿವಾಸಿಗಳಿಗೆ 2015 ರ ಡಿಸೆಂಬರ್‌ನಿಂದ ಮೂರು ತಿಂಗಳ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಲಾಯಿತು. ಈ ಯೋಜನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಧನಸಹಾಯ ದೊರೆಯಿತು" ಎಂದರು.


ಪೀಠೋಪಕರಣ ತಯಾರಿಸುತ್ತಿರುವ ಬುಡಕಟ್ಟು ಮಹಿಳೆಯರು. (ಚಿತ್ರಕೃಪೆ: ದಿ ಲಾಜಿಕಲ್‌ ಇಂಡಿಯನ್)



ಇಡೀ ಯೋಜನೆಯು ಸಮತೋವಾಗಿಯೂ ಮತ್ತು ಸುಸ್ಥಿರವಾಗಿಯೂ ಇದ್ದು, ಇದರ ಮೂಲಕ ಬುಡಕಟ್ಟು ಜನರು ಲಂಟಾನಾ ಮರವನ್ನು ಕತ್ತರಿಸುವುದನ್ನು ಒಳಗೊಂಡು, ಕಡಿಮೆ-ವೆಚ್ಚದ ಸಣ್ಣ ಪೀಠೋಪಕರಣಗಳು, ಕರಕುಶಲ ವಸ್ತುಗಳು, ಆಟಿಕೆಗಳು ಮತ್ತು ಇತರ ಉಪಯುಕ್ತ ವಸ್ತುಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತದೆ.


ಮಾಯಾ ಹೇಳುತ್ತಾರೆ,


“ಅರಣ್ಯ ಉತ್ಪನ್ನ ಕೊಯ್ಲು ಕುರಿತು ನನ್ನ ಸಂಶೋಧನಾ ಯೋಜನೆಯ ಮೂಲಕ ಸಿರೂವಾನಿ, ಮುದುಮಲೈ, ವಯನಾಡ್ ಮತ್ತು ಸೈಲೆಂಟ್ ವ್ಯಾಲಿಯ ಬುಡಕಟ್ಟು ನಿವಾಸಿಗಳೊಂದಿಗೆ ನಾನು ನಿಕಟ ಸಂವಾದ ನಡೆಸಿದ್ದೇನೆ. ನಾನು ಸಮುದಾಯಗಳೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದೇನೆ. ಆದರೂ ನಾನು ಲಂಟಾನಾದಿಂದ ಪೀಠೋಪಕರಣಗಳನ್ನು ತಯಾರಿಸುವ ಪ್ರಸ್ತಾಪದೊಂದಿಗೆ ಅವರನ್ನು ಸಂಪರ್ಕಿಸಿದಾಗ, ಅವರು ಅದರ ಕಾರ್ಯಸಾಧ್ಯತೆಯನ್ನು ಅನುಮಾನಿಸಿದರು.”

ಮಾರ್ಕೆಟಿಂಗ್ ಕ್ಷೇತ್ರಕ್ಕೆ ಚೊಚ್ಚಲ ಪ್ರವೇಶ

ಬುಡಕಟ್ಟು ಸಮುದಾಯಕ್ಕೆ ಕೊಯಮತ್ತೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಮಾರುಕಟ್ಟೆ ಸ್ಥಾಪಿಸಲು ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ (ಟ್ರಿಫೆಡ್) ಸಹಾಯ ಮಾಡಿದೆ.


ಮಾಯಾ ಇದನ್ನು ಪೂರ್ಣ ಪ್ರಮಾಣದ ವ್ಯವಹಾರವಾಗಿ ಪ್ರಾರಂಭಿಸಲು ಮತ್ತು ಇಕಾಮರ್ಸ್ ಸೈಟ್‌ಗಳ ಮೂಲಕ ಉತ್ಪನ್ನವನ್ನು ಮಾರಾಟ ಮಾಡಲು ಯೋಜನೆ ತಯಾರಿಸಿದ್ದಾರೆ. ಈ ಯೋಜನೆಗೆ ಪರಿಸರ ಸಚಿವಾಲಯ ಅನುದಾನ ನೀಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ಅಭಿಯಾನಗಳಿಂದ ಉತ್ಪನ್ನಗಳು ಜನಪ್ರಿಯವಾಗಿವೆ.


ಈ ಯೋಜನೆಯನ್ನು ಸಿಂಹಂಪತಿ, ಕಲ್ಕೊತಿಪತಿ, ಮತ್ತು ಸರ್ಕಾರ್ಪೊರಥಿ ಮುಂತಾದ ಗ್ರಾಮಗಳು ಅಳವಡಿಸಿಕೊಂಡಿವೆ. ಹೊಸ ಬ್ಯಾಚ್‌ಗಳಿಗೆ ಮೊದಲ ಬ್ಯಾಚ್‌ನ ನುರಿತ ಕೆಲಸಗಾರರಿಂದ ತರಬೇತಿ ನೀಡಲಾಗುತ್ತಿದ್ದು, ಇದು ಯುವಕರಿಗೆ ಉತ್ತಮ ಉದ್ಯೋಗವನ್ನು ಪಡೆಯಲು ಸಹಾಯ ಮಾಡಿದೆ ಮತ್ತು ಪ್ರಮಾಣೀಕೃತ ಕೌಶಲ್ಯ-ತರಬೇತಿ ಶಿಬಿರ ಎಂದು ಗುರುತಿಸಲ್ಪಟ್ಟಿದೆ.


ಕಳೆದ ಮಾರ್ಚ್ ತಿಂಗಳಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ(ಜಿಎಸ್ ಡಿ ಪಿಒ) ದ ಅಡಿಯಲ್ಲಿ ಸಿರುವನಿ ಬೆಟ್ಟದ ಸಿಂಗಪಥಿ ಹಳ್ಳಿಯಲ್ಲಿ ಲಂಟಾನಾ ದಿಂದ ಪೀಠೋಪಕರಣ ಮಾಡುವ ಶಿಬಿರದಲ್ಲಿ ಭಾಗವಹಿಸಿದ 30 ಜನರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಎಂದು ದಿ ಹಿಂದೂ ವರದಿ ಮಾಡಿದೆ.

ಮುಂದಿನ ಯೋಜನೆ

ತಮ್ಮ ಮುಂದಿನ ಯೋಜನೆಯ ಬಗ್ಗೆ ದಿ ಹಿಂದೂ ಪತ್ರಿಕೆಯೊಂದಿಗೆ ಮಾತನಾಡುತ್ತ ಮಾಯಾ,


"ಈ ಕಾರ್ಯಕ್ರಮವನ್ನು ಕೊಯಮತ್ತೂರಿನ ವಿವಿಧ ಪ್ರದೇಶಗಳಲ್ಲಿ ಪುನರಾವರ್ತಿಸಲು ನಾವು ಎದುರು ನೋಡುತ್ತಿದ್ದೇವೆ. ಬುಡಕಟ್ಟು ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಾವು ನೋಡುತ್ತಿದ್ದೇವೆ. ಲಂಟಾನಾದ ಸಮಸ್ಯೆ ಎಲ್ಲಿದ್ದರೂ, ನಾವು ಈ ಶಿಬಿರವನ್ನು ಉತ್ತೇಜಿಸಲು ಯೋಜಿಸುತ್ತಿದ್ದೇವೆ” ಎಂದು ಹೇಳಿದರು.

ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.